ಉಡುಪಿ, ಸೆ.8: ಕಿತ್ತಳೆ ಹಣ್ಣಿನಲ್ಲಿ ಎಲ್ಲಾ ತೊಳೆಗಳು ಒಟ್ಟಿಗೆ ಇದ್ದಾಗ ಮಾತ್ರ ಅದಕ್ಕೆ ಬೆಲೆ, ಅದೇ ರೀತಿ ಎಲ್ಲಾ ಭಾಷೆಗಳು ಪರಸ್ಪರ ಹೊಂದಾಣಿಕೆಯಿಂದ ಇದ್ದಾಗ ಮಾತ್ರ ಅವುಗಳಿಗೆ ಮೌಲ್ಯ ಇರುತ್ತದೆ, ಪ್ರತ್ಯೇಕವಾಗಿ ಬೆಳೆಯುವುದಕ್ಕೆ ಹೊರಟರೆ ಬೆಲೆ ಕಳೆದುಕೊಳ್ಳುತ್ತವೆ ಎಂದು ಉಡುಪಿ ಕೃಷ್ಣ ಮಠದ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಎಚ್ಚರಿಸಿದ್ದಾರೆ.
ಅವರು ಗುರುವಾರ ಕಾಸರಗೋಡಿನ ಬದಿಯಡ್ಕದಲ್ಲಿ ಡಿ.9ರಿಂದ 13ರವರೆಗೆ ನಡೆಯುವ ವಿಶ್ವ ತುಳುವೆರೆ ಆಯನೊ – 2016ಕ್ಕೆ ಪೂರ್ವಭಾವಿಯಾಗಿ ಹೊರಟಿರುವ ಪ್ರಚಾರ ರಥ – ತುಳುನಾಡ್ ತಿರ್ಗಾಟದ ತೇರ್ ನ್ನು ಬರ ಮಾಡಿಕೊಂಡು, ಮುಂದಿನ ಪ್ರಚಾರಕ್ಕೆ ಚಾಲನೆ ನೀಡಿದರು.
ಕನ್ನಡ ನಮ್ಮ ರಾಜ್ಯ ಭಾಷೆ, ತುಳುನಾಡಿನಲ್ಲಿ ತುಳು ಮಾತೃ ಭಾಷೆ. ಜೊತೆಗೆ ಬದುಕುವುದಕ್ಕೆ ಇತರ ವ್ಯವಹಾರಿಕ ಭಾಷೆಗಳನ್ನೂ ಕಲಿಯಬೇಕಾಗುತ್ತದೆ, ಆದರೇ ವ್ಯಾವಹಾರಿಕ ಭಾಷೆಗಳನ್ನು ಕಲಿತ ಮೇಲೆ ಮಾತೃ ಭಾಷೆಯನ್ನು ಮರೆಯಬಾರದು, ಮಾತೃ ಭಾಷೆ ಕಲಿಸಿದ ಸಂಸ್ಕೃತಿ – ಸಂಸ್ಕಾರಗಳನ್ನು ಬಿಡಬಾರದು ಎಂದು ಶ್ರೀಗಳು ಆಶಿಸಿದರು.
ಕೃಷ್ಣನಿಗೆ, ತುಳುವರಿಗೆ ಇಬ್ಬರು ತಾಯಂದಿರು…
ತುಳುನಾಡಿನ ಉಡುಪಿ ಕೃಷ್ಣನಿಗೆ ಇಬ್ಬರು ತಾಯಂದಿರು, ಒಬ್ಬರು ಯಶೋಧೆ ಇನ್ನೊಬ್ಬರು ದೇವಕಿ, ಅದೇ ರೀತಿ ತುಳುನಾಡಿನ ಜನರಿಗೂ ಇಬ್ಬರು ತಾಯಂದಿರು, ಒಬ್ಬರು ಕನ್ನಡ ತಾಯಿ, ಇನ್ನೊಬ್ಬರು ತುಳು ಅಪ್ಪೆ, ಇಬ್ಬರೂ ಸಮಾನರು, ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆದ್ದರಿಂದ ಯಾವುದೇ ಭಾಷೆಯ ಬಗ್ಗೆ ಕೀಳರಮೆ ಬೇಡ ಎಂದು ಶ್ರೀಗಳು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು. ವಿಶ್ವ ತುಳುವೆರೆ ಆಯನೊ ಸಮಿತಿಯ ಕಾರ್ಯದರ್ಶಿ ರಾಜೇಶ ಆಳ್ವಾ ಮತ್ತು ಭಾಸ್ಕರ ಕುಂಬ್ಳೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಾವೀರ ಅಜ್ರಿ ಮತ್ತು ಮಾಲತಿ ದಿನೇಶ್, ದೇವಾಡಿಗರ ಸಮುದಾಯದ ಪರವಾಗಿ ಜ್ಯೋತಿ ದೇವಾಡಿಗ, ಶೆಟ್ಟಿಗಾರ್ ಸಮುದಾಯದ ಪರವಾಗಿ ಸರೋಜ ಶೆಟ್ಟಿಗಾರ್, ಮೊಗವೀರ ಸಮುದಾಯದ ಪರವಾಗಿ ನಯನಾ ಗಣೇಶ್ ಮುಂತಾದವರಿದ್ದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಒಡಿಪು ಸಿರಿ ತುಳುವ ಚಾವಡಿಯ ಅಧ್ಯಕ್ಷ ಈಶ್ವರ ಶೆಟ್ಟಿ ಚಿಟ್ಪಾಡಿ ಕಾರ್ಯಕ್ರಮ ಸಂಯೋಜಿಸಿದ್ದರು.
Discussion about this post