ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರು: ಪೂರ್ವಜನ್ಮದ ಕರ್ಮಫಲವಾಗಿ ಬಂದಿರುವ ಸಕಲ ರೋಗಗಳನ್ನು ನಿವಾರಣೆ ಮಾಡಿಕೊಳ್ಳಲು ಧನ್ವಂತರಿಯನ್ನೇ ಮೊರೆ ಹೋಗಬೇಕು ಎಂದು ವಿದ್ವಾನ್ ಹರೀಶ ಆಚಾರ್ಯ ಸಂಡೂರು ಹೇಳಿದರು.
ನಗರದ ಅಗ್ರಹಾರದಲ್ಲಿರುವ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ರೋಗಮೋಚನ ಶ್ರೀ ಧನ್ವಂತರಿ ಮೂರ್ತಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಪ್ರವಚನದಲ್ಲಿ ಅವರು, ಧನ್ವಂತರಿ ಮಹಿಮೆ ತಿಳಿಸಿದರು.
ದೈಹಿಕವಾಗಿ ನಾವೆಷ್ಟೇ ಸಬಲರಾಗಿದ್ದರೂ ಮಾನಸಿಕ ರೋಗಗಳು ನಮ್ಮ ಬದುಕನ್ನೇ ಹೈರಾಣ ಮಾಡಿಬಿಡುತ್ತವೆ. ಇದರಿಂದ ಮುಕ್ತಿ ಹೊಂದಲು ಒಂದು ಕೈಯಲ್ಲಿ ಅಮೃತಕಲಶ, ಇನ್ನೊಂದು ಕೈಯಲ್ಲಿ ಅಭಯಹಸ್ತ ತೋರಿರುವ ಧನ್ವಂತಿ ದೇವರನ್ನು ಬೇಡುವುದೊಂದೇ ಮಹಾಮಾರ್ಗ ಎಂದರು.
ಜ್ಞಾನವನ್ನೇ ಬೇಡೋಣ:
ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಮಾತನಾಡಿ, ದೇವರಲ್ಲಿ ಏನೇನೋ ಲೌಕಿಕ ವಸ್ತು, ವಿಷಯಗಳನ್ನು ಕೇಳುತ್ತೇವೆ. ಇದಕ್ಕೆ ಮಿತಿಗಳೇ ಇರುವುದಿಲ್ಲ. ಆದರೆ ಸಂಚಿತ ಕರ್ಮಗಳನ್ನು ಕಳೆದುಕೊಳ್ಳಲು ನಿನ್ನ ಬಗೆಗಿನ ಜ್ಞಾನವನ್ನು ಕೊಡು ಎಂದು ಬೇಡಬೇಕು ಎಂದರು.
ವರ್ತಮಾನದ ಸಂದರ್ಭದಲ್ಲಿ ಒಂದು ಕುಟುಂಬದಲ್ಲೇ ಸಾಮರಸ್ಯ ಇಲ್ಲವಾಗಿದೆ. ಪತಿ, ಪತ್ನಿ, ಮಕ್ಕಳು ಒಂದೊಂದು ವಿಚಿತ್ರ ಮನೋಸ್ಥಿತಿ ಹೊಂದಿರುತ್ತಾರೆ. ಹಾಗಾಗಿ ನಿತ್ಯವೂ ಮನೆಯಲ್ಲಿ ವೈಮನಸ್ಯ ಜೀವಂತವಾಗಿರುತ್ತದೆ. ದೇವರ ಬಗೆಗಿನ ಜ್ಞಾನ ಮತ್ತು ಭಕ್ತಿಯ ಕೊರತೆಯೇ ಇದಕ್ಕೆ ಕಾರಣ ಎಂದರು.
ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ರೋಗಮೋಚನ ಶ್ರೀ ಧನ್ವಂತರಿ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದ ನಂತರ ಲೋಕವನ್ನೇ ಕಾಡಿದ ಕೊರೋನಾ ಮಹಾಮಾರಿ ಅಬ್ಬರ ಕಡಿಮೆಯಾಗತೊಡಗಿತು. ಗುರುಗಳ ಸಂಕಲ್ಪ ಮತ್ತು ತಪಸ್ಸು ನಾಡಿನ ಜನತೆಗೆ ಭಯಮುಕ್ತರನ್ನಾಗಿಸಿತು ಎಂದರು.
Also read: ಅಂಗವೈಕಲ್ಯತೆ ಸಾಧನೆಗೆ ಎಂದೂ ಅಡ್ಡಿಯಾಗದು: ಶಂಕರ್ ಶೇಟ್
ಪಂಡಿತ ಪುರುಷೋತ್ತಮಾಚಾರ್ಯರು ಪ್ರವಚನ ನೀಡಿ, ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳನ್ನು ದೇವರಲ್ಲಿ ಕೇಳಿಕೊಂಡರೆ ಇಹ ಮತ್ತು ಪರದಲ್ಲಿ ಸುಖ ಪ್ರಾಪ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಚಿಂತನೆ ಮಾಡಬೇಕು. ಭಕ್ತಿ ಎಂಬುದು ಹೊರಗೆ ತೋರುವ ವಸ್ತುವಾಗಬಾರದು. ಅಂತರಂಗ ಶುದ್ಧಿಗೆ ಪ್ರೇರಣೆ ಆಗಬೇಕು ಎಂದು ಸಲಹೆ ನೀಡಿದರು.
ವಿವಿಧ ಕಾರ್ಯಕ್ರಮ:
ಪ್ರತಿಷ್ಠಾಪನಾ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಧನ್ವಂತರಿ ಸನ್ನಿಧಿಯಲ್ಲಿ ಬೆಳಗಿನಿಂದ ಶ್ರೀ ವಿಷ್ಣು ಸಹಸ್ರನಾಮ ಮಹಾಯಾಗ, ಶ್ರೀ ಧನ್ವಂತರಿ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ವಿವಿಧ ಪುಷ್ಪಗಳಿಂದ ಅಲಂಕಾರ ನೆರವೇರಿತು. ಶ್ರೀ ಸತ್ಯಸಂಕಲ್ಪ ತೀರ್ಥರು ಮತ್ತು ಶ್ರೀ ಸತ್ಯ ಸಂತುಷ್ಟ ತೀರ್ಥರ ಬೃಂದಾವನಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನೂರಾರು ಭಕ್ತರು ದೇವರ ದರ್ಶನ ಪಡೆದು ಧನ್ಯತೆ ಮೆರೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post