ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆಯಿಂದ ಆಚರಿಸಲಾಗುತ್ತಿರುವ ದಸರಾ -2022 ರ ಅಂಗವಾಗಿ ಸೆ. 26 ರಿಂದ ಅ. 4ರವರೆಗೆ ವಿವಿಧ ಸ್ಥಳಗಳಲ್ಲಿ ಅದ್ಧೂರಿಯಾಗಿ ಸಾಂಸ್ಕೃತಿಕ ದಸರಾ ಆಚರಿಸಲಾಗುವುದು ಎಂದು ಸಾಂಸ್ಕೃತಿಕ ದಸರಾ ಸಮಿತಿ ಅಧ್ಯಕ್ಷ ಎಸ್.ಜಿ. ರಾಜು ತಿಳಿಸಿದರು.
ಅವರು ಇಂದು ಮೀಡಿಯಾ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆ. 26 ರಂದು ಬೆಳಗ್ಗೆ 9.30 ಕ್ಕೆ ಕೋಟೆ ರಸ್ತೆಯಲ್ಲಿರುವ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಭಜನಾ ವೈಭವ ಕಾರ್ಯಕ್ರಮವನ್ನು ಜಿ.ಅರುಣ್ ಕುಮಾರ್ ನೇತೃತ್ವದ ತಂಡ ನಡೆಸಿಕೊಡಲಿದ್ದು, ನಂತರ ಮಾತೆಯರಿಂದ ಸಾಮೂಹಿಕ ಲಲಿತಾ ಸಹಸ್ರನಾಮ ನಡೆಯಲಿದೆ ಎಂದರು.
ಸೆ. 27 ರಂದು ಬೆಳಗ್ಗೆ 9.30 ರಿಂದ ಸಂಜೆ 4 ರವರೆಗೆ ಹಾಗೂ 28 ರಂದು ಮಧ್ಯಾಹ್ನ 12.15 ಕ್ಕೆ ಫ್ರೀಡಂ ಪಾರ್ಕ್ ನ ಮುಖ್ಯ ವೇದಿಕೆಯಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ಚರ್ಮ ವಾದ್ಯಗಳ ಡೊಳ್ಳು, ವೀರಗಾಸೆ ಮತ್ತು ತಮಟೆ ಸ್ಪರ್ಧೆ ನಡೆಯಲಿದೆ. 29 ರ ಸಂಜೆ 5 ರಿಂದ 9.30 ರ ವರೆಗೆ ಕಮಲಾ ನೆಹರು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸಾಹಿತ್ಯ ಸಂಭ್ರಮ ನಡೆಯಲಿದೆ. ಅ. 3 ರ ಸಂಜೆ 5 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ನಾಟ್ಯ ಸಂಭ್ರಮವನ್ನು ಚಿತ್ರನಟ ರಮೇಶ್ ಭಟ್ ಉದ್ಘಾಟಿಸಲಿದ್ದಾರೆ. ನಂತರ ಸ್ಥಳೀಯ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ಮತ್ತು ವಾದ್ಯ ಸಂಭ್ರಮ ನಡೆಯಲಿದೆ ಎಂದರು.
Also read: ಭದ್ರಾವತಿ ನಗರಸಭೆ ನೂತನ ಅಧ್ಯಕ್ಷರಾಗಿ ಅನುಸುಧಾ ಮೋಹನ್ ಆಯ್ಕೆ
ಅ. 3 ರಂದು ಸಂಜೆ 5.30 ರಿಂದ ಕುವೆಂಪು ರಂಗಮಂದಿರದಲ್ಲಿ ಯಕ್ಷ ಸಂಭ್ರಮ, 4 ರಂದು ಸಂಜೆ 5.30 ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಸಕ ಆಯನೂರು ಮಂಜುನಾಥ್ ಉದ್ಘಾಟಿಸಲಿದ್ದು, ಮೈಸೂರಿನ ನೃತ್ಯ ನಾಟ್ಯಾಲಯ ಯೋಗ ಕೇಂದ್ರದ ತಂಡದಿಂದ ಒಡಿಸ್ಸಿ ನೃತ್ಯ ಹಾಗೂ ಇತರೆ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಅ. 5 ರ ಸಂಜೆ 5.30 ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ಅಂತರರಾಷ್ಟ್ರೀಯ ಜಾನಪದ ಕಲಾವಿದರಾದ ಡಾ. ಸುಬ್ಬನಹಳ್ಳಿ ರಾಜು ಮತ್ತು ರಾಜಪ್ಪ ಅವರಿಂದ ಜಾನಪದ ಸಂಭ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಾಂಸ್ಕೃತಿಕ ದಸರಾ ಸಮಿತಿಯ ಪಾಲಿಕೆ ಸದಸ್ಯರಾದ ಎಸ್. ಜ್ಞಾನೇಶ್ವರ್, ಎಸ್. ಶಿವಕುಮಾರ್, ಸದಸ್ಯ ಕಾರ್ಯದರ್ಶಿ ಸಿದ್ದಪ್ಪ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post