ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಮಹಾನಗರ ಪಾಲಿಕೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಸೆ.26 ರಿಂದ ಅ.5 ರವರೆಗೆ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ-2022ನ್ನು ಆಯೋಜಿಸಲಾಗಿದ್ದು, 10 ದಿನಗಳ ಕಾಲ ಅದ್ದೂರಿ ದಸರಾ ಆಚರಿಸಲಾಗುವುದು ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ ತಿಳಿಸಿದರು.
ಅವರು ಇಂದು ಮಹಾನಗರ ಪಾಲಿಕೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆ.26ರ ಬೆಳಿಗ್ಗೆ 11 ಗಂಟೆಗೆ ಕೋಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾನಪದ ಕಲಾವಿದೆ, ಪರಿಸರ ಪ್ರೇಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿಗೌಡ ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ. ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಇದೇ ಸಂದರ್ಭದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದರು.
ಅಧ್ಯಕ್ಷತೆಯನ್ನು ಮೇಯರ್ ಸುನೀತಾ ಅಣ್ಣಪ್ಪ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಕೆ.ಎಸ್. ಈಶ್ವರಪ್ಪ, ಕೆ.ಬಿ.ಅಶೋಕ್ ನಾಯ್ಕ, ಆಯನೂರು ಮಂಜುನಾಥ್, ಎಸ್.ಎಲ್.ಬೋಜೇಗೌಡ, ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿಶೆಟ್ಟಿ, ಪಾಲಿಕೆ ಉಪಮಹಾಪೌರ ಶಂಕರ್ಗನ್ನಿ, ಇನ್ನಿತರರು ಮತ್ತು ಎಲ್ಲ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಶಿವಮೊಗ್ಗ ದಸರಾಕ್ಕೆ ಹಲವು ವಿಶೇಷತೆಗಳಿವೆ. ಮೈಸೂರು ಹೊರತುಪಡಿಸಿದರೆ ಶಿವಮೊಗ್ಗದಲ್ಲಿ ಅತಿ ವಿಜೃಂಭಣೆಯಿಂದ ದಸರಾ ಆಚರಿಸಲಾಗುತ್ತಿದೆ. ಮಹಿಳಾ ದಸರಾ, ದಸರಾ ಚಲನಚಿತ್ರೋತ್ಸವ, ಸಾಂಸ್ಕೃತಿಕ ದಸರಾ-ರಂಗ ದಸರಾ, ಯುವ ದಸರಾ, ಯಕ್ಷ ದಸರಾ, ಪರಿಸರ ದಸರಾ, ರೈತ ದಸರಾ, ಕಲಾ ದಸರಾ, ಯೋಗ ದಸರಾ, ಆಹಾರ ದಸರಾ ಎಂದು ನಾಡ ಹಬ್ಬವನ್ನು ವಿವಿಧ ಆಯಾಮಗಳಲ್ಲಿ ಆಚರಿಸಲಾಗುವುದು ಎಂದರು.
ಮಹಿಳಾ ದಸರಾ:
ಸೆ.26ರ ಸಂಜೆ 6ಗಂಟೆಗೆ ಫ್ರೀಡಂಪಾರ್ಕ್ನಲ್ಲಿ ಮಹಿಳಾ ದಸರಾವನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆಗೈಧ ನಮ್ಮೂರ ಮಹಿಳಾ ಸಾಧಕಿಯರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಜಯಲಕ್ಷ್ಮಿ ಕೆ.ಎಸ್.ಈಶ್ವರಪ್ಪ, ಪ್ರತಿಭಾ ಡಿ.ಎಸ್.ಅರುಣ್, ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್, ಕೆ.ಶಂಕರ್ಗನ್ನಿ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ರೇಖಾ ರಂಗನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಅಮ್ಮ-ಮಗಳ ಸಂಪ್ರದಾಯಕ ಉಡುಗೆಗಳ ಸ್ಪರ್ಧೆ ನಡೆಯಲಿದೆ. ನಂತರ ಶಿವಮೊಗ್ಗ ನಗರದ ವಿವಿಧ ಮಹಿಳಾ ಸಂಘಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹಾಗೂ ಸೆ.27ರ ಸಂಜೆ 4ಗಂಟೆಗೆ ಗೋಪಿ ವೃತ್ತದಿಂದ ಫ್ರೀಡಂ ಪಾರ್ಕ್ವರೆಗೆ ಮಹಿಳಾ ಸ್ವಾತಂತ್ರ್ಯ ನಡಿಗೆ ನಡೆಯಲಿದೆ. 5 ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಿರುತೆರೆ ನಟಿಯರಾದ ನಯನ ಪಣಯಂ, ಅಶ್ವಿನಿ ಸಾಗರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ತೇಜಸ್ವಿನಿ ರಾಘವೇಂದ್ರ, ಮಂಜುಳಾ ಆಯನೂರು ಮಂಜುನಾಥ್, ಶಕುಂತಲಾ ರುದ್ರೇಗೌಡ್ರು ಆಗಮಿಸಲಿದ್ದಾರೆ. ನಂತರ ವಿವಿಧ ಮಹಿಳಾ ಸಂಘಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ದಸರಾ ಚಲನಚಿತ್ರೋತ್ಸವ:
ದಸರಾ ಚಲನಚಿತ್ರೋತ್ಸವವನ್ನು ಸೆ.27 ರ ಬೆಳಿಗ್ಗೆ 9 ಗಂಟೆಗೆ ಲಕ್ಷ್ಮಿ ಚಿತ್ರಮಂದಿರದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಸ್. ಲಿಂಗದೇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಚಲನಚಿತ್ರ ಕಲಾವಿದರಾದ ಅಜಯ್ ರಾವ್, ಮೇಘಶ್ರೀ, ಕಿರುತೆರೆ ಕಲಾವಿದೆ ಅಂಕಿತ ಅಮರ್ ಆಗಮಸಲಿದ್ದಾರೆ. ಸೆ.27 ರಿಂದ ಅ.1.ರವರೆಗೆ ಪ್ರತಿದಿನ ಚಲನಚಿತ್ರೋತ್ಸವ ನಿಮಿತ್ತ ಉಚಿತ ಚಲನಚಿತ್ರ ಪ್ರದರ್ಶನವಿರುತ್ತದೆ. 27 ರಂದು ಬೆಳಿಗ್ಗೆ 10ಕ್ಕೆ ಲಕ್ಷ್ಮಿ ಚಿತ್ರಮಂದಿರದಲ್ಲಿ-ರಾಜಕುಮಾರ, 28ರಂದು ಬೆಳಿಗ್ಗೆ 8.30ಕ್ಕೆ ಹೆಚ್ಪಿಸಿ ಚಿತ್ರಮಂದಿರದಲ್ಲಿ ಮಾಣಿಕ್ಯ, 29ರಂದು ಬೆಳಿಗ್ಗೆ 8.30ಕ್ಕೆ ಮಂಜುನಾಥ ಚಿತ್ರಮಂದಿರದಲ್ಲಿ ಓಂ, 30ರಂದು ಬೆಳಿಗ್ಗೆ 8.30ಕ್ಕೆ ವೀರಭದ್ರೇಶ್ವರದಲ್ಲಿ ಚಾರ್ಲಿ 777, ಅ.1ರಂದು ಬೆಳಿಗ್ಗೆ 8.30ಕ್ಕೆ ಬಡವ ರಾಸ್ಕಲ್ ಪ್ರದರ್ಶನಗೊಳ್ಳಲಿದೆ ಎಂದರು.
ರಂಗ ದಸರಾ:
ಸೆ.27 ರಂದು ಬೆಳಿಗ್ಗೆ 10.30ಕ್ಕೆ ಪಾಲಿಕೆ ಆವರಣದಿಂದ ಕುವೆಂಪು ರಂಗಮAದಿರದವರೆಗೆ ರಂಗ ಜಾಥಾ ನಡೆಯಲಿದ್ದು, ಹಿರಿಯ ರಂಗ ನಿರ್ದೇಶಕ ಹಾಲೇಶ್ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. 11.30ಕ್ಕೆ ರಂಗದಸರಾವನ್ನು ಹಿರಿಯ ನಾಟಕಕಾರ ಡಾ.ಗಜಾನನ ಶರ್ಮಾ ಉದ್ಘಾಟಿಸಲಿದ್ದಾರೆ. 12.30ಕ್ಕೆ ರಂಗ ಸಮಾಗಮ ಮತ್ತು ರಂಗಗೋಷ್ಠಿ ನಡೆಯಲಿದ್ದು, ಮದ್ಯಾಹ್ನ 2.20ಕ್ಕೆ ಜಿಲ್ಲಾ ಮಟ್ಟದ ಮೂಕಾಭಿನಯ ಸ್ಪರ್ಧೆ, 6.30ರಿಂದ ರಂಗ ತುಣುಕು ಹಾಗೂ ನಗರದ ವಿವಿಧ ಸ್ಥಳಗಳಲ್ಲಿ ರಂಗ ಗೀತೆ ಗಾಯನ ನಡೆಯಲಿದೆ. ಸೆ.27ರಿಂದ ಅ.15ರವರೆಗೆ ರಾಜ್ಯಮಟ್ಟದ ಹಾಸ್ಯ ನಾಟಕ ಸ್ಪರ್ಧೆ ನಡೆಯಲಿದೆ ಎಂದರು.
ಸೆ.28ರ ಬೆಳಿಗ್ಗೆ 10.30ರಿಂದ ಸರ್ಕಾರಿ ನೌಕರರ ಭವನದಲ್ಲಿ ಏಕಪಾತ್ರ ಅಭಿನಯ ಸ್ಪರ್ಧೆ, ಸೆ.29ರಿಂದ ಅ.1ರವರೆಗೆ ಕುವೆಂಪು ರಂಗಮಂದಿರದಲ್ಲಿ ಪ್ರತಿದಿನ ಸಂಜೆ 5ರಿಂದ ರಾಜ್ಯಮಟ್ಟದ ಹಾಸ್ಯ ನಾಟಕ ಸ್ಪರ್ಧೆ ನಡೆಯಲಿದೆ. ಅ.1ರ ಬೆಳಿಗ್ಗೆ 10ರಿಂದ 4.30ರವರೆಗೆ ಕುವೆಂಪು ರಂಗಮಂದಿರದಲ್ಲಿ ಸರ್ಕಾರಿ ಶಾಲಾ ಮಕ್ಕಳಿಂದ 5 ನಾಟಕ ಪ್ರದರ್ಶನವಿದ್ದು, ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಯುವ ದಸರಾ:
ಸೆ.26ರಿಂದ ಅ.2ರವರೆಗೆ ಯುವ ದಸರಾ ಕಾರ್ಯಕ್ರಮಗಳು ನಡೆಯಲಿವೆ. ಸೆ.26ರ ಮಧ್ಯಾಹ್ನ 12ಗಂಟೆಗೆ ಕುವೆಂಪು ರಂಗಮAದಿರದಲ್ಲಿ ಗೀತಾಗಾಯನ ಸ್ಪರ್ಧೆ, ಸಂಜೆ 4.30ಕ್ಕೆ ದೇಹದಾರ್ಢ್ಯ ಸ್ಪರ್ಧೆ, 27ರಂದು ನೆಹರೂ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ಸ್ಲೋ ಬೈಕ್ ಪಂದ್ಯಾವಳಿ, ಸಂಜೆ 4 ಗಂಟೆಗೆ ಕುಸ್ತಿ ಪಂದ್ಯಾವಳಿ, 28ರ ಬೆಳಿಗ್ಗೆ 9ಗಂಟೆಗೆ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಕ್ರಾಸ್ ಕಂಟ್ರ್ರಿ ಓಟದ ಸ್ಪರ್ಧೆ, ಸಂಜೆ 4ಕ್ಕೆ ಕಬ್ಬಡಿ ಪಂದ್ಯಾವಳಿ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದೆ. 29ರ ಸಂಜೆ 4.30ಕ್ಕೆ ಶಿವಪ್ಪನಾಯಕ ಮಾಲ್ನಲ್ಲಿ ಟ್ಯಾಲೆಂಟ್ ಹಂಟ್, ಸಂಜೆ 7ಗಂಟೆಗೆ ಫ್ರೀಡಂಪಾರ್ಕ್ ನಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ, ಅ.2ರ ಸಂಜೆ 5ಗಂಟೆಗೆ ಫ್ರೀಡಂಪಾರ್ಕ್ ನಲ್ಲಿ ಮ್ಯೂಸಿಕಲ್ ನೈಟ್ ನಡೆಯಲಿದೆ ಎಂದರು.
ಸಾಂಸ್ಕೃತಿಕ ದಸರಾ:
ಸೆ.27 ಮತ್ತು 28ರಂದು ಬೆಳಿಗ್ಗೆ 9.30ರಿಂದ ಸಂಜೆ 4ರವರೆಗೆ ಫ್ರೀಡಂಪಾರ್ಕ್ ನಲ್ಲಿ ಚರ್ಮ ವಾದ್ಯಗಳ ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದ್ದು, ಸೆ.29ರಂದು ಸಂಜೆ 5ರಿಂದ ರಾತ್ರಿ 8.30ರವರೆಗೆ ಕಮಲಾ ನೆಹರೂ ಕಾಲೇಜಿನಲ್ಲಿ ಸಾಹಿತ್ಯ ದಸರಾ ನಡೆಯಲಿದ್ದು, ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುAದರ್ರಾಜ್ ಉದ್ಘಾಟಿಸಲಿದ್ದಾರೆ. ನಂತರ ವಚನ ಸಾಹಿತ್ಯ, ಹಾಸ್ಯ, ಹರಟೆ ಹಾಗೂ ಕವಿಗೋಷ್ಠಿ ನಡೆಯಲಿದೆ. ಅ.3ರ ಸಂಜೆ 5.30ಕ್ಕೆ ಫ್ರೀಡಂಪಾರ್ಕ್ ನಲ್ಲಿ ನಡೆಯುವ ಗೀತಾ ವೈವಿಧ್ಯ, ನಾಟ್ಯ, ಶತವೀಣಾವಾದ್ಯ ಸಂಭ್ರಮವನ್ನು ಖ್ಯಾತ ಚಲನಚಿತ್ರ ನಟ ರಮೇಶ್ಭಟ್ ಉದ್ಘಾಟಿಸಲಿದ್ದಾರೆ. 4ರ ಸಂಜೆ 5.30ಕ್ಕೆ ಸಂಗೀತ ಸಂಭ್ರಮ ನಡೆಯಲಿದೆ.
ಯಕ್ಷ ದಸರಾ:
ಅ.3 ಮತ್ತು 4ರಂದು ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ಯಕ್ಷ ದಸರಾ ಕಾರ್ಯಕ್ರಮವನ್ನು ಖ್ಯಾತ ಭಾಗವತರಾದ ಕೇಶವ್ ಹೆಗಡೆ ಕೊಳಗಿ ಉದ್ಘಾಟಿಸಲಿದ್ದಾರೆ. ಹನುಮಾರ್ಜುನ ಹಾಗೂ ಕೃಷ್ಣಾರ್ಜುನ ಪ್ರಸಂಗ ಪ್ರದರ್ಶನಗೊಳ್ಳಿದೆ.
ರೈತ ದಸರಾ:
ಸೆ.27ರ ಬೆಳಿಗ್ಗೆ 9.30ಕ್ಕೆ ಮಲವಗೊಪ್ಪದಲ್ಲಿ ಕೆಸರು ಗದ್ದೆ ಓಟ ಮತ್ತು ಹಗ್ಗಜಗ್ಗಾದ ಸ್ಪರ್ಧೆ ನಡೆಯಲಿದೆ. 27ರಂದು ಮಧ್ಯಾಹ್ನ 2ರಿಂದ 4ರವರೆಗೆ ಎನ್ಡಿವಿ ಹಾಸ್ಟಲ್ ಆವರಣದಲ್ಲಿ ಆರೋಗ್ಯವಂತ ಹಸು ಪ್ರದರ್ಶನ, 29ರ ಬೆಳಿಗ್ಗೆ 10ಕ್ಕೆ ಸೈನ್ಸ್ ಮೈದಾನ ಮತ್ತು ಕುವೆಂಪು ರಂಗಮಂದಿರದಲ್ಲಿ ಜಾಥಾ ಮತ್ತು ವೇದಿಕೆ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಸಣಾಶಿಬಿರ ನಡೆಯಲಿದೆ. ಅ.2ರ ಬೆಳಿಗ್ಗೆ 10 ಗಂಟೆಗೆ ಗಾಂಧಿಪಾರ್ಕ್ ನಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನ ನಡೆಯಲಿದೆ ಎಂದರು.
ಕಲಾ ದಸರಾ:
ಸೆ.28ರಂದು ಬೆಳಿಗ್ಗೆ 10ಕ್ಕೆ ಕುವೆಂಪು ರಂಗಮAದಿರದಲ್ಲಿ ಛಾಯಾಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಸಂಜೆ 4ರಿಂದ ಕವಿಗೋಷ್ಠಿ ನಡೆಯಲಿದೆ. 7ಕ್ಕೆ ಹರಟೆ ಕಾರ್ಯಕ್ರಮ, 29ರಂದು ಫ್ರೀಡಂಪಾರ್ಕ್ನಲ್ಲಿ ಸಂಜೆ 6ರಿಂದ ನಗರದ ವಿವಿಧ ಕಲಾವಿದರಿಂದ ಜಾನಪದ ನೃತ್ಯ ಗೀತೆಗಳ ಸಂಗಮ, 30ರಂದು ಸಂಜೆ 5ರಿಂದ ರಾಜ್ಯಮಟ್ಟದ ಜಾಪನದ ಸ್ಪರ್ಧೆ ನಡೆಯಲಿದೆ.
ಮಕ್ಕಳ ದಸರಾ:
ಸೆ.24ರಂದು ಬೆಳಗ್ಗೆ 9ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಮಕ್ಕಳ ದಸರಾದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ರಾಷ್ಟ್ರಪ್ರಶಸ್ತಿ ವಿಜೇತೆ ಗೌತಮಿ ಉದ್ಘಾಟಿಸಲಿದ್ದಾರೆ. ಸೆ.27ರ ಬೆಳಿಗ್ಗೆ 9.30ಕ್ಕೆ ಅಗಮುಡಿ ಕಲ್ಯಾಣ ಮಂದಿರದಲ್ಲಿ ರಾಜ್ಯಮಟ್ಟದ ಸಬ್ ಜೂನಿಯರ್ ಕರಾಟೆ ಪಂದ್ಯಾವಳಿ, ಬೆಳಿಗ್ಗೆ 10.30ಕ್ಕೆ ಗೋಪಾಲಗೌಡ ಬಡಾವಣೆಯಲ್ಲಿರುವ ಕ್ರೀಡಾ ಸಂಕೀರ್ಣದಲ್ಲಿ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆ ಆಯೋಜಿಸಲಾಗಿದೆ. 28ರಂದು ಬೆಳಗ್ಗೆ 10.30 ರಿಂದ ಫ್ರೀಡಂಪಾರ್ಕ್ನಲ್ಲಿ ನಮ್ಮ ವನಶ್ರೀ ಸಾಗರ ತಂಡದವರಿಂದ ನೃತ್ಯ ಯೋಗ ವೈವಿಧ್ಯ ನಡೆಯಲಿದೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ಶ್ವಾನಗಳ ಪ್ರದರ್ಶನ ಹಾಗೂ ಜಿಲ್ಲಾ ಅಗ್ನಿಶಾಮಕ ದಳದವರಿಂದ ಅಗ್ನಿ ಅವಘಡ ಅಣಕು ಪ್ರದರ್ಶನ ನಡೆಯಲಿದೆ. ಸಂಜೆ 5 ಗಂಟೆಗೆ ಹೊಂಗಿರಣ ಸ್ಕೂಲ್ ಆಫ್ ಎಕ್ಸಲೆನ್ಸ್ ಆಮಟೆಕೊಪ್ಪ ಶಾಲಾ ಮಕ್ಕಳಿಂದ ಸಂಸೃಷ್ಠಿ ಸಂಸ್ಕೃತಿಯ ಪರಿಸೃಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಜಾದೂಗಾರ ಪ್ರಶಾಂತ್ ಹೆಗ್ಡೆ ಅವರಿಂದ ಜಾದೂ ಪ್ರದರ್ಶನ ನಡೆಯಲಿದೆ. ವ್ಯಾಸ ಮಹರ್ಷಿ ಗುರುಕುಲ ಯಕ್ಷಕುಟೀರ ಬಟ್ಟೆ ಮಲ್ಲಪ್ಪ ಹೊಸನಗರ ಇವರಿಂದ ವಿನೂತನ ಕೊರೋನಾಸುರ ದಮನ ಎಂಬ ಕಥಾ ಪ್ರಸಂಗ ಯಕ್ಷಗಾನ ನಡೆಯಲಿದೆ. ನಗರದ ವಿವಿಧ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಲಿದೆ ಎಂದರು.
ಯೋಗ ದಸರಾ:
ಅ.2ರಂದು ಬೆಳಿಗ್ಗೆ 5.30ಕ್ಕೆ ಕುವೆಂಪು ರಂಗಮAದಿರಲ್ಲಿ ಯೋಗ ದಸರಾ ನಡೆಯಲಿದೆ. ಬೆಳಿಗ್ಗೆ 7ರಿಂದ ಕುವೆಂಪು ರಂಗಮಂದಿರದಿಂದ ಯೋಗ ನಡಿಗೆ, ಬೆಳಿಗ್ಗೆ 9.30ರಿಂದ ಜಿಲ್ಲಾ ಮಟ್ಟದಿಂದ ಯೋಗಾಸನ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಜೆ 4.30ಕ್ಕೆ ಯೋಗ ಸಿರಿಯನ್ನು ಶಿವಮೊಗ್ಗದ ಪ್ರಸಿದ್ದ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ನೀಲಾಂಬಿಕ ಅವಿನಾಶ್ ಉದ್ಘಾಟಿಲಿದ್ದಾರೆ ಎಂದರು.
ಆಹಾರ ದಸರಾ:
ಸೆ.24 ರಂದು ಮಧ್ಯಾಹ್ನ 2 ರಿಂದ 4ರವರೆಗೆ ನಿಜಲಿಂಗಪ್ಪ ಸಭಾಂಗಣದಲ್ಲಿ ಅಡುಡೆ ಮಾಡುವ ಸ್ಪರ್ಧೆ, 27ರಂದು ಬೆಳಿಗ್ಗೆ 10.30ಕ್ಕೆ ಮುದ್ದೆ ಸಾರು ಹಾಗೂ ಸೇಬು ಹಣ್ಣು ತಿನ್ನುವ ಸ್ಪರ್ಧೆ ನಡೆಯಲಿದೆ. ಸೆ.26ರಿಂದ ಅ.5ವರೆಗೆ ಸಂಜೆ 5ಕ್ಕೆ ಫ್ರೀಡಂಪಾರ್ಕ್ನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 30 ಸ್ಟಾಲ್ಗಳಲ್ಲಿ ವಿವಿಧ ರೀತಿಯ ವಿಶಿಷ್ಟ ಅಡುಗೆಗಳ ತಯಾರಿಕೆ ಮತ್ತು ತಿನಿಸುಗಳ ಅಂಗಳವಿರುತ್ತದೆ ಎಂದರು.
ಅ.5ರ ಮಧ್ಯಾಹ್ನ 2.30ಕ್ಕೆ ಶಿವಪ್ಪನಾಯಕ ಅರಮನೆ ಆವರಣದಿಂದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆಯೂ ಫ್ರೀಡಂಪಾರ್ಕ್ ವರೆಗೆ ನಡೆಯಲಿದ್ದು, ಮೇಯರ್ ಸುನೀತಾ ಅಣ್ಣಪ್ಪ ಉದ್ಘಾಟಿಸಲಿದ್ದಾರೆ. ಸಂಜೆ 6.30ಕ್ಕೆ ತಹಶೀಲ್ದಾರ್ ಡಾ.ಎನ್.ಜೆ.ನಾಗರಾಜ್ ಅಂಬುಛೇದನ ಮಾಡಲಿದ್ದಾರೆ ಎಂದರು.
ದಸರಾ ಉತ್ಸವದ ಯಶಸ್ಸಿಗೆ 14 ಸಮಿತಿಗಳನ್ನು ರಚಿಸಲಾಗಿದ್ದು, 2.20 ಕೋಟಿ ರೂ.ವೆಚ್ಚದಲ್ಲಿ ದಸರಾ ಉತ್ಸವ ಆಯೋಜಿಸಲಾಗಿದೆ. ಈ ಬಾರಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿಯ ವಿಗ್ರಹಕ್ಕೆ ಸುಮಾರು 4ಲಕ್ಷ ರೂ. ವೆಚ್ಚದಲ್ಲಿ ಮಾಡಿಸಿರುವ ಬಂಗಾರದ ಕಿರೀಟವನ್ನು ಧರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾನಗರಪಾಲಿಕೆ ಉಪಮೇಯರ್ ಶಂಕರ್ ಗನ್ನಿ, ಸದಸ್ಯರಾದ ಹೆಸ್.ಎನ್.ಚನ್ನಬಸಪ್ಪ, ಸುವರ್ಣ ಶಂಕರ್, ರೇಖಾ ರಂಗನಾಥ್, ಹೆಚ್.ಸಿ.ಯೋಗೀಶ್, ಲಕ್ಷ್ಮಿಶಂಕರ್ ನಾಯಕ್, ಮಂಜುಳಾ ಶಿವಣ್ಣ, ಆಶಾಚಂದ್ರಪ್ಪ, ಅನಿತಾ ರವಿಶಂಕರ್, ಆರತಿ ಅ.ಮ.ಪ್ರಕಾಶ್, ಸುರೇಖಾ ಮುರುಳೀಧರ್, ಪ್ರಭಾರ ಆಯುಕ್ತ ಕೆ.ಮಾಯಣ್ಣಗೌಡ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post