ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಿ. ಬಿ.ಎಸ್. ರಾಮ ಭಟ್ಟರು ಮಲೆನಾಡಿನ ಅಪ್ಪಟ ಪ್ರತಿಭೆ. ಶಿವಮೊಗ್ಗ ಜಿಲ್ಲೆಯ ಐತಿಹಾಸಿಕ ಸ್ಥಳಗಳು, ಪುರಾತನ ಶಾಸನಗಳು ಮತ್ತು ದೇವಾಲಯಗಳ ಬಗ್ಗೆ ತಳಸ್ಪರ್ಶಿ ಅಧ್ಯಯನ ನಡೆಸಿ, ಬರೆದ ಲೇಖನಗಳು ತುಂಬ ಜನಪ್ರಿಯವಾಗಿದ್ದವು. ಅದರಲ್ಲಿಯೂ ಕೆಳದಿ ಸಂಸ್ಥಾನದ ಬಗ್ಗೆ ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾಡಿದ ಕಾರ್ಯ ಶ್ಲಾಘನೀಯ ಎಂದು ಬೆಕ್ಕಿನ ಕಲ್ಮಠದ ಶ್ರೀ ಗಳಾದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾ ಸ್ವಾಮಿಗಳು ಹೇಳಿದರು.
ಅವರು ಎಂ.ಎನ್. ಸುಂದರ ರಾಜ್ ಸಂಪಾದಿಸಿರುವ ದಿ.ಬಿ.ಎಸ್. ರಾಮಭಟ್ಟರ “ಗೊಂಚಲು” ಸಮಗ್ರ ಸಾಹಿತ್ಯವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ರಾಮಭಟ್ಟರ ವ್ಯಕ್ತಿತ್ವದ ಬಗ್ಗೆ ಪ್ರಸ್ತಾಪಿಸಿದ ಶ್ರೀ ಗಳು ಸರಳತೆ, ಸಜ್ಜನಿಕೆಗೆ ಮತ್ತೊಂದು ಹೆಸರೇ ಅವರಾಗಿದ್ದರು. ಪ್ರಾಥಮಿಕ ಶಾಲೆ ಶಿಕ್ಷಕರಾಗಿ, ಸ್ವ ಸಾಮರ್ಥ್ಯದಿಂದ ಖಾಸಗಿಯಾಗಿ ಕಲಿತು, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ವಿದ್ಯಾರ್ಥಿಗಳಲ್ಲಿ ಮೆಚ್ಚುಗೆ ಗಳಿಸಿದ್ದರು. ನಿರಹಂಕಾರದ ಮೂರ್ತಿಯಾಗಿದ್ದ ಶ್ರೀ ಯುತರ ಸಮಗ್ರ ಸಾಹಿತ್ಯ ಅಧ್ಯಯನಶೀಲರಿಗೆ ಮಾರ್ಗದರ್ಶಿಯಾಗಿರಲಿ ಎಂದು ಹಾರೈಸಿದರು.
ರಾಮಭಟ್ಟರ ಇತಿಹಾಸ ಪ್ರಜ್ಞೆ ಕುರಿತು ನಿವೃತ್ತ ಉಪನ್ಯಾಸಕ ಎಸ್.ಜಿ. ಸಾಮಕ್ ಮಾತನಾಡಿ, ಆಳವಾದ ಅಧ್ಯಯನ ದಿಂದ ಎಲ್ಲರ ಮನಸೂರೆಗೊಂಡಿದ್ದ ರಾಮಭಟ್ಟ ಅವರು, ಐತಿಹಾಸಿಕ ವಿಷಯ ಸಂಗ್ರಹಣೆಯಲ್ಲಿ ಅವರ ಬದ್ಧತೆ, ವಿಷಯ ನಿರೂಪಣಾ ಶೈಲಿ ಅನುಕರಣೀಯವಾಗಿತ್ತು ಎಂದು ಶ್ಲಾಘಿಸಿದರು.
ಮತ್ತೊಬ್ಬ ಸಂಶೋಧಕ ಡಾ. ಕೆಳದಿ ವೆಂಕಟೇಶ ಜೋಯಿಸ್ ಮಾತನಾಡಿ, “ರಾಮ ಭಟ್ಟರು ಬರೆದ ಕವಿತೆಗಳು, ನಾಟಕಗಳು, ಕಾದಂಬರಿ ಸಹ ಅವರನ್ನು ಅಪೂರ್ವ ಬರಹಗಾರರನ್ನಾಗಿ ಮಾಡಿದೆ. ಅವರು ರಚಿಸಿದ ಸಾಹಿತ್ಯ ನಮ್ಮ ಯುವ ಸಾಹಿತಿಗಳಿಗೆ ದಾರಿದೀಪವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಗೊಂಚಲು ಕೃತಿಯ ಪ್ರಧಾನ ಸಂಪಾದಕ ಎಂ.ಎನ್. ಸುಂದರ ರಾಜ್ ಮಾತನಾಡಿ, ದಿ. ರಾಮಭಟ್ಟರಂತಹ ಅಸಮಾನ್ಯ ಲೇಖಕರ ಸಮಗ್ರ ಸಾಹಿತ್ಯವನ್ನು ಹೊರತರುವ ಕಾರ್ಯ ತಮಗೆ ಅತೀವ ಆನಂದವನ್ನುಂಟು ಮಾಡಿದೆ. ಅವರ ಲೇಖನದ ಕೆಲ ಸಂಗತಿಗಳನ್ನು ಉಲ್ಲೇಖಿಸಿ, ಅವರ ಲೇಖನಗಳಲ್ಲಿ ಹಲವಾರು ವಿಷಯಗಳು ಓದುಗನಿಗೆ ಚಿಂತೆಗೆ ಹಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
Also read: ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ನಿಬಂಧನೆಗಳನ್ನು ಸರಳಗೊಳಿಸಿ
ಕೃತಿಯನ್ನು ಹೊರತರುವಲ್ಲಿ ರಾಮಭಟ್ಟರ ಕುಟುಂಬವರ್ಗದವರ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸಿದರು. ಅಮೂಲ್ಯ ಲೇಖನಗಳ ಗುಚ್ಛವಾದ ಈ ಕೃತಿ ವಿದ್ಯಾರ್ಥಿಗಳಗೆ, ಸಂಶೋದಕರಿಗೆ ಮತ್ತು ಸಾಹಿತ್ಯಾಸಕ್ತರಿಗೆ ಅಕರ ಗ್ರಂಥವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಹಲವಾರು ಗ್ರಾಮಗಳ ಹೆಸರುಗಳ ಹಿಂದಿನ ಇತಿಹಾಸವನ್ನು ಲೀಲಾಜಾಲವಾಗಿ ವಿವರಿಸುತ್ತಿದ್ದ ಪ್ರತಿಭೆಯನ್ನು ಕೊಂಡಾಡಿದರು.
ರಾಮಭಟ್ಟರ ಸಾಧನೆ ಮತ್ತು ವ್ಯಕ್ತಿತ್ವದ ಬಗ್ಗೆ ಕತ್ತಿಗೆ ಚನ್ನಪ್ಪ ಮತ್ತು ಮಾರ್ಪಳ್ಳಿ ಮಂಜುನಾಥ್ ಮಾತನಾಡಿದರು. ಪ್ರಾರಂಭದಲ್ಲಿ ಕು.ಪನ್ನಗಳಿಂದ ಪ್ರಾರ್ಥನೆ, ಶ್ರೀಕಂಠಮೂರ್ತಿಯವರಿಂದ ಸ್ವಾಗತ ಮತ್ತು ಪದ್ಮನಾಭ ಜೋಯಿಸ್ ಅವರಿಂದ ವಂದನಾರ್ಪಣೆ ನಡೆಯಿತು. ಜಿ.ವಿಜಯ ಕುಮಾರ್ ಮತ್ತು ರುಕ್ಮಿಣಿ ಆನಂದ್ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post