ಶ್ರೀನಗರ, ಅ.28: ಅಂತರ್ರಾಷ್ಟ್ರೀಯ ಗಡಿ ರೇಖೆಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ಥಾನ ಸೇನೆಗೆ ಭಾರತೀಯ ಸೇನಾ ಪಡೆ ಮತ್ತೆ ಸರಿಯಾದ ಪಾಠ ಕಲಿಸಿದೆ. ಇಂದು ಮತ್ತೆ ಅಪ್ರಚೋದಿತ ದಾಳಿ ನಡೆಸಿದ ಪಾಕಿಸ್ಥಾನದ 15 ಯೋಧರನ್ನು ಭಾರತೀಯ ಯೋಧರು ಹತ್ಯೆ ಮಾಡಿದ್ದಾರೆ.
ನಿನ್ನೆಯಿಂದ ಆರಂಭವಾಗಿರುವ ನಿರಂತರ ಅಪ್ರಚೋದಿತ ದಾಳಿಯನ್ನು ಮುಂದುವರೆಸಿರುವ ಪಾಕ್ಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.
ಈ ಕುರಿತಂತೆ ಮಾತನಾಡಿರುವ ಬಿಎಸ್ಎಫ್ ಅಧಿಕಾರಿ ಅರುಣ್ ಕುಮಾರ್, ಗಡಿಯಲ್ಲಿ ಪಾಕಿಸ್ಥಾನ ಸೇನೆ ಪದೇಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಲೇ ಇದೆ. ಪಾಕಿಸ್ಥಾನ ಸೇನೆಯ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡಿದ್ದು, ಈ ವರೆಗೂ 15 ಪಾಕಿಸ್ಥಾನ ಸೈನಿಕರನ್ನು ಹತ್ಯೆ ಮಾಡಿದೆ. ಜಮ್ಮುವಿನ ಅಂತರ್ರಾಷ್ಟ್ರೀಯ ಗಡಿಯೊಂದರಲ್ಲಿಯೇ ಪಾಕಿಸ್ಥಾನದ ಏಳು ಸೈನಿಕರನ್ನು ಬಿಎಸ್ಎಫ್ ಹತ್ಯೆ ಮಾಡಲಾಗಿದೆ ಎಂದಿದ್ದಾರೆ.
ನಿರಂತರವಾಗಿ ಅಪ್ರಚೋದಿತ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ರಜೌರಿ, ಸಾಂಬಾ, ಅಬ್ದುಲಿಯಾ, ಆರ್ಎಸ್ ಪುರ ಮತ್ತು ಸುಚೆಟ್ಗರ್ಟ್ಗಳಲ್ಲಿ ಕಳೆದ 24 ಗಂಟೆಗಳಿಂದಲೂ ಪಾಕಿಸ್ಥಾನ ಸೇನೆ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದೆ. ನೌಶೆರಾ, ಸುಂದರ್ಬಾನಿ ಮತ್ತು ಪಲ್ಲಾನ್ವಾಲಾ ಜಿಲ್ಲೆಗಳಲ್ಲಿ ಬೆಳಿಗ್ಗೆ 5 ಗಂಟೆ ಸುಮಾರಿಗೆ ಪಾಕಿಸ್ಥಾನ ಸೇನೆ ಶೆಲ್ಗಳ ದಾಳಿ ನಡೆಸಿ, ಕದನ ವಿರಾಮವನ್ನು ಉಲ್ಲಂಘಿಸಿದೆ.
Discussion about this post