ಬೆಂಗಳೂರು, ಅ.17: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿರುವ ದಲಿತ ಸಮುದಾಯದ ಪ್ರಭಾವಿ ನಾಯಕ, ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿದರು.
ಇಂದು ಮಧ್ಯಾಹ್ನ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ಶ್ರೀನಿವಾಸ್ ಪ್ರಸಾದ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ತಾವೇ ಅಲ್ಲಿಯೇ ಕುಳಿತು ರಾಜೀನಾಮೆ ಪತ್ರವನ್ನು ಬರೆದು ಕೊಟ್ಟರು. ಈ ಸಂದರ್ಭದಲ್ಲಿ ಸ್ಪೀಕರ್ ಕೋಳಿವಾಡ ಅವರು ನೀವು ರಾಜೀನಾಮೆ ಸಲ್ಲಿಸಲು ಯಾರದೇ ಆಮಿಷ, ಒತ್ತಡ ಅಥವಾ ಬೆದರಿಕೆ ಇದೆಯೇ ಎಂದು ಕೇಳಿದಾಗ, ಇಲ್ಲ ಸ್ವಇಚ್ಛೆಯಿಂದ ಸಲ್ಲಿಸುತ್ತಿರುವುದಾಗಿ ಹೇಳಿದರು. ಸಚಿವ ಹುದ್ದೆ ಕಳೆದುಕೊಂಡಿದ್ದಕ್ಕೆ ಬೇಸರಗೊಂಡು ರಾಜೀನಾಮೆ ನೀಡುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಸಚಿವ ಸ್ಥಾನದಿಂದ ತೆಗೆಯುವಾಗ ಮುಖ್ಯಮಂತ್ರಿಗಳು ವಿವೇಚನಾರಹಿತವಾಗಿ ನಡೆದುಕೊಂಡಿದ್ದಾರೆ. ಇದರಿಂದ ಬೇಸರವಾಗಿದೆ ಎಂದು ಹೇಳಿದರು.
ರಾಜೀನಾಮೆ ಪತ್ರ ಸ್ವೀಕರಿಸಿದ ಸ್ಪೀಕರ್ ಅವರು ನಿಯಮಾವಳಿಗಳ ಪ್ರಕಾರ ರಾಜೀನಾಮೆ ಪತ್ರ ಅಂಗೀಕರಿಸುವುದಾಗಿ ತಿಳಿಸಿದರು. ಶ್ರೀನಿವಾಸ್ ಪ್ರಸಾದ್ ಅವರ ರಾಜೀನಾಮೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಆಡಳಿತ ಪಕ್ಷದ ಶಾಸಕರೊಬ್ಬರು ಪಕ್ಷದ ವಿರುದ್ಧ ತೊಡೆ ತಟ್ಟಿ ರಾಜೀನಾಮೆ ನೀಡಿರುವ ಪ್ರಸಂಗ ಇದೇ ಮೊದಲು.
ಇದೀಗ ಶ್ರೀನಿವಾಸ್ ಪ್ರಸಾದ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಇನ್ನು ಆರು ತಿಂಗಳೊಳಗಾಗಿ ಮತ್ತೊಂದು ಮಿನಿ ಮಹಾಸಮರ ಎದುರಾಗಲಿದೆ. ಕೊನೆ ಕ್ಷಣದವರೆಗೂ ಶ್ರೀನಿವಾಸ್ ಪ್ರಸಾದ್ ಅವರನ್ನು ಕಾಂಗ್ರೆಸ್ ನಲ್ಲಿ ಉಳಿಸಿಕೊಳ್ಳಲು ಪಕ್ಷದ ಹಿರಿಯ ಮುಖಂಡರು ಭಾರೀ ಹರಸಾಹಸಪಟ್ಟರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡೀಸ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಸಚಿವರಾದ ಆಂಜನೇಯ ಸೇರಿದಂತೆ ಅನೇಕರು ನಡೆಸಿದ ಕಸರತ್ತು ಫಲ ಕೊಡಲಿಲ್ಲ.
ತಮ್ಮ ನಿವಾಸದಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ ಶ್ರೀನಿವಾಸ್ ಪ್ರಸಾದ್ ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದರು. ಬಳಿಕ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.
ಮೂಲತಃ ಜನಸಂಘದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಶ್ರೀನಿವಾಸ್ ಪ್ರಸಾದ್ ಸಚಿವರಾಗಿ, ಸಂಸದರಾಗಿ ಹಾಗೂ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯದಲ್ಲಿ ಓರ್ವ ಪ್ರಭಾವಿ ದಲಿತ ಮುಖಂಡರಾಗಿ ಅವರು ಗುರುತಿಸಿಕೊಂಡಿದ್ದಾರೆ.
ಮತ್ತೊಂದು ಮಿನಿ ಮಹಾಸಮರ: ಶ್ರೀನಿವಾಸ್ ಪ್ರಸಾದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ರಾಜ್ಯದಲ್ಲಿ ಮತ್ತೆ ಉಪಚುನಾವಣೆ ಎದುರಾಗಲಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮೂರು ಬಾರಿಗೆ ಉಪಚುನಾವಣೆ ಎದುರಾಗಲಿದೆ. ಈ ಹಿಂದೆ 2014ರ ಲೋಕಸಭೆ ಚುನಾವಣೆಯಲ್ಲಿ ಶಿಕಾರಿಪುರ, ಚಿಕ್ಕೋಡಿ, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.
ತದನಂತರ ಕಳೆದ ಆರು ತಿಂಗಳ ಹಿಂದೆ ಹೆಬ್ಬಾಳ, ಬೀದರ್ ಉತ್ತರ ಹಾಗೂ ದೇವದುರ್ಗ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಎರಡು ಬಾರಿ ನಡೆದ ಉಪಚುನಾವಣೆಯಲ್ಲಿ ಒಂದು ಬಾರಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ, ಇನ್ನೊಂದು ಬಾರಿ ಬಿಜೆಪಿ ನಗುವಿನ ಕೇಕೆ ಹಾಕಿತ್ತು.
ಈಗ ಶ್ರೀನಿವಾಸ್ ಪ್ರಸಾದ್ ರಾಜೀನಾಮೆಯಿಂದ ಮೈಸೂರು ಜಿಲ್ಲೆ ಮತ್ತೊಮ್ಮೆ ರಾಷ್ಟ್ರದ ಗಮನ ಸೆಳೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಇದಾಗಿರುವುದರಿಂದ ಗೆಲ್ಲುವ ಅನಿವಾರ್ಯತೆ ಅವರಿಗಿದ್ದರೆ, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಪ್ರಸಾದ್ ಗೆಲ್ಲಲೇಬೇಕಾಗಿದೆ.
ಪ್ರಸಾದ್ ಗೆ ಗಾಳ: ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ನೀಡಿರುವುದರಿಂದ ಜೆಡಿಎಸ್ ಮತ್ತು ಬಿಜೆಪಿ ತನ್ನತ್ತ ಸೆಳೆದುಕೊಳ್ಳಲು ಕಸರತ್ತು ಆರಂಭಿಸಿದೆ. ಇದರ ನಡುವೆ ಬಿಎಸ್ಪಿ ಕೂಡ ತನ್ನ ತೆಕ್ಕೆಗೆ ಸೆಳೆಯಲು ಪ್ರಾರಂಭಿಸಿದೆ. ಆದರೆ ಈವರೆಗೂ ತಮ್ಮ ಮುಂದಿನ ನಡೆ ಬಗ್ಗೆ ಶ್ರೀನಿವಾಸ್ ಪ್ರಸಾದ್ ಗುಟ್ಟು ಬಿಟ್ಟುಕೊಟ್ಟಿಲ್ಲ.
ಸಿಎಂ ಸಿದ್ದರಾಮಯ್ಯರನ್ನು ಸೋಲಿಸುವುದೇ ಏಕೈಕ ಗುರಿ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ನನ್ನ ಏಕೈಕ ಗುರಿ ಎಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿ. ಶ್ರೀನಿವಾಸ ಪ್ರಸಾದ್ ಶಪಥ ಮಾಡಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಖಾಸಗಿ ಹೊಟೇಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 45 ವರ್ಷಗಳ ಕಾಲ ರಾಜ್ಯದಲ್ಲಿ ರಾಜಕೀಯ ಕ್ಷೇತ್ರದಲ್ಲಿದ್ದ ತಮಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮರೆಯಲಾಗದ ನೋವು ನೀಡಿದ್ದಾರೆ. ಈ ನೋವಿಗೆ ಪ್ರತೀಕಾರವಾಗಿ ಮುಂಬರುವ ಚುನಾವಣೆಯಲ್ಲಿ ಅವರನ್ನು ಸೋಲಿಸದೆ ಬಿಡುವುದಿಲ್ಲ ಎಂದು ಘೋಷಿಸಿದರು.
ನಾನು ಸಿದ್ದರಾಮಯ್ಯ ಅವರಿಗಿಂತಲೂ ಅನುಭವಿ ರಾಜಕಾರಣಿ. ಚುನಾವಣೆಯ ಪ್ರತಿತಂತ್ರಗಳು ನನಗೂ ಗೊತ್ತು. ನನ್ನ ನಾಯಕತ್ವದಲ್ಲೇ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ. ಆದರೆ ಮುಂದಿನ ಚುನಾವಣೆ ಬರಲಿ ಹೇಗೆ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ನಾನು ನೋಡುತ್ತೇನೆ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ನ ಎಲ್ಲ ಒಳತಂತ್ರಗಳು ನನಗೂ ಗೊತ್ತಿದೆ. ನನಗೆ ಮರೆಯಲಾಗದ ನೋವು ನೀಡಿದವರಿಗೆ ಪೆಟ್ಟು ನೀಡದೆ ಸುಮ್ಮನೆ ಕೂರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಪಿಮುಷ್ಠಿಯಲ್ಲಿ ಕಾಂಗ್ರೆಸ್: ಕಾಂಗ್ರೆಸ್ ಕರ್ನಾಟಕದಲ್ಲಿ ಇಂದು ಇಷ್ಟು ದುರ್ಬಲವಾಗಲು 6 ಮಂದಿಯ ಕಪಿಮುಷ್ಠಿಯ ಕೈಯಲ್ಲಿ ಸಿಲುಕಿರುವುದೇ ಪ್ರಮುಖ ಕಾರಣ.
ಮುಖ್ಯಮಂತ್ರಿ ಸಿದ್ದರಾಮಯ್ಯ, ದಿಗ್ವಿಜಯ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಕೆ.ಜೆ. ಜಾರ್ಜ್ ಅವರಂಥವರ ಕಪಿಮುಷ್ಠಿಗೆ ಸಿಲುಕಿ ಹೈಕಮಾಂಡ್ ಏನು ಮಾಡಲಾಗದ ಸ್ಥಿತಿಯಲ್ಲಿದೆ ಎಂದು ವಾಗ್ದಾಳಿ ನಡೆಸಿದರು.
ಪರಿಣಾಮಕಾರಿ ಆಡಳಿತ ಮತ್ತು ಪರಿಣಾಮಕಾರಿ ಮಂತ್ರಿಮಂಡಳ ರಚಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ನನ್ನನ್ನು ಸಚಿವ ಸಂಪುಟದಿಂದ ಏಕೆ ಕೈಬಿಡಲಾಯಿತು ಎಂಬ ಬಗ್ಗೆ ಇದುವರೆಗೂ ಒಂದೇ ಒಂದು ಕಾರಣ ನೀಡಿಲ್ಲ.
ಪೇಮೆಂಟ್ ತೆಗೆದುಕೊಂಡು ಪ್ರಮೋದ್ ಮಧ್ವರಾಜ್, ಪ್ರಿಯಾಂಕ್ ಖರ್ಗೆ ಅವರಿಗೆ ಸ್ಥಾನ ನೀಡಿದ್ದಾರೆ. ಇದರಿಂದ ಪರಿಣಾಮಕಾರಿ ಆಡಳಿತ ನಡೆಸಲು ಸಾಧ್ಯವೇ ಎಂದರು. ಸಚಿವ ಎಚ್.ಸಿ. ಮಹದೇವಪ್ಪ ಕಾರ್ಬನ್ ಕಾಪಿ ಇದ್ದ ಹಾಗೆ. ನಾನು ಎಂಎಲ್ಸಿ ಆದರೆ ಸಾಕು ಎಂಬ ಹಪಹಪಿಯಲ್ಲಿದ್ದರು. ಖರ್ಗೆ ತಮ್ಮ ಪುತ್ರನನ್ನು ಮಂತ್ರಿ ಮಾಡಿದರೆ ಸಾಕು ಎಂಬ ದುರಾಲೋಚನೆಯಲ್ಲಿದ್ದರು ಎಂದು ಕಿಡಿಕಾರಿದರು.
ಟೈಟಾನಿಕ್ ಹಡಗಿನಂತಿದ್ದ ಸಿದ್ದರಾಮಯ್ಯನನ್ನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾವೆಲ್ಲ ಸೇರಿಕೊಂಡು ಮೇಲಕ್ಕೆತ್ತಿದೆವು. ಆದರೆ ನಂಬಿದವರ ಬೆನ್ನಿಗೆ ಚೂರಿ ಹಾಕುವ ಸಂಸ್ಕೃತಿಯನ್ನು ಕೆಲವೇ ದಿನಗಳಲ್ಲಿ ತೋರಿದ್ದಾರೆ. ರತ್ನಗಂಬಳಿ ಹಾಕಿ ಸೋನಿಯಾಗಾಂಧಿ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿಸಿಕೊಂಡಾಗ ನೀವು 2008ರ ವಿಧಾನಸಭೆ ಚುನಾವಣೆಯಲ್ಲಿ 80 ಸ್ಥಾನಗಳಷ್ಟೆ ಗೆಲ್ಲಲು ಸಾಧ್ಯವಾಯಿತು. ಬಳಿಕ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಇಲ್ಲವೆ, ವಿಧಾನಸಭೆಯ ಪ್ರತಿಪಕ್ಷದ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಿರಿ. ಅವೆರಡೂ ಸಿಗದಿದ್ದಾಗ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇದ್ದರೂ ವಿದೇಶಕ್ಕೆ ಹೋಗಿ ವಿಶ್ರಾಂತಿ ಪಡೆದಿರಿ.
ಖರ್ಗೆ ಲೋಕಸಭೆ ಪ್ರವೇಶಿಸುತ್ತಿದ್ದಂತೆ ನಿಮಗೆ ವಿರೋಧ ಪಕ್ಷದ ಸ್ಥಾನ ನೀಡುತ್ತೇವೆ ಎಂದ ಬಳಿಕ ಪಕ್ಷಕ್ಕೆ ಬಂದಿರಿ. ಇದು ನಿಮ್ಮ ಬದ್ಧತೆಯೇ ಎಂದು ಕುಟುಕಿದರು. ನಾನು ಸಚಿವನಾಗಿ ಏನು ಕೆಲಸ ಮಾಡಿಲ್ಲದಿದ್ದರೆ ಮೂರು ವರ್ಷ ನನಗೆ ಹೇಗೆ ಸಂಪುಟದಲ್ಲಿ ಉಳಿಸಿಕೊಂಡಿರಿ. ಮಂತ್ರಿ ಪರಿಷತ್ನಲ್ಲಿ ನಿಮಗೆ ಜೀ ಹುಜೂರ್… ಎನ್ನುವವರು ಇರಬೇಕಿತ್ತು. ನಾನು ಅದನ್ನು ಮಾಡಲಿಲ್ಲ ಎಂಬ ಕಾರಣಕ್ಕೆ ಸಂಪುಟದಿಂದ ಕಿತ್ತು ಹಾಕಿದಿರಿ. ಗೌರವಯುತವಾಗಿ ರಾಜಕೀಯ ನಿವೃತ್ತಿ ಬಯಸಿದ್ದ ನನಗೆ ಮರೆಯಲಾರದ ಪೆಟ್ಟು ನೀಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಮುಂದೆ ಏನು ನಿರ್ಧಾರ ಮಾಡಬೇಕೆಂಬ ಬಗ್ಗೆ ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
Discussion about this post