1984
ಹೋದಲ್ಲಿ ಬಂದಲ್ಲಿ ನನಗೆ ‘ಆಪರೇಷನ್ ಟೈಗರ್’ದ್ದೇ ಧ್ಯಾನ. ನಾನಾಗ ಹಲಸೂರು ಠಾಣೆಯಲ್ಲಿ ಟ್ರಾಫಿಕ್ ವಿಭಾಗದಲ್ಲಿ ಎಸ್ಐ. ಟ್ರಾಫಿಕ್ನಲ್ಲಿರುವವರಿಗೆ ಸಾಮಾನ್ಯಾವಾಗಿ ರಿವಾಲ್ವರ್ ಕೊಡುತ್ತಿರಲಿಲ್ಲ. ಆದರೆ ನಾನು ಯಾವುದಕ್ಕೂ ಇರಲಿ ಎಂದುಕೊಂಡು ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿ ರಿವಾಲ್ವರ್ ಪಡೆದು ಸೊoಟಕ್ಕೆ ಸಿಕ್ಕಿಸಿಕೊಂಡು ಓಡಾಡುತ್ತಿದ್ದೆ. ಈ ಟ್ರಾಫಿಕ್ ಎಸ್ಐಗೆ ರಿವಾಲ್ವರ್ ಬೇರೆ ಕೇಡು ಎಂದು ಕೆಲವರು ಗೇಲಿ ಮಾಡುತ್ತಿದ್ದರು. ಕೊನೆಗೂ ಆ ಸರಗಳ್ಳರನ್ನು ಮುಖಾಮುಖಿಯಾಗುವ ದಿನ ಬಂದೇಬಿಟ್ಟಿತು. ಅಂದು ಅ. 24ನೇ ತಾರೀಕು. ನರಕ ಚತುರ್ದಶಿ ಅಮಾವಾಸ್ಯೆಯ ದಿನ. ಅಂದಿಗೆ ಸರಿಯಾಗಿ 42 ದಿನಗಳ ಹಿಂದೆ ಆ ಸರಗಳ್ಳರು ಒಂದೇ ದಿನ ಏಳು ಕಡೆ ಸರ ಕಿತ್ತು ಭೀತಿ ಮೂಡಿಸಿದ್ದರು.
ಹಬ್ಬದ ದಿನವಾದ್ದರಿಂದ ಹೆಣ್ಣು ಮಕ್ಕಳು ಆಭರಣ ಧರಿಸಿ ಓಡಾಡುವುದು ಸಹಜ. ಹಾಗಾಗಿ ಆ ಪಾತಕಿಗಳು ಬಂದೇ ಬರುತ್ತಾರೆ ಎಂಬುದು ನನಗೆ ಖಚಿತವಾಗಿತ್ತು. ಅವತ್ತು ಬೆಳಗ್ಗೆ ಎಂ.ಜಿ. ರಸ್ತೆಯ ಟ್ರಿನಿಟಿ ಸರ್ಕಲ್ ಬಳಿ ರಾಜ್ಯಪಾಲರ ಸಮಾರಂಭವಿತ್ತು. ಅವರ ಆಗಮನಕ್ಕೆ ಸಿದ್ದಧತೆ ದಮಾಡಿಕೊಟ್ಟು, ಕಾಂಪೌಂಡ್ ಹೊರಗೆ ನಿಂತಿದ್ದೆ. ಅದೇ ಹೊತ್ತಿಗೆ, ಸಿಎಆರ್ನಲ್ಲಿ ಕಾನ್ಸ್ಟೇಬಲ್ ಆಗಿದ್ದ ಅಲ್ಲಾಭಕ್ಷ್ ನನ್ನ ಬಳಿ ಬಂದು ಲಿಡೋ ಟಾಕೀಸ್ನಲ್ಲಿ ಬಿಡುಗಡೆಯಾಗಿದ್ದ ‘ಗಾಂಧಿ’ ಚಿತ್ರದ ಟಿಕೆಟ್ಗಾಗಿ ಮ್ಯಾನೇಜರ್ಗೆ ಸ್ಲಿಪ್ ಬರೆದುಕೊಡುವಂತೆ ವಿನಂತಿಸಿದ. ಆತನಿಗೆ ಚೀಟಿ ಬರೆದು ಕೊಡುತ್ತಿದ್ದರೂ ನನ್ನ ಗಮನ ಪೂರ್ತಿ ವೈರ್ಲೆಸ್ ಕಡೆಗೇ ಇತ್ತು. ಯಾವುದೇ ಕ್ಷಣದಲ್ಲಿ ಚೈನ್ಸ್ನ್ಯಾಚಿಂಗ್ ಆದ ಸಂದೇಶ ಅಪ್ಪಳಿಸಲಿದೆ ಎಂಬ ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ಹಲಸೂರಿನ ಕೇಂಬ್ರಿಜ್ ಲೇಔಟ್ನಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಿತ್ತಿರುವ ಮೆಸೇಜ್ ಕಿವಿಗೆ ಬಿತ್ತು. ಆಗ ಸಮಯ ಬೆಳಗ್ಗೆ 9.30. ಶುರುವಾಯಿತು. ಆಪರೇಷನ್ ಟೈಗರ್, ತಕ್ಷಣ ನಾನು ನನ್ನ ಬುಲೆಟ್ ಮೋಟಾರ್ ಬೈಕ್ನ ಸ್ಟ್ಯಾಂಡ್ ತೆಗೆದು ಕಾನ್ಸ್ಟೇಬಲ್ ಗೋಪಾಲ್ಗಾಗಿ ಹುಡುಕಾಡಿದೆ. ಚೇಸ್ ಮಾಡುವ ಸಂದರ್ಭ ಬಂದಾಗಲೆಲ್ಲ ನಾನು ಅವರನ್ನು ಹಿಂದೆ ಕೂರಿಸಿಕೊಂಡು ಹೋಗುತ್ತಿದ್ದೆ. ಏಕೆಂದರೆ ಆಗ ನಾನು ಸಣಕಲ. ವೇಗವಾಗಿ ಹೋಗುತ್ತಿದ್ದಾಗ ಬ್ರೇಕ್ ಹಾಕಿದನೆಂದರೆ, ಬೈಕ್ ಸ್ಕಿಡ್ ಆಗಿ ಪೂರ್ತಿ ತಿರುಗಿ ಹಿಂದಿನ ಚಕ್ರ ಮುಂದೆ ಹೋಗಿ ನಿಲ್ಲುತ್ತಿತ್ತು. ಹಾಗಾಗಿ ಬೈಕ್ ಹಿಂದೆ ಇನ್ನೊಬ್ಬ ವ್ಯಕ್ತಿಯ ಅಗತ್ಯ ನನಗಿತ್ತು.
ಗೋಪಾಲ್ ಹತ್ತಿರ ಎಲ್ಲೂ ಕಾಣಲಿಲ್ಲ. ಆತನಿಗೆ ಕಾಯುತ್ತ ಟೈಂ ವೇಸ್ಟ್ ಮಾಡುವಂತಿರಲಿಲ್ಲ. ಅನಿವಾರ್ಯವಾಗಿ ನಾನು ಅಲ್ಲಾಭಕ್ಷ್ರನ್ನು ತರಾತುರಿಯಲ್ಲಿ ಹಿಂದೆ ಕೂರಿಸಿಕೊಂಡೆ. ‘ಗಾಂಧಿ’ ಟಿಕೆಟ್ಗಾಗಿ ಬಂದಿದ್ದ ಅವರೀಗ ಚೇಸಿಂಗ್ ಸಾಹಸದಲ್ಲಿ ಭಾಗಿಯಾಗಬೇಕಾಯಿತು. ಹಳೆಯ ವಿಮಾನ ನಿಲ್ದಾಣ ರಸ್ತೆಯ ಎಎಸ್ಸಿ ಸೆಂಟರ್ ಕಡೆ ಬೈಕ್ ಓಡಿಸಿದೆ. ವೈರ್ಲೆಸ್ನಲ್ಲಿ ಮಾಹಿತಿ ಬರುತ್ತಲೇ ಇತ್ತು-ಕಪ್ಪು ಬಣ್ಣದ ಎಜ್ಡಿ-ಜಾವಾ ಬೈಕ್, ಇಬ್ಬರು ದುಷ್ಕರ್ಮಿಗಳು, ಸವಾರ ಕೆಂಪು ಬಣ್ಣದ ಟಿ-ಶರ್ಟ್ ಧರಿಸಿದ್ದು, ನೀಲಿ ಬಣ್ಣದ ಹೆಲ್ಮೆಟ್ ಹಾಕಿದ್ದಾನೆ. ನೀಲಿ ಬಣ್ಣದ ಮೇಲೆ ಬಿಳಿ ಬಣ್ಣದ ಎರಡು ಪಟ್ಟಿ ಇದೆ. ಬೈಕ್ ನಂ.ಸಿಎನ್ಟಿಯಿಂದ ಆರಂಭವಾಗುತ್ತದೆ ಇತ್ಯಾದಿ…
ಒಂದೂವರೆ ವರ್ಷದಲ್ಲಿ ಎಲ್ಲೆಲ್ಲಿ. ಎಷ್ಟು ಹೊತ್ತಿಗೆ ಸರಗಳವು ನಡೆದಿವೆ ಎಂಬ ಬಗ್ಗೆ ನಾನು ವಾರಗಟ್ಟಲೆ ಓಡಾಡಿ ಪುಟ್ಟ ನಕ್ಷೆ ರೆಡಿ ಮಾಡಿಕೊಂಡಿದ್ದೆ. ಪ್ರತಿಬಾರಿಯೂ ಅವರು ಕ್ರಮಪ್ರಕಾರವಾಗಿ ನಿದಿಷ್ಟ ಬಡಾವಣೆಗೆ ಲಗ್ಗೆ ಹಾಕುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದೆ. ಅಚ್ಚರಿಯೆಂದರೆ, ಅಮವಾಸ್ಯೆ ಅಥವಾ ಅದರ ಹಿಂದಿನ-ಮುಂದಿನ ದಿನವೇ ಅವರು ೪೫ ಸರ ಎಗರಿಸಿದ್ದರು. ಈ ಮ್ಯಾಪ್ಅನ್ನೇ ಆಧಾರವಾಗಿಟ್ಟುಕೊಂಡು ಎಎಸ್ಸಿ ಸೆಂಟರ್ ಮೂಲಕ ವಿಕ್ಟೋರಿಯಾ ರಸ್ತೆಯಲ್ಲಿ ಜಾನ್ಸನ್ ಮಾರ್ಕೆಟ್ ಬಳಿ ಬಂದು, ಅಲ್ಲಿಂದ ನೇರವಾಗಿ ಮೈಕೋ ಫ್ಯಾಕ್ಟರಿಯ ಹಿಂಭಾಗದ ರಸ್ತೆಯ ಮೂಲಕ ತಿಲಕ್ನಗರಕ್ಕೆ ಬಂದು, ಜೆ.ಪಿ. ನಗರದ ರಾಗಿಗುಡ್ಡದ ಬಳಿ ಹೋಗಿ,ಪುನಃ ಬೆಂಗಳೂರು ಮಿಲ್ಕ್ ಡೇರಿ ಬಳಿಗೆ ಬಂದೆ. ಅಷ್ಟರಲ್ಲಾಗಲೇ ಪೊಲೀಸ್ ಆಯುಕ್ತರು ಕಂಟ್ರೋಲ್ ರೂಮ್ಗೆ ಬಂದು ಕಾರ್ಯಾಚರಣೆಯಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ಹುರಿದುoಬಿಸಲಾರಂಭಿಸಿದ್ದರು. ಸಿಇದಾ ಸೇಂಟ್ ಜಾನ್ಸ್ ಆಸ್ಪತ್ರೆಯ ಮುಂಭಾಗದಿಂದ ಕೋರಮಂಗಲ ಬಡಾವಣೆ ಕಡೆಗೆ ಬೈಕ್ ಓಡಿಸಿದೆ. ರಜೆಯ ದಿನವಾದ್ದರಿಂದ ವಾಹನ ಸಂಚಾರ ವಿರಳವಾಗಿತ್ತು. ಹೆಣ್ಣು ಮಕ್ಕಳು ಹೊಸ ಉಡುಗೆ ತೊಟ್ಟು, ಮೈ ತುಂಬ ಆಭರಣ ಧರಿಸಿ ದೇವಸ್ಥಾನಗಳ ಹಾದಿ ಹಿಡಿದಿದ್ದರು.
ದಾರಿಯುದ್ದಕ್ಕೂ ನನ್ನ ಕಣ್ಣುಗಳು ರಸ್ತೆಯಲ್ಲಿ ಹಾದು ಹೋಗುವ ಪ್ರತಿಯೊಬ್ಬ ಬೈಕ್ ಸವಾರರನ್ನು ಸ್ಕ್ಯಾನ್ ಮಾಡುತ್ತಲೇ ಇತ್ತು. ಮುಂದೆ ಕುದುರೆಮುಖ ಅದಿರು ಕಾರ್ಖಾನೆಯ ಮುಖ್ಯ ಕಚೇರಿಯ ಮುಂಭಾಗಕ್ಕೆ ಬಂದಾಗ, ಕಪ್ಪು ಬಣ್ಣದ ಬೈಕ್ ಭಾರಿ ವೇಗದಿಂದ ಎದುರಿನಿಂದ ಬರುತ್ತಿರುವುದು ಕಣ್ಣಿಗೆ ಬಿತ್ತು. ಹೌದು. ನೀಲಿ ಹೆಲ್ಮೆಟ್… ಸಿಎನ್ಟಿ ನಂಬರ್, ತಕ್ಷಣ ನಾನು ಆ ಬೈಕ್ ಅನ್ನು ಅಡ್ಡಹಾಕಲು ಯತ್ನಿಸಿದೆ. ಆದರೆ ಆತ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸುತ್ತ ತೀರ ಹತ್ತಿರದಿಂದಲೇ ನುಸುಳಿಕೊಂಡು ಹೋದ. ನಾನು ಯ ಟರ್ನ್ ತೆಗೆದುಕೊಂಡು ಅವರ ಬೆನ್ನು ಬಿದ್ದೆ. ನಿಜವಾದ ಚೇಸ್ ಆಗ ಶುರುವಾಯಿತು. ಆ ದಿನಗಳಲ್ಲಿ ಈಗಿನಂತೆ ಬಂಪರ್ ಟು ಬಂಪರ್ ಟ್ರಾಫಿಕ್ ಇರಲಿಲ್ಲ. ಒನ್ ವೇ, ಹಂಪ್ಸ್ಗಳ ಅಡೆತಡೆ ಜೋರಾಗಿರಲಿಲ್ಲ. ಅದೂ ಅಲ್ಲದೆ ಅವತ್ತು ಹಬ್ಬ ದಿನವಾದ್ದರಿಂದ ರಸ್ತೆಗಳೆಲ್ಲ ಖಾಲಿಖಾಲಿಯಾಗಿತ್ತು. ನಾನು ತಕ್ಷಣ ಕಂಟ್ರೋಲ್ರೂಂಗೆ ವೈರ್ಲೆಸ್ನಲ್ಲಿ ಇವರ ಬಗ್ಗೆ ಮಾಹಿತಿ ನಿಇಡಿ ಆರೋಪಿಗಳು ಯಾವ ರಸ್ತೆಯಲ್ಲಿ ಹೋಗುತ್ತಿದ್ದಾರೆ ಎಂದು ತಿಳಿಸಿದೆ.
ನಾನು ಬೆನ್ನಟ್ಟಿದ ಸಂಗತಿ ತಿಳಿಯುತ್ತಿದ್ದಂತೆ, ‘ಶತಾಯಗತಾಯ ಅವರನ್ನು ಬಲೆಗೆ ಕೆಸವಿ..’ ಎಂದ ಕಮೀಷನರ್ ಹರ್ಲಂಕರ್, ಆಯಕಟ್ಟಿನ ರಸ್ತೆಯಗಳನ್ನು ಬ್ಲಾಕ್ ಮಾಡುವಂತೆ ಎಲ್ಲ ಪೊಲೀಸ್ ಅಧಿಕಾರಿಗಳಿ ವೈರ್ಲೆಸ್ನಲ್ಲಿ ಆದೇಶಿಸಿದರು. ದುಷ್ಕರ್ಮಿಗಳು ನನ್ನಿಂದ ತಪ್ಪಿಸಕೊಳ್ಳಲು ಕೋರಮಂಗಲದ ಅಡ್ಡ ರಸ್ತೆಗಳಲ್ಲಿ ನುಗ್ಗುತ್ತ ಸಾಗುತ್ತಿದ್ದರು. ನಾನು ಬಿಡದೆ ಬೆನ್ನಟ್ಟಿದೆ. ಸುಮಾರು 80 ಕಿ.ಮೀ. ವೇಗದಲ್ಲಿ ಈ ಚೇಸಿಂಗ್ ನಡೆಯುತ್ತಿತ್ತು. ನಾನು ಅವರ ಬೈಕ್ ಸಮೀಪಿಸಿ ಪಿಲಿಯನ್ ರೈಡರ್ನ ಕಾಲರ್ ಹಿಡಿಯಲು ಯತ್ನಿಸಿದೆ. ತಕ್ಷಣ ಆತ ಹೊಳೆಯುತ್ತಿದ್ದ ರೈoಬೊ ಕತ್ತಿ ತೆಗೆದು ನನ್ನತ್ತ ಬೀಸಿದ. ನಾನು ಸ್ವಲ್ಪ ಹಿಂಭಾಗಕ್ಕೆ ಸರಿದು ತಪ್ಪಿಸಿಕೊಮಡೆ. ತಕ್ಷಣ ಎಡಗೈಯಿಂದ ಪೌಚ್ಗೆ ಕೈಗೆ ಹಾಕಿ ರಿವಾಲ್ವರ್ ಹೊರತೆಗೆದೆ. ಎಡಗೈನಲ್ಲೇ ರಿವಾಲ್ವರ್ ಹಿಡಿದು ಅವರ ಬೈಕ್ನ ಚಕ್ರದ ಕಡೆಗೆ ಗುರಿ ಇಟ್ಟು ಟ್ರಿಗರ್ ಒತ್ತಿದೆ. ಆದರೆ ಗುಂಡೇ ಸಿಡಿಯಲಿಲ್ಲ. ಆಮೇಲೆ ಹೊಳೆಯಿತು. ಮೊದಲ ಸುತ್ತಿನಲ್ಲಿ ಗುಂಡೇ ಲೋಡ್ ಆಗಿರಲಿಲ್ಲ. ಎಂಬುದು! ಇದಕ್ಕೂ ಕಾರಣವಿದೆ.
ಆಗ ನನ್ನ ಮಕ್ಕಳು ತುಂಬ ಚಿಕ್ಕವರಿದ್ದರು. ಮನೆಯಲ್ಲಿ ಆಕಸ್ಮಿಕವಾಗಿ ರಿವಾಲ್ವರ್ ಅವರ ಕೈಗೆ ಸಿಕಿ ಟ್ರಿಗರ್ ಒತ್ತಿಬಿಟ್ಟರೆ ಅನಾಹುತವಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಮೊದಲ ಸುತ್ತನ್ನು ಖಾಲಿ ಬಿಡುತ್ತಿದ್ದೆ. ಇನ್ನೊಂದು ಬಾರಿ ಬೈಕ್ನ ಚಕ್ರದ ಕಡೆ ಗುರಿ ಇಟ್ಟು ಟ್ರಿಗರ್ ಒತ್ತಿದೆ. ಭಾರಿ ಸದ್ದಿನೊಂದಿಗೆ ಗುಂಡು ಸಿಡಿಯಿತು. ಮತ್ತೊಂದು ಗುಂಡು ಹಾರಿಸಿದೆ. ಆಗ ಬೈಕ್ನ ಹಿಂದುಗಡೆ ಕೂಡಿದ್ದ ದಢೂತಿ ಆಸಾಮಿ ಗಾಬರಿ ಬಿದ್ದ. ಜೋರಾಗಿ ಕೂಗುತ್ತ, ನಿಲ್ಲಿಸು ಎಂಬಂತೆ ಸವಾರನನ್ನು ಹಿಡಿದು ಹಿಂದಕ್ಕೆ ಎಳೆಯತೊಡಗಿದೆ. ಆದರೂ ದುಷ್ಕರ್ಮಿ ಬೈಕ್ನ ವೇಗ ಮತ್ತಷ್ಟು ಹೆಚ್ಚಿಸಿದ. ನಾನು ಅವರತ್ತ ಮತ್ತೊಂದು ಸುತ್ತು ಗುಂಡು ಹಾರಿಸಲು ಅನುಯವಾದೆ. ಆದರೆ ಗುಂಡೇಟೇನಾದರೂ ಬಿದ್ದರೆ, ಸುಮಾರು 80 ಕಿ.ಮೀ. ವೇಗದಲ್ಲಿ ಹೋಗುತ್ತಿದ್ದ ಅವರು ನೆಲಕ್ಕುರಳಿ ಬದುಕುಳಿಯುವುದಿಲ್ಲ ಎನ್ನುವುದು ಖಾತರಿಯಾಗಿತ್ತು. ಹಾಗೇನಾದರೂ ಅವರಿಬ್ಬರು ಸತ್ತೇ ಹೋದರೆ ಹಳೆಯ ಪ್ರಕರಣಗಳೇ ಬೆಳಕಿಗೆ ಬಾರದೆ ಹೋಗುತ್ತವೆ ಎಂಬ ಆತಂಕ ನನ್ನದಾಗಿತ್ತು. ಹಾಗಾಗಿ ರಿವಾಲ್ವರ್ನ್ನು ಹಿಂದೆ ಕೂತಿದ್ದ ಅಲ್ಲಾಭಕ್ಷ್ಗೆ ಕೊಟ್ಟು ‘ನಾನು ಚೇಸ್ ಮಾಡುತ್ತ ಹೋಗುತ್ತೇನೆ. ನೀನು ಸುಮ್ಮನೆ ಅವರ ಕಡೆ ಗುರಿ ಇಟ್ಟು ಫೈರ್ ಮಾಡುವುದಾಗಿ ಕೂಗುತತ ಇರು’ ಎಂದೆ. ರಿವಾಲ್ವರ್ ಕೈಗೆ ಸಿಕ್ಕ ಹುಮ್ಮಸ್ಸಿನಲ್ಲಿ ಅಲ್ಲಾಭಕ್ಷ್ ಬೈಕ್ನ ಫುಟ್ರೆಸ್ಟ್ ಮೇಲೆ ನಿಂತುಕೊಂಡು ರಿವಾಲ್ವರ್ ಎತ್ತಿ ತೋರಿಸುತ್ತ ನೆಗೆಯತೊಡಗಿದೆ. ಮಿತಿ ಮೀರಿದ ವೇಗದಲ್ಲಿದ್ದ ನನ್ನ ಬುಲೆಟ್ ಬ್ಯಾಲೆನ್ಸ್ ತಪ್ಪ ನೆಲಕ್ಕುರುಳುವ ಆತಂಕ ಎದುರಾಯಿತು. ತಕ್ಷಣ ಕುಳಿತುಕೊಳ್ಳುವಂತೆ ಕೂಗಿ ಹೇಳಿದೆ. ಕೂರುವ ಗಡಿಬಿಡಿಯಲ್ಲಿ ಅಲ್ಲಾಭಕ್ಷ್ ನನ್ನ ಬೆನ್ನಿಗೇ ರಿವಾಲ್ವರ್ನ ನಳಿಕೆ ಇಟ್ಟು ಬಿಟ್ಟ! ಆಗಸ್ಟೇ ಎರಡು ಗುಂಡು ಸಿಡಿದಿದ್ದರಿಂದ ಕಾದು ಕೆಂಪಗಾಗಿದ್ದ ನಳಿಕೆ ನನ್ನ ಬೆನ್ನಿಗೆ ಬರೆ ಹಾಕಿತು.
ಅಷ್ಟರಲ್ಲಾಗಲೇ ನಾನು ಆ ಪಾತಕಿಗಳನ್ನು ಚೇಸ್ ಮಾಡಿಕೊಂಡು ಮಡಿವಾಳದ ಹಳೆಯ ಪೊಲೀಸ್ ಠಾಣೆ ಬಳಿ ಬಂದು ಬಿಟ್ಟಿದ್ದೆ. ಕಂಟ್ರೋಲ್ ರೂಮ್ನಿಂದ ಮಿಂಚಿನ ವೇಗದಲ್ಲಿ ಮೆಸೇಜ್ಗಳು ಹರಿದಾಡುತ್ತಿದ್ದವು. ಕಮೀಷನರ್ ಹರ್ಲಂಕರ್ ಅವರಂತೂ ಕ್ಷಣಕ್ಷಣದ ವಿದ್ಯಾಮಾನಗಳನ್ನು ವೈರ್ಲೆಸ್ ಮೂಲಕ ತಿಳಿದುಕೊಳ್ಳುತ್ತ ಕಾತುರದಿಂದಿದ್ದರು. ನಾನು ಸಹ ನನ್ನ ವೈರ್ಲೆಸ್ನಿಂದ ಆರೋಪಿಗಳು ಹೋಗುತ್ತಿದ್ದ ರಸ್ತೆಯನ್ನು ಕಂಟ್ರೋಲ್ ರೂಂಗೆ ತಿಳಿಸುತ್ತಿದ್ದೆ. ಆ ಪಾತಕಿ ವಾಹನವೊಂದನ್ನು ಓವರ್ಟೇಕ್ ಮಾಡಲು ಹವಣಿಸುತ್ತಿದ್ದ. ಅದೇ ಹೊತ್ತಿಗೆ ಎದುರಿನಿಂದ ಇನ್ನೊಂದು ವಾಹನ ಬರತೊಡಗಿತು. ಅವರ ಬೈಕ್ ವೇಗ ಕಡಿಮೆಯಾಯಿತು. ಇದೇ ಸಮಯ ಎಂದುಕೊಂಡು ನಾನು ನನ್ನ ಬುಲೆಟನ್ನು ಅವರ ಬೈಕ್ಗೆ ಗುದ್ದಿಸಿಬಿಟ್ಟೆ. ಎರಡೂ ಬೈಕ್ಗಳು ಕೆಳಗುರುಳಿದವು. ಉಲ್ಟಾ ಬಿದ್ದ ಜಿರಲೆಯಂತೆ ರೈಡರ್ ಒದ್ದಾಡುತ್ತಿದ್ದ. ಯಾಕೆಂದು ನೋಡಿದರೆ, ಆತನ ಬಲಗೈ ನನ್ನ ಬುಲೆಟ್ನ ಬಿಸಿಬಿಸಿ ಸೈಲೆನ್ಸರ್ನಡಿ ಸಿಲುಕಿಕೊಂಡಿತ್ತು! ಪಿಲಿಯನ್ ರೈಡರ್ ಮಾತ್ರ ಎದ್ದು ಓಡತೊಡಗಿದ. ನಾನು ಬೆನ್ನಟ್ಟಿದೆ. ನನ್ನತ್ತ ಕತ್ತಿ ಬೀಸಿದ. ನನ್ನ ಮುಂಗೈಗೆ ಏಟು ಬಿದ್ದು ರಕ್ತ ಚಿಮ್ಮತೊಡಗಿತು. ರಿವಾಲ್ವರ್ ತೆಗೆಯೋಣ ಎಂದುಕೊಂಡರೆ ಅದು ಅಲ್ಲಾಭಕ್ಷ್ ಕೈಯಲ್ಲೇ ಉಳಿದುಬಿಟ್ಟಿತ್ತು. ಕೊನೆಗೆ ಬೆಲ್ಟ್ ಬಿಚ್ಚಿ ಬೀಸುತ್ತ ಆತನನ್ನು ನೆಲಕ್ಕೆ ಕೆಡವಿದೆ.
ಅವರಿಬ್ಬರ ಬಂಧನದಿಂದ 52 ಸರಗಳವು ಪ್ರಕರಣ ಬೆಳಕಿಗೆ ಬಂತು. ಅದರಲ್ಲಿ 49 ಮಾಂಗಲ್ಯ ಸರ ಒಟ್ಟು ಮೂರೂವರೆ ಕೆ.ಜಿ. ತೂಕದ ಚಿನ್ನದ ಆಭರಣಗಳು. ಎಲ್ಲ ಶಿಷ್ಟಾಚಾರಗಳನ್ನು ಬದಿಗೊತ್ತಿ ಅಂದಿನ ಕಮಿಷನರ್ ಹರ್ಲಂಕರ್ ಅವರು ಪ್ರೆಸ್ಮೀಟ್ನಲ್ಲಿ ನನ್ನನ್ನು ಹಾಗೂ ಪೇದೆ ಅಲ್ಲಾಭಕ್ಷ್ರನ್ನು ತಮ್ಮ ಪಕ್ಕದಲ್ಲೆ ಕೂರಿಸಿಕೊಂಡು ನನ್ನಿಂದಲೇ ವಿವರ ಕೊಡಿಸಿದ್ದರು. ಅಂದಿನ ಗೃಹ ಸಚಿವ ಬಿ.ರಾಚಯ್ಯ ಅಔರ ಸಮ್ಮುಖದಲ್ಲಿ ಆಭರಣಗಳನ್ನು ಪ್ರದರ್ಶಿಸಿ, ಸರ ಕಳೆದುಕೊಂಡ ಮಹಿಳೆಯರಿಗೆ ವಿತರಿಸಲಾಯಿತು. ಮಾಂಗಲ್ಯ ಕಣ್ಣಿಗೆ ಒತ್ತಿಕೊಂಡ ಮಹಿಳೆಯೊಬ್ಬರು ನನ್ನ ಕಾಲು ಮುಟ್ಟಿ ನಮಸ್ಕರಿಸಲು ಮುಂದಾದಾಗ ನಾನು ಭಾವುಕನಾಗಿಬಿಟ್ಟೆ. ಜನಸಾಮಾನ್ಯರಿಗಾಗಿ ಮತ್ತಷ್ಟು ಸೇವೆ ಸಲ್ಲಿಸಲು ಆ ಘಟನೆ ಸ್ಫೂರ್ತಿಯಾಯಿತು. ಜೊತೆಗೆ, ಅಂದಿನಿಂದ ಪ್ರೆಸ್, ಇಲಾಖೆ ಮತ್ತು ನಾಗರಿಕ ವಲಯದಲ್ಲಿ ನನ್ನನ್ನು ‘ಟೈಗರ್’ ಎಂದೇ ಪ್ರೀತಿಯಿಂದ ಕರೆಯಲಾರಂಭಿಸಿದರು. ಈ ಸಾಹಸಕ್ಕಾಗಿ ನನಗೆ 1986ರಲ್ಲಿ ರಾಷ್ಟ್ರಪತಿಯವರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮತ್ತೊಂದು ಕುತೂಹಲದ ಸಂಗತಿ ಎಂದರೆ, ಆ ಇಬ್ಬರು ಸರಗಳ್ಳರು ಈಗ ರಾಜಕೀಯ ಮುಖಂಡರಾಗಿರುವ, ವಿಧಾನಸಭೆ ಚುನಾವಣೆಗೂ ನಿಂತಿದ್ದವರೊಬ್ಬರ ಸಹೋದರರು! ಅವರು ಶ್ರೀಮಂತ ಮನೆತನಕ್ಕೆ ಸೇರಿದ್ದರೂ, ಮನೆ ತೊರೆದು ಆಂಧ್ರದ ಚಿತ್ತೂರಿನಲ್ಲಿ ರೂಮ್ ಮಾಡಿಕೊಂಡಿದ್ದು, ಅಲ್ಲಿಂದಲೇ ನಗರಕ್ಕೆ ಬಂದು ಸರ ಕದ್ದು ಹೋಗುತ್ತಿದ್ದರು.
ಈ ಕೇಸ್ ಪತ್ತೆ ಮಾಡಿ ದೊರಕಿದ ಪುರಸ್ಕಾರದಿಂದ ನನ್ನ ವೃತ್ತಿ ಜೀವನದಲ್ಲಿ ಒಂದು ಮಹತ್ವವನ್ನು ಪಡೆದು ದೊಡ್ಡ ತಿರುವು ನೀಡಿತು.
Discussion about this post