1984
ಬೆಂಗಳೂರಿನಲ್ಲಿ ಇಷ್ಟೊಂದು ಪೊಲೀಸ್ ಆಫೀಸರ್ಗಳಿದ್ದೀರಾ…ಆ ಇಬ್ಬರು ದುರ್ಷ್ಮಿಗಳನ್ನು ಮಟ್ಟ ಹಾಕುವ ತಾಕತ್ತು ಇಲ್ಲಿರುವ ಒಬ್ಬರಲ್ಲಿಯೂ ಇಲ್ಲವಾ?..
ನಗರ ಪೊಲೀಸ್ ಆಯುಕ್ತರ ಸಭೆ ಮುಗಿಸಿ ಹೊರಬರುವಾಗ ಈ ಮಾತು ನನ್ನನ್ನು ಈಟಿಯಂತೆ ತಿವಿಯಲಾರಂಭಿಸಿತ್ತು. ಅವರು ಬಳಸಿದ ‘ತಾಕತ್ತು’ ಎಂಬ ಪದ ಮರ್ಮಾಘಾತವನ್ನುಂಟುಮಾಡಿತ್ತು. ಹೇಗಾದರೂ ಸರಿ ಆ ಇಬ್ಬರನ್ನು ಆದಷ್ಟು ಬೇಗ ಬಲೆಗೆ ಕೆಡವಲೇಬೇಕು ಎಂಬ ಛಲ ಮನದಲ್ಲಿ ಮೂಡಿತು.
ಇದಕ್ಕೆಲ್ಲ ಮೂಲ, ಸರಣಿ ಅಪಹರಣ ಪ್ರಕರಣ.ಅದು 1983-84ನೇ ಇಸವಿ. ಆಗ ಬೆಂಗಳೂರು ನಗರದಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯರು ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುವಾಗ ಮೋಟರ್ ಸೈಕಲ್ನಲ್ಲಿ ಬಂದ ಇಬ್ಬರು ಚೋರರು ಮಹಿಳೆಯರ ಕುತ್ತಿಗೆಯಿಂದ ಬೆಲೆಬಾಳುವ ಚಿನ್ನದ ಮಾಂಗಲ್ಯ ಸರ ಹಾಗೂ ಚಿನ್ನದ ಚೈನುಗಳನ್ನು ಬಲಾತ್ಕಾರವಾಗಿ ಕಿತ್ತುಕೊಂಡು ಪರಾರಿಯಾಗುವ ಅಪರಾಧಗಳು ವರದಿಯಾಗಲು ಪ್ರಾರಂಭಿಸಿದವು. ಆಗ ನಗರ ಪೊಲೀಸ್ ಆಯುಕ್ತರಾಗಿದ್ದವರು ಪಿ.ಜಿ. ಹರ್ಲಂಕರ್. ನನ್ನ ಮಟ್ಟಿಗೆ ಅವರು ಬೆಂಗಳೂರು ಮಹಾನಗರ ಕಂಡ ಅತ್ಯಂತ ದಕ್ಷ, ಪ್ರಾಮಾನಿಕ, ಶಿಸ್ತಿನ ಮತ್ತು ಖಡಕ್ ಕಮೀಷನರ್. ಆದರೆ ನಗರದಲ್ಲಿ ನಡೆಯಲಾರಂಭಿಸಿದ್ದ ಚೈನ್ಸ್ನ್ಯಾಚಿಂಗ್ಕೇಸುಗಳು ಅವರ ನೆಮ್ಮದಿ ಕೆಡಿಸಿದ್ದವು. 30ರಿಂದ 40 ದಿನಗಳ ಅಂತರದಲ್ಲಿ ಇದ್ದಕಿದ್ದಂತೆ ಒಂದು ದಿನ, ಬೈಕ್ನಲ್ಲಿ ಆಗಮಿಸುತ್ತಿದ್ದ ದುಷ್ಕರ್ಮಿಗಳಿಬ್ಬರು ಬೆಳಿಗ್ಗೆ 9ರಿಂದ ಸಂಜೆ 5ಗಂಟೆಯೊಳಗೆ ನಾಲ್ಕೈದು ಬಡಾವಣೆಗಳಲ್ಲಿ ಮಿಂಚಿನಂತೆ ಸಂಚರಿಸುತ್ತಾ ಮಹಿಳೆಯರ ಮಾಂಗಲ್ಯ ಕಿತ್ತು ಪರಾರಿಯಾಗುತ್ತಿದ್ದರು.
ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿ ಪತಿಯ ಜೊತೆ ಸ್ಕೂಟರ್ನಲ್ಲಿ ತೆರೆಳುತ್ತಿದ್ದ ಮಹಿಳೆಯೊಬ್ಬರು ಸರಗಳ್ಳರದಾಳಿಗೆ ಸಿಲುಕಿ ಕೆಳಗುರುಳಿದ್ದಳು. ತಲೆಗೆ ಏಟಾಗಿ ತಿಂಗಳುಗಟ್ಟಲೇ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡಬೇಕಾಯಿತು. ಸಾಲದೆಂಬಂತೆ, ಇಂದಿರಾನಗರ ಮತ್ತು ಬಸವನಗುಡಿಯ ಮಹಿಳಾ ಸಂಘದ ಅಧ್ಯಕ್ಷತೆ ಮತ್ತು ಕಾರ್ಯದರ್ಶಿಯ ಸರವನ್ನೇ ಕಿತ್ತುಕೊಂಡು ಹೋಗಿದ್ದು, ಮಾಧ್ಯಮಗಳಲ್ಲಿ ದೊಡ್ಡಗುಲ್ಲಿಗೆ ಕಾರಣವಾಯಿತು. ಆ ದಿನಗಳಲ್ಲಿ ಬೆಂಗಳೂರಿನ ಜನರಿಗೆ ಇದು ಹೊಸಬಗೆಯ ಪಾತಕ ಕೃತ್ಯವಾಗಿತ್ತು. ಪೊಲೀಸರ ವೈಫಲ್ಯದ ವಿರುದ್ಧ ಜನದನಿ ಮೊಳಗಲಾರಂಭಿಸಿತು. ಮಹಿಳೆಯರ ನಿತಯೋಗ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ರಾಜ್ಯಪಾಲ ಅಶೋಕನಾಥ್ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಅಳಲು ತೋಡಿಕೊಂಡಿತು. ಸಿಎಂ ಮತ್ತು ರಾಜ್ಯಪಾಳರು ಪೊಲೀಸ್ ಆಯುಕ್ತರನ್ನು ಕರೆಸಿ, ಈ ಪ್ರಕರಣವನ್ನು ಕೂಡಲೇ ಬೇಧಿಸುವಂತೆ ತಾಕೀತು ಮಾಡಿ ಕಳುಹಿಸಿದ್ದರು. ಇದರಿಂದ ವಿಚಲಿತರಾಗಿದ್ದ ಹರ್ಲಂಕರ್ ಸಾಹೇಬರು ಬೆಂಗಳೂರಿನ ಎಲ್ಲಾ ಹಂತದ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ಕರೆದಿದ್ದರು.
ಸುಮಾರು ಒಂದೂವರೆ ವರ್ಷದಿಂದ ನಿಯಮಿತವಾಗಿ ನಡೆಯುತ್ತಿದ್ದ ಸರಗಳವು ಪ್ರಕರಣದ ಬಗ್ಗೆ ಗಂಭೀರವಾಗಿ ಮಾತನಾಡಿದ ಆಯುಕ್ತರು, ಇಲ್ಲಿ ಕೂತಿರುವ ಇಷ್ಟೊಂದು ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಿಗೂ ಆ ಪಾತಕಿಗಳನ್ನು ಬಲೆಗೆ ಕೆಡವುವ ತಾಕತ್ತು ಇಲ್ಲವೇ ಎಂದು ವ್ಯಂಗ್ಯಭರಿತ ಆಕ್ರೋಶದಿಂದ ಹೇಳಿದರು. ಎರಡು ಅಥವಾ ಮೂರು ರಸ್ತೆ ಸೇರುವ ಜಂಕ್ಷನ್ ಗುರುತಿಸಿ ಅಲ್ಲಿ ನಿಗಾ ಇಡಲು ಮೂರುರಸ್ತೆಗಳನ್ನು ಗುರುತಿಸಿ, ಅಲ್ಲಿ ನಿಗಾ ಇಡಲು ಎಸ್ಐಯಿಂದ ಡಿಸಿಪಿಗಳ ತನಕ ಸ್ಥಳ ನಿಗದಿ ಮಾಡಲಾಯಿತು. ಸರಗಳವಿನ ಕುರಿತು ಸಾರ್ವಜನಿಕರಿಂದ ಮಾಹಿತಿ ಬಂದ ತಕ್ಷಣ ಎಲ್ಲೆಡೆ ವೈರ್ಲೆಸ್ ಸಂದೇಶ ರವಾನಿಸಬೇಕು ಮತ್ತು ಎಲ್ಲ ಅಧಿಕಾರಿಗಳು ಆಯಾ ಸ್ಥಳಕ್ಕೆ ದೌಡಾಯಿಸಿ ಸಂಘಟಿತವಾಗಿ ದುಷ್ಕರ್ಮಿಗಳ ಬೇಟೆಗೆ ಇಳಿಯುವ ಕಾರ್ಯತಂತ್ರ ರೂಪಿಸಲಾಯಿತು. ಅಲ್ಲಿಯವರೆಗೆ ಇಂಥ ಪ್ರಕರಣಗಳಲ್ಲಿ ಹಾಕಲಾಗುತ್ತಿದ್ದ ಲಐಪಿಸಿ ಸೆಕ್ಷನ್ 329 (ಕಳವು) ಬದಲಿಗೆ ಐಪಿಸಿ ಸೆಕ್ಷನ್ 392 (ರಾಬರಿ) ದಾಖಲಿಸಲು ತೀರ್ಮಾನಿಸಲಾಯಿತು. ಈ ಕೇಸನ್ನು ಭೇದಿಸಿದವರಿಗೆ ಇಲಾಲಖೆಯಲ್ಲಿನ ಅತ್ಯುನ್ನತ ಪದಕ ನೀಡಿ ಗೌರವಿಸಲಾಗುವುದು ಎಂದೂ ಆಯುಕ್ತರು ಘೋಷಿಸಿದರು. ಆ ಕಾರ್ಯಾಚರಣೆಗೆ ಹರ್ಲಂಕರ್ ಇಟ್ಟ ಹೆಸರು ‘ಆಪರೇಷನ್ ಟೈಗರ್!’
ಯಥಾಪ್ರಕಾರ ಸರಗಳ್ಳರ ಕೈಚಳಕ ಮುಂದುವರಿಯಿತು. ಪೊಲೀಸ್ ಅಧಿಕಾರಿಗಳೆಲ್ಲ ಆಪರೇಷನ್ ಟೈಗರ್ ಕಾರ್ಯಾಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಆಟದರೆ ಪಲಿತಾಂಶ ಮಾತ್ರ ಶೂನ್ಯ. ಮೂರು-ನಾಲ್ಕು ತಿಂಗಳ ಬಳಿಕವೂ ಫಲ ದೊರೆಯಲಿಲ್ಲ. ಟೈಗರ್ ಕಾರ್ಯಾಚರಣೆಯ ಕಾರ್ಯಕ್ಷಮತೆ ಪರೀಕ್ಷಿಸಲು ಪೊಲೀಸ್ ಆಯುಕ್ತು ರಹಸ್ಯವಾಗಿ ಒಂದು ಅಣಕು ಕಾರ್ಯಾಚರಣೆ ರೂಪಿಸಿದರು. ಹಲಸೂರು ಠಾಣೆಯಲ್ಲಿ ಕ್ರೈಂ ಎಸ್ಐ ಆಗಿದ್ದು ಚಾಂದಿರಾಂ ಸಿಂಗ್ ಎಂಬುವರಿಗೆ ಪೂರ್ತಿ ಮುಖ ಮುಚ್ಚುವ ಹೆಲ್ಮೆಟ್ ಹಾಕಿಸಿ ಸರಗಳ್ಳನ ಪಾತ್ರ ವಹಿಸಿದರು. ಚಾಂದಿರಾಂ ಬೆಳಗ್ಗೆ 9.30ಕ್ಕೆ ಅಣಕು ಕಾರ್ಯಾಚರಣೆ ಆರಂಭಿಸಿದರು. ಅಂದಿನ ಡಿಸಿಪಿ ನಾಗರಾಆಜ್ ಅವರು ಕಂಟ್ರೋಲ್ ರೂಮ್ಗೆ ಸಾಮಾನ್ಯ ನಾಗರಿಕರಂತೆ ಕರೆ ಮಾಡಿ ‘ಹಲಸೂರು ಕೆರೆಯ ಬಳಿ ಅಪರಿಚಿತರಿಬ್ಬರು ಬೈಕ್ನಲ್ಲಿ ಬಂದು ಮಹಿಳೆಯೊಬ್ಬರ ಚಿನ್ನದ ಸರ ಕಿತ್ತುಕೊಂಡು ಫ್ರೇಜರ್ಟೌನ್ ಕಡೆಗೆ ಪರಾರಿಯಾಗಿದ್ದಾರೆ. ಅವರ ಬೈಕ್ ನಂ.ಸಿಎಬಿ-9246’ ಎಂದು ಮಾಹಿತಿ ನೀಡಿದರು. ಕ್ಷಣಾರ್ಧದೊಳಗೆ ಎಲ್ಲ ಪೊಲೀಸ್ ಅಧಿಕಾರಿಗಳ ವೈರ್ಲೆಸ್ಗೆ ಸಂದೇಶ ರವಾನೆಯಾಯಿತು. ಪೊಲೀಸ್ ಆಯುಕ್ತರೂ ಕಂಟ್ರೋಲ್ ರೂಮ್ಗೆ ಬಂದು ಕುಳಿತು ಅವಲೋಕನ ನಡೆಸತೊಡಗಿದರು. ಆಪರೇಷನ್ ಟೈಗರ್ ಚುರುಕಾಯಿತು. ಆಯಕಟ್ಟಿನ ಸ್ಥಳಗಳಲ್ಲಿ ನಾಕಾಬಂದಿ. ಇಷ್ಟಾಗಿಯೂ ‘ಅಣಕು ಸರಗಳ್ಳ’ ಚಾಂದಿರಾಂ ಸಿಂಗ್ ಹಲಸೂರು ಕೆರೆಯಿಂದ ಪ್ರೇಜರ್ಟೌನ್ಗೆ ಬಂದು, ಅಲ್ಲಿಂದ ಬಾಣಸವಾದಿ, ಜೆ.ಸಿ.ನಗರ ಕಡೆಯಿಂದ ಮೌಂಟ್ ಕಾರ್ಮೆಲ್ ಕಾಲೇಜಿನ ಬಳಿ ಬಂದು, ಸದಾಶಿವನಗರ, ಮಲ್ಲೇಶ್ವರ ಕಡೆಯೆಲ್ಲ ಆರಾಮವಾಗಿ ಸುತ್ತಾಡಿದ್ದರು. ಪೊಲೀಸ್ ಕಾವಲಿರುವ ಕೆಲವು ಜಂಕ್ಷನ್ಗಳನ್ನು ಹಾದು ಹೋಗಿದ್ದರು. ಇನ್ನೂ ಕೆಲವು ಸರ್ಕಲ್ಗಳನ್ನು ತಪ್ಪಿಸಿ ಒಳ ದಾರಿಯಲ್ಲಿ ಮುಂದೆ ಸಾಗಿದ್ದರು. ಕಂಟ್ರೋಲ್ ರೂಮ್ನಲ್ಲಿ ಕುಳಿತು ವೈರ್ಲೆಸ್ ಮೂಲಕ ಪೊಲೀಸರನ್ನು ಹುರಿದುಮಬಿಸುತ್ತಿದ್ದ ಪೊಲೀಸ್ ಕಮೀಷನರ್ಗೆ ಸಿಬ್ಬಂದಿಯ ವೈಫಲ್ಯ ಎದ್ದು ಕಾಣುತ್ತಿತ್ತು. ಪೊಲೀಸರ ಮುಂದೆಯೇ ನಿರಾಯಾಸವಾಗಿ ಹಾದು ಹೋಗುತ್ತ ಮಧ್ಯಾಹ್ನದ ಹೊತ್ತಿಗೆ ಚಾಂದಿರಾಂ ಚಾಮರಾಜಪೇಟೆ ತಲುಪಿದರು. ಅಲ್ಲಿ ಅವರು, ಎಸ್ಐ ಆಗಿದ್ದ ಪುರುಷೋತ್ತಮ್ ಎಂಬುವರ ಕಣ್ಣಿಗೆ ಬಿದ್ದರು. ಅವರು ಹಳೆಯ ಸ್ಕೂಟರ್ವೊಂದನ್ನು ಏರಿ ಚಾಂದಿರಾಂರ ಬೈಕ್ನ್ನು ಅಟ್ಟಿಸಿಕೊಂಡು ಹೋದರು. ಕೊನೆಗೂ ಟಿ.ಆರ್. ಮಿಲ್ ಬಳಿಯ ಡೆಡ್ಎಂಡ್ ರಸ್ತೆಯಲ್ಲಿ ಸೆರೆ ಹಿಡಿಯಲು ಯಶಸ್ವಿಯಾದರು. ಜನ ಮುತ್ತಿಗೆ ಹಾಕಿದ್ದು ನೋಡಿ, ಚಾಂದಿರಾಂ ಜತೆ ಇದ್ದ ಕಾನ್ಸ್ಟೇಬಲ್ ಪೇರಿ ಕಿತ್ತಿದ್ದ.
ತಾವು ಕ್ರೈಂ ಪಿಎಸ್ಐ, ಇದು ಅಣಕು ಪ್ರದರ್ಶನ ಎಂದು ಪರಿಪರಿಯಾಗಿ ಕೇಳಿಕೊಂಡರೂ ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅವರನ್ನು ಚಾಮರಾಜ ಪೇಟೆ ಠಾಣೆಗೆ ಎಳೆದು ತರಲಾಯಿತು. ಸರಗಳ್ಳ ಸೆರೆ ಸಿಕ್ಕ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಠಾಣೆಗೆ ಧಾವಿಸಿ ಬಂದ ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಂ. ಕುಶಾಲಪ್ಪ ಅವರು, ದಯನೀಯ ಸ್ಥಿತಿಯಲ್ಲಿದ್ದ ಚಾಂದಿರಾಂರ ಗುರುತು ಹಿಡಿದರು. ಇನ್ನೇನು ತಾವು ಬಚಾವ್ ಎಂದುಕೊಳ್ಳುತ್ತಿರುವಾಗಲೇ, ‘ನಿನಗೇಕೋ ಬಂದು ಈ ದುರ್ಬುದ್ಧಿ? ಇನ್ನು ನಿನ್ನ ಕತೆ ಮುಗೀತು’ ಎಂದು ಕುಶಾಲಪ್ಪ ಇನ್ನಷ್ಟು ಬೈದು ಹೋದರು! ಅಷ್ಟರಲ್ಲಿ ಪೊಲೀಸ್ ಆಯುಕ್ತ ಹರ್ಲಂಕರ್ ಮತ್ತು ಡಿಸಿಪಿ ನಾಗರಾಜ್ ವೈರ್ಲೆಸ್ ಸಂದೇಶದಲ್ಲಿ ವಾಸ್ತವ ಸಿಳಿಸಿ, ಕೂಡಲೇ ಚಾಂದಿರಾಂರನ್ನು ಬಿಡುಗಡೆ ಮಾಡುವಂತೆ ಸೂಚಿಸಿದರು. ಅವರನ್ನು ಕಚೇರಿಗೆ ಕರೆಸಿಕೊಂಡ ಆಯುಕ್ತರು. ಯಾವ ಯಾವ ಜಂಕ್ಷನ್ನಲ್ಲಿ ಪೊಲೀಸ್ ಅಧಿಕಾರಿಗಳು ಬೇಜವಾಬ್ದಾರಿಯಿಂದಿದ್ದರು ಎಂಬ ಮಾಹಿತಿ ಪಡೆದರು. ಆಪರೇಷನ್ ಟೈಗರ್ನ ದುರ್ಬಲ ಅಂಶಗಳನ್ನು ನೋಟ್ ಮಾಡಿಕೊಂಡರು. ಜತೆಗೆ ದಿಟ್ಟತನ ತೋರಿಸಿದ ಎಸ್ಐ ಪುರುಷೋತ್ತಮ್ಗೆ ಬಹುಮಾನ ಘೋಷಿಸಿದರು.
Discussion about this post