ಉಡುಪಿ, ಅ.14: ಇತ್ತೀಚೆಗೆ ನಡೆದ ಚಲೋ ಉಡುಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಉಡುಪಿ ಕೃಷ್ಣಮಠಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ, ಅವರು ತಾಕತ್ತು ಇದ್ದರೇ ಒಮ್ಮೆ ಮುತ್ತಿಗೆ ಹಾಕಲಿ, ಅವರನ್ನು ಹೇಗೆ ಓಡಿಸಬೇಕು ಎಂಬುದು ನಮಗೆ ತಿಳಿದಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್ ಸವಾಲು ಹಾಕಿದ್ದಾರೆ.
ಪೇಜಾವರಶ್ರೀ ಅಭಿಮಾನಿ ಬ್ಲಡ್ ಡೊನೇಶನ್ ಟೀಂ ಶುಕ್ರವಾರ ನಗರದ ಸಂಸ್ಕೃತ ಕಾಲೇಜು ಸರ್ಕಲ್ ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಗುಜರಾತಿನಿಂದ ಬಂದ ಜಿಗ್ನೇಶ್ ಬಾಯಿಗೆ ಬಂದಂತೆ ಮಾತನಾಡಿ ಉಡುಪಿಯ ಸೌಹಾರ್ದತೆಯನ್ನು ಕೆಡಿಸಲು ಪ್ರಯತ್ನಿಸಿದ್ದಾನೆ, ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ, ಉಡುಪಿ ಕೃಷ್ಣಮದಲ್ಲಿ ಪಂಕ್ತಿಬೇಧ ನಡೆಯುತ್ತಿದೆ, ಆದ್ದರಿಂದ ಕೃಷ್ಣಮಠಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾನೆ. ಆದರೇ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅನ್ಸಾರ್ ಹೇಳಿದರು.
ಪೇಜಾವರ ಶ್ರೀಗಳು ದಲಿತರ ವಿರೋಧಿ ಎನ್ನುವಂತೆ ಸಮಾವೇಶದಲ್ಲಿ ಬಿಂಬಿಸಿದ್ದಾರೆ. ಆದರೇ ಪೇಜಾವರ ಶ್ರೀಗಳು ಹಿಂದುಗಳಂತೆಯೇ ದಲಿತರಿಂದ ಹಿಡಿದು ಮುಸ್ಲಿಂ, ಕ್ರಿಶ್ಚಿಯನ್ ಮೊದಲಾದ ಸರ್ವಧರ್ಮಿಯರನ್ನು ಕೂಡ ಒಂದೇ ರೀತಿಯಾಗಿ ಕಾಣುತ್ತಾರೆ. ಚಲೋ ಉಡುಪಿ ಎಂದು ಎಲ್ಲಿಂದಲೋ ಬಂದವರಿಗೆ ಕೃಷ್ಣ ಮಠದ ಬಗ್ಗೆ ಏನು ಗೊತ್ತಿದೆ ? ಮಠಕ್ಕೆ ಇರುವ ದಾರಿಗಳೆಷ್ಟು ಎಂದು ಅವರಿಗೆ ತಿಳಿದಿದೆಯೇ ? ಪೇಜಾವರ ಶ್ರೀಗಳು ದಲಿತರ ಅಭಿವೃದ್ಧಿಗೆ ನೀಡಿದಷ್ಟು ಒತ್ತು ಅವರು ನೀಡಿದ್ದಾರೆಯೇ ? ಎಂದು ಪ್ರಶ್ನಿಸಿದ ಅನ್ಸಾರ್, ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಕುರಿತು ಪೇಜಾವರ ಶ್ರೀಗಳಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದವರು ಹೇಳಿದರು.
ಪೇಜಾವರ ಶ್ರೀ ಬ್ಲಡ್ ಡೊನೇಶನ್ ಟೀಂನ ಅಧ್ಯಕ್ಷ ಮಹಮ್ಮದ್ ಆರಿಫ್, ರಾಧಾಕೃಷ್ಣ ಶೆಟ್ಟಿ, ಜೋಸೆಫ್ ಸಲ್ದಾನ, ಸಾಹಿಲ್ ರಹಮತುಲ್ಲಾ, ಮಮ್ತಾಜ್ ಅಲಿ, ಆರಿಫ್ ಅಜ್ಜರಕಾಡು, ಅರ್ಶದ್, ಅಬ್ದುಲ್ ಮತ್ತಿತರರು ಪಾಲ್ಗೊಂಡಿದ್ದರು.
Discussion about this post