ನವದೆಹಲಿ, ಆ.31: ಈಗಾಗಲೇ ಭಾರೀ ಮಳೆಯಿಂದ ಕಂಗೆಟ್ಟಿರುವ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ರಾತ್ರಿಯ ಒಳಗಾಗಿ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಈ ಕುರಿತಂತೆ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಬಿ.ಪಿ. ಯಾದವ್ ಮಾತನಾಡಿದ್ದು, ಇಂದು ರಾತ್ರಿಯ ಒಳಗಾಗಿ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ನಾಳೆ ಮಧ್ಯಾಹ್ನದ ವೇಳೆ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಇದೇ ವೇಳೆ, ದಕ್ಷಿಣ ಭಾರತದ ಹೈದರಾಬಾದ್ನಲ್ಲೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ನಿನ್ನೆ ರಾತ್ರಿ ಹಾಗೂ ಇಂದು ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ದೆಹಲಿಯ ವಾಹನ ದಟ್ಟನೆಯ ರಿಂಗ್ ರೋಡ್ಧವಳ ಕುಂವಾ, ಭೈರನ್ ರಸ್ತೆ, ಮಥುರಾ ರಸ್ತೆ, ತೀನ್ ಮೂರ್ತಿ ಹೊರ ಸುತ್ತಿನ ರಸ್ತೆ, ಇಗ್ನೊರವ್ ರಸ್ತೆ, ಐಪಿ ಫ್ಲೈ ಓವರ್, ಸರಾಯ್ ಕಾಲೇ ಖಾನ್, ಬಾರಾಪುಲ್ಲಾ, ಡಿಎನ್ಡಿ ಕಡಗೆ ಹೋಗುವ ಫ್ಲೈ ಓವರ್,ಆಶ್ರಮ್ ಚೌಕ್, ಮಹಾರಾಣಿ ಬಾಗ್ ರಿಂಗ್ ರೋಡ್, ಲಜಪತ್ ನಗರ್, ಸರಾಯ್ ಕಾಲೇ ಖಾನ್, ರಾಜಾ ಗಾರ್ಡನ್, ಮ್ಯಾನ್ಪುರಿ, ಜಿಮ್ಖಾನಾದಿಂದ ತೀನ್ ಮೂರ್ತಿ ಕಡೆಗೆ ಸಾಗುವ ರಸ್ತೆ – ಹೀಗೆ ರಾಷ್ಟ್ರ ರಾಜಧಾನಿಯ ಬಹುತೇಕ ಎಲ್ಲ ರಸ್ತೆಗಳು ನೀರಿನಿಂದ ತುಂಬಿದ್ದು ಇವುಗಳೆಲ್ಲ ನದಿಯಂತೆ ಕಂಡುಬರುತ್ತಿವೆ.
ಭಾರತ ಭೇಟಿಯಲ್ಲಿರುವ ಅಮೆರಿಕ ರಾಜ್ಯ ಕಾರ್ಯದರ್ಶಿ ಜಾನ್ ಕೆರ್ರಿ ದೆಹಲಿ ಸುತ್ತಮುತ್ತ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಯೋಜನೆಯನ್ನು ರದ್ದುಗೊಳಿಸಿದ್ದಾರೆ. ದೆಹಲಿ ಐಐಟಿಗೆ ಭೇಟಿ ನೀಡುವ ಕಾರ್ಯಕ್ರಮ ಕೂಡ ಭಾರೀ ಮಳೆಯಿಂದಾಗಿ ರದ್ದಾಗಿದೆ.
Discussion about this post