Read - < 1 minute
ಮಂಡ್ಯ, ಸೆ.೮: ತಮಿಳುನಾಡಿಗೆ ನೀರು ಹರಿಸಿದನ್ನು ವಿರೋಧಿಸಿ ಕರ್ನಾಟಕ ರಾಜ್ಯದಾದ್ಯಂತ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮಂಡ್ಯದಲ್ಲಿ ರೈತರು ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ಸಂಜಯ್ ವೃತ್ತದಲ್ಲಿ ಸೇರಿರುವ ಸಾವಿರಾರು ಕನ್ನಡಪ ಹೋರಾಟಗಾರರು ಹಾಗೂ ರೈತಪ ಸಂಘಟನೆ ಕಾರ್ಯಕರ್ತರು ತಮಿಳುನಾಡು ಸಿಎಂ ಜಯಲಲಿತಾ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದು, ಜಯಲಲಿತಾ ಪ್ರತಿಕೃತಿ ಧಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಆಕ್ರೋಶ ಭರಿತ ರೈತರು ಮಂಡ್ಯ-ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಬಂದ್ ಮಾಡಿದ್ದು, ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಇನ್ನು ಮುಂಜಾನೆ ಹೆದ್ದಾರಿ ಮೂಲಕ ಹಾದು ಹೋಗುತ್ತಿದ್ದ ತಮಿಳುನಾಡು ಲಾರಿಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿಕೆ ಸಾಧ್ಯತೆ
ಇದೇ ವೇಳೆ ರೈತರ ಮುಷ್ಕರ ಹಾಗೂ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಈ ಹಿಂದೆ ಘೋಷಣೆ ಮಾಡಲಾಗಿದ್ದ ರಜೆಯನ್ನು ವಿಸ್ತರಣೆ ಮಾಡುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಮತ್ತೆರೆಡು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಈ ವರೆಗೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಬೀದಿಗಿಳಿದ ದರ್ಶನ್, ಪ್ರೇಮ್
ಮತ್ತೊಂದೆಡೆ ನಟ ದರ್ಶನ್, ನಟ, ನಿರ್ದೇಶಕ ಜೋಗಿ ಪ್ರೇಮ್ ಕೊಡಾ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಬಲ ಘೋಷಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಬಾರದು ಎಂದು ವಿರೋಧಿಸಿ ಮಂಡ್ಯದ ತಮಿಳು ಕಾಲೋನಿಯಲ್ಲಿರುವ ತಮಿಳು ನಿವಾಸಿಗಳೇ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಇಂದು ಪ್ರತಿಭಟನೆ ನಡೆಸುವ ಮೂಲಕ ಮಂಡ್ಯ ಜನರಿಗೆ ಸಾಥ್ ನೀಡಿದ್ದಾರೆ.
ಮಂಡ್ಯ ನಗರದ ತಮಿಳು ಕಾಲೋನಿಯಲ್ಲಿರುವ ನಿವಾಸಿಗಳು ಖಾಲಿ ಕೊಡಗಳನ್ನು ಹೊತ್ತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ರೈತರ ವಿಚಾರ ಇನ್ನೂ ಗೊತ್ತಾಗಿಲ್ಲ; ದರ್ಶನ್
ನಾನು ಕಾವೇರಿ ನೀರು ಕುಡಿದು ಬೆಳೆದವನು, ಹಾಗಾಗಿ ನಾನು ಇಲ್ಲಿಗೆ ನಟನಾಗಿ ಬಂದಿಲ್ಲ, ಸಾಮಾನ್ಯ ಪ್ರಜೆಯಾಗಿ ಬಂದಿದ್ದೇನೆ. ಮಂಡ್ಯ ಜಿಲ್ಲೆಯ ರೈತರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಸಾಮಾನ್ಯ ಪ್ರಜೆಯಾಗಿ ರೈತರ ಹೋರಾಟದಲ್ಲಿ ಭಾಗಿಯಾಗುತ್ತೇನೆ ಎಂದು ನಟ ದರ್ಶನ್ ತಿಳಿಸಿದ್ದಾರೆ.
ಸರ್ಕಾರದ ವಿರುದ್ಧ ಮಾತನಾಡುವಷ್ಟು ದೊಡ್ಡವನಲ್ಲ ನಾನು. ರೈತರ ಪರ್ವ ಇನ್ನೂ ಗೊತ್ತಾಗಿಲ್ಲ. ಮಹದಾಯಿ ವಿಚಾರದಲ್ಲೂ ನಮಗೆ ಅನ್ಯಾಯ ಆಗಿದೆ, ಕಾವೇರಿ ವಿಚಾರದಲ್ಲಿ ಪದೇ, ಪದೇ ಅನ್ಯಾಯವಾಗುತ್ತಿದೆ. ಹಾಗಾಗಿ ಕಾವೇರಿ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಲಿ ಎಂದು ಈ ಸಂದರ್ಭದಲ್ಲಿ ಹೇಳಿದರು.
ಪರಿಹಾರ ಬೇಡ, ಬೆಳೆಗೆ ನೀರು ಬೇಕು: ಪ್ರೇಮ್
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿ ಮಂಡ್ಯ ಜಿಲ್ಲೆಯ ರೈತರು ನಡೆಸುತ್ತಿರುವ ಪ್ರತಿಭಟನೆಗೆ ನಟ, ನಿರ್ದೇಶಕ ಜೋಗಿ ಪ್ರೇಮ್ ಕೂಡಾ ಸಾಥ್ ನೀಡಿದ್ದಾರೆ.
ನಮ್ಮ ರೈತರ ಬೆಳೆಗಳಿಗೆ ಪರಿಹಾರ ಬೇಡ, ರೈತರ ಬೆಳೆಗೆ ನೀರು ಬೇಕಾಗಿದೆ. ನಾನು ಯಾವತ್ತೂ ಮಂಡ್ಯದ ರೈತರ ಹೋರಾಟಕ್ಕೆ ಬೆಂಬಲವಾಗಿರುತ್ತೇನೆ, ನಾಳೆ ನಡೆಯಲಿರುವ ಬಂದ್ಗೆ ಎಲ್ಲರೂ ಬೆಂಬಲ ನೀಡಬೇಕು. ಕನ್ನಡ ಚಿತ್ರರಂಗದ ನಟ, ನಟಿಯರು ಮಂಡ್ಯಕ್ಕೆ ಬಂದು ಪ್ರತಿಭಟನೆ ನಡೆಸಬೇಕು ಎಂದು ಪ್ರೇಮ್ ಮನವಿ ಮಾಡಿದರು.
Discussion about this post