ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗೂ ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮಾಭಿವೃದ್ದಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ವಾರ್ಡ್ ನಂ.2 ರ ದೊಣಬಘಟ್ಟ ರಸ್ತೆ, ಕವಲಗುಂದಿ ತಗ್ಗು ಪ್ರದೇಶದಲ್ಲಿ ಪ್ರವಾಹದಿಂದ ಜಲಾವೃತಗೊಳ್ಳುವ ಸುಮಾರು 30 ಮನೆಗಳ ನಿವಾಸಿಗಳಿಗೆ ಪುನರ್ ವಸತಿ ಕಲ್ಪಿಸಲು ಸರಕಾರದಿಂದ 5 ಲಕ್ಷ ರೂ. ಸಹಾಯಧನ ಬಿಡುಗಡೆಗೊಳಿಸುವುದು. ನಗರಸಭೆ ಆಡಳಿತವು ಬೆಳ್ಳಿ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದ್ದು, ಈ ಹಿನ್ನೆಲೆಯಲ್ಲಿ 100 ಕೋಟಿ ರೂ. ಕೂಡಲೆ ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಲಾಗಿದೆ.
ಮಾರ್ಚ್ ತಿಂಗಳಿನಲ್ಲಿ ಐತಿಹಾಸಿಕ ಭದ್ರೋತ್ಸವ ಕಾರ್ಯಕ್ರಮ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರ ಬೃಹತ್ ಸಮಾವೇಶ ಹಮ್ಮಿಕೊಂಡಿರುವುದರಿಂದ ರಾಜ್ಯ ಸರಕಾರದಿಂದ ವಿಶೇಷ ಅನುದಾನದಡಿ 25 ಲಕ್ಷ ರೂ. ಬಿಡುಗಡೆಗೊಳಿಸುವುದು. ಜನ್ನಾಪುರದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಸಾಂಸ್ಕೃತಿಕ ಭವನ ಕಟ್ಟಲು 2 ಕೋಟಿ ರೂ. ವಿಶೇಷ ಅನುದಾನ ಕಲ್ಪಿಸುವುದು. ನಗರಸಭೆ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸಲು ಪರಿಷ್ಕೃತ ಯೋಜನೆ ತಯಾರಿಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರಿಗೆ ಸೂಕ್ತ ನಿರ್ದೇಶನ ನೀಡುವುದು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಾದ ಬಿಳಕಿ, ತಡಸ, ದೊಣಬಘಟ್ಟ, ಹಿರಿಯೂರು, ಕಂಬದಾಳ್ ಹೊಸೂರು, ಸಿಂಗನಮನೆ, ಕೂಡ್ಲಿಗೆರೆ, ಅತ್ತಿಗುಂದ, ಅರಳಿಹಳ್ಳಿ, ನಾಗತಿಬೆಳಗಲು ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಪೂರೈಕೆಗೆ ಪರಿಷ್ಕೃತ ಯೋಜನೆ ತಯಾರಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವುದು ಹಾಗೂ ನಗರಸಭೆ ವ್ಯಾಪ್ತಿಯ ಜನ್ನಾಪುರ ಕೆರೆಯ ಅಭಿವೃದ್ಧಿ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಛೇರ್ಮನ್ ಆರ್. ವೇಣುಗೋಪಾಲ್, ಕವಲಗುಂದಿ ನಿವಾಸಿಗಳಾದ ಕೃಷ್ಣ(ರಾಮಸೇನಾ), ಷಣ್ಮುಖಪ್ಪ, ಪ್ರಕಾಶ, ಗೋವಿಂದ, ಮಾದೇಶ್ವರ, ರಂಗಸ್ವಾಮಿ, ಪುಟ್ಟಸ್ವಾಮಿ, ಲಕ್ಷ್ಮಿ, ಭವಾನಿ, ಮುರುಗೇಶ, ಕುಮಾರ, ರವಿ, ರಘು ಸೇರಿದಂತೆ ಮತ್ತಿತರರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post