ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡಿಸಿಸಿ ಬ್ಯಾಂಕ್ ಗ್ರಾಹಕರಿಗೆ ಒದಗಿಸುತ್ತಿರುವ ‘ಮೊಬೈಲ್ ಆ್ಯಪ್’ ಸೇವೆಗೆ ಬೆಂಗಳೂರು ನಬಾರ್ಡ್ ಕರ್ನಾಟಕ ಪ್ರಾದೇಶಿಕ ಕಛೇರಿ ಮುಖ್ಯ ಮಹಾ ಪ್ರಬಂಧಕ ಟಿ. ರಮೇಶ್ ಚಾಲನೆ ನೀಡಿದರು.
ಶಿವಮೊಗ್ಗ ಡಿಸಿಸಿ ಬ್ಯಾಂಕಿಗೆ ಮಂಗಳವಾರ ಭೇಟಿ ನೀಡಿದ್ದ ಅವರು ಬ್ಯಾಂಕಿನ ವ್ಯವಹಾರಗಳು, ಲಾಭ ಗಳಿಕೆ, ಕೃಷಿ ಸಾಲ ಹಂಚಿಕೆ, ಆರ್ಥಿಕ ಸ್ಥಿತಿಗತಿಗಳ ಅವಲೋಕನ ನಡೆಸಿ, ಬ್ಯಾಂಕು ಆರ್ಥಿಕ ಸದೃಢತೆಯನ್ನು ಹೊಂದಿದ್ದು, ಪ್ರಗತಿಯತ್ತ ಸಾಗುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಬ್ಯಾಂಕಿನ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಮಾತನಾಡಿ, ಬ್ಯಾಂಕಿನ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮೂಲಕ ಮೊಬೈಲ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದರು.
Also read: ಕ್ಷಯ ರೋಗಿಗಳ ಚಿಕಿತ್ಸೆಗಾಗಿ ಎಸ್ಬಿಐನಿಂದ ಟ್ರೂನ್ಯಾಟ್ ಯಂತ್ರ ಕೊಡುಗೆ
ಬ್ಯಾಂಕು ಮೊದಲ ಹಂತದಲ್ಲಿ ನಾನ್ ಫಂಡ್ ಸೇವೆಗಳನ್ನು ಮಾತ್ರ ಒದಗಿಸುತ್ತಿದ್ದು, ಗ್ರಾಹಕರ ಖಾತೆಗಳ ಬ್ಯಾಲೆನ್ಸ್, ಮಿನಿ ಪಾಸ್ ಬುಕ್, ಬ್ಯಾಂಕಿನ ಸಾಮಾನ್ಯ ಮಾಹಿತಿಗಳು, ಪಾಸಿಟೀವ್ ಪೇ ಸಿಸ್ಟ್ಂ ನಡಿಯಲ್ಲಿ ಗ್ರಾಹಕರು ನೀಡಿದ ಚೆಕ್ ವಿವರಗಳನ್ನು ಬ್ಯಾಂಕಿಗೆ ಒದಗಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಫಂಡ್ ಆಧಾರಿತ ಸೌಲಭ್ಯಗಳನ್ನು ಕಲ್ಪಿಸಲಾಗುವುದೆಂದು ತಿಳಿಸಿದರು.
ಗ್ರಾಹಕರು ತಮ್ಮ ಓಟಿಪಿ, ಪಾಸ್ ವರ್ಡ್, ಎಂಪಿನ್ ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದೆಂದು, ಗೌಪ್ಯತೆ ಕಾಪಾಡಿಕೊಳ್ಳಬೇಕೆಂದು ಕೋರಿದರು. ಶಾಖೆಗಳಿಂದ ಹೆಚ್ಚಿನ ಮಾಹಿತಿ ಪಡೆದು ಬ್ಯಾಂಕಿನ ಮೊಬೈಲ್ ಅ್ಯಪ್ ಮತ್ತು ಎಲ್ಲಾ ಸೇವಾ ಸೌಲಭ್ಯಗಳ ಪ್ರಯೋಜನವನ್ನು ಪಡೆಯಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಹೆಚ್.ಎಲ್. ಷಡಾಕ್ಷರಿ, ಮುಖ್ಯ ಕಾರ್ಯನಿರ್ವಾಹಕ ನಾಗೇಶ್. ಎಸ್. ಡೋಂಗರೆ, ಸಹಕಾರ ಸಂಘಗಳ ಉಪ ನಿಬಂಧಕ ಜಿ. ವಾಸುದೇವ, ನಬಾರ್ಡ್ ಜಿಲ್ಲಾ ಅಧಿಕಾರಿಗಳಾದ ಶ್ರೀ ರವಿಯವರು ಹಾಗೂ ಬ್ಯಾಂಕಿನ ಎಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post