ಕಲ್ಪ ಮೀಡಿಯಾ ಹೌಸ್ | ಬೆಂಗಳೂರು ಗ್ರಾಮಾಂತರ |
ಸರ್ಕಾರಿ ಗೋಮಾಳದ ಪೋಡಿ, ರೈತರಿಗೆ ನಿವೇಶನ ಹಂಚಿಕೆಗೆ ಪ್ರಸ್ತಾವನೆ, ಗುಡುವನಹಳ್ಳಿಯಿಂದ ಕೋರಮಂಗಲ ಗ್ರಾಮಕ್ಕೆ ನಕಾಶೆ ಪ್ರಕಾರ ರಸ್ತೆ ಗುರುತಿಸಿ ಅಭಿವೃದ್ಧಿಪಡಿಸಲು ಸೂಚನೆ ಸೇರಿದಂತೆ ಸ್ಥಳೀಯ ಗ್ರಾಮಸ್ಥರ ಹಲವಾರು ಅಹವಾಲುಗಳಿಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಸ್ಪಂದನೆ ನೀಡಿದ್ದಾರೆ.
ದೇವನಹಳ್ಳಿ ತಾಲೂಕಿನ ವಿಜಯಪುರ ಹೋಬಳಿಯ ಕೋರಮಂಗಲ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಹಾಗೂ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಸ್ಥಳೀಯ ರೈತರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಕೋರಮಂಗಲ ಗ್ರಾಮದ ಗೋಮಾಳ ಸರ್ವೆ ನಂಬರ್ 55,101 ಹಾಗೂ 102 ರ ಭೂಮಿಯ ಅಳತೆ ಹಾಗೂ ಬಾಬು ವಿವರಗಳನ್ನು ಪೋಡಿ ಮಾಡಿ ದಾಖಲಿಸಲು ಸೂಚಿಸಿದರು.
ಸರ್ವೆ ನಂಬರ್ 102 ರಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿ ಸಮೀಕ್ಷೆ ಕೈಗೊಂಡು ಅಳತೆ ಮಾಡಲು ನಿರ್ದೇಶನ ನೀಡಿದರು.
Also read: ನಂದಿನಿ ಸಿಹಿ ಉತ್ಸವ: 30 ಉತ್ಪನ್ನಗಳ ಮೇಲೆ ಶೇ.20ರಷ್ಟು ರಿಯಾಯಿತಿ
ಸರ್ವೆ ನಂಬರ್ 218 ರ ಉಳಿಕೆ ಜಮೀನಿನಲ್ಲಿ ಆಟದ ಮೈದಾನ, ಅಂಬೇಡ್ಕರ್ ಭವನ ಹಾಗೂ ಗ್ರಾಮದ ಎಲ್ಲಾ ವರ್ಗಗಳ ರೈತರಿಗೆ ಆಶ್ರಯ ನಿವೇಶನ ಒದಗಿಸಲು ಪ್ರಸ್ತಾವನೆ ಸಲ್ಲಿಸಲು ದೇವನಹಳ್ಳಿಯ ತಹಸೀಲ್ದಾರ ಮತ್ತು ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.
ಗುಡುವನಹಳ್ಳಿ ಕರೆಯಂಗಳದ ಮೂಲಕ ಕೋರಮಂಗಲ ಗ್ರಾಮಕ್ಕೆ ಹಾದುಹೋಗುವ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸ್ಥಳೀಯರು ಕೋರಿದರು. ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು ರಸ್ತೆಯು ಸರ್ಕಾರಿ ಕೆರೆ ಅಂಗಳದಲ್ಲಿ ಇದೆ, ನಕಾಶೆ ಪ್ರಕಾರ ರಸ್ತೆಯನ್ನು ಗುರುತಿಸಿ ಅಭಿವೃದ್ಧಿ ಪಡಿಸಲು ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕೋರಮಂಗಲ ಗ್ರಾಮದಿಂದ ಹಾರೋಹಳ್ಳಿಗೆ ಹೋಗುವ ರಸ್ತೆಯಲ್ಲಿರುವ ಕುಂಟೆ ಒತ್ತುವರಿ ಆಗಿದೆ ಎಂದು ಗಾಮಸ್ಥರು ತಿಳಿಸಿದಾಗ, ಜಿಲ್ಲಾಧಿಕಾರಿಗಳು ಸ್ಪಂದಿಸಿ ತ್ವರಿತವಾಗಿ ಕುಂಟೆ ಅಳತೆ ಮಾಡಿ , ಒತ್ತುವರಿ ತೆರೆವುಗೂಳಿಸಲು ನಿರ್ದೇಶಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















