ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ ಮತ್ತು ಅಗತ್ಯ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಬೆಳಿಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ 137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಧ್ವಜಾರೋಹಣ ನೆರವೇರಿಸಿ ಸಂವಿಧಾನದ ಮುನ್ನುಡಿಯನ್ನು ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ದುಡಿದ ಮತ್ತು ತಂದುಕೊಟ್ಟ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಬಡವರ ಕಲ್ಯಾಣ ಸಾಧ್ಯ. ಹಲವು ಕಾರಣಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿರಬಹುದು. ಆದರೆ ಜನರ ಮಿಡಿತ ಇನ್ನೂ ಕಾಂಗ್ರೆಸ್ನಲ್ಲಿಯೇ ಇರುವುದರಿಂದ ಅಧಿಕಾರದ ಚುಕ್ಕಾಣಿ ಹಿಡಿಯುವ ಕಾಲ ದೂರವಿಲ್ಲ ಎಂದರು.
ಕಾಂಗ್ರಸ್ ಪಕ್ಷ ಎಲ್ಲಾ ಜಾತಿ ವರ್ಗದವರನ್ನು ತಬ್ಬಿಕೊಳ್ಳುತ್ತಿದೆ. ಸಮಾನತೆ, ಸಾಮರಸ್ಯದ ಭಾವನೆಗಳನ್ನು ಬೆಳೆಸುತ್ತದೆ. ಇದು ಬಿಜೆಪಿಯಂತಹ ಪಕ್ಷದಿಂದ ಸಾಧ್ಯವಿಲ್ಲ. ಕಾಂಗ್ರೆಸ್ ಈ ದೇಶದ ಹೆಮ್ಮೆ. ಬಡವರ ಕಲ್ಯಾಣ, ದೇಶದ ಅಭಿವೃದ್ಧಿ, ಬಹುದೊಡ್ಡ ಯೋಜನೆಗಳನ್ನು ನೀಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಇಂತಹ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ನಾವೆಲ್ಲ ಪ್ರಯತ್ನಿಸೋಣ ಈಗಾಗಲೇ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಜೋಡೊ ಯಾತ್ರೆಯ ಮೂಲಕ ಕಾಂಗ್ರೆಸ್ಗೆ ಶಕ್ತಿ ತುಂಬಿದ್ದಾರೆ. ಆನಿಟ್ಟಿನತ್ತ ನಾವ ಹೆಜ್ಜೆ ಹಾಕೋಣ ಎಂದರು.
ಬಿಜೆಪಿ ಸರ್ಕಾರದಲ್ಲಿ ಹಿಂಸೆ ತಾಂಡವವಾಡುತ್ತಿದೆ. ವೈಮನಸ್ಯಗಳು ಹೆಚ್ಚುತ್ತಿವೆ. ಸಂವಿಧಾನವೇ ದಿಕ್ಕು ತಪ್ಪುತ್ತಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ಸೇರಿಕೊಂಡಿದೆ. ಕೋಮು ಗಲಬೆಗಳು ದೇಶದುದ್ದಕ್ಕೂ ಹೆಚ್ಚುತ್ತಿವೆ. ಬಡತನ, ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಕೃಷಿಕರ, ಕಾರ್ಮಿಕರ, ದಲಿತರು ಸಂಕಟ ಪಡುವಂತಾಗಿದೆ. ಇಂತಹ ದುಃಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದು ದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣವನ್ನು ಮೂಡಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್, ವೈ.ಹೆಚ್. ನಾಗರಾಜ್, ಚಂದ್ರಭೂಪಾಲ್, ಬಲದೇವಕೃಷ್ಣ, ವಿಜಯಲಕ್ಷ್ಮಿ ಪಾಟೀಲ್ ಇಸ್ಮಾಯಿಲ್ ಖಾನ್, ಪಲ್ಲವಿ, ಎನ್. ರಮೇಶ್, ಹೆಚ್.ಪಿ. ಗಿರೀಶ್, ಹೆಚ್.ಸಿ.ಯೋಗೀಶ್, ಕೃಷ್ಣಪ್ಪ, ವಿಶ್ವನಾಥ ಕಾಶಿ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post