ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಿರ್ಧಾರ ವಿರೋಧಿಸಿ ಇಂದು ಅಶೋಕ ವೃತ್ತದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಸದಸ್ಯರು ಬೊಮ್ಮಾಯಿಯವರ ಶವ ಯಾತ್ರೆ ನಡೆಸಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಕಳೆದ 24 ವರ್ಷಗಳಿಂದಲೂ ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದರೂ ಕೂಡ ಇವರೆಗೂ ಆಡಳಿತ ನಡೆಸಿದ ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ರಚನೆಯಾಗಿ 2012ರಲ್ಲಿ ಅಧಿಕೃತವಾಗಿ ಸರ್ಕಾರಕ್ಕೆ ವರದಿ ನೀಡಿ 10 ವರ್ಷ ಕಳೆದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಂದ ಹಿಡಿದು ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರು ಕೂಡ ಕೊಟ್ಟ ಮಾತನ್ನು ತಪ್ಪಿದ್ದಾರೆ ಎಂದು ದೂರಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲು ಮತ್ತು ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಕೂಡ ಕೊಟ್ಟ ಮಾತನ್ನು ತಪ್ಪಿದ್ದಾರೆ. ರಾಜ್ಯ ಸರ್ಕಾರ ಮಾತಿನಲ್ಲಿ ಮಾತ್ರ ಸಾಮಾಜಿಕ ನ್ಯಾಯದ ಮಂತ್ರ ಹೇಳುತ್ತದೆ. ಕಾಲಕ್ಕೆ ತಕ್ಕಂತೆ ಬಣ್ಣ ಬದಲಿಸುವ ಗೋಸುಂಬೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗ ಒಳಮೀಸಲಾತಿ ವರದಿಯನ್ನು ಕಸದ ಬುಟ್ಟಿಗೆ ಎಸೆಯುವ ಮೂಲಕ ಪರಿಶಿಷ್ಟ ಜಾತಿಗಳ ಬೇಡಿಕೆಗಳನ್ನು ತಿರಸ್ಕರಿಸಿದೆ. ನಮ್ಮಗಳ ಪಾಲಿಗೆ ಬಿಜೆಪಿ ಸರ್ಕಾರ ಸತ್ತು ಹೋಗಿದೆ ಎಂದರು.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯ ಸಂಚಾಲಕ ಭಾನುಪ್ರಸಾದ್, ನಿರಂಜನ್, ಚಂದ್ರಪ್ಪ, ರಾಜಕುಮಾರ್, ಮಂಜು ನಿದಿಗೆ, ವೆಂಕಟೇಶ್ ಮೊದಲಾದವರಿದ್ದರು.
ಗೋ ಬ್ಯಾಕ್ ಬಿಜೆಪಿ: ಕಾಂಗ್ರೆಸ್ ಪ್ರತಿಭಟನೆ
ಬಿಜೆಪಿ ಸಹವಾಸ ಸಾಕಪ್ಪಾ ಸಾಕು, ಗೋ ಬ್ಯಾಕ್ ಬಿಜೆಪಿ ಎಂಬ ಘೋಷಣೆಗಳೊಂದಿಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಇಂದು ಮೆಗ್ಗಾನ್ ಆಸ್ಪತ್ರೆ ಎದುರಿನ ಪೊಲೀಸ್ ಕ್ಯಾಂಟೀನ್ ಬಳಿ ಪೋಸ್ಟರ್ ಅಭಿಯಾನದ ಮೂಲಕ ಪ್ರತಿಭಟನೆ ನಡೆಸಿದರು.
ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಆನರ ಕಿವಿಗೆ ಹೂವು ಮುಡಿಸುವ ಕೆಲಸದಲ್ಲಿ ಬಿಜೆಪಿ ತೊಡಗಿದೆ. ಭ್ರಷ್ಟಾಚಾರದ ಸರ್ಕಾರವಿದು. ಇವರ ಸಾಧನೆಯೆಂದರೆ ಶೇ.40ರಷ್ಟು ಕಮಿಷನ್ ಪಡೆಯುವುದು. ಜನರು ಬೇಸತ್ತು ಹೋಗಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯ ಮತ್ತು ರಾಷ್ಟ್ರದಿಂದ ತೊಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯೇ ಭರವಸೆ ಎಂದು ಪೋಸ್ಟರ್ಗಳ ಮೂಲಕ ಹೇಳಿದ್ದೇ ಇವರ ಸಾಧನೆ. ಜನರ ಜೀವನವನ್ನು ದುಸ್ತರಗೊಳಿಸಿದ್ದಾರೆ. ಬಿಜೆಪಿಯ ಸಹವಾಸ ಎಲ್ಲರಿಗೂ ಸಾಕಾಗಿದೆ. ಇವರು ಕಿವಿ ಮೇಲೆ ಹೂವು ಇಡುವುದನ್ನುಇನ್ನಾದರೂ ತಡಯಬೇಕಾಗಿದೆ. ಈಗ ಏನಿದ್ದರೂ ಕಾಂಗ್ರೆಸ್ಸೇ ಭರವಸೆಯ ಬೆಳಕಾಗಲಿದೆ ಎಂದು ಮುಖಂಡರು ತಿಳಿಸಿದರು.
ಬಿಜೆಪಿಯೇ ಭರವಸೆ ಎಂಬ ಪೋಸ್ಟರ್ಗಳ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಕಿವಿಗೆ ಹೂವು ಇಡುವ ಪೋಸ್ಟರ್ಗಳನ್ನು ಅಂಟಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಎನ್.ರಮೇಶ್, ಎಸ್.ಕೆ.ಮರಿಯಪ್ಪ, ಹೆಚ್.ಸಿ ಯೋಗೀಶ್, ಡಿ.ಕೃಷ್ಣಪ್ಪ, ಚಂದ್ರಶೇಖರ್, ಕಲೀಂ ಪಾಶಾ, ದೀಪಕ್ ಸಿಂಗ್, ಜಿ.ಡಿ. ಮಂಜುನಾಥ್, ಕಲಗೋಡು ರತ್ನಾಕರ್, ಇಕ್ಕೇರಿ ರಮೇಶ್, ವೈ.ಹೆಚ್. ನಾಗರಾಜ್, ಮಂಜುನಾಥ ಬಾಬು, ಸುವರ್ಣಾ ನಾಗರಾಜ್, ಹೆಚ್.ಪಿ.ಗಿರೀಶ್, ಸ್ಟೆಲ್ಲಾ ಮಾರ್ಟಿನ್ ಸೇರಿದಂತೆ ಹಲವರಿದ್ದರು.
ವಿಮಾನ ನಿಲ್ದಾಣಕ್ಕೆ ಕೆಳದಿರಾಣಿ ಚೆನ್ನಮ್ಮ ಹೆಸರು ವೀರಶೈವ ಮಹಾಸಭಾದ ಮುಖಂಡರ ಆಗ್ರಹ
ವಿಮಾನ ನಿಲ್ದಾಣಕ್ಕೆ ಕೆಳದಿರಾಣಿ ಚೆನ್ನಮ್ಮ ಹೆಸರಿಡಬೇಕೆಂದು ವೀರಶೈವ ಮಹಾಸಭಾದ ಮುಖಂಡರು ಆಗ್ರಹಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ, ವೀರಶೈವ ಮಹಾಸಭಾದ ಮುಖಂಡ ಎಂ.ಎನ್.ಒಡೆಯರ್ ಅವರು, ಕೆಳದಿ ಇತಿಹಾಸ ಅನೇಕ ಇತಿಹಾಸ ತಜ್ಞರ ವೈಯಕ್ತಿಕ ದ್ವೇಷಗಳಿಂದ ಮುಚ್ಚಿ ಹೋಗಿದೆ. ಅದನ್ನು ಇತಿಹಾಸಕ್ಕೆ ತಿಳಿಸುವ ಒಂದು ಅವಕಾಶ ಒದಗಿ ಬಂದಿರುವುದರಿಂದ ಕೆಳದಿ ಅರಸರ ಹೆಸರನ್ನು ಅದರಲ್ಲೂ ವಿಶೇಷವಾಗಿ ಒಬ್ಬ ಮಹಿಳೆ ರಾಣಿಯಾಗಿ 26 ವರ್ಷ ಸುಭದ್ರ ಆಡಳಿತ ನೀಡಿ ಗಮನ ಸೆಳೆದಿರುವ ಕೆಳದಿ ರಾಣಿ ಚೆನ್ನಮ್ಮರ ಹೆಸರನ್ನು ಇಡಬೇಕೆಂಬುದೇ ನಮ್ಮ ಒತ್ತಾಸೆಯಾಗಿದೆ ಎಂದರು.
ವೀರಶೈವ ಮಹಾಸಭಾ ರಾಜಕೀಯ ವ್ಯಕ್ತಿ ಅಥವಾ ಸಮಾಜದ ಹಿತದೃಷ್ಟಿಯಲ್ಲಿ ಯಾವುದೇ ಮೀಸಲಾತಿ ಅಥವಾ ಉಚಿತ ಕೊಡುಗೆಯನ್ನು ಸರ್ಕಾರಕ್ಕೆ ಕೇಳುತ್ತಿಲ್ಲ. ಬದಲಾಗಿ ಈ ಮಣ್ಣಿಗೆ ಒಂದು ಇತಿಹಾಸ ಕಟ್ಟಿಕೊಟ್ಟವರ ಹೆಸರನ್ನು ಅಮರವಾಗಿ ಉಳಿಸುವ ಪ್ರಯತ್ನಕ್ಕೆ ಕೈಹಾಕಿದೆ ಅಷ್ಟೆ ಎಂದರು.
ವಿಮಾನ ನಿಲ್ದಾಣಕ್ಕೆ ಕುವೆಂಪು ಅವರ ಹೆಸರಿಡುವುದಕ್ಕೆ ನಮ್ಮ ವಿರೋಧವಿಲ್ಲ. ಕುವೆಂಪು ಅವರ ಹೆಸರನ್ನು ವಿಶ್ವವಿದ್ಯಾನಿಲಯ, ರಂಗಮಂದಿರ ಸೇರಿದಂತೆ ಹಲವೆಡೆ ಇಟ್ಟು. ರಾಷ್ಟ್ರ ಕವಿಗೆ ಸಿಗಬೇಕಾದ ಗೌರವವನ್ನು ನೀಡಲಾಗಿದೆ. ಈಗ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಕೆಳದಿ ಶಿವಪ್ಪನಾಯಕರ ಹೆಸರನ್ನು ಇಡಲಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಅಲ್ಲಿನ ಇತಿಹಾಸ ಪುರುಷರ ಹೆಸರನ್ನು ವಿವಿಧೆಡೆ ಇಡಲಾಗಿದೆ. ಆದರೂ ಶಿವಮೊಗ್ಗಕ್ಕೆ ಹಾಗೂ ಮಲೆನಾಡಿಗೆ ಬಹುದೊಡ್ಡ ಇತಿಹಾಸವನ್ನು ಕಟ್ಟಿಕೊಟ್ಟ 300 ವರ್ಷಗಳ ಸುಭದ್ರ ಆಡಳಿತ ನೀಡಿದ ಕೆಳದಿ ಅರಸರ ಹೆಸರನ್ನು ಇಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವೀರಶೈವ ಮಹಾಸಭಾದ ಮುಖಂಡರಾದ ಟಿ.ವಿ.ಅರುಣ್ಕುಮಾರ್, ಕಲ್ಯಾಣ್ಕುಮಾರ್ ಪಾಂಡ್ಯ, ಆನಂದಗೌಡ, ಶೇಖರಪ್ಪ ಗೌಡ, ವಿರೂಪಾಕ್ಷ, ಪಿ.ವಿ.ವೀರಭದ್ರಪ್ಪ, ವಿಜಯೇಂದ್ರ, ಬೊಮ್ಮಾಯಿ ಇನ್ನಿತರರು ಉಪಸ್ಥಿತರಿದ್ದರು.
ವಿಮಾನ ನಿಲ್ದಾಣಕ್ಕೆ ಜಮೀನು ನೀಡಿದ 8 ಸಂತ್ರಸ್ತ ಕುಟುಂಬ ಅಹೋರಾತ್ರಿ ಧರಣಿ ಸತ್ಯಾಗ್ರಹ
ವಿಮಾನ ನಿಲ್ದಾಣಕ್ಕೆ ಜಮೀನು ನೀಡಿದ 8 ಸಂತ್ರಸ್ತ ಕುಟುಂಬಗಳು ತಮಗೆ ನ್ಯಾಯ ದೊರಕಿಸಿಕೊಡುವಂತೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.
ನಾವುಗಳು ಕಳೆದ 5 ದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಇದುವರೆಗೂ ನಮಗೆ ನ್ಯಾಯ ಸಿಕ್ಕಿಲ್ಲ. ಆದ್ದರಿಂದ ನಮಗೆ ಬರಬೇಕಾಗಿರುವ ಪರಿಹಾರವನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಸಂತ್ರಸ್ತರ ಪರವಾಗಿ ಮಾತನಾಡಿದ ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ತೀ.ನ. ಶ್ರೀನಿವಾಸ್ ವಿಮಾನ ನಿಲ್ದಾಣಕ್ಕೆ ಜಮೀನು ಕಳೆದುಕೊಂಡ ಸಂತ್ರಸ್ತ ರೈತರಿಗೆ ನಿವೇಶನ ನೀಡಬೇಕು. 2006ರಲ್ಲಿ ಸೋಗಾನೆ ಗ್ರಾಮದ ಸರ್ವೆ ನಂ.120ರಲ್ಲಿ ವಿಮಾನ ನಿಲ್ದಾಣಕ್ಕಾಗಿ ಜಮೀನನ್ನು ರೈತರಿಂದ ವಶಪಡಿಸಿಕೊಂಡು ಜಮೀನು ನೀಡಿದ ರೈತರಿಗೆ 60×40 ನಿವೇಶನ ನೀಡಿ ಒಂದು ಆಶ್ರಯ ಮನೆ ಕಟ್ಟಿಸಿಕೊಡಲು ಹಿಂದಿನ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಭರವಸೆ ನೀಡಿದ್ದರು ಎಂದರು.
ಇದೇ ಸರ್ವೆ ನಂ.ನಲ್ಲಿ 30 ಎಕರೆ 9 ಗುಂಟೆ ಜಮೀನು ನಿವೇಶನಕ್ಕಾಗಿ ಕರ್ನಾಟಕ ಗೃಹ ಮಂಡಳಿ ನಿವೇಶನವನ್ನಾಗಿ ರಚಿಸಿತ್ತು. ಆದರೆ ನಿವೇಶನ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದಾಗ ಘನ ನ್ಯಾಯಾಲಯವು ನಿವೇಶನವನ್ನು ನೀಡಲು ಆದೇಶಿಸಿದ್ದರೂ ಸಹ ನಿವೇಶನ ನೀಡದಿದ್ದಾಗ ಹಲವಾರು ಹೋರಾಟಗಳನ್ನು ಸಂತ್ರಸ್ತ ರೈತರು ನಡೆಸುತ್ತಿದ್ದಾರೆ ಎಂದರು.
ಈ ಬಗ್ಗೆ ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ವಿಮಾನ ನಿಲ್ದಾಣ ಉದ್ಘಾಟನೆಗೂ ಮುನ್ನ ನಿವೇಶನ ಕೊಡುವುದಾಗಿ ಭರವಸೆ ನೀಡಿದ್ದರು. ಇದರಂತೆ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲು ಕರ್ನಾಟಕ ಗೃಹ ಮಂಡಳಿಯವರು ಫೆ.20ರಂದು ಜಿಲ್ಲಾಧಿಕಾರಿಗಳಿಗೆ ಮರು ಹಸ್ತಾಂತರ ಮಾಡಿರುವುದು ತಿಳಿದು ಬಂದಿದೆ. ಆದ್ದರಿಂದ ಕೊಟ್ಟ ಭರವಸೆಯಂತೆ ವಿಮಾನ ನಿಲ್ದಾಣ ಉದ್ಘಾಟನೆಯಾಗುವುದರೊಳಗೆ ಸಂತ್ರಸ್ತರಿಗೆ ನಿವೇಶನ ನೀಡಿ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದ ಅವರು, ಒಂದು ವೇಳೆ ನಿವೇಶನ ಮತ್ತು ಆಶ್ರಯ ಮನೆ ನೀಡದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಗೋ.ರಮೇಶ್ಗೌಡ, ಟಿ.ರಾಮಪ್ಪ, ಕೃಷ್ಣಪ್ಪ, ನಂದಿನಿ, ನಾಗರತ್ನ, ಮಾಲಿನಿ ಇನ್ನಿತರರು ಉಪಸ್ಥಿತರಿದ್ದರು.
ಹಾರನಹಳ್ಳಿಗೆ ರೈಲ್ವೆ ಜಂಕ್ಷನ್ ಬೇಕು: ಫೆ.26ರಂದು ಪಂಜಿನ ಮೆರವಣಿಗೆ
ಹಾರನಹಳ್ಳಿಗೆ ರೈಲ್ವೆ ಜಂಕ್ಷನ್ ಬೇಕು ಎಂದು ಆಗ್ರಹಿಸಿ ಪ್ರಗತಿ ಹಾರನಹಳ್ಳಿ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಫೆ.26ರ ಸಂಜೆ 7 ಗಂಟೆಗೆ ಹಾರನಹಳ್ಳಿ ಚೌಕಿ ಮಠದಿಂದ ಬಸ್ ನಿಲ್ದಾಣದ ಗಾಂಧಿ ಪ್ರತಿಮೆಯವರೆಗೆ ಪಂಜಿನ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆಯನ್ನು ಮತ್ತು ಫೆ.27ರಂದು ರೈಲ್ವೆ ಯೋಜನೆಯಿಂದ ವಂಚಿತವಾಗಿರುವ ಹಾರನಹಳ್ಳಿಯಲ್ಲಿ ಕರಾಳ ದಿನ ಆಚರಿಸಲಾಗುತ್ತಿದೆ.
ಜಿಲ್ಲೆಗೆ ಪ್ರಥಮ ಬಾರಿಗೆ ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ಹೊಸ ಬಿಜಿ ರೈಲ್ವೆ ಮಾರ್ಗ ಆಗುತ್ತಿದ್ದು, ಈ ರೈಲ್ವೆ ಮಾರ್ಗವು ಅವೈಜ್ಞಾನಿಕ ಹಾಗೂ ರೈತ ವಿರೋಧಿ ಮತ್ತು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅತಿ ದೊಡ್ಡ ಗ್ರಾಮ ಮತ್ತು ತಾಲ್ಲೂಕು ಕೇಂದ್ರವಾಗುವ ಎಲ್ಲಾ ಲಕ್ಷಣ ಹೊಂದಿರುವ ಹಾರನಹಳ್ಳಿಯನ್ನು ಕಡೆಗಣಿಸಿ ಅನ್ಯಾಯ ಮಾಡಿರುವ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಹಾರನಹಳ್ಳಿಗೆ ನಷ್ಟ ಉಂಟಾಗಿರುವುದನ್ನು ವಿರೋಧಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post