ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡಿನ ಸಮಸ್ಯೆಗಳನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಮುಂಬರುವ ಚುನಾವಣೆಯ ಪ್ರಣಾಳಿಕೆಯಲ್ಲಿ ಸಮಸ್ಯೆಗಳಿಗೆ ಉತ್ತರವನ್ನು ಸೇರಿಸಲಾಗುತ್ತದೆ ಎಂದು ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಲೆನಾಡಿನ ಬಹುದೊಡ್ಡ ಸಮಸ್ಯೆ ತಲೆ ಎತ್ತಿದೆ ಸೊರಬ ತಾಲ್ಲೂಕಿನ ತಾಳಗುಪ್ಪ ಗ್ರಾಮದ ಸರ್ವೇ ನಂ. 20ರಲ್ಲಿ 6 ಕುಟುಂಬಗಳನ್ನು ಅರಣ್ಯಾಧಿಕಾರಿಗಳು ಒಕ್ಕಲೆಬ್ಬಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಲೆನಾಡಿನ ಸಮಸ್ಯೆಗಳು ಮಿತಿಮೀರಿವೆ. ಸಾಗುವಳಿ ರೈತ ಬದುಕು ಹದಗೆಟ್ಟಿದೆ. ಶರಾವತಿ ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ. ಸೊರಬ ಭಾಗದ ರೈತರು 30 ವರ್ಷಗಳಿಂದ ಕಟ್ಟಿ ಬೆಳೆಸಿದ್ದ ತೋಟಗಳು ಸಂಪೂರ್ಣ ನಾಶಗೊಂಡಿವೆ ಎಂದರು.
ಸಂತ್ರಸ್ತರ ಹಾಗೂ ಸಾಗುವಳಿ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಪ್ರಮಾಣ ಮಾಡಿದ ಬಿಜೆಪಿ ನಾಯಕರು ಈಗ ಎಲ್ಲಿದ್ದಾರ? ಕಳೆದ ಚುನಾವಣೆ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ವಚನ ನೀಡಿದ್ದರು. ಆದರೆ, ಆ ಮಾತುಗಳೆಲ್ಲಾ ಈಗ ಸುಳ್ಳಾಗಿವೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಲೆನಾಡು ಭಾಗದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಶರಾವತಿ ಸಂತ್ರಸ್ತರ, ಸಾಗುವಳಿದಾರರ ನೆಮ್ಮದಿ ಕಾಪಾಡುತ್ತೇವೆ. ಮುಖ್ಯವಾಗಿ ಈಗಾಗಲೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಗ್ಯಾರಂಟಿ ನೀಡಿದಂತೆ ಶರಾವತಿ ಸಂತ್ರಸ್ತರ ಸಮಸ್ಯೆಯನ್ನೂ ಬಗೆಹರಿಸುವ ಗ್ಯಾರಂಟಿಯನ್ನು ಪಕ್ಷ ನೀಡುತ್ತದೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಏನೆಲ್ಲಾ ಭರವಸೆ ನೀಡಿತ್ತು. ವಿಐಎಸ್ಎಲ್ ಕಾರ್ಖಾನೆಯನ್ನು ಮುಚ್ಚಲು ಬಿಡುವುದಿಲ್ಲ. ಸಂತ್ರಸ್ತರ ಪರವಾಗಿ ನಾವು ನಿಲ್ಲುತ್ತೇವೆ. ಭೂಮಿ ಹಕ್ಕು ಕೊಡುತ್ತೇವೆ ಎಂದೆಲ್ಲಾ ಭರವಸೆಗಳನ್ನು ನೀಡಿದ್ದರು. ಆದರೆ, ಏಕೆ ಕೊಟ್ಟಿಲ್ಲ. ನಮ್ಮ ಸಂಸದರು ಪ್ರಧಾನಿ ಮುಂದೆ ಮಾತನಾಡುವ ಹಕ್ಕನ್ನೇ ಕಸಿದುಕೊಂಡಿದ್ದಾರೆ. ಯಡಿಯೂರಪ್ಪನವರು ವಿಮಾನ ನಿಲ್ದಾಣಕ್ಕೆ ಹೋರಾಟ ಮಾಡಿದಂತೆ ಸಂತ್ರಸ್ತರ ಪರವಾಗಿ ಏಕೆ ಹೋರಾಟ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಸೊರಬ ಭಾಗದ ರೈತರ ಸಮಸ್ಯೆನ್ನು ಬಗೆಹರಿಸಬೇಕು. ಕೂಡಲೇ ಅವರ ತೋಟಗಳನ್ನು ಧ್ವಂಸ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ತನ್ನ ಹೋರಾಟವನ್ನು ತೀವ್ರಗೊಳಿಸುತ್ತದೆ ಎಂದರು.
ಕಾಂಗ್ರಸ್ ನ ಹೊಸ ಸಂಚಲನದಿಂದ ಬಿಜೆಪಿಯವರು ಹೆದರಿದ್ದಾರೆ. ಅವರು ಈಗ ತಮ್ಮ ಧಮ್, ತಾಕತ್ ಕಳೆದುಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಅಷ್ಟೇ ಅಲ್ಲ, ಮಲೆನಾಡು ಭಾಗದ ರೈತರ ಸಮಸ್ಯೆಯನ್ನು ಬಗೆಹರಿಸುವುದರ ಜೊತೆಗೆ ಇಡೀ ರಾಜ್ಯವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಕೆ.ಬಿ. ಪ್ರಸನ್ನಕುಮಾರ್, ಎನ್. ರಮೇಶ್, ಹೆಚ್.ಸಿ. ಯೋಗೀಶ್, ಜಿ.ಡಿ. ಮಂಜುನಾಥ್, ರಮೇಶ್ ಶಂಕರಘಟ್ಟ, ಕಲಗೋಡು ರತ್ನಾಕರ್, ಚಂದ್ರಭೂಪಾಲ್ ಮೊದಲಾದವರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















