ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ ಎಂದು ಪೊಲೀಸ್ ಇಲಾಖೆಯವರು ಬಂದೂಕುಗಳನ್ನು ಠಾಣೆಯಲ್ಲಿ ಇಡಬೇಕೆಂದು ಪರವಾನಗಿದಾರರಿಗೆ ಸೂಚಿಸುತ್ತಿರುವುದು ಸರಿಯಾದ ಕ್ರಮವಲ್ಲವೆಂದು ಜಿಲ್ಲಾ ಮಲೆನಾಡು ಭಾಗದ ಬಂದೂಕು ಪರವಾನಿಗೆದಾರ ರೈತರು ಹೇಳಿದ್ದಾರೆ.
ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಕೋಡ್ಲು ವೆಂಕಟೇಶ್, ಮಲೆನಾಡಿನ ಬಹುತೇಕ ಊರುಗಳು, ವಾಸದ ಮನೆಗಳು ಅದರಲ್ಲೂ ರೈತರ ಮನೆಗಳು ಚದರಿದಂತೆ ಇದ್ದು ಒಂಟಿ ಮನೆಗಳು ಹೆಚ್ಚು, ಆಹಾರ ಧಾನ್ಯಗಳು, ಅಡಿಕೆ, ಕಾಳುಮೆಣಸು, ಕೋಕೋ ಮುಂತಾದ ಬೆಳೆಗಳ ಕೊಯ್ದು ಮುಗಿದು ಹೆಚ್ಚಿನ ಬೆಲೆಗಾಗಿ ಮನೆಯಲ್ಲಿ ದಾಸ್ತಾನು ಇರುತ್ತದೆ. ಕಳ್ಳತನ, ದರೋಡೆ ಭಯದಿಂದಲೇ ಬದುಕು ಸಾಗಿಸುತ್ತೇವೆ. ಕೃಷಿ ಭೂಮಿಯಲ್ಲಿ ನಿರಂತರ ಪ್ರಾಣಿಗಳ ಕಾಟದಿಂದ ಹಗಲು ರಾತ್ರಿ ಎನ್ನದೆ ಕಾವಲು ಮಾಡುವುದು ನಿರಂತರ ಕಾಯಕ. ಹೀಗಿರುವಾಗ ನಮ್ಮ ಜೀವ, ಆಸ್ತಿ, ಬೆಳೆ ರಕ್ಷಣೆಗೆ ಅನಿವಾರ್ಯ ಆಸರೆಯಾಗಿರುವ ಬಂದೂಕುಗಳನ್ನು ಚುನಾವಣೆ ನೆಪದಲ್ಲಿ ಪೊಲೀಸರಿಗೆ ಒಪ್ಪಿಸಿ ಎಂದು ಆದೇಶಿಸುವುದು ನಮ್ಮ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ಜನವಿರೋಧಿ ನೀತಿ ಆಗುತ್ತದೆ ಎಂದಿದ್ದಾರೆ.

ರೈತರು ಚಳವಳಿ ಮಾಡುವಾಗ ಲಾಠಿ ಚಾರ್ಜ್, ಗೋಲಿಬಾರುಗಳು ಆದಾಗಲೂ ರೈತರು ಹಿಂಸಾತ್ಮಕವಾಗಿ ವರ್ತಿಸಿರುವುದಿಲ್ಲ. ಇಂತಹ ಸಂಯಮ ಹೊಂದಿದ ಸಮುದಾಯದ ಬಗ್ಗೆ ಪೂರ್ಣ ಮಾಹಿತಿ ಹೊಂದಿರುವ ಚುನಾವಣಾ ಆಯೋಗದ ನಡೆಯನ್ನು ನಾವು ಖಂಡಿಸುತ್ತೇವೆ. ನಮ್ಮ ಹಕ್ಕುಗಳಿಗೆ ಚ್ಯುತಿ ತರುತ್ತಿರುವ ಚುನಾವಣಾ ಆಯೋಗದ ಇಂತಹ ನಿರ್ಧಾರಗಳ ವಿರುದ್ಧ ಬರುವ ಚುನಾವಣೆಯಲ್ಲಿ ಜನತಂತ್ರದ ಅತ್ಯಂತ ಮಹತ್ವದ ಮತ ಚಲಾವಣೆಯನ್ನು ಬಹಿಷ್ಕರಿಸುವಂತಹ ಕಠಿಣ ತೀರ್ಮಾನಗಳಿಗೆ ಮುಂದಾಗುತ್ತೇವೆ. ಮತದಾರರ ಇಂತಹ ನಕಾರಾತ್ಮಕ ತೀರ್ಪುಗಳಿಗೆ ಚುನಾವಣಾ ಆಯೋಗವೇ ಹೊಣೆಗಾರ ಎಂದು ವಿವರಿಸಿದರು.
ಮುಖ್ಯವಾಗಿ, ಸ್ಥಳೀಯ ಪರಿಸ್ಥಿತಿಗಳನ್ನು ಅವಲೋಕಿಸಿ ಈ ಸಂಬಂಧ ತೀರ್ಮಾನ ಕೈಗೊಳ್ಳಲು ಆಯಾ ಜಿಲ್ಲಾ, ಸಬ್ ಡಿವಿಸನ್ ಮತ್ತು ತಾಲ್ಲೂಕಿನ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ವಿವೇಚನ ಅಧಿಕಾರಕ್ಕೆ ವಹಿಸುವುದು ಅಗತ್ಯ ಎಂದರು.
ವಕೀಲ ನಾಗೇಶ್ ಮಾತನಾಡಿ, ಚುನಾವಣೆಯಲ್ಲಿ ನಡೆಯುವ ಗಲಭೆಗಳಿಗೂ ರೈತರು ಬಂದೂಕು ಹೊಂದುವುದಕ್ಕೂ ಸಂಬಂಧವಿಲ್ಲ. ಗಲಭೆಕೋರನ್ನು, ಕ್ರಿಮಿನಲ್ ಗಳನ್ನು ಹದ್ದುಬಸ್ತಿನಲ್ಲಿಡಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ಅಂಗವಾಗಿ ರಾಜಕೀಯ ನಾಯಕರುಗಳಿಗೆ, ಅಭ್ಯರ್ಥಿಗಳಿಗೆ ಹೆಚ್ಚು ರೋಡ್ ಶೋಗಳನ್ನು-ರಾಲಿಗಳನ್ನು ನಡೆಸದಂತೆ ತಡೆಯುವುದು, ಹಣ-ಹೆಂಡದ ವ್ಯವಹಾರಗಳನ್ನು ತಡೆಯುವುದು ಚುನಾವಣಾ ಆಯೋಗದ ಪ್ರಾಶಸ್ತ್ಯದ ಕರ್ತವ್ಯ ಆಗಬೇಕು. ಚುನಾವಣಾ ವೇಳಾಪಟ್ಟಿ ಕಡಿಮೆ ಅವಧಿಯಲ್ಲಿ ಮುಗಿಯುವಂತಿರಬೇಕು. ಇಂತಹ ಹತ್ತು ಹಲವು ಮಹತ್ವದ ವಿಷಯಗಳನ್ನು ಬದಿಗೊತ್ತಿ ರೈತರಿಗೆ ಕಿರುಕುಳ ಕೊಡುವ ಚುನಾವಣಾ ಆಯೋಗದ ಕ್ರಮವನ್ನು ನಾವು ಖಂಡಿಸುತ್ತೇವೆ.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಹೊರಬೈಲು ರಾಮಕೃಷ್ಣ್ಣ, ಪಿ ಎಸ್ ರಾಜೇಂದ್ರ ಹಾಜರಿದ್ದರು.
ಮಾ.25ರಂದು ರಾಗಿಗುಡ್ಡ ಉಳಿಸಿ ಅಭಿಯಾನ
ನಗರದ ಏಕೈಕ ದಟ್ಟ ಹಸಿರಿನ ತಾಣವಾದ ರಾಗಿಗುಡ್ಡ ಉಳಿಸಲು ಆಗ್ರಹಿಸಿ ಮಾ.25ರಂದು ಬೆಳಿಗ್ಗೆ 9-30ಕ್ಕೆ ರಾಗಿಗುಡ್ಡದ ಉತ್ತರ ಭಾಗದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಕಾಲ್ನಡಿಗೆ ಹಾಗೂ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ರಾಗಿಗುಡ್ಡ ಉಳಿಸಿ ಅಭಿಯಾನದ ಸಂಚಾಲಕ ಕೆ.ವಿ. ವಸಂತಕುಮಾರ್ ಹೇಳಿದರು.
ಅವರು ಇಂದು ನವ್ಯಶ್ರೀ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರಕ್ಕೆ ರಾಗಿಗುಡ್ಡ ಒಂದು ಕಳಸಪ್ರಾಯದಂತೆ ಇದೆ. ನೀರಿನ ಸೆಲೆಯಾಗಿದೆ. ಹಸಿರಿನ ತಾಣವಾಗಿದೆ. ಧಾರ್ಮಿಕ ಪವಿತ್ರ ಕ್ಷೇತ್ರವೂ ಆಗಿದೆ. ಆದರೆ ಈಗ ಅದರ ನಾಶ ಆರಂಭವಾಗಿದೆ. ಶಿವಮೊಗ್ಗದ ಪರಿಸರಕ್ಕೆ ರಾಗಿಗುಡ್ಡ ನಾಶ ಘೋರ ಶಾಶ್ವತ ಅನ್ಯಾಯ ಮಾಡುತ್ತಿದೆ. ಇದನ್ನು ಉಳಿಸಲು ಪರಿಸರಾಸಕ್ತರು ಒಂದು ಅಭಿಯಾನವನ್ನೇ ಆರಂಭ ಮಾಡಿದ್ದೇವೆ. ಅಭಿಯಾನದ ಮುಂದುವರಿದ ಭಾಗವಾಗಿ ಈ ಜಾಥಾ ಹಮ್ಮಿಕೊಂಡಿದ್ದೇವೆ ಎಂದರು.
ರಾಗಿಗುಡ್ಡ 108 ಎಕರೆ ವಿಸ್ತೀರ್ಣ ಪ್ರದೇಶವಾಗಿದೆ. ಆದರೆ ಈಗಾಗಲೇ ವಿವಿಧ ಯೋಜನೆಗಳಿಗಾಗಿ ಸುಮಾರು 74 ಎಕರೆ ಜಾಗವನ್ನು ಪರಭಾರೆ ಮಾಡಲಾಗಿದೆ. ಇದರಲ್ಲಿ 5 ಎಕರೆ ಇಎಸ್ಐ ಆಸ್ಪತ್ರೆಗೆ ಬಳಸಿಕೊಂಡಿದ್ದು, 50 ಅಡಿಯವರೆಗೆ ಗುಡ್ಡ ಕಡಿಯಲಾಗಿದೆ. ಲಕ್ಷಾಂತರ ರೂ. ಮೌಲ್ಯದ ಫಲವತ್ತಾದ ಮಣ್ಣು, ಕಲ್ಲು ಲೂಟಿಯಾಗಿದೆ. ಉಳಿದ 69 ಎಕರೆ ಗುಡ್ಡವೂ ಸಹ ನೆಲಸಮವಾಗಲಿದೆ. ಒಟ್ಟಾರೆ ಇಡೀ ರಾಗಿಗುಡ್ಡವೇ ನಾಶವಾಗಲಿದೆ. ಹಾಗಾಗಿ ಈಗಲೇ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ವಿವಿಧ ಯೋಜನೆಗಳಿಗೆ ನೀಡಿರುವ ಜಾಗದ ಮಂಜೂರಾತಿ ಪತ್ರ ಕೂಡಲೇ ರದ್ದುಮಾಡಬೇಕು. ರಾಗಿಗುಡ್ಡ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಸಂರಕ್ಷಿತ ಅರಣ್ಯವಾಗಿ ಘೋಷಿಸಬೇಕು. ರಾಗಿಗುಡ್ಡವನ್ನು ಗುಡ್ಡದ ಕಾಡಾಗಿಯೇ ಉಳಿಸಬೇಕು ಎಂಬುದು ನಮ್ಮ ಆಗ್ರಹ ಎಂದರು.
ಈ ಬೃಹತ್ ಜಾಥಾಕ್ಕೆ ಈಗಾಗಲೇ ಸುಮಾರು 10ಸಾವಿರಕ್ಕೂ ಹೆಚ್ಚು ಪರಿಸರಾಸಕ್ತರು ಸಹಿ ಮಾಡಿದ್ದಾರೆ. ಶಿವಮೊಗ್ಗದ ಹಲವಾರು ಸಂಘ ಸಂಸ್ಥೆಗಳು ಯೋಗಕೇಂದ್ರಗಳು, ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘ ಮುಂತಾದ ಹಲವು ಸಂಸ್ಥೆಗಳು ಬೆಂಬಲ ನೀಡಿವೆ. ಸುಮಾರು 10ಸಾವಿರ ಜನರು ಇದನ್ನು ವಿರೋಧಿಸಿ ಸಹಿ ಹಾಕಿದ್ದಾರೆ. ಸಂಘಸಂಸ್ಥೆಗಳು ಬೆಂಬಲ ನೀಡಿರುವ ಮನವಿ ಪತ್ರವನ್ನು ಜಾಥಾದ ನಂತರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ ಎಂದರು.
ಜಾಥಾಕ್ಕೆ ಬರುವವರಿಗೆ ಸೂಚನೆ: ಜಾಥಾಕ್ಕೆ ಬರುವವರಿಗೆ ಅನುಕೂಲವಾಗುವಂತೆ ನೆಹರೂ ಸ್ಟೇಡಿಯಂನಿಂದ ಬೆಳಿಗ್ಗೆ 9ಗಂಟೆಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಒಂದುಪಕ್ಷ ರಾಗಿಗುಡ್ಡದಲ್ಲಿಯೇ ತಮ್ಮ ವಾಹನ ನಿಲ್ಲಿಸಿ ಜಾಥಾದಲ್ಲಿ ಭಾಗವಹಿಸುವವರಿಗೆ ಜಾಥಾದ ನಂತರ ವಾಪಾಸು ಹೋಗಲು ಸಹ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಜಾಥಾವು ಸುಮಾರು 4.5ಕಿಮೀ. ಉದ್ದದ ನಡಿಗೆಯಾಗಿದೆ. ಬಿಸಿಲೂ ಇರುತ್ತದೆ ಹಾಗಾಗಿ ತಲೆಗೆ ಕ್ಯಾಪ್ ಮತ್ತು ವಾಕಿಂಗ್ ಶೂ ಧರಿಸಬೇಕು. ಸೈಕಲ್ನಲ್ಲಿ ಕೂಡ ಭಾಗವಹಿಸಬಹುದು. ಅಕಸ್ಮಾತ್ ನಡೆಯಲು ಸಾಧ್ಯವಾಗದವರು ಬೆಳಿಗ್ಗೆ 10-30ಕ್ಕೆ ಉಷಾ ನರ್ಸಿಂಗ್ ಹೋಂ ಸರ್ಕಲ್ನಿಂದ ಜಾಥಾಕ್ಕೆ ಸೇರಿಕೊಳ್ಳಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಪ್ರಮುಖರಾದ ನಾಗೇಶ್ ನವ್ಯಶ್ರೀ, ಶ್ರೀಪತಿ, ಪರಿಸರ ನಾಗರಾಜ್, ಶೇಖರಗೌಳೇರ್, ಜೋಯ್ಸ್., ಚನ್ನವೀರ ಗಾಮನಕಟ್ಟೆ ಇದ್ದರು.
ಅತಿಥಿ ಉಪನ್ಯಾಸಕರಿಗೆ 7ನೇ ವೇತನ ಆಯೋಗ ಜಾರಿಗೆ ಆಗ್ರಹ
ಅತಿಥಿ ಉಪನ್ಯಾಸಕರಿಗೆ ಏಳನೇ ವೇತನ ಆಯೋಗದ ಶಿಫಾರಸನ್ನು ಜಾರಿಮಾಡಬೇಕು ಎಂದು ಆಗ್ರಹಿಸಿ ಅತಿಥಿ ಉಪನ್ಯಾಸಕರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 9461 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಕನಿಷ್ಠ ಗೌರವ ಧನಕ್ಕೆ ಯಾವ ರೀತಿಯ ಸೌಲಭ್ಯಗಳೂ ಇವರಿಗೆ ಇಲ್ಲ. ಹಲವು ವರ್ಷಗಳಿಂದ ಪ್ರತಿಭಟನೆ, ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ ಸರ್ಕಾರ ಸ್ಪಂದನೆ ನೀಡುತ್ತಿಲ್ಲ ಎಂದು ದೂರಿದರು.
ಸರ್ಕಾರ ಅತಿಥಿ ಉಪನ್ಯಾಸಕ ಎಂಬ ಆಧುನಿಕ ಜೀತ ಪದ್ಧತಿಯೊಳಗೆ ನಮ್ಮನ್ನು ಬಂಧಿಸಿದ್ದಾರೆ. ಗುಲಾಮಿ ಜೀತಪದ್ಧತಿ ಜೀವಂತವಾಗಿರುವದಕ್ಕೆ ನಾವೇ ಉದಾಹರಣೆಯಾಗಿದ್ದೇವೆ. ಇದು ಸಂವಿಧಾನ ವಿರೋಧಿಯೂ ಆಗಿದೆ. ಕಲ್ಯಾಣ ಸರ್ಕಾರದ ವಇರೋಧಿಯೂ ಆಗಿದೆ. ಕನಿಷ್ಠ ಮಾನವೀಯ ಸೌಲಭ್ಯಗಳೂ ಇಲ್ಲದೆ ಕರ್ತವ್ಯ ನಿರ್ವಹಿಸಬೇಕಾದ ದುಸ್ಥಿತಿ ನಮಗೆ ಬಂದಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕರ ಸೇವಾ ವಿಲೀನ ವಿಚಾರವನ್ನು ನಾಗರಿಕ ಸೇವಾ ನೇಮಕಾತಿ ನಿಯಮದಡಿ ಸಂಪುಟದಲ್ಲಿ ಮಂಡಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು ಏಳನೇ ವೇತನ ಆಯೋಗದ ಶಿಫಾರಸನ್ನು ಅನುಷ್ಠಾನ ಮಾಡಬೇಕು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ಕಾರ್ಯಭಾರ ಹೆಚ್ಚಿಸಬೇಕು. ಮೈಸೂರು ವಿವಿಯ ಕೆಸೆಟ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಅಲ್ಲಿಯವರೆಗೆ ನೂತನ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಡಾ ಸೋಮಶೇಖರ ಹೆಚ್.ಶಿವಮೊಗ್ಗಿ, ನಾಗರಾಜ್ ಮದ್ದೂರು, ಡಾ. ರವೀಂದ್ರ ಜೆ.ಸಿ., ಡಾ. ದಿವಾಕರ್, ಮಾನಸ ಮೈಸೂರು, ಹರ್ಷಿತ ಮಂಡ್ಯ, ವಿನಯ್ ಮೂಡಿಗೆರೆ, ರಾಘವೇಂದ್ರ, ಸೌಭಾಗ್ಯ ಸೇರಿದಂತೆ ಹಲವರಿದ್ದರು.
ನಂದಿತಾ ಅಸಹಜ ಸಾವಿನ ಕುರಿತು ಸಿಬಿಐ ತನಿಖೆಗೆ ಎನ್ಎಸ್ಯುಐ ಒತ್ತಾಯ
ತೀರ್ಥಹಳ್ಳಿಯ ಮುಗ್ಧ ಬಾಲಕಿಯ ನಂದಿತಾಳ ಅಸಹಜ ಸಾವಿನ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿ ಇಂದು ಎನ್ಎಸ್ಯುಐ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
2013ರಲ್ಲಿ ತೀರ್ಥಹಳ್ಳಿಯಲ್ಲಿ ಹಿಂದೂ ಸಮಾಜಕ್ಕೆ ಸೇರಿದ ವಿದ್ಯಾರ್ಥಿನಿ ಕುಮಾರಿ ನಂದಿತಾ ಅಸಹಜ ಸಾವಿಗೀಡಾಗಿದ್ದಳು. ವಿದ್ಯಾರ್ಥಿನಿಯ ಅಸಹಜ ಸಾವಿನ ಕುರಿತು ಅಂದಿನ ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ಸಿಒಡಿ ತನಿಖೆ ನಡೆಸಿತ್ತು. ಆದರೆ ಸಿಐಡಿ ವರದಿ ಬಗ್ಗೆ ಬಿಜೆಪಿ ನಾಯಕರು ಆಕ್ಷೇಪಣೆ ವ್ಯಕ್ತಪಡಿಸಿ, ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.
ಅಂದಿನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಇಂದಿನ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ μÁರವರು 2018ರ ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕುಮಾರಿ ನಂದಿತಾಳ ಮನೆಗೆ ಭೇಟಿ ನೀಡಿ,ಸಿಬಿಐ ತನಿಖೆ ನಡೆಸಿ ಮುಗ್ಧ ಬಾಲಕಿಯ ಸಾವಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಈಗಿನ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಹಾಗೂ ತಮ್ಮದೇ ಕೇಂದ್ರ ಬಿಜೆಪಿ ಸರ್ಕಾರ ಮೇಲ್ಕಂಡ ಮುಗ್ಧ ಬಾಲಕಿಯ ಅಸಹಜ ಸಾವಿನ ಕುರಿತು ಸಿಬಿಐ ತನಿಖೆ ನಡೆಸದೆ ಮುಗ್ಧ ಬಾಲಕಿಯ ಸಾವಿಗೆ ನ್ಯಾಯ ದೊರಕಿಸಲು ನಿರ್ಲಕಲ್ಷ್ಯತನ ತೋರಿರುತ್ತಾರೆ ಎಂದು ಆರೋಪಿಸಿದರು.
ನಂದಿತಾ ಸಾವಿನ ಕುರಿತು ಸಿಬಿಐ ತನಿಖೆಗೆ ಆದೇಶಿ ಬಾಲಕಿಯ ಸಾವಿಗೆ ನ್ಯಾಯಕೊಡಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ
ಈ ಸಂದರ್ಭದಲ್ಲಿ ಪ್ರಮುಖರಾದ ರವಿ ಕಾಟಿಕೆರೆ, ಚರಣ, ಹರ್ಷಿತ್, ವಿಜಯಕುಮಾರ್ ಎಸ್.ಎನ್., ಕುಮಾರ್, ಚಂದ್ರೋಜಿರಾವ್ ಆಕಾಶ್ ಬಸವರಾಜ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















