ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದ ಜನರ ಭಾವನೆಗಳೊಡನೆ ವಿವಿಧ ತಂತ್ರಗಳಿಂದ ಆಟವಾಡುತ್ತಿರುವ ಕಾಂಗ್ರೆಸ್ ಪಕ್ಷವು, ತಮ್ಮ ಹೊಸ ಕಾರ್ಯತಂತ್ರಗಳಿಂದ ರಾಜ್ಯದ ಕಾರ್ಯಾಂಗವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬಹಳ ಪ್ರಯತ್ನದಲ್ಲಿರುವುದು ಕಂಡುಬರುತ್ತಿದ್ದು, ಇದು ಅಪಾಯಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಇತ್ತೀಚಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತ ಚುಕ್ಕಾಣಿ ಹಿಡಿಯಲು ರಾಜ್ಯದ ಜನರು ತೀರ್ಪು ನೀಡಿದ್ದಾರೆ. ಯಾವುದೇ ಪಕ್ಷದ ಸರ್ಕಾರ ಆಡಳಿತ ನಡೆಸಬೇಕಾದರು ಸರ್ಕಾರದ ತೀರ್ಮಾನಗಳನ್ನು,ನೀತಿಗಳನ್ನು ಆಡಳಿತ ರೂಢ ಪಕ್ಷದ ಪ್ರಜಾಪ್ರತಿನಿಧಿಗಳು ತೆಗೆದುಕೊಳ್ಳಬೇಕಾದ ತೀರ್ಮಾನವಾಗಿರುತ್ತದೆ. ಇದೇ ಸಂವಿಧಾನದ ಆಶಯ ಹಾಗೂ ಇದರ ಉದ್ದೇಶ ಸರ್ಕಾರದ ತೀರ್ಮಾನಗಳು ಜನಹಿತವಾಗಿರಬೇಕು ಎಂಬುದಾಗಿದೆ ಎಂದಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷದ ಹೊಸ ವರಸೆ ಏನೆಂದರೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೂ ಅಲ್ಲದ, ಉಪಮುಖ್ಯಮಂತ್ರಿಯೂ ಅಲ್ಲದ, ಎಂಎಲ್ಎ ಅಥವಾ ಎಂಎಲ್ಸಿಯು ಅಲ್ಲದ, ರಾಜ್ಯದಲ್ಲಿ ಯಾವುದೇ ಚುನಾಯಿತ ಪ್ರತಿನಿಧಿಯೂ ಅಲ್ಲದ ರಣದೀಪ್ ಸಿಂಗ್ ಸುರ್ಜೆವಾಲರವರು ರಾಜ್ಯದ ಉನ್ನತ ಅಧಿಕಾರಿಗಳೊಡನೆ ಖಾಸಗಿ ಹೋಟೆಲ್ ಒಂದರಲ್ಲಿ ಸಭೆ ನಡೆಸಲು ಕಾರಣವೇನು? ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷವು ಪ್ರಜಾಪ್ರತಿನಿಧಿಗಳು ಅಧಿಕಾರವನ್ನು ನಡೆಸಲು ನಿಶಕ್ತರೆ? ರಾಜ್ಯ ಸರ್ಕಾರವು ತನ್ನ ಹೈಕಮಾಂಡಿಗೆ ಎಟಿಎಂ ತರ ನೆರವಾಗುವುದು ಎಂಬ ಚರ್ಚೆಗೆ ಇದು ಮುನ್ನುಡಿ ಅಲ್ಲವೇ? ಕಾಂಗ್ರೆಸ್ ಪಕ್ಷದಿಂದ ನೇಮಕವಾಗಿರುವ ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲರವರು ನಮ್ಮ ರಾಜ್ಯದ ಕಾರ್ಯಾಂಗವನ್ನು ತಮ್ಮ ಹಿಡಿತದಲ್ಲಿ ಅಥವಾ ಅಧೀನದಲ್ಲಿ ಇರಲು ತಂತ್ರ ರೂಪಿಸುತ್ತಿದ್ದಾರಾ? ಪ್ರಶ್ನಿಸಿದ್ದಾರೆ.
Also read: ಪಾದಚಾರಿಗಳ ಮಾರ್ಗಕ್ಕೆ ಹಿಡಿದಿರುವ ಗ್ರಹಣಕ್ಕೆ ಮೋಕ್ಷ ಎಂದು?
ದೇಶದಾದ್ಯಂತ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವು ನಮ್ಮ ರಾಜ್ಯದಲ್ಲಿ ಅಧಿಕಾರ ಸಾಧಿಸಲು, ತಂತ್ರ ರೂಪಿಸಿ ಅರೇ ಬೆಂದ ಗ್ಯಾರಂಟಿಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿ ರಾಜ್ಯದ ಜನರ ದಿಕ್ಕನ್ನು ತಪ್ಪಿಸಿ ಉಚಿತಗಳ ಭರವಸೆಯನ್ನು ನೀಡಿ ರಾಜ್ಯದಲ್ಲಿ ಅಧಿಕಾರ ಸಾಧಿಸಿತು. ಜಗಜ್ಯೋತಿ ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ ಇದರ ಅರ್ಥ ದುಡಿದು ಗಳಿಸಿ ತಿನ್ನಬೇಕು,ಸೂಕ್ಷ್ಮವಾಗಿ ಪುಕ್ಕಟೆಯಾಗಿ ತಿನ್ನಬಾರದೆಂದು ಸಂದೇಶ ನೀಡಿದರು. ಕಾಂಗ್ರೆಸ್ ಪಕ್ಷವು ರಾಜ್ಯ ವಿಧಾನಸಭಾ ಚುನಾವಣೆ ಗೆಲ್ಲಲು ಹಾಗೂ ಚುನಾವಣೆ ಗೋಸ್ಕರ ಹಿಂದೆಂದೂ ಇವರು ಅಧಿಕಾರವಧಿಯಲ್ಲಿದ್ದರೂ ಜನರ ಕಲ್ಯಾಣ ಹಾಗೂ ಕಾಳಜಿ ತೋರದ ಇವರುಗಳು ಜನರ ಭಾವನೆ, ಆತ್ಮಭಿಮಾನ ಹಾಗೂ ಆತ್ಮ ನಿರ್ಭರತೆ ಜೊತೆಗೆ ಆಟವಾಡುತ್ತಿರುವುದನ್ನು ಗಮನಿಸುತ್ತಾ ಇದ್ದೇವೆ ಎಂದಿದ್ದಾರೆ.
ದಿನಕ್ಕೊಂದು ತಿರುವು ದಿನಕ್ಕೊಂದು ಹೊಸ ನಿಯಮ ಮತ್ತು ನಿಬಂಧನೆಗಳನ್ನು ಗ್ಯಾರೆಂಟಿಗಳಲ್ಲಿ ನೋಡುತ್ತಿದ್ದೇವೆ. ರಾಜ್ಯದ ಜನರ ಭಾವನೆಗಳೊಡನೆ ವಿವಿಧ ತಂತ್ರಗಳಿಂದ ಆಟವಾಡುತ್ತಿರುವ ಕಾಂಗ್ರೆಸ್ ಪಕ್ಷವು, ತಮ್ಮ ಹೊಸ ಕಾರ್ಯತಂತ್ರಗಳಿಂದ ರಾಜ್ಯದ ಕಾರ್ಯಾಂಗವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬಹಳ ಪ್ರಯತ್ನದಲ್ಲಿರುವುದು ಕಂಡುಬರುತ್ತದೆ ಹಾಗೂ ಇದು ಬಹಳ ಅಪಾಯಕಾರಿ. ಇದೇ ಪರಿಸ್ಥಿತಿ ಮುಂದುವರೆದರೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂತಹದಾಗಿದೆ. ರಾಜ್ಯದ ಮತದಾರರು ಇಂತಹ ವ್ಯವಸ್ಥೆಯನ್ನು ಖಂಡಿಸಿ ಜಾಗೃತರಾಗಬೇಕು, ತಮಗೆ ಸಿಗುವ ಅಮೂಲ್ಯ ಅವಕಾಶವನ್ನು ಚುನಾವಣೆ ಸಮಯದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post