ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಮ್ಮ ದೇಶ ನಾಲ್ಕು ಧರ್ಮಗಳ ಹುಟ್ಟನ್ನು ಕಂಡಿದೆ. ಹಿಂದು, ಬೌದ್ದ, ಜೈನ ಹಾಗೂ ಸಿಖ್ ಧರ್ಮಗಳು ಹುಟ್ಟಿದ್ದು ನಮ್ಮ ದೇಶದಲ್ಲಿಯೇ. ವಿಶ್ವಕ್ಕೆ ಈ ನಾಲ್ಕೂ ಧರ್ಮಗಳು ವಿಶೇಷ ಸಂದೇಶ ನೀಡುತ್ತಿವೆ. ಜೈನ ಧರ್ಮ ನೀಡಿರುವ ಶಾಂತಿಯ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ Dr. G. Parameshwar ಅಭಿಪ್ರಾಯ ವ್ಯಕ್ತಪಡಿಸಿದರು.
ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ಚಾವುಂಡರಾಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಧರ್ಮದ ಕುರಿತ ಅಧ್ಯಯನ ನಮ್ಮಲ್ಲಿ ಕೇವಲ ಅಕಾಡಮಿಕ್ ನೆಲೆಯಲ್ಲಿ ನಡೆಯುತ್ತಿದೆಯೇ ಹೊರತು ಅದರ ಅಂತ:ಸತ್ವ ಹಿಡಿಯುವ ಕೆಲಸವಾಗುತ್ತಿಲ್ಲ, ಪ್ರೊ.ಕೆ.ಇ. ರಾಧಾಕೃಷ್ಣ ಅವರು ಇಂತಹ ಮಹತ್ವದ ಕೆಲಸವನ್ನು ಮಾಡಿದ್ದಾರೆ ಎಂದು ಅವರು ಮೆಚ್ಚಿಗೆ ಸೂಚಿಸಿದರು.

ಕನ್ನಡ ಸಾಹಿತ್ಯ ಆರಂಭವಾಗಿದ್ದೇ ಜೈನ ಬರಹಗಾರರಿಂದ ಎಂದು ಬಣ್ಣಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ ಮಹೇಶ ಜೋಶಿಯವರು, ಜೈನರ ಕಾವ್ಯದ ಶರಣರ ವಚನದ ದಾಸರ ಹಾಡಿನ ಈ ನಾಡು ಎಂಬ ಅಂಬಿಕಾತನಯದತ್ತರ ಕವಿವಾಣಿಯನ್ನು ಪ್ರಾಸಂಗಿಕವಾಗಿ ನೆನೆಪು ಮಾಡಿಕೊಂಡರು. ಕನ್ನಡ ಸಾರಸ್ವತ ಲೋಕಕ್ಕೆ ಜೈನರ ಕೊಡುಗೆ ಅಪಾರ. 10ನೆಯ ಶತಮಾನದಲ್ಲಿಯೇ ಕನ್ನಡ ಸಾಹಿತ್ಯ ಲೋಕವನ್ನು ಉತ್ತುಂಗಕ್ಕೆ ಏರಿಸಿದವರು ಇವರೆ. ಕನ್ನಡ ಸಾಹಿತ್ಯ ಪರಿಷತ್ತು ಜೈನರ ಕೊಡುಗೆಗಳನ್ನು ನಿತ್ಯವೂ ಸ್ಮರಿಸಿಕೊಳ್ಳಲಾಗುವುದು. ಪರಿಷತ್ತಿನ ಮುಂಭಾಗದಲ್ಲಿ ಇರುವ ಪಂಪ ಮಹಾಕವಿ ರಸ್ತೆಯಲ್ಲಿ ಪಂಪನ ಪುತ್ಥಳಿ ಇರಲಿಲ್ಲ. ಅದಕ್ಕೆ ಪರಿಷತ್ತು ಪಂಪನ ಪುತ್ಥಳಿಯನ್ನು ಸ್ಥಾಪಿಸಿ ಅವರ ಜೊತೆ ಮನುಷ್ಯ ಜಾತಿ ತಾನೊಂದೆ ವಲಂ ಎಂಬ ವಿಶ್ವ ಮಾನವ ಸಂದೇಶದ ಧ್ಯೇಯವಾಕ್ಯವನ್ನು ಗೌರವ ಪೂರ್ವಕವಾಗಿ ಪರಿಷತ್ತು ಬಳಸಿಕೊಳ್ಳಲಿದೆ, ಈ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಸ್ಪಷ್ಟ ಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಆಮೂಲಾಗ್ರ ಬದಲಾಗಿದೆ
ಕನ್ನಡ ಸಾಹಿತ್ಯ ಪರಿಷತ್ತನ್ನು ನಾನು ಹಿಂದಿನಿಂದಲೂ ಗಮನಿಸುತ್ತ ಬಂದಿದ್ದೇನೆ. ಹಿಂದೆ ಇದ್ದಂತೆ ಈಗ ಇಲ್ಲ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿವೆ. ಪರಿಷತ್ತಿನಲ್ಲಿ ಆಮೂಲಾಗ್ರ ಬದಲಾವಣೆ ಬಂದಿದೆ,ಕನ್ನಡ ನಾಡು ನುಡಿ, ಭಾಷೆ ಸಾಹಿತ್ಯ ಸಂಸ್ಕೃತಿಗಾಗಿ ಕೆಲಸ ಮಾಡುತ್ತ ಬಂದಿರುವ ಪರಿಷತ್ತು ಈಗ ನವ ನವೀನವಾಗಿ ಕಂಗೊಳಿಸುತ್ತಿದೆ. ನಮ್ಮ ಕೆಲಸ ಕಾರ್ಯದಲ್ಲಿಯೂ ಅರ್ಥಪೂರ್ಣತೆಯನ್ನು ತೋರಿಸುತ್ತಿರುವುದು ಗಮನಾರ್ಹವಾಗಿದೆ. ಪರಿಷತ್ತಿನ ಜವಾಬ್ದಾರಿ ವಹಿಸಿದ ನಾಡೋಜ ಡಾ. ಮಹೇಶ ಜೋಶಿ ಅವರ ಸೇವಾತತ್ಪರತೆ ಇಲ್ಲಿ ಎದ್ದು ಕಾಣುತ್ತದೆ. ಪರಿಷತ್ತಿನಲ್ಲಿ ಸಾಕಷ್ಟು ಕೆಲಸಗಳು ಆಗುತ್ತಿವೆ. ಕನ್ನಡವನ್ನು ಉಳಿಸಿ ಬೆಳಸುವುದಕ್ಕೆ ತನ್ನನ್ನು ತೋಡಗಿಸಿಕೊಂಡ ಪರಿಷತ್ತು ಹೋಸ ನಾವೀನ್ಯತೆಗಳನ್ನು ಹಾಗೂ ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿರುವುದು ಸ್ವಾಗತಾರ್ಹ.
ಡಾ. ಜಿ. ಪರಮೇಶ್ವರ, ಗೃಹ ಸಚಿವ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರು ಮಾತನಾಡಿ ಬೆಂಗಳೂರಿನಲ್ಲಿ ಇಂದು ಶೇ. 60ರಷ್ಟು ಜನರು ಕನ್ನಡ ಬಾರದವರಿದ್ದಾರೆ. ಇನ್ನೂ ಶೇ. 40ರಷ್ಟು ಜನರಿಗೆ ಕನ್ನಡ ಬಂದರೂ ಬೇರೆ ಭಾಷೆಯನ್ನು ಸೇರಿಸಿಯೇ ಕನ್ನಡವನ್ನು ಮಾತನಾಡುತ್ತಿದಾರೆ. ನಾವು ಕನ್ನಡ ನಾಡಿನಲ್ಲಿ ಭಾಷೆ ಸಂಸ್ಕೃತಿ, ಕಲೆ, ಸಾಹಿತ್ಯ ಬೆಳೆಸು ಕೆಲಸ ಮಾಡಬೇಕಿದೆ. ಸರಕಾರ ನನಗೆ ಕನ್ನಡ ನಾಡಿನ ನೆಲ ಮೂಲವನ್ನು ಉಳಿಸಿ ಬೆಳೆಸು ಜವಾಬ್ದಾರಿಯನ್ನು ನೀಡಿದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ಭರವಸೆಯನ್ನು ನೀಡುವ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಸರ್ಕಾರ ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡುವುದಾಗಿ ತಿಳಿಸಿದರು.

ಕರ್ನಾಟಕ ಜೈನ್ ಅಸೋಸಿಯೇಶನ್ ಮಾಜಿ ಅಧ್ಯಕ್ಷರಾದ ಎಸ್. ಜಿತೇಂದ್ರ ಕುಮಾರ, ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್. ಪಟೇಲ್ ಪಾಂಡು ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು.










Discussion about this post