ಕಲ್ಪ ಮೀಡಿಯಾ ಹೌಸ್ | ಮೈಸೂರು |
ಅರಣ್ಯದ ಅಂಚಿನ ಗ್ರಾಮದಲ್ಲಿರುವ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು, ಶಿಕ್ಷಕರು ಹೇಳಿಕೊಡುವ ಪಾಠವನ್ನು
ಶ್ರದ್ಧೆಯಿಂದ ಕಲಿಯಬೇಕು ಎಂದು ನುಗು ಅರಣ್ಯ ವಲಯ ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮಣ್ ಎಂ ಬಡಗಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸರಗೂರು ತಾಲೂಕಿನ ಬಡಗಲಪುರ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಸ್ಪಂದನ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಪಠ್ಯಪರಿಕರಣಗಳ ವಿತರಣೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವವನ್ನು ವಿವರಿಸಿದರು.
ಆಕಾಶದಿಂದ ಬಿದ್ದ ಪ್ರತಿ ಹನಿಯು ಹಲವಾರು ಜಾಗಗಳಲ್ಲಿ ಹರಿದು ಕೊನೆಗೆ ಸಮುದ್ರವನ್ನು ಸೇರುತ್ತದೆ. ಹಾಗೆಯೇ ಪ್ರತಿ ಊರಿನಲ್ಲಿ ಬೆಳೆದ ವಿದ್ಯಾರ್ಥಿಗಳು ಭಾರತದ ಸೇವೆ ಮಾಡಲು ಸಿದ್ಧರಾಗಬೇಕು. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡತೆ ಇರುವ ನೀವು ಶಾಲೆಯ ಪಾಠದೊಂದಿಗೆ ಪ್ರಕೃತಿಯ ಪಾಠವನ್ನು ಕಲಿಯುತ್ತಿರಿ. ಈ ಗ್ರಾಮಗಳಲ್ಲಿ ನೀವು ಕೇವಲ ಪಠ್ಯದ ಪಾಠವನ್ನಲ್ಲದೆ ಬದುಕಿನ ಪಾಠವನ್ನು ಕಲಿಯುತ್ತೀರಿ .ಇದು ನಿಮ್ಮ ಜೀವನದಲ್ಲಿ ಬಹುಮಹತ್ತರವಾದ ಬದಲಾವಣೆ ತರುತ್ತದೆ ಎಂದರು.
ಭವ್ಯ ಭಾರತವು ಈಗ ಹಿಂದುಳಿದ ದೇಶವಲ್ಲ. ಅದು ವಿಶ್ವದ ಅತ್ಯಂತ ಪ್ರಭಾವಿ ದೇಶವಾಗಿದೆ. ಪಪಂಚಕ್ಕೆ ಅತಿ ಹೆಚ್ಚು ಇಂಜಿನಿಯರ್ ಗಳನ್ನು, ವೈದರನ್ನು, ಶಿಕ್ಷಕರನ್ನು ಕೊಡುತ್ತಿರುವ ದೇಶ ನಮ್ಮದು, ಇನ್ನು ಹತ್ತು ಹದಿನೈದು ವರ್ಷಗಳಲ್ಲಿ ನೀವು ಸಹ ಶ್ರದ್ಧೆ ಇಂದ ಓದಿದರೆ ಅಂತಹ ಇಂಜಿನಿಯರ್ ಗಳಲ್ಲಿ, ವೈದ್ಯರಲ್ಲಿ ಒಬ್ಬರಾಗುತ್ತೀರಿ ಎಂದು ಮಕ್ಕಳಲ್ಲಿ ಓದಲು ಸ್ಫೂರ್ತಿ ನೀಡಿದರು.
ವಿದ್ಯಾಸ್ಪಂದನ ಅಧ್ಯಕ್ಷ ಪುನೀತ್ ಜಿ ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನ ಸಾಮಾಗ್ರಿ, ಊಟದ ತಟ್ಟೆ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾಡಂಚಿನ ಗ್ರಾಮದಲ್ಲಿರುವ ನೀವುಗಳೇ ಈ ಕಾಡಿನ ಮಾಲಿಕರು, ಈ ಕಾಡಿನ ರಕ್ಷಣೆ, ಅದರಲ್ಲಿನ ವನ್ಯಜೀವಿಗಳ ರಕ್ಷಣೆ ನಾಡಿನಲ್ಲಿರುವ ನಮ್ಮಂತ ಜನರಿಗಿಂತ ಕಾಡಿನ ಹತ್ತಿರದಲ್ಲಿರುವ ನೀವುಗಳು ನಮಗಿಂತ ಜವಾಬ್ದಾರರು. ವನ್ಯಜೀವಿಗಳನ್ನು ಪ್ರತಿನಿತ್ಯ ನೋಡುವ ನೀವು ಅದರ ಗುಣಲಕ್ಷಣ, ಆವಾಸಸ್ಥಾನ, ಅವುಗಳ ಆಹಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಇತ್ತೀಚೆಗೆ ವರ್ಷಗಳ ಹಿಂದೆ ತಮ್ಮ ಶಾಲೆಯ ಬಳಿ ಹುಲಿಯೊಂದು ದಾಳಿ ಮಾಡಿದ ವಿಷಯ ತಿಳಿದಿದೆ. ರಾತ್ರಿಯ ಹೊತ್ತು ತಮ್ಮ ಶಾಲೆಯ ಹತ್ತಿರ ಆನೆಗಳೂ ಬರುತ್ತವೆ ಎಂದು ಹೇಳಿದಿರಿ. ಅರಣ್ಯದೊಳಗೆ ನೀವಾಗಲಿ ನಿಮ್ಮ ಪೋಷಕರಾಗಲಿ ಹೋಗಬಾರದು ಹೋದಲ್ಲಿ ನೀವೆ ಅರಣ್ಯ ಇಲಾಖೆಯ ಗಮನಕ್ಕೆ ತರಬೇಕು. ಅರಣ್ಯದ ಅಂಚಿನಲ್ಲಿ ಯಾರಾದರು ಕಸ ಹಾಕಿದರೆ, ಕಸಕ್ಕೆ ಬೆಂಕಿ ಹಾಕಿದರೆ ನೀವೆ ಅವರಿಗೆ ಬುದ್ಧಿ ಹೇಳಬೇಕು ಅರಣ್ಯದ ಸುತ್ತ ಮುತ್ತದ ಪ್ರದೇಶದಲ್ಲಿ ಬೆಂಕಿಹಾಕಿದರೆ ಅರಣ್ಯ ಇಲಾಖೆ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಅರಣ್ಯ ಇಲಾಖೆ ಕೇವಲ ಅರಣ್ಯ ರಕ್ಷಿಸಲು ಮಾತ್ರ ಇಲ್ಲ. ಅರಣ್ಯದ ಪ್ರಾಣಿಗಳಿಂದ ನಾಡಿನ ಜನರನ್ನು ರಕ್ಷಿಸುತ್ತಾರೆ, ಅರಣ್ಯ ಇಲಾಖೆಗೆ ಸನಿಹದ ಗ್ರಾಮಗಳ ಸಹಕಾರ ಬಹಳ ಮುಖ್ಯ, ನೀವು ಮಕ್ಕಳು ಅರಣ್ಯ ಇಲಾಖೆಗೂ ನಿಮ್ಮ ಊರಿನ ಜನರಿಗೂ ಸಂಪರ್ಕ ಸೇತುಗಳಾಗ ಬೇಕು. ಹೊರಗಿನಿಂದ ಬಂದು ನಿಮ್ಮ ಬಳಿ ಅರಣ್ಯದ ಬಗ್ಗೆ ಮಾತನಾಡುತ್ತೇವೆ. ಆದರೆ ನಮಗಿಂತ ನಿಮಗೆ ಅದರ ಜ್ಞಾನವಿದೆ. ನೀವೆಲ್ಲರು ಹೆಚ್ಚು ಓದಿ ನಿಮ್ಮದೇ ಪ್ರದೇಶಕ್ಕೆ ಅರಣ್ಯದ ಅಧಿಕಾರಿಗಳಾಗಿ ಬಂದರೆ ನಿಮಗೆ ಇರುವ ಅನುಭವ ಅಧಿಕಾರ ಎಲ್ಲವೂ ಸೇರಿ ನೀವು ನಿಮ್ಮ ಅರಣ್ಯ ಹಾಗೂ ನಿಮ್ಮ ಊರಿಗೆ ಇನ್ನು ಹೆಚ್ಚು ಉಪಕಾರ ಮಾಡಬಹುದು. ಪೋಷಕರು ಅದರತ್ತ ಗಮನಹರಿಸಿ ಶಿಕ್ಷಕರೂ ಸಹ ಅದರತ್ತ ಆಲೋಚಿಸಿ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳು ಶಾಲೆಯಲ್ಲಿ ಶಿಸ್ತಿನಿಂದ ಇರಬೇಕು. ಮಕ್ಕಳು ಭಾರತ ಸೈನಿಕರನ್ನು, ಪೋಷಕರನ್ನು, ಶಾಲೆಯ ಶಿಕ್ಷಕರನ್ನು ತಮ್ಮ ಜೀವನದಲ್ಲಿ ಗೌರವಿಸಬೇಕು. ಮಕ್ಕಳು ತಮ್ಮ ಜೀವನದಲ್ಲೇ ಸ್ವಚ್ಛತೆಗೆ ಮಹತ್ವ ಕೊಡಬೇಕು ಸ್ವಚ್ಛ ಭಾರತಕ್ಕೆ ಮಕ್ಕಳು ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಪ್ರತಿ ದಿನ ಕನ್ನಡ ದಿನಪತ್ರಿಕೆ ಹಾಗೂ ಪಠ್ಯವನ್ನು ತಪ್ಪದೆ ಓದಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ರೇಷ್ಮೆ ಮಂಡಳಿಯ ಕೆ.ಆರ್. ಗಣೇಶ್, ಮುಖ್ಯೋಪಾಧ್ಯಾಯರಾದ ಶ್ರೀನಿಧಿ ಎ, ಶಿಕ್ಷಕರಾದ ಬೀರೇಶ್, ಸವಿತಾ ಬಿ.ಬಿ, ಆನೆ ಸಂಘಟನೆಯ ಸಂಚಾಲಕರಾದ ರಿತೇಶ್, ಸ್ವಯಂ ಸೇವಕರಾದ ಕೃಷ್ಣಮೂರ್ತಿ, ಅರಣ್ಯ ಇಲಾಖೆಯ ಬೋಗೇಸ್, ಹಸನ್, ಎಸ್.ಡಿ,ಎಂ.ಸಿ ಅಧ್ಯಕ್ಷರಾದ ಮಹೇಶ್, ದಿನೇಶ್, ಮಹದೇವಪ್ಪ, ಶಾಲೆಯ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post