ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆಶಾಢ ಮಾಸದ ಹಿನ್ನೆಲೆಯಲ್ಲಿ ಪ್ರಥಮ ಏಕಾದಶಿ ಅಂಗವಾಗಿ ಮಂತ್ರಾಲಯ ಶ್ರೀ ರಾಘವೇಂದ್ರ ತೀರ್ಥ ಶ್ರೀಪಾದಂಗಳವರ ಮಠದ ಪೀಠಾಧಿಪತಿ ಶ್ರೀ ಸುಬುದೇಂಧ್ರ ತೀರ್ಥ ಶ್ರೀಪಾದಂಗಳವರಿಂದ ತಪ್ತ ಮುದ್ರಾ ಧಾರಣೆ ನಡೆಯಿತು.
ಜಯನಗರ ಐದನೆಯ ಬಡಾವನೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮುದ್ರಾ ಧಾರಣೆ ನಡೆಯಿತು.
ಪ್ರಥಮ ಏಕಾದಶಿಯ ಅಂಗವಾಗಿ ಇಂದು ಮುಂಜಾನೆ ಶ್ರೀಗಳು, ಮೂಲರಾಮ ದೇವರ ವಿಶೇಷ ಪೂಜೆ ನೆರವೇರಿಸಿದರು. ಆನಂತರ ತಪ್ತಮುದ್ರಾ ಧಾರಣೆಯ ಪೂರ್ವ ವಿಧಿವಿಧಾನಗಳು ನಡೆದವು.
ಆನಂತರ ಭಕ್ತರಿಗೆ ಶ್ರೀಗಳು ತಪ್ತ ಮುದ್ರಾಧಾರಣೆ ನೆರವೇರಿಸಿದರು. ವಿವಿಧ ಕಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಅತ್ಯಂತ ಶಿಸ್ತುಬದ್ಧವಾಗಿ ಸರತಿ ಸಾಲಿನಲ್ಲಿ ನಿಂತು ಮುದ್ರಾಧಾರಣೆ ಮಾಡಿಸಿಕೊಂಡರು.
ಈ ಏಕಾದಶಿ ದಿನವನ್ನು ಪ್ರಥಮ ಏಕಾದಶಿ, ಶಯನಿ ಏಕಾದಶಿ ಎಂದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಏಕಾದಶಿ ವಿಶೇಷವೆಂದರೆ ಸಕಲ ಲೋಕ ಪರಿಪಾಲಕ ಶ್ರೀವಿಷ್ಣುವಿನ ಶಯನೋತ್ಸವವು ಆರಂಭವಾಗುತ್ತದೆ. ಇಂದಿನಿಂದ ಶ್ರೀಹರಿ (ಮಹಾವಿಷ್ಣು) ನಾಲ್ಕು ತಿಂಗಳು ಕಾಲ ಯೋಗನಿದ್ರೆಯಲ್ಲಿ ತೊಡಗುವುದರಿಂದ ಈ ದಿನವನ್ನು ಶಯನಿ ಏಕಾದಶಿ ಎನ್ನಲಾಗುತ್ತದೆ. ಹಾಗಾಗಿಯೇ ಈ ಪ್ರಥಮ ಏಕಾದಶಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















