ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಜೀವನದಲ್ಲಿ ಮೊದಲ ಗುರು ಅವರ ತಾಯಿಯಾಗಿರುತ್ತಾರೆ. ಹಾಗಾಗಿ ಮಹಿಳಾ ಸಮುದಾಯವು ಸಮಾಜದ ಮೊಟ್ಟ ಮೊದಲ ಮಾರ್ಗದರ್ಶಿ ಮತ್ತು ಗುರುವಾಗಿರುತ್ತಾರೆ. ಈ ವೈಶಿಷ್ಟತೆಯು ಮಹಿಳಾ ಸಮುದಾಯಕ್ಕಿರುವ ಅತ್ಯಂತ ಮಹತ್ವದ ಸ್ಥಾನವಾಗಿದೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಕಿರಣ್ ದೇಸಾಯಿ ಅಭಿಪ್ರಾಯಪಟ್ಟರು.
ರವೀಂದ್ರನಗರದ ಪ್ರೇರಣಾ ಮಹಿಳಾ ಸಂಘದ ವತಿಯಿಂದ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿ, ಸಮಾಜದಲ್ಲಿ ಎಲ್ಲಾ ಕಾಲಕ್ಕೂ ಅತ್ಯಂತ ಪೂಜನೀಯವಾದ ಸ್ಥಾನ ಗುರುವಿನದಾಗಿದ್ದು, ಅದು ಮಹಿಳೆಯ ಮೂಲಕ ಪ್ರಾರಂಭಗೊಳ್ಳುವುದು ಮತ್ತಷ್ಟು ಶ್ರೇಷ್ಠವಾದುದ್ದಾಗಿದೆ ಎಂದರು.
ಯಾವುದೇ ಬಗೆಯ ಕಲಿಕೆಯಾಗಲಿ ಅದು ಗುರುವಿನ ಮೂಲಕ ಪ್ರಾಪ್ತವಾದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಭಾರತೀಯ ಪರಂಪರೆಯು ಗುರುವಿಗೆ ಮಹತ್ವದ ಸ್ಥಾನವನ್ನು ನೀಡಿದ್ದು, ಗುರುಪೂರ್ಣಿಮೆಯ ಆಚರಣೆಯು ಅತ್ಯಂತ ಆದರ್ಶ ಮತ್ತು ಬದುಕಿಗೊಂದು ಗುರಿತೋರಿದ ಚೇತನಕ್ಕೆ ಗೌರವ ಸೂಚಿಸುವ ಆಚರಣೆಯಾಗಿದೆ ಎಂದು ಗುರು ವಂದನೆಯ ಹಿನ್ನೆಲೆಯನ್ನು ವಿಶ್ಲೇಷಿಸಿದರು.
Also read: ಕಾರಂತರನ್ನು ನೆನೆಯುವಂತೆ ಮಾಡುತ್ತದೆ ಪ.ರಾ. ಶಾಸ್ತ್ರಿ ಅವರ ಬರಹ: ಡಾ. ವೀರೇಂದ್ರ ಹೆಗ್ಗಡೆ
ಸಂಘದ ಅಧ್ಯಕ್ಷೆ ಗಾಯತ್ರಿ ರಾಮಮೂರ್ತಿ ಮಾತನಾಡಿ, ಆಧುನಿಕ ಸಮಾಜದಲ್ಲಿ ಮಹಿಳೆಯ ಪಾತ್ರ ಮತ್ತು ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕಿಯರು ಹಾಗೂ ಸಂಘದ ಸದಸ್ಯರುಗಳಾದ ಶಕುಂತಲಾ, ಮೀನಾ ನಾಗರಾಜ್, ಇಂದಿರಾ ಪ್ರಭಂಜನ್ ಅವರನ್ನು ಗೌರವಿಸಲಾಯಿತು.
ತೇಜಸ್ವಿನಿ ಸುರೇಶ್ ಸ್ವಾಗತಿಸಿ, ಚಂದ್ರಿಕಾ ನಿರೂಪಿಸಿ, ವಾಣಿಶ್ರೀ ತಂಡದವರು ಪ್ರಾರ್ಥಿಸಿದರು. ಮಾಲಿನಿ ರಘುನಾಥ್ ಅತಿಥಿಗಳನ್ನು ಪರಿಚಯಿಸಿದರು. ಪಾರ್ವತಿ ಉಮಾಶಂಕರ್ ಸರ್ವರನ್ನು ವಂದಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















