ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿರಿಯ ವಿದ್ಯಾರ್ಥಿಗಳೇ ವಿದ್ಯಾಸಂಸ್ಥೆಯ ನಿಜವಾದ ರಾಯಭಾರಿಗಳು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ
National Education Society ಅಧ್ಯಕ್ಷರಾದ ಜಿ.ಎಸ್. ನಾರಾಯಣರಾವ್ ಅಭಿಪ್ರಾಯಪಟ್ಟರು.
ಶನಿವಾರ ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ National Pharmacy College ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದುಕನ್ನ ರೂಪಿಸಿಕೊಳ್ಳುವಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ಯಾವುದೇ ವಿದ್ಯಾ ಸಂಸ್ಥೆ ಗಟ್ಟಿಗೊಳ್ಳಲು ಕಾಲೇಜಿನ ಬೋಧನಾ ಕ್ರಮದ ಜೊತೆಗೆ ಹಿರಿಯ ವಿದ್ಯಾರ್ಥಿಗಳ ಭಾಗವಹಿಸುವಿಕೆಯು ಅಷ್ಟೇ ಮುಖ್ಯ. ಇದರಿಂದ ಸ್ನೇಹ ಸಂಬಂಧಗಳು ಗಟ್ಟಿಗೊಳ್ಳಲಿದೆ.
Also read: 4860 ಕೋಟಿ ರೂ. ಬೆಳೆ ಪರಿಹಾರಕ್ಕಾಗಿ ಕೇಂದ್ರಕ್ಕೆ ಒತ್ತಾಯ: ಸಿಎಂ ಸಿದ್ದರಾಮಯ್ಯ
ಕಾಲೇಜಿನ ಅವಿನಾಭಾವ ಸಂದರ್ಭ ನೆನೆದಾಗ ನಮಗೆ ರೋಮಾಂಚನವಾಗುತ್ತದೆ. ಇನ್ನಷ್ಟು ರೋಮಾಂಚಿತವೆಂದರೆ ನಮ್ಮ ಬಾಲ್ಯದ ದಿನ. ಅಂತಹ ವಿಶೇಷ ಸಂದರ್ಭ ನೆನೆದು ಹಿರಿಯ ವಿದ್ಯಾರ್ಥಿಗಳು ಹೇಳುವ ಒಳ್ಳೆಯ ಮಾತುಗಳೇ ಸಂಸ್ಥೆಯ ಉನ್ನತಿಗೆ ನಿಜವಾದ ಪೂರಕ ಶಕ್ತಿ ಎಂದು ಹೇಳಿದರು.

ಕಲಿಯಲು ಅನೇಕ ವಿಚಾರಗಳಿವೆ, ಅಂತಹ ಹೊಸತನವನ್ನು ಕಲಿಯುವ ಸೌಜನ್ಯತೆ ನಮ್ಮದಾಗಬೇಕಿದೆ. ಇಲ್ಲವಾದಲ್ಲಿ ಅಹಂಕಾರ ನಮ್ಮ ಹೆಗಲ ಮೇಲೇರಿ ಕುಳಿತುಬಿಡುತ್ತದೆ. ಸ್ನೇಹವೆಂಬುದು ಅಮೂಲ್ಯ ಆಯ್ಕೆಯಾಗಿದ್ದು ಸಣ್ಣವರೊಂದಿಗೆ ಸ್ನೇಹ ಮಾಡಲು ಹಿಂಜರಿಯದಿರಿ ಅದರೇ ಸಣ್ಣತನ ಇರುವವರಲ್ಲಿ ಎಂದಿಗೂ ಸ್ನೇಹ ಮಾಡಿಕೊಳ್ಳಬೇಡಿ ಎಂದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಸಂಘದ ವಿಶೇಷವೆಂದರೆ ಅಲ್ಲಿ ವಯಸ್ಸಿನ ಅಂತರವಿರುವುದಿಲ್ಲ, ಸ್ನೇಹ ಸಂಬಂಧಗಳಿಗೆ ಹೆಚ್ಚಿನ ಆದ್ಯತೆಯಿರುತ್ತದೆ. ಹಿರಿಯ ವಿದ್ಯಾರ್ಥಿಗಳಿಗೆ ನಾಲ್ಕು ಗೊಡೆಯ ನಡುವಿನ ಅನುಭವವಿರುತ್ತದೆ, ಜೊತೆಯಲ್ಲಿ ಹೊರಜಗತ್ತಿನ ಅನುಭವವಿರುತ್ತದೆ. ಇಂತಹ ಅನುಭವಗಳಿಂದ ನಾವು ಓದಿದ ವಿದ್ಯಾಸಂಸ್ಥೆಗಳಲ್ಲಿ ಏನೆಲ್ಲಾ ಮಾರ್ಪಾಟುಗಳನ್ನು ಮಾಡಬಹುದು ಎಂದು ಆಲೋಚಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಕುವೆಂಪು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸದಸ್ಯರಾದ ಎಸ್.ಚಂದ್ರಶೇಖರ, ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಫಾರ್ಮಸಿ ನಿರ್ದೇಶಕರಾದ ಡಾ.ಜಗದೀಶ ಸಿಂಗ್, ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಎಸ್.ಎಂ.ಪ್ರಸನ್ನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
