ಕಲ್ಪ ಮೀಡಿಯಾ ಹೌಸ್ | ರಾಯಚೂರು |
ತಿಂಡಿ ಕೊಡುವುದು ತಡವಾಯಿತು ಎಂಬ ಸಣ್ಣ ಕಾರಣಕ್ಕೆ ಗ್ರಾಹಕನೊಬ್ಬ ಹೊಟೇಲ್ ಮಾಲೀಕನ ಮೇಲೆ ಕಾದ ಎಣ್ಣೆ ಎರಚಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ.
ಜಿಲ್ಲೆಯ ರಾಜೋಳ್ಳಿ ಗ್ರಾಮದಲ್ಲಿ ಇಂದು ಮುಂಜಾನೆ ಘಟನೆ ನಡೆದಿದೆ. ಭೀಮಾ ನಾಯ್ಕ್ ಎಂಬ ವ್ಯಕ್ತಿಯೇ ಎಣ್ಣೆ ಎರಚಿದ ದುಷ್ಟ ವ್ಯಕ್ತಿಯಾಗಿದ್ದು, ರಂಗಯ್ಯ ಶೆಟ್ಟಿ ಎಂಬಾತ ಗಾಯಗೊಂಡ ಹೊಟೇಲ್ ಮಾಲೀಕನಾಗಿದ್ದಾನೆ.
ತಿಂಡಿ ತಿನ್ನಲು ಹೊಟೇಲ್’ಗೆ ತೆರಳಿದ ಭೀಮಾ ನಾಯ್ಕ್, ಇಡ್ಲಿ ಕೇಳಿದ್ದಾನೆ. ಆದರೆ, ಇಡ್ಲಿ ಇಲ್ಲವೆಂದ ಮಾಲೀಕನಿಗೆ ಒಗ್ಗರಣೆ, ಮಿರ್ಚಿ ಕೊಡುವಂತೆ ಕೇಳಿದ್ದಾನೆ. ಆದರೆ, ತಿಂಡಿ ಸಿದ್ದಪಡಿಸುತ್ತಿದ್ದ ಕಾರಣ ಕೊಡುವುದು ತಡವಾಗಿದೆ.
ಇದರಿಂದ ಕೋಪಗೊಂಡ ಭೀಮಾನಾಯ್ಕ್, ಈ ಒಂದು ಯಕಶ್ಚಿತ್ ಕಾರಣಕ್ಕಾಗಿ ಉಪ್ಪಿಟ್ಟು ತಯಾರಿಸಲು ಇರಿಸಲಾಗಿದ್ದ ಕಾದ ಎಣ್ಣೆಯನ್ನು ಮಾಲೀಕನ ಮುಖದ ಮೇಲೆ ಎರಚಿ, ಅಲ್ಲಿಂದ ಪರಾರಿಯಾಗಿದ್ದಾನೆ.
ಕಾದ ಎಣ್ಣೆ ಮುಖಕ್ಕೆ ಬಿದ್ದ ತತಕ್ಷಣ ನೋವು ಹಾಗೂ ಉರಿಯಿಂದ ಕೂಗಿಕೊಂಡು ಒದ್ದಾಡಿದ ರಂಗಯ್ಯ ಶೆಟ್ಟಿ ಅವರನ್ನು ಮಾನ್ವಿ ಸರ್ಕಾರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















