ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಸರ್ಕಾರ ಪಾಪರ್ ಆಗಿದೆ. ರೈತರಿಗೆ ನೀಡಬೇಕಾದ ಹಾಲಿನ ಹಣದಲ್ಲಿ ಕಡಿತ ಮಾಡಿದ್ದಾರೆ. ರೈತರಿಗೆ ಹಾಲಿನ ಬಾಕಿ ನೀಡದಷ್ಟು ಆರ್ಥಿಕ ದುಸ್ಥಿತಿಗೆ ಸರ್ಕಾರ ತಲುಪಿದೆ. ಇದನ್ನು ಮರೆಮಾಚಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ K S Eshwarappa ವಾಗ್ಧಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ರೈತರಿಗೆ ನೀಡಬೇಕಾಗಿದ್ದ ಹಾಲಿನ ಪ್ರೋತ್ಸಾಹ ಧನ 716 ಕೋಟಿ ರೂ.ಗಳನ್ನು ಇನ್ನೂ ನೀಡಿಲ್ಲ. ಇದರಿಂದ ಬೇಸತ್ತ ರೈತರು ಹಾಲನ್ನು ಕೊಡುವುದನ್ನೇ ನಿಲ್ಲಿಸಿದ್ದಾರೆ. ಮೊದಲು ರಾಜ್ಯದ ರೈತರ ಸಮಸ್ಯೆ ಬಗೆಹರಿಸಲಿ. ಏಕ ಕಾಲದಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ಮತ್ತು ಗೋವುಗಳಿಗೂ ದ್ರೋಹ ಮಾಡುತ್ತಿದ್ದಾರೆ. ಇವರಿಗೆ ಗೋವಿನ ಶಾಪ ತಟ್ಟುತ್ತದೆ. ಲೋಕಸಭಾ ಚುನಾವಣೆಯವರೆಗೆ ಮಾತ್ರ ಇವರ ಆಡಳಿತ ನಡೆಯಲಿದ್ದು, ನಂತರ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಲಿದೆ ಎಂದು ವ್ಯಂಗ್ಯವಾಡಿದರು
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ನವರು ಹೊಸ ನಾಟಕ ಪ್ರಾರಂಭಿಸಿದ್ದು, ಲೋಕಾಸಭಾ ಚುನಾವಣೆಯ ಹಿನ್ನಲೆಯಲ್ಲಿ ಸರ್ಕಾರದ ದುಡ್ಡಿನಲ್ಲಿ ಪ್ರಚಾರ ಪಡೆಯಲು ಹೊರಟಿದ್ದಾರೆ. ಶಾಸಕರು, ಸಚಿವರನ್ನು ದೆಹಲಿಗೆ ಪಿಕ್ನಿಕ್ ಕರೆದುಕೊಂಡು ಹೊರಟಿರುವ ಇವರ ನಡೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
Also read: ಹೊಸ ತಂತ್ರಜ್ಞಾನಗಳನ್ನು ನಮ್ಮದಾಗಿಸಿಕೊಳ್ಳುವತ್ತ ಗಮನ ಹರಿಸಿ: ಡಾ. ಟಿ. ಅನಂತ ಪದ್ಮನಾಭ ಸಲಹೆ
ವಿತ್ತಸಚಿವೆ ನಿರ್ಮಲ ಸೀತಾರಾಮನ್ Nirmala Seetharaman ಅವರು ಅನುದಾನ ಹಂಚಿಕೆ ಬಗ್ಗೆ ನಿನ್ನೆ ಲೋಕಸಭೆಯಲ್ಲಿ ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ. ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ DCM D K Shivakumar ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ, CM Siddaramaiah ನಿರ್ಮಲ ಸೀತಾರಾಮನ್ನ ಅವರನ್ನು ಭೇಟಿಯಾದ ಸಂದರ್ಭದಲ್ಲಿ ರಾಜ್ಯಕ್ಕೆ ಕೇಂದ್ರ ನೀಡಬಹುದಾದ ಅನುದಾನದ ಬಗ್ಗೆ ವಿವರಿಸಿದ್ದಾರೆ. ಹಾಗೂ ವಿತ್ತಿಯ ಆಯೋಗದ ಗಮನಕ್ಕೆ ಸರ್ಕಾರ ತಂದಾಗ ಮಾತ್ರ ಕೊಡಲು ಸಾಧ್ಯ ಎಂಬುವುದನ್ನು ಕೂಡ ವಿವರಿಸಿದ್ದಾರೆ. ತೆರಿಗೆ ಹಣದಲ್ಲಿ ಅನ್ಯಾಯವಾಗುತ್ತಿದೆ ಎಂಬುದು ಕಾಂಗ್ರೆಸ್ನ ರಾಜಕೀಯ ಪ್ರೇರಿತ ನಾಟಕವಾಗಿದ್ದು, ಹಲವು ಬಾರಿ ವಿತ್ತಸಚಿವರಾದ ಮುಖ್ಯಮಂತ್ರಿಗಳಿಗೆ ಇದರ ಅರಿವಿಲ್ಲವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ತಮ್ಮ ಪಕ್ಷದ ದುಡ್ಡಿನಲ್ಲಿ ಹೋರಾಟ ಮಾಡಲಿ, ಆದರೆ ಎಲ್ಲಾ ಪತ್ರಿಕೆಗಳಿಗೆ ಮಹಾತ್ಮಗಾಂಧಿ ಚಿತ್ರ ಹಾಕಿ ಸರ್ಕಾರದ ದುಡ್ಡಿನಲ್ಲಿ ಎಲ್ಲಾ ಶಾಸಕರನ್ನು ದೆಹಲಿ ಪಿಕ್ನಿಕ್ಗೆ ಕರೆದುಕೊಂಡು ಹೋಗಿ ಊಟ, ತಿಂಡಿ ಖರ್ಚನ್ನು ಸರ್ಕಾರದಿಂದ ನೀಡಿ, ಜನರ ತೆರಿಗೆ ಹಣ ಹಾಳು ಮಾಡುತ್ತಿದ್ದಾರೆ. ಮೊದಲು ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹ ಧನ ೭೧೬ ಕೋಟಿ ರೂ. ಬಿಡುಗಡೆ ಮಾಡಿ, ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ. ಅಧಿಕೃತವಾಗಿ ಶ್ವೇತ ಪತ್ರ ಹೊರಡಿಸಿದರೆ ಕೇಂದ್ರ ಸರ್ಕಾರ ಆ ಬಗ್ಗೆ ಸರಿಯಾದ ಉತ್ತರ ನೀಡುತ್ತದೆ. ಆನಂತರ ಹೋರಾಟ ಮುಂದುವರೆಸಲಿ. ಇದೊಂದು ರೀತಿಯಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಜನರ ತೆರಿಗೆ ದುಡ್ಡನ್ನು ದುರುಪಯೋಗ ಮಾಡುತ್ತಿದ್ದಾರೆ. ಜನ ನಿಮ್ಮ ನಾಟಕವನ್ನು ಗಮನಿಸುತ್ತಿದ್ದಾರೆ ಎಂದರು.
ರೈತರ ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಕಾಂಗ್ರೆಸ್ ಶಾಸಕರು ದೆಹಲಿಗೆ ಹೋಗುತ್ತಿದ್ದಾರೆ. ಇದಕ್ಕಾಗಿ ಜಾಹಿರಾತು ನೀಡುತ್ತಿದ್ದಾರೆ. ಜಾಹೀರಾತಿನಲ್ಲಿ ಗಾಂಧೀಜಿಯವರ ಪೋಟೋ ಹಾಕಿ, ಗಾಂಧೀಜಿಯವರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಜೈಲಿಗೆ ಹೋದವರೆಲ್ಲ ಹೀಗೆ ಗಾಂಧೀಜಿಯವರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ದುರಾದೃಷ್ಟಕರ ಎಂದು ಕುಹಕವಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















