ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಹಾಭಾರತ ಮತ್ತು ಭಾಗವತದಲ್ಲಿ ಭಗವಾನ್ ಶ್ರೀ ಕೃಷ್ಣ ತೋರಿದ ಮಾರ್ಗದಲ್ಲಿ ನಮ್ಮ ಬದುಕನ್ನು ರೂಪಿಸಿಕೊಂಡರೆ ಸಾರ್ಥಕತೆ ಸಾಧ್ಯ ಎಂದು ಭಂಡಾರ ಕೇರಿ #BandarakeriMutt ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.
ಬೆಂಗಳೂರಿನ #Bengaluru ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಭಾಗವತಾಶ್ರಮ ಪ್ರತಿಷ್ಠಾನ, ಲೋಕ ಸಂಸ್ಕೃತಿ ಕಲಾವಿದ್ಯಾ ವಿಕಾಸ ಪ್ರತಿಷ್ಠಾನ ಸಂಯುಕ್ತವಾಗಿ ಹಮ್ಮಿಕೊಂಡಿರುವ ಶ್ರೀ ವಿದ್ಯಾಮಾನ್ಯ ತೀರ್ಥ ಗುರುಗಳ ಆರಾಧನಾ ಉತ್ಸವ ಮತ್ತು ವೇದವ್ಯಾಸ ಜಯಂತಿ ಸರಣಿ ಕಾರ್ಯಕ್ರಮದ ಮೂರನೇ ದಿನ ಆಯೋಜನೆಗೊಂಡಿರುವ ವಿಶೇಷ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.
ಧರ್ಮ ಮಾರ್ಗದಲ್ಲಿ ನಾವು ಸಾಗಿದಾಗ ದಿನೇ ದಿನೇ ಅಭಿವೃದ್ಧಿ ಸಾಧ್ಯವಿದೆ. ಶ್ರೀ ಕೃಷ್ಣನ ಅನನ್ಯ ಸೇವಕರಾದ ಪಾಂಡವರು ಹೇಗೆ ಬದುಕಿದ್ದರು ಎಂಬುದನ್ನು ಕೊಂಚ ಅವಲೋಕಿಸಿದರೆ ನಮ್ಮ ಬದುಕನ್ನು ಯಾವ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂಬುದು ನಿರ್ಧರಿತವಾಗುತ್ತದೆ ಎಂದರು.
ಅರ್ಜುನನನ್ನು ನೆನೆಸಿಕೊಂಡರೆ ಒಳ ಹೊರಗಿನ ಶತ್ರುಗಳು ನಾಶವಾಗುತ್ತಾರೆ. ನಕುಲ ಸಹದೇವರನ್ನು ಸ್ಮರಿಸಿಕೊಂಡರೆ ನೂರೆಂಟು ರೋಗಗಳು ದೂರವಾಗುತ್ತವೆ. ಧರ್ಮರಾಜ ಮತ್ತು ಭೀಮಾದಿಗಳನ್ನು ಸ್ಮರಿಸಿಕೊಂಡರೆ ಧರ್ಮದ ಉಳಿವು ಮತ್ತು ಸಾಮರ್ಥ್ಯದ ಸದ್ಬಳಕೆಯಾಗುತ್ತದೆ. ಹಾಗಾಗಿ ನಾವು ಮಹಾಭಾರತ ಏನು ಸಂದೇಶ ಕೊಟ್ಟಿದೆಯೋ ಆ ನಿಟ್ಟಿನಲ್ಲಿ ನಮ್ಮ ಚಟುವಟಿಕೆಗಳನ್ನು ರೂಪಿಸಿಕೊಳ್ಳುವುದು ಕಲಿಯುಗದಲ್ಲಿ ವಿಹಿತ ಎಂದರು.
Also read: ಜಾತಿ, ದುಡ್ಡಿನ ಮೇಲೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ: ಕಾನೂನು ಪ್ರಕೋಷ್ಠದ ಪ್ರವೀಣ್ ಆಕ್ರೋಶ
ಮಹಾಕಾವ್ಯದ ಮರು ಸೃಷ್ಟಿ ಸಲ್ಲದು
ಮಹಾಭಾರತ ಮತ್ತು ರಾಮಾಯಣಗಳನ್ನು ಸೃಜನಶೀಲತೆ ಎಂಬ ಹೆಸರಿನಲ್ಲಿ ಮರು ಸೃಷ್ಟಿ ಮಾಡುವ ಕಾರ್ಯ ಎಂದಿಗೂ ಸಲ್ಲದು ಎಂದು ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಈ ಎರಡೂ ಮಹಾ ಕಾವ್ಯಗಳನ್ನು ಆಧರಿಸಿ ತಮಗೆ ತೋಚಿದ ರೀತಿಯಲ್ಲಿ ಸಿನಿಮಾ ಮಾಡುವುದು, ನಾಟಕ ಆಡುವುದ, ಮರು ಸೃಷ್ಟಿ ಗ್ರಂಥಗಳನ್ನು ರಚಿಸುವುದು ಆಧುನಿಕರಿಗೆ ಒಂದು ಫ್ಯಾಶನ್ ಆಗಿಬಿಟ್ಟಿದೆ. ಈ ನಿಟ್ಟಿನಲ್ಲಿ ಸಾಹಿತಿಗಳು ಮತ್ತು ಕಲಾವಿದರು ಚಿಂತನ – ಮಂಥನ ನಡೆಸಿ ಮೂಲ ಮಹಾಭಾರತ ಮತ್ತು ರಾಮಾಯಣಗಳಿಗೆ ಯಾವುದೇ ರೀತಿಯ ಅಪಚಾರವಾಗದಂತೆ ಎಚ್ಚರ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ರಾಮಾಯಣ ಮತ್ತು ಮಹಾಭಾರತಗಳಿಗೆ ಉತ್ತಮವಾದ ವ್ಯಾಖ್ಯಾನವನ್ನು ನೀಡಿದ್ದು, ನಮ್ಮೆಲ್ಲರಿಗೆ ಮಹಾ ಕಾವ್ಯವನ್ನು ಅರ್ಥ ಮಾಡಿಕೊಳ್ಳಲು ಆಚಾರ್ಯ ಶ್ರೀ ಮಧ್ವರು ತಾತ್ಪರ್ಯ ನಿರ್ಣಯ ಗ್ರಂಥಗಳನ್ನು ರಚನೆ ಮಾಡಿದ್ದಾರೆ.
ಗೋ ಸಂರಕ್ಷಕ ಅರುಣ್- ಸ್ಮಿತಾ ದಂಪತಿಗೆ ಸನ್ಮಾನಭಂಡಾರಿಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿಯವರು ಇದೇ ಸಂದರ್ಭದಲ್ಲಿ ಗೋ ಸಂರಕ್ಷಣೆಯಲ್ಲಿ ಅದ್ವಿತೀಯ ಸಾಧನೆಗಳನ್ನು ಮಾಡುತ್ತಿರುವ ಡೆಂಕಣಿಕೋಟೆಯ ಫಲಾಮೃತ ಸಂಸ್ಥೆಯ ಮುಖ್ಯಸ್ಥರಾದ ಅರುಣ್ ಮತ್ತು ಸ್ಮಿತ ದಂಪತಿಗೆ ವಿಶೇಷವಾಗಿ ಸನ್ಮಾನಿಸಿದರು. ಗೋ ಸೇವೆ ಎಂದರೆ ಅದು ಸಾಕ್ಷಾತ್ ಶ್ರೀ ಕೃಷ್ಣನ ಸೇವೆ ಇಂತಹ ನಿಸ್ವಾರ್ಥ ಗೋ ಸೇವೆಯಲ್ಲಿ ಶ್ರಮಿಸುತ್ತಿರುವ ಪಟ್ಟು ಹೆಚ್ಚಾಗಿ ಎಂದು ಶ್ರೀಗಳು ಆಶೀರ್ವದಿಸಿದರು.
ಮಹಾಭಾರತವು ನಿತ್ಯ ನೂತನ ಕಥೆಯಾಗಿದೆ. ಪಾಂಡವರು ಮತ್ತು ಕೌರವರ ಗುಣಗಳು, ಚಿಂತನೆಗಳು, ಉದ್ದೇಶಗಳು, ರಾಜ್ಯಭಾರದ ಕ್ರಮಗಳು, ಗುರು ಹಿರಿಯರನ್ನು ಗೌರವಿಸುವ ವಿಧಾನಗಳು, ಮಾಡಿದ ಯುದ್ಧಗಳು, ಕೊಡುವ ಸಂದೇಶಗಳನ್ನು ಸೂಕ್ಷ್ಮವಾಗಿ ನಾವು ಅವಲೋಕಿಸಿಕೊಳ್ಳಬೇಕಿದೆ ಎಂದರು.
ಪಂಡಿತ ತಿರುಮಲ ಕುಲಕರ್ಣಿ ಅವರು ಮಾತನಾಡಿ ಪಾಂಡವರು ವನವಾಸಕ್ಕೆಂದು ಕಾಡಿಗೆ ತೆರಳಿದರೂ ಅವರಿಗೆ ಭಗವಂತನ ಸಖ್ಯವಿತ್ತು. ಋಷಿ ಮುನಿಗಳ ಅನುಗ್ರಹವಿತ್ತು. ಅವರಿಗೆ ಕಾಡೇ ಸ್ವರ್ಗವಾಯಿತು. ಪಾಂಡವರಿಗೆ ಫಲಗಳನ್ನು ನೀಡಲೆಂದೇ ಭಗವಂತ ಧರೆಗಿಳಿದು ಬಂದ. ಪಾಂಡವರ ಮಹತ್ವ ಮತ್ತು ಸಮಾಜಕ್ಕೆ ನೀಡಿದ ಸಂದೇಶ ನಮಗೆ ಅರ್ಥವಾಗುವುದು ಮಹಾಕಾವ್ಯದ ಕೊನೆಯ ಭಾಗದಲ್ಲಿ. ಅಂದರೆ ಸಾಧಕರಿಗೆ ಮಾನ್ಯತೆ ದೊರಕುವುದು ಸಾಧನೆಯ ಕೊನೆಯ ಘಟ್ಟದಲ್ಲಿ. ಕೌರವನ ಗುಣಗಳನ್ನು ಅನುಸರಿಸಿದವರಿಗೆ ಮೊದಲಿಗೆ ಸಾಕಷ್ಟು ಫಲಗಳು ದೊರಕಬಹುದು. ಆದರೆ ಅವುಗಳು ಯಾವುದೂ ಶಾಶ್ವತವಲ್ಲ . ಹಾಗಿರುವಾಗ ನಾವು ಕೃಷ್ಣ ಮತ್ತು ಪಾಂಡವರ ಸಂದೇಶಗಳನ್ನು ಅನುಸರಿಸಿ ಜೀವನ ಕ್ರಮ ರೂಪಿಸಿಕೊಳ್ಳುವುದು ಅಗತ್ಯ ಎಂದರು.
ಪಂಡಿತ ವೆಂಕಟೇಶ್ ಕುಲಕರ್ಣಿ ತಮ್ಮ ವಿಚಾರಗಳನ್ನು ಮಂಡಿಸಿ ಮಹಾಭಾರತ ಎಂದರೆ ಕೇವಲ ಶಾಸ್ತ್ರ ಗ್ರಂಥ ಮಾತ್ರವಲ್ಲ. ಭಗವಂತನನ್ನು ತಿಳಿಯಲು ಒಂದು ಉತ್ತಮ ಸಾಧನ ಎಂದರು.
ದ್ರೌಪದಿ ಸ್ವಯಂವರ, ಪಗಡೆಯಾಟ, ವನವಾಸ ಮತ್ತು ಅಜ್ಞಾತವಾಸಗಳನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದ ಅವರು, ಮಹಾಭಾರತ ಪ್ರತಿ ದಿನವೂ, ಪ್ರತಿ ಕ್ಷಣವೂ ನಮಗೆ ಸಂವಾದಿಯಾಗಿ ನಿಲ್ಲುತ್ತದೆ. ಅದರಲ್ಲಿನ ಧನಾತ್ಮಕ ಸಂಗತಿಗಳನ್ನು ನಾವೆಲ್ಲರೂ ಪಾಲನೆ ಮಾಡಿದಾಗ ಮಾತ್ರ ಇಹ ಮತ್ತು ಪರದಲ್ಲಿ ಮುಕ್ತಿ ದೊರಕಲು ಸಾಧ್ಯ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post