ಎಂ.ಜಿ. ರಸ್ತೆಯಲ್ಲಿ ‘ಸವೇರಾ’ ಹೆಸರಿನ ಬಾರ್ ಆ್ಯಂಡ್ ರೆಸ್ಟೋರೆಂಟ್ ಇತ್ತು. ಆಗಷ್ಟೆ ಬೆಂಗಳೂರಿನಲ್ಲಿ ಲೈವ್ ಬ್ಯಾಂಡ್ ಸದ್ದು ಮಾಡಲಾರಂಭಿಸಿತ್ತು. ಸವೇರಾದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಕಾಲಾ ಪತ್ಥರ್, ಸ್ಟೇಷನ್ ಶೇಖರ್ ಮುಂತಾದ ಏಳೆಂಟು ರೌಡಿಗಳು ಬಂದು ಕೂತಿದ್ದರು. ಇನ್ನೊಂದು ಟೇಬಲ್ನಲ್ಲಿ ಶಿವಾಜಿನಗರದ ರೌಡಿ ಚೋಟಾ ಪೈಲ್ವಾನ್ ಗ್ಯಾಂಗು. ಎರಡೂ ಗ್ಯಾಂಗ್ನವರು ತಮ್ಮ ಇಷ್ಟದ ಹಾಡಿನ ಸಾಲು ಬರೆದು ಚೀಟಿಯನ್ನು ಲೈವ್ ಬ್ಯಾಂಡ್ ಹುಡುಗಿಯರ ಕೈಗೆ ಕೊಡತೊಡಗಿದರು. ಯಾವ ಹಾಡು ಹಾಡಬೇಕು ಎಂಬ ವಿಚಾರದಲ್ಲಿ ಎರಡೂ ಗುಂಪಿನ ನಡುವೆ ಜಗಳ ಹೊತ್ತಿಕೊಂಡಿತು. ಆಗ, ತಮ್ಮ ವಾಹನದಲ್ಲಿ ಅವಿತಿರಿಸಿದ್ದ ಮಾರಕಾಸ್ತ್ರಗಳನ್ನು ಹಿಡಿದು ಚೋಟಾ ಪೈಲ್ವಾನ್ ಗುಂಪಿನ ಮೇಲೆ ಶೇಖರ್ ಗುಂಪು ಮುಗಿಬಿತ್ತು. ಹುಡುಗಿಯರೆಲ್ಲ ಚೆಲ್ಲಾಪಿಲ್ಲಿ. ತಪ್ಪಿಸಲು ಬಂದ ಬಾರ್ ಮಾಲೀಕ ಅಬ್ದುಲ್ಲಾ ಎಂಬುವರಿಗೂ ಮಚ್ಚಿನೇಟು ಬಿದ್ದು ಗಂಭೀರವಾಗಿ ಗಾಯಗೊಂಡರು. ಮಚ್ಚು, ಲಾಂಗ್ ಹಿಡಿದ ರೌಡಿಗಳು ನಿರ್ಭಯವಾಗಿ ಬಾರ್ನಿಂದ ಹೊರಬಂದು ವಾಹನ ಏರಿ ಹೋಗುತ್ತಿರುವ ಮತ್ತು ಗ್ಯಾಂಗ್ವಾರ್ ಸಿದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಕೈಕಟ್ಟಿಕೊಂಡು ನಿಂತಿದ್ದ ದೃಶ್ಯ ಪ್ರಮುಖ ಪತ್ರಿಕೆಯೊಂದರ ಮುಖಪುಟದಲ್ಲಿ ಪ್ರಕಟವಾಯಿತು. ಬೆಂಗಳೂರು ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಯಿತು.
ಆಗ ಪೊಲೀಸ್ ಆಯುಕ್ತರಾಗಿದ್ದವರು ಎಸ್.ಎನ್.ಎಸ್. ಮೂರ್ತಿ. ಮರುದಿನವೇ ಅವರು ತುರ್ತು ಸಭೆ ಕರೆದು, ಸ್ಟೇಷನ್ ಶೇಖರ್ ಸೆರೆಗಾಗಿ ವಿಶೇಷ ಸ್ಕ್ವಾಡ್ ರಚಿಸಿದರು. ಅದರಲ್ಲಿ ಹಿರಿಯ ಎಸ್ಐಗಳಾದ ಕಬ್ಬನ್ ಪಾರ್ಕ್ನ ಎನ್.ಡಿ. ಮುಲ್ಲಾ, ಶೇಷಾದ್ರಿಪುರಂನ ಲವಕುಮಾರ್ ಜತೆ ನನ್ನನ್ನೂ ಸೇರಿಸಿದರು. ‘ಆಪರೇಷನ್ ಟೈಗರ್’ ಬಳಿಕ ಇಲಾಖೆಯಲ್ಲಿ ಎಲ್ಲರೂ ನನ್ನನ್ನು ಗುರುತಿಸಲಾರಂಭಿಸಿದ್ದರು. 1986ರಲ್ಲಿ ನನಗೆ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಬಂದಾಗ, ಅಂದಿನ ಕಮಿಷನರ್ ಪಿ.ಜಿ. ಹರ್ಲಂಕರ್ ಚಹಾಕೂಟಕ್ಕೆ ಕರೆದು ಗೌರವಿಸಿದ್ದರು. ಆ ಸಂದರ್ಭದಲ್ಲಿ ಅವರು ನನ್ನನ್ನು ಪ್ರಶಂಸಿಸಿ, ಯಾವ ಸ್ಟೇಷನ್ನಲ್ಲಿ ಪೋಸ್ಟಿಂಗ್ ಬೇಕು ಹೇಳಿ ತಕ್ಷಣ ಹಾಕಿಸುತ್ತೇನೆ ಎಂದರು.
ಆಗಿನ್ನು ನಾನು ಟ್ರಾಫಿಕ್ ಎಸ್ಐ. ಸರ್, ಯಾವ ಠಾಣೆಯಲ್ಲಾದರೂ ಸರಿ. ಆದರೆ ಟ್ರಾಫಿಕ್ನಿಂದ ಕ್ರೈಂ ವಿಭಾಗಕ್ಕೆ ವರ್ಗಾಯಿಸಿ ಎಂದು ವಿನಂತಿಸಿದೆ. ಎಸ್ ಎಂದ ಅವರು, ನಿಮ್ಮನ್ನು ದಕ್ಷ ಎಸಿಪಿಯೊಬ್ಬರ ವ್ಯಾಪ್ತಿಯಲ್ಲಿ ವರ್ಗಾಯಿಸುತ್ತೇನೆ ಎಂದರು. ಕೆಲವೇ ದಿನಗಳಲ್ಲಿ ನಾನು, ಆಗ ಶೇಷಾದ್ರಿಪುರಂ ಉಪ ವಿಭಾಗದಲ್ಲಿ ಖಡಕ್ ಅಧಿಕಾರಿ ಎಂದು ಹೆಸರು ಪಡೆದಿದ್ದ ಜಿ.ಆರ್. ಪರಮೇಶ್ವರಪ್ಪ ವ್ಯಾಪ್ತಿಯಲ್ಲಿ ಬರುವ ವೈಯಾಲಿಕಾವಲ್ನಲ್ಲಿ ಲಾ ಆ್ಯಂಡ್ ಆರ್ಡರ್ ಎಸ್ಐ ಆಗಿ ನಿಯೋಜನೆಗೊಂಡೆ. ಆ ಠಾಣೆಯ ವ್ಯಾಪ್ತಿ ರೌಡಿಗಳ ಕೊಂಪೆಯಾಗಿತ್ತು. ಕೋದಂಡರಾಮಪುರದಲ್ಲಿ ನೆಲೆಸಿದ್ದ, ಬೆಂಗಳೂರು ಭೂಗತ ಜಗತ್ತು ಕಂಡ ಕುಖ್ಯಾತ ಡಾನ್ ಕೊತ್ವಾಲ್ ರಾಮಚಂದ್ರ ಸೇರಿದಂತೆ 68 ರೌಡಿಗಳು ಅಲ್ಲಿ ಬೀಡುಬಿಟ್ಟಿದ್ದರು. ಆದಾಗಲೇ ರೌಡಿಗಳಿಗೆ ಭೀತಿ ಮೂಡಿಸಲಾರಂಭಿಸಿದ್ದ ನನ್ನನ್ನು ಈ ಸ್ಕ್ವಾಡ್ಗೆ ಹೊಸ ಕಮಿಷನರ್ ಮೂರ್ತಿ ಸೇರಿಸಿದ್ದರು.
ಅವತ್ತು ಜೂನ್ 30 1989. ನಾನು ರೌಂಡ್ಸ್ ಮುಗಿಸಿ ರಾತ್ರಿ 11.30ರ ಸುಮಾರಿಗೆ ವೈಯಾಲಿಕಾವಲ್ ಠಾಣೆಯ ಹಿಂದುಗಡೆಯೇ ಇದ್ದ ಕ್ವಾರ್ಟ್ರಸ್ಗೆ ಹೋಗಿ ಮಲಗಿದ್ದೆ. ಮಧ್ಯರಾತ್ರಿಯ ಹೊತ್ತಿಗೆ ಸೆಂಟ್ರಿ ಬಂದು ಕಾಲಿಂಗ್ ಬೆಲ್ ಒತ್ತಿದ. ಸರ್ ತಕ್ಷಣ ಕಬ್ಬನ್ ಪಾರ್ಕ್ ಠಾಣೆಗೆ ಫೋನ್ ಮಾಡಬೇಕೆಂತೆ ಎಂದ. ನಾನು ಠಾಣೆಗೆ ಬಂದು ಫೋನ್ ಮಾಟಡಿದೆ. ‘ತಕ್ಷಣ ಹೊರಟು ಬನ್ನಿ. ಶೇಖರ್ ಬಗ್ಗೆ ಕ್ಲಿಯರ್ ಇನ್ಫಾರ್ಮೆಷನ್ ಇದೆ’ ಎಂದರು ಮುಲ್ಲಾ. ನಾನು ಹೊರಟೆ. ಆದಾಗಲೇ ಮುಲ್ಲಾ, ಲವಕುಮಾರ್ ಮತ್ತು ನಾಲ್ವರು ಕಾನ್ಸ್ಟೇಬಲ್ಗಳು ಸಜ್ಜಾಗಿ ನಿಂತಿದ್ದರು. ನಮ್ಮ ವಾಹನ ಬಾಣಸವಾಡಿ ಕಡೆ ಸಾಗಿತು. ಶೇಖರ್ನ ನೆಲೆ ಸ್ಪಷ್ಟವಾಗುತ್ತಿದ್ದಂತೆ ನಾವು ಅಲ್ಲಿಗೆ ಲಗ್ಗೆ ಹಾಕಿ ಪೋಸಿಸನ್ ತೆಗೆದುಕೊಂಡೆವು. ಮೆಲ್ಲಗೆ ಕಿಟಕಿಯ ಬಾಗಿಲು ಎಳೆದೆವು. ಆತ ಎಚ್ಚರಗೊಂಡು ಲೈಟ್ ಹಾಕಿದೆ. ನಾವು ಕಂಡ ತಕ್ಷಣ ಲೈಟ್ ಆಫ್ ಮಾಡಿಬಿಟ್ಟ. ಸರೆಂಡರ್ ಆಗುವಂತೆ ಕೂಗಿ ಹೇಳಿದವು. ಪ್ರತಿಕ್ರಿಯೆ ವ್ಯಕ್ತಪಡಿಸದ ಆತ. ಶೋಕೇಸ್ನ ಬಾಗಿಲು ಎಳೆದು ಏನೋ ವಸ್ತು ತೆಗೆದುಕೊಂಡಿರುವುದರ ಸುಳಿವು ಸಿಕ್ಕಿತು. ಆತನ ಬಳಿ ಪಿಸ್ತೂಲ್ ಮತ್ತು ಕಚ್ಚಾ ಬಾಂಬ್ಗಳ ಸಂಗ್ರಹ ಇರುವುದು ಗೊತ್ತಿತ್ತು. ನಾವು ಅಲರ್ಟ್ ಆದೆವು.
ಬಾಗಿಲಿನ ಬಲಭಾಗದಲ್ಲಿ ಲವಕುಮಾರ್, ಎಡ ಭಾಗದಲ್ಲಿ ನಾನು ನಿಂತಿದ್ದೆವು. ಬಾಗಿಲು ಒಡೆದು ಇನ್ನೇನು ಒಳ ಹೋಗಬೇಕು ಎನ್ನುವಷ್ಟರಲ್ಲಿ ಆತನೇ ಬಾಗಿಲು ತೆರೆದು ಎರಡು ಸುತ್ತು ಗುಂಡು ಹಾರಿಸಿಬಿಟ್ಟ. ಲವಕುಮಾರ್ ಬಲಗಡೆ ನೆಗೆದರು. ನಾನು ಪಕ್ಕದಲ್ಲೇ ಇದ್ದ ಶೌಚಾಲಯದ ಬಾಗಿಲನ್ನು ಕವರ್ ಮಾಡಿಕೊಂಡೆ. ಮನೆಯೊಳಗೆ ಕತ್ತಲ ಕೂಪ. ಆ ಕತ್ತಲೆಯ ನಡುವೆಯೇ ಆಕೃತಿಯೊಂದು ಬಾಗಿಲ ಬಳಿ ಇಣುಕುತ್ತಿರುವುದು ಗೋಚರಿಸಿತು. ಆತ ಮತ್ತೆ ನಮ್ಮತ್ತ ಫೈರ್ ಮಾಡುತ್ತಾನೆ ಅಥವಾ ಬಾಂಬ್ ಎಸೆಯುತ್ತಾನೆ ಎಂದೆನಿಸಿದ್ದರಿಂದ ಆತ್ಮರಕ್ಷಣೆಗಾಗಿ ಕತ್ತಲೆಯತ್ತ ಎರಡು ಗುಂಡು ಹಾರಿಸಿದೆ. ಮರುಕ್ಷಣವೇ ಸಣ್ಣ ಕಿರುಚಾಟದೊಂದಿಗೆ ಕುಸಿದು ಬಿದ್ದ ಸದ್ದು ಕೇಳಿಸಿತು. ಒಳಗೆ ಟಾರ್ಚ್ ಹಾಕಿ ನೋಡಿದರೆ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆಸ್ಪತ್ರೆಗೆ ಒಯ್ಯೋಣ ಎಂದರೆ ಉಸಿರು ನಿಂತು ಹೋಗಿತ್ತು. ಪಕ್ಕದಲ್ಲೇ ಚೀನಾ ನಿರ್ಮಿತ, ಆರು ಸುತ್ತು ಗುಂಡಿನ ಎರಡು 32 ಪಿಸ್ತೂಲ್ ಮತ್ತು ಕಚ್ಚಾ ಬಾಂಬ್ ಇದ್ದವು. ಅದು ಶೇಖರ್ನದ್ದೇ ಬಾಡಿ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕಾಲಾ ಪತ್ಥರ್ನನ್ನು ಆ ಸ್ಥಳಕ್ಕೆ ತಂದೆವು. ನಮ್ಮ ಗುಂಪಿನ ಮಧ್ಯೆ ಪರ್ಪರ್ಪರ್ರರ್ ಎಂಬ ಸದ್ದಾಯಿತು. ಇದೆನಪ್ಪ ಎಂದು ನೋಡಿದರೆ. ರಕ್ತಸಿಕ್ತ ಬಾಡಿ ನೋಡಿ ಕಾಲಾ ಪತ್ತರ್ ಪ್ಯಾಂಟಿನಲ್ಲೇ ಕಕ್ಕಸು ಮಾಡಿಕೊಂಡು ಬಿಟ್ಟಿದ್ದ! ನನ್ಯಾರು ಗೊತ್ತಾ ಕಾಲಾ ಪತ್ಥರ್ ಕಾಲಾಪತ್ಥರ್ ಎಂದು ಲಾಂಗ್ ಹಿಡಿದು ಅಬ್ಬರಿಸುತ್ತಿದ್ದವನ ಈ ದೈನೇಸಿ ಸ್ಥಿತಿ ಕಂಡು ಅಯ್ಯೋ ಎನಿಸಿತು. ಈ ಎನ್ಕೌಂಟರ್ ಟೆನ್ಷನ್ ನಡುವೆಯೇ ನಾವು, ಆತನನ್ನು ಟಾಯ್ಲೆಟ್ಗೆ ಕಳಿಸಿ ನೀರು ಕೊಟ್ಟು ಕ್ಲೀನ್ ಮಾಡಿಸಬೇಕಾಯಿತು! ಇಷ್ಟೆಲ್ಲ ಆಗುವಾಗ ಬೆಳಗಿನ ಜಾವ 2.45…
ಹೀಗೆ ನಟೋರಿಯಸ್ ಪಾತಕಿಯೊಬ್ಬನ ಅಂತ್ಯವಾಯಿತು. ರೌಡಿಗಳ ಉಪಟಳದಿಂದ ಬೇಸತ್ತಿದ್ದ ಬೆಂಗಳೂರಿನ ಜನ ನಮ್ಮ ಬೆನ್ನುತಟ್ಟಿ ಶಹಬ್ಬಾಸ್ ಎಂದರು. ಆದರೆ ನಕಲಿ ಎನ್ಕೌಂಟರ್ ಹೆಸರಿನಲ್ಲಿ ನಮ್ಮನ್ನು ಸಿಬಿಐ ತನಿಖೆಯ ಉರುಳಿಗೆ ಸಿಲುಕಿಸುವ ಸಂಚೊಂದು ಸೆಂಟ್ರಲ್ ಜೈಲಿನಲ್ಲಿ ರೂಪುಗೊಂಡಿತು.
When Patients Travel for Hope: How Bengaluru Is Becoming a Destination for Complex Transplant Care
Kalpa Media House | Bengaluru | Patients from different parts of India and abroad are increasingly travelling to Bengaluru in...
Read moreDetails




