ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಈ ರಾಜ್ಯ, ದೇಶದ ಭವಿಷ್ಯ ಎಂಜನೀಯರ್ ಗಳ ಕೈಯಲ್ಲಿದೆ. ನಾವು ವಿಶ್ವೇಶ್ವರಯ್ಯ ಅವರ ನಾಡಿನಲ್ಲಿ ಹುಟ್ಟಿದ್ದೇವೆ, ನಾವು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ #Basavaraja Bommai ಹೇಳಿದರು.
ಅವರು ಇಂದು ನಗರದ ಸೆಂಚ್ಯೂರಿ ಕ್ಲಬ್ ನಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜನೀಯರ್ಸ್ ಏರ್ಪಡಿಸಿದ್ದ ಎಂಜನೀಯರ್ಸ್ ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೀಪ ಎಂದರೆ ಜ್ಞಾನದ ಜ್ಯೋತಿ, ನಾವು ದೀಪವನ್ನು ಹಚ್ಚಲು ಪ್ರಯತ್ನಿಸಿದೆವು, ಅದು ಗಾಳಿಗೆ ಆರುತ್ತಿತ್ತು. ವಿಶ್ವೇಶ್ವರಯ್ಯ ಅವರ ಫೋಟೊ ಬಳಿ ತೆಗೆದುಕೊಂಡು ಹೋಗಿ ದೀಪ ಹಚ್ಚಿದಾಗ ದೀಪ ಹತ್ತಿತು, ಅದು ಜ್ಞಾನದ ದೀಪ, ಸ್ವಾಮಿ ವಿವೇಕಾನಂದರ ಪುಸ್ತಕ ಲೈಫ್ ಆಪ್ಟರ್ ಡೆತ್ ಪುಸ್ತಕದಲ್ಲಿ ಒಂದು ಮಾತು ಬರುತ್ತದೆ. ಸಾಧನೆಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕಿರುವವನು ಸಾಧಕ. ವಿಶ್ವೇಶ್ವರಯ್ಯ ಅವರು ಸಾವಿನ ನಂತರವೂ ಬದುಕಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಶ್ವೇಶ್ವರಯ್ಯ ಅವರ ಮನೆಗೆ ಹೋದಾಗ ಅವರ ಜೀವನ ಅತ್ಯಂತ ಸರಳವಾಗಿತ್ತು. ಅವರು ವಿಜನರಿ ಆಗಿದ್ದರು. ಎಂಜನೀಯರ್ ಆಗಿ ಅವರು ಅದ್ಬುತಗಳನ್ನು ಮಾಡಿದ್ದಾರೆ. ನಗರಗಳ ನಿರ್ಮಾಣ, ನಗರಗಳಿಗೆ ನೀರು ಸೌಕರ್ಯ, ಕನ್ನಂಬಾಡಿ ಕಟ್ಟಿದ್ದಾರೆ. ಬ್ಯಾಂಕ್ ಸ್ಥಾಪನೆ ಮಾಡಿದ್ದಾರೆ. ಕಾರ್ಖಾನೆಗಳನ್ನು ಸ್ಥಾಪನೆ ಮಾಡಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಯಾರಾದರೂ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರೆ ಅವರು ಎಂ. ವಿಶ್ವೇಶ್ವರಯ್ಯ ನವರು ಎಂದು ಹೇಳಿದರು.
Also read: ಜಾತಿ ಜನಗಣತಿ ಅನುಷ್ಠಾನಕ್ಕೆ ಬಿಜೆಪಿ ಬೆಂಬಲ ಹೇಳಿಕೆಯಿಂದ ಮನಸ್ಸು ನಿರಾಳವಾಯಿತು: ಸಿಎಂ
ವಿಶ್ವೇಶ್ವರಯ್ಯ ನವರು ಈಗಲೂ ನಮಗೆ ಒಂದಿಲ್ಲೊಂದು ರೀತಿಯಲ್ಲಿ ಸ್ಪೂರ್ತಿಯಾಗಿದ್ದಾರೆ. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಕನ್ನಂಬಾಡಿ ಆಣೆಕಟ್ಟೆಗೆ ಭೇಟಿ ನೀಡಿದಾಗ ಎರಡು ಗೇಟ್ ಗಳು ಸೋರುತ್ತಿದ್ದವು. ಅವುಗಳನ್ನು ಬದಲಾಯಿಸಲು ನಾನು ಅಧಿಕಾರಿಗಳಿಗೆ ಸೂಚಿಸಿದೆ. ಅವರು ಮಹಾರಾಜರು ಕಟ್ಟಿದ್ದು, ವಿಶ್ವೇಶ್ವರಯ್ಯ ಕಟ್ಟಿದ್ದು, ಇದನ್ನು ಬದಲಾಯಿಸುವುದು ಸುಲಭವಲ್ಲ ಎಂದು ಹೇಳಿದರು. ಆದರೆ, ನಾನು ಅದನ್ನು ಬದಲಾಯಿಸಲು ಹೇಳಿದೆ, ವಿಶ್ವೇಶ್ವರಯ್ಯ ಕಟ್ಟಿದ ಡ್ಯಾಮಿಗೆ ನಾನು ಗೇಟು ಹಾಕುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು.
ಜ್ಞಾನದ ಬಾಗಿಲು ಅವರಿಗೆ ಯಾವಾಗಲೂ ತೆರೆದಿದ್ದವು. ನಾವು ಎಂಜನೀಯರ್ ಆಗಿರುವುದಕ್ಕೆ ಹೆಮ್ಮೆ ಪಡಬೇಕು. ನಾವು ಈ ದೇಶ, ಈ ಸಮಾಜ ನಿರ್ಮಾಣ ಮಾಡಿದ್ದೇವೆ. ನಮ್ಮ ಹಿರಿಯರ ಸಾಧನೆಗಳನ್ನು ನಾವು ಸ್ಮರಿಸಬೇಕು. ನಮ್ಮ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಬೇಕು. ಹೊರ ದೇಶಗಳಲ್ಲಿ ವಿಶೇಷ ಕಟ್ಟಡಗಳನ್ನು ನಿರ್ಮಾಣ ಮಾಡಿದರೆ ಅದರ ಎಂಜನೀಯರ್ ನನ್ನು ಸ್ಮರಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಆ ರೀತಿಯ ವಾತಾವರಣ ಇಲ್ಲ. ಈ ವ್ಯವಸ್ಥೆ ಬದಲಾಗಬೇಕು. ಎಂಜನೀಯರ್ ಉತ್ಪಾದಕ, ಗ್ರಾಹಕನಲ್ಲ. ಎಂಜನೀಯರ್ ಗಳ ಕೊಡುಗೆ ಸಮಾಜದ ಎಲ್ಲ ರಂಗದಲ್ಲಿಯೂ ಇದೆ ಎಂದರು.
ನಾವು ಸ್ವಾತಂತ್ರ್ಯ ಪಡೆದಾಗ ನಮ್ಮ ದೇಶದ ಜನಸಂಖ್ಯೆ ಮೂವತ್ತು ಕೋಟಿ ಇತ್ತು, ಈಗ ನೂರಾ ಮೂವತ್ತು ಕೋಟಿ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಜನಸಂಖ್ಯೆಯನ್ನು ಉತ್ಪಾದಕರನ್ನಾಗಿ ಪರಿವರ್ತಿಸಿದರು, ನಮ್ಮ ತಂತ್ರಜ್ಞರನ್ನು ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಿದ್ದಾರೆ.
ಕೆಲವು ಸಾರಿ ಕಿರಿಯ ಎಂಜನೀಯರ್ ಒಳ್ಳೆಯ ಯೋಜನೆ ಜೊತೆಗೆ ಬರುತ್ತಾರೆ ಅವರನ್ನು ಪ್ರೋತ್ಸಾಹಿಸಿದರೆ ಒಳ್ಳೆಯ ಯೋಜನೆಗಳು ಬರುತ್ತವೆ ಎಂದರು.
ಯೋಜನಾ ರಹಿತ ಅಭಿವೃದ್ಧಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಲಿದೆ. ಯಾವುದೇ ನಗರ, ಹಳ್ಳಿ ಯೋಜನಾ ರಹಿತವಾಗಿ ನಿರ್ಮಾಣ ಹಾಗೂ ವಿಸ್ತರಣೆ ಮಾಡಿದರೆ ಸಮಸ್ಯೆ ಆಗುತ್ತದೆ. ಎಂಜನೀಯರ್ ಗಳು ಆಡಳಿತ ಮಾಡುವವರಿರಬೇಕು, ನಾವು ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿದ್ದೇವೆ. ನೀವು ಮಾಡುವ ಯೋಜನೆಗೆ ಯಾವುದೇ ವಿರೋಧ, ಆಕ್ಷೇಪ ಬರದಿದ್ದರೆ ಅದು, ಉತ್ತಮ ಯೋಜನೆ ಅಲ್ಲ, ಯಾವುದಾದರೂ ಆಕ್ಷೇಪ ಬಂದರೆ ಅದನ್ನು ಎದುರಿಸಿ ಯಶಸ್ವಿಯಾಗಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಸಿಸಿಎ ಅಧ್ಯಕ್ಷ ನಾಗೇಶ್ ಪುಟ್ಟಸ್ವಾಮಿ ಹಾಗೂ ಮತ್ತಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post