ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಬ್ಬಲಗೆರೆಯ ನವ್ಯಶ್ರೀ ಈಶ್ವರವನ ಶಿವರಾತ್ರಿ #Shivaratri ಉತ್ಸವದ ಫೆ.26 ರಂದು ವಿಶೇಷ ಪರಿಸರ ಕುಂಭ, ಪುಯಾಗರಾಜ್ ಮಹಾ ಕುಂಭಮೇಳದ ತ್ರಿವೇಣಿ ಸಂಗಮದ ಪವಿತ್ರ ತೀರ್ಥದಿಂದ ಶಿವನಿಗೆ, ಭಕ್ತಾದಿಗಳ ಸ್ವಹಸ್ತಗಳಿಂದ ಜಲಾಭಿಷೇಕ ಸೇರಿದಂತೆ ಪ್ರಕೃತಿ ಸಂರಕ್ಷಣೆ ಹಾಗೂ ಪರಿಸರ ಜಾಗೃತಿಯನ್ನು ಬೋಧಿಸುವ ಶಿವಸಂಕಲ್ಪ ಕೈಗೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಈಶ್ವರವನದ ಮುಖ್ಯಸ್ಥ ನವ್ಯಶ್ರೀ ನಾಗೇಶ್ ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಚಂದನ ವಾಹಿನಿಯ ಥಟ್ ಅಂತ ಹೇಳಿ ಖ್ಯಾತಿಯ ವೈದ್ಯ ಡಾ. ನಾ.ಸೋಮಶೇಖರ್ ರವರು ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಲಿದ್ದಾರೆ. ರೆಡ್ ಕ್ರಾಸ್ ಹಾಗೂ ರೋಟರಿ ಬ್ಲಡ್ ಬ್ಯಾಂಕ್ ನೇತೃತ್ವದಲ್ಲಿ ರಕ್ತದಾನ ಶಿಬಿರ ಮೂಲಕ ಶಿವರಾತ್ರಿ ಉತ್ಸವಕ್ಕೆ ಚಾಲನೆ ನಡೆಯಲಿದೆ. ಸಂಜೆ 6 ಗಂಟೆಗೆ ವೇದಿಕೆಯ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ ಅವರಿಂದ ಪ್ರಕೃತಿ ಮತ್ತು ಆಧ್ಯಾತ್ಮ ವಿಷಯವಾಗಿ ಉಪಾನ್ಯಾಸ ಆಯೋಜಿಸಲಾಗಿದೆ ಎಂದರು.
ಈ ಬಾರಿಯ ‘ನವ್ಯಶ್ರೀ ಈಶ್ವರವನ ಪ್ರಶಸ್ತಿಗಳಾದ ಪರಿಸರ ಪ್ರಶಸ್ತಿಯನ್ನು ಪರೋಪಕಾರಂ ತಂಡಕ್ಕೆ, ಸಾಮಾಜಿಕ ಪ್ರಶಸ್ತಿಯನ್ನು ಮುಷ್ಟಿ ಅಕ್ಕಿ ಯೋಜನೆ ತಂಡಕ್ಕೆ, ವೈಯಕ್ತಿಕ ಸಾಧನೆ ಪ್ರಶಸ್ತಿಯನ್ನು ಪ್ರೊ. ಬಿ.ಎಂ.ಕುಮಾರಸ್ವಾಮಿ ಇವರುಗಳಿಗೆ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
Also read: ಫೆ. 28 | ಸಾಮೂಹಿಕ ಓಂ ನಮಃ ಶಿವಾಯ ಜಪ ಯಜ್ಞ | ಶ್ರೀರಾಮಾನುಗ್ರಹ ಪ್ರಶಸ್ತಿ ಪ್ರದಾನ
ಭಜನಾ ಪರಿಷತ್ ವತಿಯಿಂದ ಭಜನಾ ಹಾಗೂ ಸಪ್ತಸ್ವರ ಟ್ರಸ್ಟ್ ವತಿಯಿಂದ ನಿರಂತರ ಸಂಗೀತ ಕಾರ್ಯಕ್ರಮ, ಬೆಳಗ್ಗೆ 9 ರಿಂದ ನಿರಂತರ ಪ್ರಸಾದ ವ್ಯವಸ್ಥೆ ಇತ್ಯಾದಿಗಳನ್ನು ಆಯೋಜಿಸಲಾಗಿದೆ ಎಂದ ಅವರು, ಪ್ರಕೃತಿಯ ಆರಾಧನೆಯು ಪ್ರತಿಯೊಬ್ಬರ ನಿತ್ಯಾರಾಧನೆಯಾಗಿ ನಿತ್ಯ ಜೀವನದಲ್ಲಿ ಆಚರಿಸಲ್ಪಡಬೇಕು ಎಂದೇ ಪ್ರತಿಪಾದಿಸುತ್ತ ಬಂದಿರುವ ‘ನವ್ಯಶ್ರೀ ಈಶ್ವರವನ ಟ್ರಸ್ಟ್’ ಮುಂದಿನ ಪೀಳಿಗೆಗೆ ಪರಿಸರ ಉಳಿಸುವ ನಿಟ್ಟಿನಲ್ಲಿ, ಪ್ರತಿವರ್ಷ ಹತ್ತಾರು ಶಾಲೆಗಳ ಸಹಸ್ರಕ್ಕೂ ಅಧಿಕ ಮಕ್ಕಳಿಗೆ ಈಶ್ವರ, ವನದಲ್ಲಿ ಪ್ರಕೃತಿ ಪಾಠದ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತ ಬಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿನಯ್, ಗೀತಾ ಪಾಟೀಲ್, ಗಣೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶ್ರೀ ರಕ್ತೇಶ್ವರಿ ಮತ್ತು ಮಳಲಿ ಗಿಡ್ಡಮ್ಮ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ
ವಿನೋಬನಗರದ 60 ಅಡಿ ರಸ್ತೆಯಲ್ಲಿ ಚಾನಲ್ ಸೇತುವೆ ಪಕ್ಕದ ಶ್ರೀ ರಕ್ತೇಶ್ವರಿ ಮತ್ತು ಮಳಲಿ ಗಿಡ್ಡಮ್ಮ ಸೇವಾ ಸಮಿತಿ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವನ್ನು ಫೆ. 26ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀ ರಕ್ತೇಶ್ವರಿ ಮತ್ತು ಮಳಲಿ ಗಿಡ್ಡಮ್ಮ ದೇವಸ್ಥಾನ ಸುಮಾರು 100 ವರ್ಷಗಳಿಂದ ಸಣ್ಣ ಗುಡಿಯಲ್ಲಿದ್ದು, 2006ರಲ್ಲಿ ದೇವಸ್ಥಾನ ಸ್ಥಾಪನೆ ಮಾಡಿ ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಫೆ. 26ರಂದು ಬೆಳಗ್ಗೆ 9.30ರಿಂದ ಪಂಚಾಮೃತ ಅಭಿಷೇಕ ಹಾಗೂ ತೈಲಾಭಿಷೇಕ ಹಾಗೂ ಶಿವಲಿಂಗಕ್ಕೆ ಭಕ್ತಾದಿಗಳಿಂದ ಕ್ಷೀರಾಭಿಷೇಕ ನಡೆಯಲಿದೆ. ಸಂಜೆ 7 ರಿಂದ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಭೀಮಣ್ಣ, ಉಪಾಧ್ಯಕ್ಷ ದಯಾನಂದ್, ಪ್ರಮುಖರಾದ ಧನಂಜಯ, ಶರತ್ ಚಂದ್ರ, ದೀಪಕ್ ಸಿಂಗ್, ಕಿರಣ್, ಮುರುಳಿ, ಸುದೀಶ್ ಇನ್ನಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















