ಕಲ್ಪ ಮೀಡಿಯಾ ಹೌಸ್ | ಹಾಸನ |
ಕಿತ್ತೂರು ರಾಣೀ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಪೂಜಾ ರಘುನಂದನ್ ಅಭಿನಯದ ಹಾಗೂ ರಂಗಭೀಷ್ಮ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ಏಕವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂದರೆ ನಾಳೆ ಸಂಜೆ ನವದೆಹಲಿಯ ಕರ್ನಾಟಕ ಸಂಘದಲ್ಲಿ ನಡೆಯಲಿದೆ.
ದೆಹಲಿಯ ಕರ್ನಾಟಕ ಸಂಘದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜನೆಗೊಂಡಿರುವ ಈ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ನಾಳಿನ ರಂಗಪ್ರಯೋಗದಲ್ಲಿ ಪೂಜಾ ರಘುನಂದನ್ ಅಭಿನಯದಲ್ಲಿ, ಪ್ರಣಮ್ಯ, ರಘುನಂದನ್ ಹಿನ್ನೆಲೆಯಲ್ಲಿ ಸಹಕರಿಸಲಿದ್ದಾರೆ. ಶಿವಮೊಗ್ಗದ ಪ್ರಸಿದ್ದ ಬೆಳಕು ತಜ್ಞ ಹರಿಗೆ ಗೋಪಾಲಸ್ವಾಮಿ ಬೆಳಕು ನಿರ್ವಹಣೆ ಮಾಡಲಿದ್ದಾರೆ. ಪತ್ರಕರ್ತ, ಸಾಹಿತಿ ಚಲಂ ಹಾಡ್ಲಹಳ್ಳಿ ಗೀತಸಾಹಿತ್ಯವಿದ್ದು, ಹಾಸನದ ಡಾ. ಸಿಂಧೂ ಆತ್ರೇಯ ಇದಕ್ಕೆ ಧ್ವನಿಯಾಗಿದ್ದಾರೆ. ಹಾಸನದ ರಂಗ ಹೃದಯ ತಂಡದ ಉಪಾಧ್ಯಕ್ಷ ಗುರುರಾಜ್ ಒಟ್ಟಾರೆ ನಿರ್ವಹಣೆ ಮಾಡಲಿದ್ದಾರೆ.
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರ ವೈಯಕ್ತಿಕ ಆಸ್ಥೆಯಿಂದ ಈ ರಂಗಪ್ರಯೋಗ ಆಯೋಜನೆಗೊಂಡಿದೆ. ಇವರ ಜೊತೆಗೆ ರಾಜ್ಯಸಭಾ ಸಂಸದರ ಆಪ್ತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದೆಹಲಿ ರಾಜ್ಯ ಘಟಕದ ನೂತನ ಅಧ್ಯಕ್ಷ ಅರುಣ್ ಅವರ ವಿಶೇಷ ಕಾಳಜಿಯಿಂದಾಗಿ ಈ ಪ್ರಯೋಗ ದೆಹಲಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ.ಇದರ ಜೊತೆಗೆ ದೆಹಲಿಯ ಹಲವಾರು ಗಣ್ಯರು ಈ ಪ್ರಯೋಗ ವೀಕ್ಷಿಸಲಿದ್ದಾರೆ.
ಹಾಸನದ ಹೆಮ್ಮೆ
ಹಾಸನದ ರಂಗಹೃದಯ ಸಂಸ್ಥೆಯ ಹೆಮ್ಮೆಯ ಕಾಣಿಕೆ ತಾಯಿಯಾಗುವುದೆಂದರೆ…ಏಕವ್ಯಕ್ತಿ ರಂಗಪ್ರಯೋಗ. ಇದು ನಾಡಿನಾದ್ಯಂತ ಹಲವಾರು ವೇದಿಕೆಗಳಲ್ಲಿ ಪ್ರಯೋಗಗೊಂಡು ಈಗ ರಾಷ್ಟರಾಜಧಾನಿ ನವದೆಹಲಿಯಲ್ಲಿ ಆಯೋಜನೆಗೊಂಡಿದೆ. ಇದು ತಂಡಕ್ಕೆ, ಅಭಿನಯಿಸುತ್ತಿರುವ ಪೂಜಾ ರಘುನಂದನ್ ಗೆ ಮಾತ್ರವಲ್ಲದೇ ಹಾಸನದ ಸಮಸ್ತ ಕಲಾವಿದರಿಗೆ, ಕಲಾರಸಿಕರಿಗೆ, ಜನತೆಗೆ ಹೆಮ್ಮೆ ತರುವ ವಿಚಾರವಾಗಿದೆ.
ಪೂಜಾ ರಘುನಂದನ್ ರಚನೆ, ಅಭಿನಯದ ತಾಯಿಯಾಗುವುದೆಂದರೆ…ಇದೊಂದು ಏಕವ್ಯಕ್ತಿ ರಂಗಪ್ರಯೋಗ ( 70 ನಿಮಿಷಗಳ ಕಾಲ ರಂಗದಲ್ಲಿ ಒಬ್ಬರೇ ಅಭಿನಯಿಸುವುದು )ವಷ್ಟೇ ಆಗಿರದೇ ಅನೇಕ ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಗಿದೆ. ಈ ವಿಚಾರ ರಂಗಕ್ಕೆ ಬಂದ ಕಥೆಯೇ ಕುತೂಹಲಕಾರಿಯಾಗಿದೆ.
ಸಾಮಾನ್ಯವಾಗಿ ಸಂಸಾರ ಗುಟ್ಟು, ವ್ಯಾಧಿ ರಟ್ಟು ಎಂಬಂತೆ ಜನರು ನಡೆದುಕೊಳ್ಳುತ್ತಾರೆ. ಆದರೆ, ಸಮಾಜದ ಬಗ್ಗೆ ಸದಾ ಚಿಂತಿಸುವ ಪೂಜಾ ರಘುನಂದನ್, ತಮ್ಮ ಬದುಕಿನಲ್ಲಿ ನಡೆದ ಸತ್ಯ ಘಟನೆ ಹಾಗೂ ತಮ್ಮ ತಾಯಿತನದ ವಿಚಾರವನ್ನು ಅವಧಿ- ಅಂತರ್ಜಾಲ ಸಾಹಿತ್ಯ ಪತ್ರಿಕೆಗೆ ಬರೆದು ಕಳುಹಿಸಿದ್ದರು. ಅದರಲ್ಲಿ ಪ್ರಕಟವಾದ ಇದನ್ನು ಓದಿದ ಅನೇಕರು ಪ್ರಶಂಸಿದ್ದರು. ಖ್ಯಾತ ರಂಗನಿರ್ದೇಶಕ, ಕಲಾವಿದ ಕೃಷ್ಣಮೂರ್ತಿ ಕವತ್ತಾರ್ ಇದನ್ನು ಓದಿ ಸ್ಫೂರ್ತಿಗೊಂಡು ಇದನ್ನು ಏಕವ್ಯಕ್ತಿ ಪ್ರಯೋಗವಾಗಿಸುವ ಬಗ್ಗೆ ತಿಳಿಸಿದರು. ಪೂಜಾ ತಡಮಾಡದೇ ಪತಿ ಹಾಗೂ ಕುಟುಂಬದವರ ಒಪ್ಪಿಗೆ ಪಡೆದು ರಂಗತಾಲೀಮು ಆರಂಭಿಸಿ, ರಂಗಕ್ಕೆ ತಂದೇಬಿಟ್ಟರು. ಇದೇ ತಾಯಿಯಾಗುವುದೆಂದರೆ…ಏಕವ್ಯಕ್ತಿ ರಂಗಪ್ರಯೋಗ. ಇದು ಯಶಸ್ವಿ ರಂಗಪ್ರಯೋಗವಾಗಿ ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ.
ಇವರ ಈ ಪ್ರಯೋಗ ಹಾಸನದ ಕಲಾಭವನ, ಸಾಣೆಹಳ್ಳಿ, ಬೆಂಗಳೂರಿನ ಕೆ ವಿ ಸುಬ್ಬಣ್ಣ ಆಪ್ತರಂಗ ಮಂದಿರ, ಮೈಸೂರು ರಂಗಾಯಣ, ನಟನ, ಬೆಳಗಾವಿಯ ರಂಗಸಂಪದ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಕುಂದಾಫುರ, ಶೀವಮೊಗ್ಗ ರಂಗಾಯಣ ಹೀಗೆ ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರಯೋಗಗೊಂಡಿತು. ಈ ಪ್ರಯೋಗವನ್ನು ವೀಕ್ಷಿಸಿದ ಸಾಣೆಹಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಖ್ಯಾತ ಚಿತ್ರನಟ, ರಂಗಕರ್ಮಿ ಮಂಡ್ಯ ರಮೇಶ್, ಚಿತ್ರಕರ್ಮಿ ವಿ. ಮನೋಹರ್, ವಿವಿಧ ಜನಪ್ರತಿನಿಧಿಗಳು ಇನ್ನೂ ಮೊದಲಾದ ಗಣ್ಯಾತಿಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ರಾಜ್ಯದ ಎಲ್ಲಾ ದಿನಪತ್ರಿಕೆಗಳಲ್ಲೂ ವಿಮರ್ಶೆ ಪ್ರಕಟವಾಗಿದ್ದು, ಪ್ರತಿ ವಿಮರ್ಶೆಯಲ್ಲೂ ಶ್ಲಾಘನೆ, ಮೆಚ್ಚುಗೆ ದೊರೆತಿದೆ.
ಕಾನೂನು ಪ್ರಕಾರ ದತ್ತು ಸ್ವೀಕಾರದ ಕುರಿತಾಗಿ ಅರಿವು ಮೂಡಿಸುವ ಹಾಗೂ ದತ್ತು ಪ್ರಕ್ರಿಯೆ ಕುರಿತ ಅನೇಕ ಮೌಲ್ಯಗಳನ್ನು ತೊಡೆದು ಹಾಕುವ ವಿಷಯ ಹೊಂದಿರುವ ಈ ರಂಗಪ್ರಯೋಗದಿಂದ ಸ್ಫೂರ್ತಿಗೊಂಡ ಮಗುವಿನ ಅಪೇಕ್ಷೆಯುಳ್ಳ ಅನೇಕರು ಕಾನೂನಾತ್ಮವಾಗಿ ದತ್ತು ಪ್ರಕ್ರಿಯೆಗೆ ಮುಂದಾಗಿರುವುದು ಪೂಜಾ ರಘುನಂದನ್ ಹಾಗೂ ರಂಗ ಹೃದಯ ಕಲಾ ತಂಡದ ಸಾಮಾಜಿಕ ಕಳಕಳಿಗೆ ಹಿಡಿದ ಕನ್ನಡಿಯಾಗಿದೆ. ಇಷ್ಟ ಇಲ್ಲದೆ ಈ ರಂಗ ಪ್ರಯೋಗದಿಂದ ಸಂಗ್ರಹವಾದ ಲಕ್ಷಾಂತರ ರೂಪಾಯಿ ಹಣವನ್ನು ಕ್ಯಾನ್ಸರ್ ರೋಗಿಗಳ ವೈದ್ಯಕೀಯ ವೆಚ್ಚಕ್ಕಾಗಿಯೂ ಹಾಗೂ ಶಾಲೆಯೊಂದರ ನವೀಕರಣಕ್ಕಾಗಿಯೂ ನೀಡಿರುವುದು ಗಮನಾರ್ಹ ಸಂಗತಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post