ಕಲ್ಪ ಮೀಡಿಯಾ ಹೌಸ್ | ಬಾಳೆಹೊನ್ನೂರು |
ವ್ಯಕ್ತಿಯೋರ್ವ ತಮ್ಮ ಕುಟುಂಬದ ನಾಲ್ವರ ಮೇಲೆ ಗುಂಡು ಹಾರಿಸಿ, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ನಡೆದಿದೆ.
ಕಡಬಗೆರೆಯ ಶಾಲೆಯೊಂದರಲ್ಲಿ ವಾಹನ ಚಾಲಕನಾಗಿದ್ದ ರತ್ನಾಕರ ಎಂಬಾತ ಈ ದುಷ್ಕೃತ್ಯ ಎಸಗಿದ್ದು, ಅತ್ತೆ ಜ್ಯೋತಿ (50), ಮಗಳು ಮೌಲ್ಯ (6) ಮತ್ತು ನಾದಿನಿ ಸಿಂಧು(24) ಗುಂಡು ತಗುಲಿ ಮೃತಪಟ್ಟವರು ಎನ್ನಲಾಗಿದೆ.
ನಾದಿನಿ ಸಿಂಧು ಗಂಡನ ಕಾಲಿಗೆ ಗುಂಡು ತಗಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರತ್ನಾಕರ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆ ಹಿನ್ನೆಲೆ
ಶಾಲೆಯಲ್ಲಿ ಮಗಳ ಸಹಪಾಠಿಗಳು ನಿಮ್ಮ ಅಮ್ಮ ಎಲ್ಲಿ ಎಂದು ಕೇಳುತ್ತಾರೆ ಎಂದು ಅಪ್ಪ ರತ್ನಾಕರ್ ಬಳಿ ಮೌಲ್ಯ ಅಳಲು ತೋಡಿಕೊಂಡಿದ್ದಳು. ಇದರಿಂದ ಮನನೊಂದಿದ್ದ ರತ್ನಾಕರ್ ಮಂಗಳವಾರ ರಾತ್ರಿ 10 ಗಂಟೆ ವೇಳೆಗೆ ಮನೆಗೆ ತೆರಳಿ, ಅತ್ತೆ, ನಾದಿನಿ ಹಾಗೂ ಮಗಳನ್ನು ನಾಡಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.
ಹತ್ಯೆಯ ಬಳಿಕ ರತ್ನಾಕರ್, ಸೆಲ್ಫಿ ವಿಡಿಯೋ ಮಾಡಿದ್ದು, ಅದರಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದಾನೆ. ನನ್ನ ಹೆಂಡತಿ ಮೋಸ ಮಾಡಿ ಹೋಗಿ 2 ವರ್ಷ ಆಯ್ತು. ಮಗಳನ್ನು ಬೇಡ ಅಂತ ಬಿಟ್ಟು ಹೋಗಿದ್ದಾಳೆ. ಈಗ ಶಾಲೆಯಲ್ಲಿ ನನ್ನ ಮಗಳಿಗೆ ಆಕೆಯ ಸ್ನೇಹಿತರು ನಿನ್ನ ಅಮ್ಮ ಎಲ್ಲಿ ಎಂದು ಕೇಳುತ್ತಾರೆ. ಮಗಳು ಆಲ್ಬಂನಿಂದ ಅಮ್ಮನ ಫೋಟೋ ತೆಗೆದುಕೊಂಡು ಹೋಗಿ ಈಕೆಯೇ ನನ್ನ ಅಮ್ಮ ಅಂತ ತೋರಿಸಿದ್ದಾಳೆ ಎಂದು ವಿಡಿಯೋದಲ್ಲಿ ನೋವನ್ನು ವ್ಯಕ್ತಪಡಿಸಿದ್ದಾನೆ.
ಈ ಸಂಬಂಧ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















