ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆರ್ಸಿಬಿ ವಿಜಯೋತ್ಸವ #RCB Victory Celebration ಸಂದರ್ಭದಲ್ಲಿ ನಡೆದ ದುರಂತಕ್ಕೆ ರಾಜ್ಯ ಸರ್ಕಾರದ ಬೇಜಾಬ್ದಾರಿತನವೇ ಕಾರಣವಾಗಿದ್ದು, ಕೂಡಲೇ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು ಮತ್ತು ದಕ್ಷ ಪೊಲೀಸ್ ಅಧಿಕಾರಿಗಳ ಅಮಾನತನ್ನು ಹಿಂಪಡೆಯಬೇಕೆಂದು ಆಗ್ರಹಿಸಿ, ನಗರದ ಗೋಪಿವೃತ್ತದಲ್ಲಿ ಇಂದು ನಗರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೂಡಾ ಮಾಜಿ ಅಧ್ಯಕ್ಷ ನಾಗರಾಜ್ ಇದೊಂದು ಕೊಲೆಗಡುಕ ಸರ್ಕಾರವಾಗಿದೆ. ಪ್ರಾಮಾಣಿಕ ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ರಾಜ್ಯ ಸರ್ಕಾರದ ನಿರ್ಲಜ್ಜತನದ ವರ್ತನೆಯಾಗಿದೆ . ಎರಡು ದಿನದ ಹಿಂದಷ್ಟೇ ಉಪಮುಖ್ಯಮಂತ್ರಿಗಳು ಪೊಲೀಸರನ್ನು ಹೊಗಳಿದ್ದರು. ಆದರೆ ನಿನ್ನೆ ಅವರ ಸರ್ಕಾರದ ತಪ್ಪುಗಳನ್ನು ಮುಚ್ಚಿಡಲು ಜನರ ಆಕ್ರೋಶವನ್ನು ತಣ್ಣಗಾಗಿಸಲು ನಿಷ್ಠಾವಂತ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ. ಸಂಜೆ 4 ಗಂಟೆಯ ಸಮಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ ಇಬ್ಬರು ಬಲಿಯಾಗಿದ್ದಾರೆ ಎಂಬ ಮಾಹಿತಿ ಸಿಎಂ ಮತ್ತು ಡಿಸಿಎಂಗೆ ಗೊತ್ತಿದ್ದರೂ ಸಹ ತಮ್ಮ ಪ್ರಚಾರದ ತೆವಲಿಗಾಗಿ ವಿಧಾನಸೌಧದ ಮುಂಭಾಗ ಕಾರ್ಯಕ್ರಮ ಮುಂದುವರಿಸಿದ್ದಾರೆ. ಇದು ಸರ್ಕಾರದ ಹೊಣೆಗೇಡಿತನದ ವರ್ತನೆಯಾಗಿದೆ. ರಾಜ್ಯದ ಜನತೆ ಇದನ್ನು ಕ್ಷಮಿಸುವುದಿಲ್ಲ. ಕೂಡಲೇ ಸಿಎಂ ಮತ್ತು ಡಿಸಿಎಂ ಹಾಗೂ ಗೃಹಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದೀನ್ದಯಾಳ್ ಮಾತನಾಡಿ, ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಒಂದು ಕಡೆ ಹಿಂದೂಗಳ ಮೇಲೆ ದೌರ್ಜನ್ಯ ಇನ್ನೊಂದೆಡೆ ಮುಸ್ಲೀಂರ ತುಷ್ಟೀಕರಣ, ಈಗ ಆರ್ಸಿಬಿ ಆಟಗಾರರ ಜೊತೆ ಪ್ರಚಾರದ ತೆವಲಿನಿಂದ ಅಮಾಯಕ ಕ್ರೀಡಾ ಅಭಿಮಾನಿಗಳ ಮಾರಣ ಹೋಮ ಇವೆಲ್ಲವೂ ಕೂಡ ರಾಜ್ಯ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.
ರಾಜ ಕಾರಣಕ್ಕೆ ಅನೇಕ ಜಾಗಗಳಿವೆ. ಅಮಾಯಕ ಮುಗ್ಧ ಜೀವಗಳ ಜೊತೆ ಚೆಲ್ಲಾಟ ಬೇಡ, ಮೃತಪಟ್ಟ ಪೋಷಕರ ಆಕ್ರಂದನಕ್ಕೆ ಮತ್ತು ದುಃಖಕ್ಕೆ ಸರ್ಕಾರವೇ ಕಾರಣವಾಗಿದೆ. ಕೂಡಲೇ ಅಧಿಕಾರ ಬಿಟ್ಟು ತೊಲಗಿ. ಕಾಂಗ್ರೆಸ್ ಸರ್ಕಾರದಿಂದ ಈ ರಾಜ್ಯದಲ್ಲಿ ಸಾರ್ವಜನಿಕರ ಜೀವರಕ್ಷಣೆ ಸಾಧ್ಯವಿಲ್ಲ. ದಕ್ಷ, ಪ್ರಾಮಾಣಿಕ ಅಧಿಕಾರಿಗಳ ಅಮಾನತ್ತನ್ನು ಕೂಡಲೇ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಪ್ರಮುಖರಾದ ಶಿವಾನಂದ್, ಪ್ರದೀಪ್ ಹೊನ್ನಪ್ಪ, ಮಂಜುನಾಥ್, ಜಗನ್ನಾಥ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post