ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ : ಡಾ.ಮೈತ್ರೇಯಿ ಆದಿತ್ಯಪ್ರಸಾದ್ |
ಸಮಾಜದ ಬೆಳವಣಿಗೆಯಲ್ಲಿ ಸಮಾಜದಲ್ಲಿನ ಎಲ್ಲರ ಪಾತ್ರವು ಮುಖ್ಯ. ಬದಲಾಗುತ್ತಿರುವ ಹಿಂದಿನ ಕಾಲಘಟ್ಟದಲ್ಲಿ ಆ ಬದಲಾವಣೆಗೆ ಹೊಂದಿಕೊಂಡು ಹೋಗುವುದು ಸಹ ಬಹು ಮುಖ್ಯ. ಇದರಲ್ಲಿ ಹಿರಿಯರ ಪಾತ್ರ ಎಷ್ಟಿದೆಯೋ ಕಿರಿಯರ ಪಾತ್ರವೂ ಸಹ ಅಷ್ಟೇ ಪ್ರಮುಖವಾಗಿದೆ. ಎಲ್ಲರೂ ಸೇರಿದಾಗ ಮಾತ್ರ ಸಮಷ್ಟಿಯ ನಿರ್ಮಾಣ ಸಾಧ್ಯ. ವ್ಯಕ್ತಿ ಶಕ್ತಿಯಾಗಲು ಈ ಸಹಕಾರ ಪೂರಕ. ಅದರ ಇಂದಿನ ದಿನಮಾನದಲ್ಲಿ ಎಲ್ಲರೂ ತಮ್ಮ ತಮ್ಮದೇ ಆದ ಕಾರ್ಯಗಳಲ್ಲಿ ಮುಳುಗಿ ಹೋಗಿರುವಾಗ ಸಮಾಜದ ಚಿಂತನೆ ಹೇಗೆ ಸಾಧ್ಯ? ಅದಲ್ಲದೆ ಓದು ಸಂಪಾದನೆ ಎಂದಷ್ಟೇ ಜೀವನ ಎಂದಾದರೆ ಮುಂದಿನ ದಿನ ಏನು ಎನ್ನುವ ಪ್ರಶ್ನೆ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಒಂದಷ್ಟು ವಿಶೇಷ ಆಹ್ವಾನಿತರುಗಳನ್ನು ಸೇರಿಸಿಕೊಂಡು ಆಲೋಚಿಸಿ ನಮ್ಮ ಮುಂದಿನ ಪೀಳಿಗೆಗೆ ಯುವಕರನ್ನು ತಯಾರು ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅದರ ಫಲವಾಗಿ ಮೂಡಿ ಬಂದ ಕಾರ್ಯಕ್ರಮ ವಿಪ್ರ ಯುವ ಮಹೋತ್ಸವ.
ವಿಪ್ರ ಯುವ ಜನಾಂಗ ತಮ್ಮ ಸುಪ್ತ ಪ್ರತಿಭೆ ಹಾಗೂ ಕೌಶಲ್ಯವನ್ನು ಅನಾವರಣಗೊಳಿಸಿಕೊಳ್ಳುವ ಸದಾವಕಾಶ ಕಲ್ಪಿಸಿ, ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಹಾಗೂ ಅವರ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲಿ ಎಂಬ ಉದ್ದೇಶದಿಂದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಉತ್ಸವದಲ್ಲಿ ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಜಾನಪದ ಗೀತೆ, ಭಗವದ್ಗೀತೆಯೇ ಮೊದಲಾದ ಸ್ಪರ್ಧೆಗಳನ್ನು 12 ವರ್ಷದಿಂದ 25 ವರ್ಷದೊಳಗಿನ ಯುವಕರಿಗೆ ಮೂರು ವಿಭಾಗಗಳಲ್ಲಿ ಆಯೋಜಿಸಿ ಆಕರ್ಷಕ ಬಹುಮಾನವನ್ನು ನೀಡಲಾಯಿತು.
ಇದೊಂದು ಸಮಾವೇಶದ ಮಾದರಿಯಲ್ಲಿ ನಡೆಯಿತು. ಶ್ರೀಮತಿ ಸವಿತಾ ಮಾಧವ್ ಶ್ರೀ ಶ್ರೀಧರ್, ಶ್ರೀರಾಮ ಗೋಪಾಲ್ ಅವರ ನೇತೃತ್ವದಲ್ಲಿ ಆಯೋಜಿತವಾದ ಈ ಮಹೋತ್ಸವಕ್ಕೆ ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷರಾದ ಶ್ರೀ ನಟರಾಜ ಭಾಗವತ್, ಕಾರ್ಯದರ್ಶಿಗಳಾದ ಬಿ.ಕೆ. ವೆಂಕಟೇಶಮೂರ್ತಿ ಹಾಗೂ ನಿರ್ದೇಶಕರುಗಳಾದ ಡಾ. ನಾಗಮಣಿ, ಶ್ರೀಮತಿ ಸರಳ ಹೆಗಡೆ, ಶ್ರೀ ಎನ್. ವಿ ಶಂಕರ್ ನಾರಾಯಣ, ಶ್ರೀ ಸೂರ್ಯನಾರಾಯಣ ಹಾಗೂ ಶ್ರೀ ದಿನಮಣಿ ಹಾಗೂ ಇತರೆ ನಿರ್ದೇಶಕರುಗಳ ಸಂಪೂರ್ಣ ಸಹಕಾರದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಇದಕ್ಕೆ ನಗರದ ಅನೇಕ ಶಾಲಾ ಕಾಲೇಜುಗಳ ಶಿಕ್ಷಕ ಹಾಗೂ ಉಪನ್ಯಾಸಕ ಬಂಧುಗಳನ್ನು ಜೋಡಿಸಿಕೊಳ್ಳಲಾಗಿತ್ತು.
ತುಂಬಾ ಅಚ್ಚುಕಟ್ಟಾಗಿ ಆಯೋಜಿತವಾದ ಈ ಮಹೋತ್ಸವದ ಮುಖ್ಯಾಂಶಗಳೆಂದರೆ –
1. ಸ್ಪರ್ಧೆಗಳನ್ನು ಆಯೋಜಿಸಿ ನಡೆಸುವಾಗ ಯಾವುದೇ ಗೊಂದಲಗಳಿಗೆ ಅವಕಾಶವಿರಲಿಲ್ಲ.
2. ಬೆಳಗ್ಗೆ ತಿಂಡಿಯಿಂದ ಹಿಡಿದು ಸಂಜೆ ಉಪಹಾರದ ವರೆಗೂ ಉತ್ತಮ ವ್ಯವಸ್ಥೆ ಮಾಡಲಾಗಿತ್ತು.
3. ಮಹೋತ್ಸವಕ್ಕೆ ಆಗಮಿಸಿದ ಎಲ್ಲರಿಗೂ ಉಡುಗೊರೆಯೊಂದಿಗೆ ಪ್ರಶಸ್ತಿ ಪತ್ರವನ್ನು ಸಹ ನೀಡಲಾಯಿತು.
4. ಪ್ರಗತಿಪರ ವಿಪ್ರ ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರದ ಪ್ರಮುಖರನ್ನು ಭೇಟಿಯಾಗಲು ಸದವಕಾಶ ಕಲ್ಪಿಸಲಾಗಿತ್ತು.
5. ವಿದೇಶದಲ್ಲಿ ಅಧ್ಯಯನ ಮಾಡುವ ಬಗ್ಗೆಯೂ ಸಹ ಉತ್ತಮವಾದ ಮಾಹಿತಿಯನ್ನ ನೀಡುವ ವ್ಯವಸ್ಥೆ ಮಾಡಲಾಗಿತ್ತು.
6. ಜಿಲ್ಲೆಯ ಪ್ರತಿಷ್ಠಿತ ಕಲಾವಿದರ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.
7. ಥಟ್ ಅಂತ ಹೇಳಿ ಮಾದರಿಯಲ್ಲಿ ನಡೆದ ಪ್ರಶ್ನೋತ್ತರ ಹಾಗೂ ಅದಕ್ಕೆ ಪುಸ್ತಕ ಉಡುಗೊರೆಯಾಗಿ ನೀಡಿದ್ದು ಸಹ ಮತ್ತೊಂದು ವಿಶೇಷ.
8. ಚರ್ಚಾ ಸ್ಪರ್ಧೆಯ ತೀರ್ಪುಗಾರರೊಂದಿಗೆ ಶ್ರೀಮತಿ ಸುರೇಖಾ ಮುರುಳಿಧರ್ ಅವರು ನಡೆಸಿಕೊಟ್ಟ ಸಂವಾದವು ಎಲ್ಲರ ಗಮನ ಸೆಳೆಯಿತು.ವಿಶೇಷವೆಂದರೆ 300ಕ್ಕೂ ಹೆಚ್ಚು ಸ್ಪರ್ಧಿಗಳು ಜಿಲ್ಲೆಯ ವಿವಿಧಡೆ ಯಿಂದ ಆಗಮಿಸಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದರು. ಇವೆಲ್ಲವುಗಳ ಜೊತೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದವರು ಭಾರತೀಯ ವಿದ್ಯಾ ಭವನದ ಲಂಡನ್ನಿನ ಶ್ರೀ ನಂದಕುಮಾರ್ ಅವರು, ಬಹುಮಾನ ವಿತರಕರಾಗಿ ಶ್ರೀ ದಿವಾಕರ್ ಅವರು, ಸಮಾರೋಪ ನುಡಿಗಳನ್ನಾಡಲು, ಉಡುಪಿಯ ಖ್ಯಾತ ವಾಗ್ಮಿಗಳಾದ ಪ್ರೊ. ಪವನ್ ಕಿರಣಕೆರೆಯವರು ಆಗಮಿಸಿದ್ದರು. ಎಲ್ಲರ ಮಾತುಗಳಲ್ಲಿಯೂ ವಿಪ್ರರ ಪ್ರಾಮುಖ್ಯತೆ ಮತ್ತು ಜೀವನದ ಸಾಫಲ್ಯತೆಯ ಕುರಿತಾಗಿ, ಅಲ್ಲದೆ ಸಂಸ್ಕೃತಿ ಸಂಸ್ಕಾರ ವಿಜ್ಞಾನ ಎಂಬ ಅಂಶಗಳ ಕುರಿತಾದಂತಹ ಸುಂದರವಾದ ಉಪನ್ಯಾಸ ಮಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ವಿಪ್ರರ ಸ್ಥಾನ ಅತ್ಯಂತ ಗೌರವಾನ್ವಿತವಾಗಿದೆ. “ವಿಪ್ರಃ ಶ್ರೇಷ್ಠಃ ಜ್ಞಾನತಾ” ಎಂಬಂತೆ ಜ್ಞಾನ, ಧರ್ಮ, ಮತ್ತು ನೈತಿಕತೆಯ ಬೆಳಕು ಹರಡಲು ವಿಪ್ರನು ಜೀವಮಾನವನ್ನು ಅರ್ಪಿಸುತ್ತಾನೆ. ಅವನು ಕೇವಲ ವೇದವನ್ನು ಪಠಿಸುವವನು ಮಾತ್ರವಲ್ಲ ಅವುಗಳನ್ನು ಜೀವನದಲ್ಲಿ ಅಳವಡಿಸುವವನೂ ಆಗಿದ್ದಾನೆ. ವಿಪ್ರನು ಸದಾ ಜ್ಞಾನದ ದೀಪವನ್ನು ಹಿಡಿದಿರುವ ದೀಪ ಸ್ತಂಭದಂತೆ ಸಮಾಜದ ನಾವಿಕನಾಗಿದ್ದಾನೆ.
ಯುಗ ಯುಗಾಂತರಗಳಿಂದಲೂ ವಿಪ್ರನು ಧರ್ಮ ಸಂಸ್ಥಾಪನೆ, ಧ್ಯಾನ, ತಪಸ್ಸು, ಯಜ್ಞ, ದಾನ, ಉಪದೇಶ ಇವುಗಳ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾನೆ. ಜೀವನದ ಶುದ್ಧತೆ ಮೆರೆದು ಆತ್ಮ ಸಾಧನೆಯ ಮಾರ್ಗದರ್ಶಕನಾಗಿ ಸಂಸ್ಕೃತಿಯ ಮೂಲ ರೂಪದ ಪ್ರತಿನಿಧಿಯೇ ಆಗಿ ಹೋಗಿದ್ದಾನೆ. ಇಂದಿನ ಯುಗದಲ್ಲಿ ಈ ಮಹತ್ವವನ್ನು ಮೆಲುಕು ಹಾಕುವ ನಿಟ್ಟಿನಲ್ಲಿ ವಿಪ್ರ ಯುವ ಮಹೋತ್ಸವ ಅತ್ಯಂತ ಸೂಕ್ತ ವೇದಿಕೆಯಾಯಿತು. ಇಂತಹ ಸಮಾವೇಶದಲ್ಲಿ ಯುವ ವಿಪ್ರರು ತಮ್ಮ ಕಲೆ,ವ್ಯಕ್ತಿತ್ವ,ಸಮಾಜಪರ ಸೇವಾ ಮನೋಭಾವನೆಗಳನ್ನು ಬೆಳೆಸುವ ಅವಕಾಶ ಪಡೆಯುತ್ತಾರೆ. ಇದರ ಮೂಲಕ ಭವಿಷ್ಯದ ಸಂಸ್ಕೃತಿಯ ಸಂರಕ್ಷಣೆಯ ಪಥದ ನಾಯಕರಾಗಲು ಸಿದ್ಧರಾಗುತ್ತಾರೆ. ಇಂತಹ ಮಹೋತ್ಸವಗಳು ಸಂಸ್ಕೃತಿಯ ಪರಂಪರೆಯ ಸಾರವನ್ನು ಮುಂದಿನ ತಲೆಮಾರಿಗೆ ತಿಳಿಸುವ ಜೊತೆಗೆ ಅದರ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊರಲು ಪ್ರೇರಣೆಯಾದಂತೆ ಆಗುತ್ತದೆ. ಅಲ್ಲದೆ ಇದರಿಂದ ಯುವ ಜನರಿಗೆ ತಮ್ಮ ಧಾರ್ಮಿಕ ಸಾಂಸ್ಕೃತಿಕ ರೂಢಿಗಳನ್ನ ಪರಿಚಯಿಸಿದಂತಾಗುತ್ತದೆ. ಸಮಾಜದಲ್ಲಿ ಸಹಕಾರ ಮನೋಭಾವವನ್ನು ಬೆಳೆಸುವುದು ಹೇಗೆ ಎಂದು ತಿಳಿಸಿದಂತಾಗುತ್ತದೆ. ರಾಷ್ಟ್ರ ಹಿತದಲ್ಲಿ ಬ್ರಾಹ್ಮಣ ಯುವಶಕ್ತಿಯ ಪಾತ್ರವನ್ನು ಒತ್ತಿ ಹೇಳಲು ಇಂತಹ ಮಹೋತ್ಸವ ಪೂರಕ.
ಒಟ್ಟಾರೆಯಾಗಿ ಹೇಳಬೇಕೆಂದರೆ ಯುವ ಮನಸುಗಳ ಜೊತೆ ಒಂದಷ್ಟು ಬೆರೆಯುವ ಮತ್ತು ಅವರನ್ನು ಬೆಸೆಯುವ ಕೊಂಡಿಯಾಗಿ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಇಲ್ಲಿ ಮಕ್ಕಳನ್ನು ಕರೆತಂದ ಪೋಷಕರಿಗೂ ಸಹ ಅಭಿನಂದನೆಗಳು ಸಲ್ಲಲೇ ಬೇಕು. ಹಾಗೆಯೇ ಹೊಸ ದಿಸೆಗೆ ಮುನ್ನುಡಿಯಾಗಿ ಆಯೋಜಿಸಿದ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಸರ್ವರಿಗೂ ಅನಂತಾನಂತ ಧನ್ಯವಾದಗಳು. ಇಂತಹ ಇನ್ನಷ್ಟು ಕಾರ್ಯಕ್ರಮಗಳು ನಡೆಯುವಂತೆ ಆಗಲಿ ಎಂಬುದೇ ಇದರ ಆಶಯ.ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post