ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಂಚಕರ ಸಾಲದ ಆಮಿಷದ ಜಾಲಕ್ಕೆ ಸಿಲುಕಿದ ವ್ಯಕ್ತಿಯೋರ್ವರು, ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ನಗರದ ಕಾಶೀಪುರ ಬಡಾವಣೆ ನಿವಾಸಿ ಹರೀಶ್ (54) ವಂಚನೆಗೊಳಗಾದ ವ್ಯಕ್ತಿ ಎನ್ನಲಾಗಿದ್ದು, ಘಟನೆಗೆ ಸಂಬಂಧಪಟ್ಟಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ
ಜೂನ್ 28ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅನಾಮಧೇಯ ಸಂಖ್ಯೆಯಿಂದ ಹರೀಶ್ ಮೊಬೈಲ್’ಗೆ ಕರೆ ಬಂದಿತ್ತು. ಫೈನಾನ್ಸ್ ನವರೆಂದು ಹೇಳಿಕೊಂಡಿದ್ದ ವಂಚಕನೋರ್ವ, 8 ಲಕ್ಷ ರೂ.ಗಳವರೆಗೆ ಸಾಲ ಕೊಡುತ್ತೇವೆ ಎಂದು ನಂಬಿಸಿದ್ದ. ಆಸಕ್ತಿ ಇದ್ದರೆ ಅಗತ್ಯ ಮಾಹಿತಿ ನೀಡುವಂತೆ ಸೂಚಿಸಿದ್ದ. ವಂಚಕನ ಮಾತು ನಂಬಿದ ದೂರುದಾರ ಹರೀಶ್, ತಮ್ಮ ಬ್ಯಾಂಕ್ ಮಾಹಿತಿಯನ್ನು ಪಿಡಿಎಫ್ ಮಾದರಿಯಲ್ಲಿ ವಂಚಕನ ನಂಬರ್ ಗೆ ಕಳುಹಿಸಿದ್ದರು .ಜೂನ್ 30ರಂದು ವಿವಿಧ ಶುಲ್ಕ ಪಾವತಿಸಬೇಕೆಂದು ನಂಬಿಸಿ ಒಟ್ಟಾರೆ 4,13,596 ರೂ.ಗಳನ್ನು ವಂಚಕರು ಆನ್’ಲೈನ್ ಮೂಲಕ ಪಾವತಿಸಿಕೊಂಡಿದ್ದರು. ಆದರೆ ನಂತರ ಸಾಲವೂ ನೀಡದೆ, ಪಾವತಿಸಿಕೊಂಡ ಹಣವೂ ಕೊಡದೆ ವಂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















