ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿಮಗೆಲ್ಲಾ ಮಾನ ಮರ್ಯಾದೆ ಬೇಕು. ನಲ್ಲಿಗಳಿಗೆ ನೀರು ಕೊಡುವ ಯೋಗ್ಯತೆ ಇಲ್ಲ ಅಂದರೆ ನೀವೆಲ್ಲ ಯಾಕೆ ಬೇಕು? ಕೆಲಸ ಮಾಡುವ ಇಷ್ಟ ಇದೆಯೋ ಇಲ್ಲವೋ? ಇದು ಶಾಸಕ ಚನ್ನಬಸಪ್ಪ #MLA Channabasappa ಅವರು ನೀರು ಸರಬರಾಜು ಇಲಾಖೆಯ ಎಇ ಹಾಗೂ ಸಿಬ್ಬಂದಿಗಳನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಪರಿ.
ಹೌದು… ಇದು… ಪಾಲಿಕೆ ವ್ಯಾಪ್ತಿಯ 18ನೇ ವಾರ್ಡ್ ವಿನೋಬಗನರ 60 ಅಡಿ ರಸ್ತೆಯ ಶಿವಾಲಯ ಹಿಂಭಾಗದ ಬಡಾವಣೆ ನಿವಾಸಿಗಳ 9 ತಿಂಗಳ ನೀರಿನ ಬವಣೆ. ಸರಿಯಾದ ನೀರು ಸರಬರಾಜಿಲ್ಲದೇ ಇಲ್ಲಿ ನಿವಾಸಿಗಳು ಅನುಭವಿಸಿದ ತೊಂದರೆ ಅಷ್ಟಿಷ್ಟಲ್ಲ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸರಿಯಾಗಿ ಪ್ರತಿಕ್ರಿಸದ ಹಿನ್ನೆಲೆಯಲ್ಲಿ, ಶಾಸಕರ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಚನ್ನಬಸಪ್ಪ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ, ಅಹವಾಲು ಆಲಿಸಿ, ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳಕ್ಕೆ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಅಧಿಕಾರಿ ಜೀವನ್ ಹಾಗೂ ಸಿಬ್ಬಂದಿಗಳನ್ನು ಕರೆಸಿಕೊಂಡು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಇಲ್ಲಿ 5 ಲಕ್ಷ ಗ್ಯಾಲನ್ ವಾಟರ್ ಟ್ಯಾಂಕ್ ಇದ್ದರೂ ನೀರು ಹರಿಸಲು ನಿಮಗೆ ಸರಿಯಾಗಿ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದರೆ ನೀವೆಲ್ಲಾ ಯಾಕೆ ಬೇಕು. 24/7 ಯೋಜನೆ ಜಾರಿಯಾಗುವ ಮುಂಚೆ ನೀರು ಈ ಬಡಾವಣೆಯಲ್ಲಿ ಸಮರ್ಪಕವಾಗಿ ಹಂಚಲಾಗುತ್ತಿತ್ತು. ಆದೆ ಈಗ ಸರಿಯಾಗಿ ನೀರು ಕೊಡಲು ಆಗುತ್ತಿಲ್ಲ ಎಂದರೆ ಏನು? ಇಲ್ಲಿಂದ ರಾಜೇಂದ್ರ ನಗರಕ್ಕೆ ಯಾಕೆ ನೀರು ಸರಬರಾಜು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ನಿಮಗೆ ಕೆಲಸ ಮಾಡೋಕೆ ಇಷ್ಟ ಇದೆಯೋ ಇಲ್ಲವೋ? ಮಾನ ಮರ್ಯಾದೆ ಬೇಕು ನಿಮಗೆಲ್ಲಾ. ನಿಮಗೆ ಬಯ್ಯೋದು ನಮಗೆ ಚಟ ಅಲ್ಲ. ಇದೇ ರೀತಿ ನಡೆದುಕೊಂಡರೆ ಬೇರೆ ವ್ಯವಸ್ಥೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಲ್ಲಿಗಳಿಗೆ ನೀರು ಕೊಡುವ ಯೋಗ್ಯತೆ ಇಲ್ಲ ಅಂದರೆ ನೀವೆಲ್ಲ ಯಾಕೆ ಬೇಕು? ಎಂದು ಪ್ರಶ್ನಿಸಿದ ಅವರು, ನಿನ್ನ ಕಥೆ ಕೇಳಲು ನಾನು ಬಂದಿಲ್ಲ.. ಜನರಿಗೆ ನೀರು ಕೊಡಿ ಅಷ್ಟೇ. ಒಂದು ವಾರ ಬಿಟ್ಟ ಬರ್ತಿನಿ, ಸಮಸ್ಯೆ ಸರಿ ಹೋಗಬೇಕು. ಇಲ್ಲವಾದರೆ ಮುಂದಿನ ಪರಿಣಾಮ ಎದುರಿಸಿ ಎಂದು ಎಚ್ಚರಿಕೆ ನೀಡಿದರು.
ಶಾಸಕರ ಎಚ್ಚರಿಕೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಮಸ್ಯೆ ಪರಿಹರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















