ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕದ ವತಿಯಿಂದ ಆಗಸ್ಟ್ 3ರ ಬೆಳಿಗ್ಗೆ 10 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ವಿತರಣೆ, ಸುವರ್ಣ ದಾಂಪತ್ಯ ಸನ್ಮಾನ ಹಾಗೂ ಸಂಘದ ಹಿರಿಯ ನಿರ್ದೇಶಕರುಗಳಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಕೆ. ಕೇಶವಮೂರ್ತಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮಾರಂಭವನ್ನು ಮಾಜಿ ಶಾಸಕ ಹಾಗೂ ವಿಪ್ರ ಸಮಾಜದ ಮುಖಂಡ ಕೆ.ಬಿ. ಪ್ರಸನ್ನಕುಮಾರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಡಿ.ಎಸ್. ಅರುಣ್, ಎಕೆಬಿಎಂಎಸ್ ಶಿವಮೊಗ್ಗ ಜಿಲ್ಲಾ ಪ್ರತಿನಿಧಿ ಎನ್.ಎಂ. ರಘುರಾಮ್, ಶಿವಮೊಗ್ಗದ ಆಚಾರ್ ಗ್ರೂಪ್ಸ್ನ ವ್ಯವಸ್ಥಾಪಕ ನಿರ್ದೇಶಕ ಜೋಯ್ಸ್ ರಾಮಾಚಾರ್, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಮ.ಸ. ನಂಜುಂಡಸ್ವಾಮಿ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.
ದಾಂಪತ್ಯ ಜೀವನವನ್ನು 50 ವರ್ಷ ಪೂರೈಸಿದ 7 ಜೋಡಿಗಳಿಗೆ ಸನ್ಮಾನ, ಮೂವರು ಹಿರಿಯ ನಿರ್ದೇಶಕರುಗಳಿಗೆ ಹಾಗೂ ಮೂವರು ಸಾಧಕರಿಗೆ, ಇಬ್ಬರು ರಾಜ್ಯಮಟ್ಟದಲ್ಲಿ ಸಾಧನೆಗೈದವರಿಗೆ ಅಭಿನಂದಿಸಲಾಗುವುದು ಎಂದರು.
ಸಂಘದ ಗೌರವಾಧ್ಯಕ್ಷ ಆರ್. ಅಚ್ಚುತರಾವ್ ಮಾತನಾಡಿ, 2004ರಲ್ಲಿ ಆರಂಭಗೊಂಡ ಸಂಘ, 20ವರ್ಷ ಪೂರೈಸಿ, 21ನೇ ವರ್ಷಕ್ಕೆ ಅಡಿ ಇಟ್ಟಿದ್ದು, ಕಳೆದೆರೆಡು ದಶಕಗಳಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿದೆ. ಸಂಘಕ್ಕೆ ಒಂದು ಸ್ವಂತ ಕಟ್ಟಡ ಕಟ್ಟಬೇಕೆಂಬ ಸಂಘದ ಕನಸ್ಸಾಗಿತ್ತು. ಈ ಕನಸು ಸಾಕಾರಗೊಳ್ಳುವ ಮೊದಲ ಹೆಜ್ಜೆಯಾಗಿ ಸೂಡಾದಿಂದ 400 ಚದರ ಮೀಟರ್ ವಿಸ್ತೀರ್ಣದ ನಿವೇಶನ ಹಿಂದೆ ಶಾಸಕರಾಗಿದ್ದ ಕೆ.ಬಿ. ಪ್ರಸನ್ನಕುಮಾರ್ ಅವರ ಪ್ರಯತ್ನದಿಂದಾಗಿ ಮಂಜೂರಾಗಿದೆ. ಸುಮಾರು 2.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ನೀಲಿನಕ್ಷೆ ತಯಾರಾಗಿದ್ದು, ಮೊದಲ ಹಂತದಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ನೆಲಮಹಡಿ ನಿರ್ಮಿಸಲು ಜೂನ್ 5ರಂದು ಭೂಮಿಪೂಜೆ ನೆರವೇರಿದೆ ಎಂದರು.






ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾಗಿ ಹೆಚ್.ಎನ್. ಛಾಯಾಪತಿ, ವನಜಾ ರವಿಕುಮಾರ್, ಯು.ಎಸ್. ಕೇಶವಮೂರ್ತಿ, ಕೆ.ಎನ್. ವಿಶ್ವನಾಥ್, ಹೆಚ್.ಸಿ. ರವಿಕುಮಾರ್, ನಿರ್ದೇಶಕರಾದ ಕೆ.ವಿ. ಶಿವರಾಮ್, ಹರೀಶ್ ಕಾರ್ಣೀಕ್, ಎನ್.ಆರ್. ಮಂಜುನಾಥ್, ಕಛೇರಿ ಕಾರ್ಯದರ್ಶಿ ಎಸ್. ನಾಗೇಶ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















