ಕಲ್ಪ ಮೀಡಿಯಾ ಹೌಸ್ | ಹೊಸನಗರ |
ಶಾಲಾ ಮಕ್ಕಳಿಗೆ ಶೈಕ್ಷಣಿಕ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳೂ ಸಹ ಅತ್ಯಂತ ಮುಖ್ಯವಾದುದು. ಅದರಲ್ಲೂ ದೇಶದ ಜೀವನಾಡಿಯಾಗಿರುವ ರೈತರು ಹಾಗೂ ರೈತರ ಜೀವನದ ಭಾಗವಾಗಿರುವ ವ್ಯವಸಾಯದ ಕುರಿತಾಗಿ ಇಂದಿನ ಕಾಲದಲ್ಲಿ ತಿಳಿಸಿಕೊಡುವುದು ಅವಶ್ಯಕವಾಗಿದೆ. ಇಂತಹ ಒಂದು ವಿಶೇಷ ಕೆಲಸವನ್ನು ಜಿಲ್ಲೆಯ ಗ್ರಾಮವೊಂದರಲ್ಲಿ ಮಾಡಲಾಗಿದೆ.
ಹೌದು… ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮೇಲಿನಬೆಸಿಗೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರಿಂದಲೇ ಭತ್ತದ ನಾಟಿ ಮಾಡುವ ಪಾಠ ಮಾಡಲಾಯಿತು.
ಪಠ್ಯ ಚಟುವಟಿಕೆಯಲ್ಲಿ ಸದಾ ತೊಡಗಿಕೊಳ್ಳುತ್ತಿದ್ದ ವಿದ್ಯಾರ್ಥಿಗಳಿಗೆ ಇದು ವಿಶೇಷ ಬದುಕಿನ ಪಾಠ ಎನಿಸಿದ್ದು, ಭತ್ತದ ಸಸಿ ನಾಟಿ ಮಾಡಿ ಶಾಲಾ ಮಕ್ಕಳು ಸಂಭ್ರಮಿಸಿದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮೇಲಿನಬೆಸಿಗೆ ಸರ್ಕಾರಿ ಶಾಲೆಯಲ್ಲಿ ತರಬೇತಿ ನಡೆದಿದ್ದು, ಶಾಲೆಯ ಸಮೀಪವಿರುವ ಗದ್ದೆಗೆ ತಮ್ಮ ಶಿಕ್ಷಕರೊಂದಿಗೆ ತೆರಳಿ ನಾಟಿ ಕಾರ್ಯದ ಕುರಿತಾಗಿ ಹೇಳಿಕೊಡಲಾಯಿತು.
ಬದಲಾದ ಮೊಬೈಲ್ ಫೋನ್ ಗಳ ಗೀಳಿಗೆ ಮಕ್ಕಳು ಬಲಿಯಾಗುತ್ತಿರುವ ಈ ಕಾಲಘಟ್ಟದಲ್ಲಿ, ಇಂತಹ ಕಾರ್ಯದ ಮೂಲಕ ಶಿಕ್ಷಕರು ಮಕ್ಕಳಿಗೆ ಜೀವನ ಪಾಠ ಹೇಳಿಕೊಟ್ಟರು. ಮಕ್ಕಳಿಗೆ ಈ ಗೀಳು ಬಿಡಿಸಲು ಈ ರೀತಿಯ ತರಬೇತಿಗಳು ಮಕ್ಕಳಿಗೆ ಬದಲಾವಣೆ ತರಲಿದೆ ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ.
ನಗರ ಪ್ರದೇಶದಲ್ಲಿನ ಮಕ್ಕಳಿಗೆ ಹಳ್ಳಿಯ ವಾತಾವರಣ ಹೇಗಿರುತ್ತದೆ, ತೋಟ, ಹೊಲ, ಗದ್ದೆಗಳು ಹೇಗಿರುತ್ತವೆ, ಹೇಗೆ ಕೃಷಿ ಮಾಡಲಾಗುತ್ತದೆ, ಬೆಳೆಗಳನ್ನು ಹೇಗೆ ಬೆಳೆಯಲಾಗುತ್ತದೆ ಎಂಬ ಕುರಿತಾಗಿ ಜ್ಞಾನ ಇರುವುದಿಲ್ಲ. ಈ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಮಾಹಿತಿ ತಿಳಿಸಿಕೊಡುವ ಕಾರ್ಯಾಗಾರಗಳು, ಪ್ರಾಯೋಗಿಕ ತರಗತಿಗಳನ್ನು ನಡೆಸುವ ಅವಶ್ಯಕತೆ ಇದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















