ಕಲ್ಪ ಮೀಡಿಯಾ ಹೌಸ್ | ಲೇಖನ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ |
ಪ್ರತಿಯೊಬ್ಬರ ಜೀವನವು ಒಂದು ಕಥೆ, ಆದರೆ ಕೆಲವರ ಬದುಕು ಇತರರಿಗೆ ಪ್ರೇರಣೆಯಾಗಿ ಬೆಳಗುವ ದೀಪವಾಗುತ್ತದೆ. ಅಂತಹ ದೀಪದಂತೆ ಹೊಳೆಯುತ್ತಿರುವವರು ಪ್ರಖ್ಯಾತ್ ಪೈ ಪುತ್ತೂರು.
ಬದುಕಿನ ಆರಂಭವು ಕಷ್ಟದಿಂದ ತುಂಬಿದರೂ, ಅವರು ಕೈಗೊಂಡ ಪ್ರತಿಯೊಂದು ಹೆಜ್ಜೆಯೂ ನಾಡು, ನುಡಿ, ಸಮಾಜದ ಪರವಾದುದು. ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಎಣಿಸಲಾಗುವುದಿಲ್ಲ. ಆದರೆ, ಸಾವಿರಾರು ಸಾಧಕರ ನಡುವೆ ವಿಭಿನ್ನತೆ ತೋರುವ ಕೆಲವೇ ಹೆಸರುಗಳಲ್ಲಿ ಒಂದು ಪ್ರಖ್ಯಾತ ಪೈ ಪುತ್ತೂರು. ಕನ್ನಡವನ್ನು ಹೃದಯದಿಂದ ಪ್ರೀತಿಸುವ, ನಾಡು-ನುಡಿ-ಸಂಸ್ಕೃತಿಯನ್ನು ಕಾಪಾಡಿ ಬೆಳೆಸುವ ಜೊತೆಗೆ ಸಮಾಜಮುಖಿ ಸೇವೆಯಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ವ್ಯಕ್ತಿ ಇವರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಹರು ನಗರದಲ್ಲಿ ಪ್ರತಾಪ್ ಕುಮಾರ್ ಪೈ ಪುತ್ತೂರು ಹಾಗೂ ಕಸ್ತೂರಿ ಪೈ ದಂಪತಿಗಳ ಹಿರಿಯ ಪುತ್ರನಾಗಿ ಜನಿಸಿದ ಪ್ರಖ್ಯಾತ್ ಅವರು ತಮ್ಮ ಬಾಲ್ಯದ ದಿನಗಳನ್ನು ಸರಳ ಕುಟುಂಬದಲ್ಲಿ ಕಳೆದವರು. ಇವರಿಗೆ ತಂಗಿ ಸುಸ್ಮಿತಾ ಪೈ ಪುತ್ತೂರು ಇದ್ದಾರೆ. ಬಾಲ್ಯದಿಂದಲೇ ಶ್ರಮ, ಹೋರಾಟ ಮತ್ತು ಸಂಕಷ್ಟದ ಬದುಕನ್ನು ಕಂಡು ಬೆಳೆದ ಇವರ ಜೀವನ ಪಯಣವು ನೂರಾರು ಯುವಕರಿಗೆ ಪ್ರೇರಣೆಯಾಗಿದೆ.
ಮಂಜಲ್ ಪಡ್ಪು ವಿವೇಕಾನಂದ ವಿದ್ಯಾಸಂಸ್ಥೆಯಿಂದ ಆರಂಭವಾದ ಇವರ ಶಿಕ್ಷಣ ಪಯಣವು ಪುತ್ತೂರಿನ ಸೈಂಟ್ ವಿಕ್ಟರ್ಸ್, ಕೊಂಬೆಟ್ಟು ಶಾಲೆ, ಹಾಸನದ ಆದಿಚುಂಚನಗಿರಿ ಇಂಗ್ಲಿಷ್ ಮಾಧ್ಯಮ ಶಾಲೆ ಹಾಗೂ ಆರ್.ಸಿ. ರಸ್ತೆಯ ಸರ್ಕಾರಿ ಪಿಯು ಕಾಲೇಜುಗಳವರೆಗೆ ಸಾಗಿತು. ಸಂಕಷ್ಟದ ಸಮಯದಲ್ಲಿ ತಂದೆಯೊಟ್ಟಿಗೆ ಸೇರಿ ತಳ್ಳುಗಾಡಿಯಲ್ಲಿ ಜ್ಯೂಸ್ ಹಾಗೂ ಮಜ್ಜಿಗೆ ಮಾರಾಟ ಮಾಡಿದ ಅನುಭವ ಇವರಿಗೆ ಬದುಕಿನ ನಿಜವಾದ ಅರ್ಥ ಕಲಿಸಿತು. ಇದೇ ಸಂಕಷ್ಟಗಳು ಇವರನ್ನು ಗಟ್ಟಿಯಾಗಿ ಬೆಳೆಸಿದವು.
ನಂತರ ಉದ್ಯೋಗದ ಹುಡುಕಾಟಕ್ಕಾಗಿ ಮೈಸೂರಿನಿಂದ ಬೆಂಗಳೂರಿಗೆ ಬಂದ ಪ್ರಖ್ಯಾತ್, ಮೀನಾಕ್ಷಿ ಮಾಲ್’ನಲ್ಲಿ ಮಾರಾಟ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆ ವೇಳೆ ಉದ್ಯೋಗಕ್ಕಾಗಿ ಹೋರಾಡುತ್ತಿರುವ ಯುವಕರನ್ನು ಕಂಡು ಉದ್ಯೋಗ ಮಾಹಿತಿ ನಮ್ಮವರಿಗಾಗಿ ಎಂಬ ವಾಟ್ಸಾಪ್ ಗುಂಪನ್ನು ಹುಟ್ಟು ಹಾಕಿದರು. ಸಾವಿರಾರು ಮಂದಿಗೆ ಉಚಿತವಾಗಿ ಉದ್ಯೋಗ ಮಾಹಿತಿಯನ್ನು ತಲುಪಿಸಿದ ಈ ಸೇವೆ ಇಂದು ಸಹ ನಿಂತಿಲ್ಲ.
ಶಾಲೆ ಬಿಟ್ಟ ಮಕ್ಕಳನ್ನು ಮರುಶಾಲೆಗೆ ಸೇರಿಸಿ, ಶೈಕ್ಷಣಿಕ ಸಾಮಗ್ರಿಗಳನ್ನು ತಲುಪಿಸಿ 42 ಮಕ್ಕಳ ಭವಿಷ್ಯ ಕಟ್ಟಿಕೊಟ್ಟ ಮಾನವೀಯತೆಯ ದಾರಿ ಇವರ ಸೇವೆಯ ಇನ್ನೊಂದು ಮುಖ.
ಇವರ ಸಾಮಾಜಿಕ ಸೇವೆಯ ಮಹತ್ವಪೂರ್ಣ ಅಧ್ಯಾಯ ಕೊರೋನಾ ಕಾಲಘಟ್ಟ. ಆ ಅವಧಿಯಲ್ಲಿ ಉಸಿರು ಮತ್ತು ಕೊರೋನಾ ಕನ್ನಡ ಸಹಾಯವಾಣಿಯಲ್ಲಿ ಸ್ನೇಹಿತರೊಡನೆ ಜೀವಪಣವಾಗಿ ದುಡಿದು ಅನೇಕ ಜೀವಗಳನ್ನು ಉಳಿಸಿದರು. ರೈತರ ಸಂಕಷ್ಟವನ್ನು ನೋಡಿ ಅನ್ನದಾತ ಜೀವದಾತ ಕನ್ನಡನಾಡು ಎಂಬ ಫೇಸ್ಬುಕ್ ಪೇಜ್ ಮೂಲಕ ರೈತರ ಬೆಳೆಗಳಿಗೆ ಮಾರುಕಟ್ಟೆ ಒದಗಿಸಿದರು. ಈ ನಿಸ್ವಾರ್ಥ ಸೇವೆಯನ್ನು ಟೈಮ್ಸ್ ಆಫ್ ಇಂಡಿಯಾ ಮತ್ತು ಡೆಕನ್ ಹೆರಾಲ್ಡ್ ಪತ್ರಿಕೆಗಳು ಪ್ರಸ್ತುತಪಡಿಸಿದವು.
2017ರಲ್ಲಿ ಕನ್ನಡ ಮನಸುಗಳ ಪ್ರತಿಷ್ಠಾನದಲ್ಲಿ ಸ್ವಯಂಸೇವಕನಾಗಿ, ನಂತರ 2022ರಲ್ಲಿ ಸ್ನೇಹಿತರೊಂದಿಗೆ ಗಂಧದಗುಡಿ ಬಳಗ, ಕರ್ನಾಟಕ ಎಂಬ ಸಂಘಟನೆಯನ್ನು ಕಟ್ಟಿಕೊಂಡು ದಾನಿಗಳ ನೆರವಿನಿಂದ 27ಕ್ಕೂ ಹೆಚ್ಚು ಯಶಸ್ವಿ ಸಾಮಾಜಿಕ ಅಭಿಯಾನಗಳನ್ನು ನಡೆಸಿದರು. ಸರ್ಕಾರಿ ಕನ್ನಡ ಶಾಲೆಗಳಲ್ಲಿ ಬಣ್ಣ ಬಳಿದು, ಶೌಚಾಲಯಗಳನ್ನು ನಿರ್ಮಿಸಿ, ಪುಸ್ತಕಗಳನ್ನು ತಲುಪಿಸಿ, ಬಡ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಹಾಗೂ ಕಾಲೇಜು ಶುಲ್ಕದ ನೆರವು ತಲುಪಿಸಿದರು. ಹಾಸನದಿಂದ ಮೈಸೂರಿನವರೆಗೆ, ಚಿಕ್ಕಮಗಳೂರು, ಬೀದರ್, ಚಿತ್ರದುರ್ಗ, ಬೆಂಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಯವರೆಗೆ ಇವರ ಸೇವೆಯ ಸ್ಪರ್ಶ ಹರಡಿದೆ.
ಇವರ ಸೇವೆಯನ್ನು ಗುರುತಿಸಿ ಹಲವು ಸಂಸ್ಥೆಗಳು ಕನ್ನಡ ಕುಲಪುರೋಹಿತ ಪ್ರಶಸ್ತಿ, ಕನ್ನಡ ರಾಷ್ಟ್ರ ಭೂಷಣ ಪ್ರಶಸ್ತಿ, ಕನ್ನಡ ಸೇವಾ ರತ್ನ, ಪ್ರಗತಿಪರ ಅನ್ನದಾತ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ.
ಇಂದು, ತಮ್ಮ ತಂಗಿ ಮತ್ತು ತಾಯಿಯವರ ಪ್ರೋತ್ಸಾಹದಿಂದ ಖಾಸಗಿ ಉದ್ಯೋಗಕ್ಕೆ ವಿದಾಯ ಹೇಳಿ ಬೆಂಗಳೂರಿನ ವಿದ್ಯುನ್ಮಾನ ನಗರದಲ್ಲಿ ದಿ ಸ್ಟೇಷನರಿ ಸ್ಟೋರೀಸ್ ಎಂಬ ಪುಸ್ತಕ ಮತ್ತು ಸ್ಟೇಷನರಿ ಅಂಗಡಿಯನ್ನು ನಡೆಸುತ್ತಾ, ಸಮಾನಾಂತರವಾಗಿ ಸಮಾಜಮುಖಿ ಸೇವೆಯನ್ನು ತೊರೆಯದೆ ಸಾಗುತ್ತಿದ್ದಾರೆ.
ಸರಳ ಹಾದಿಯಲ್ಲಿ ಪ್ರಾರಂಭವಾದ ಬದುಕು, ಕಷ್ಟದ ನಡುವೆ ಬೆಳೆದ ಕನಸು, ನಾಡು-ನುಡಿ-ಸಮಾಜದ ಸೇವೆಯೊಂದಿಗೆ ಬೆಳೆದ ಹಾದಿ – ಇವೆಲ್ಲವೂ ಪ್ರಖ್ಯಾತ್ ಪೈ ಪುತ್ತೂರು ರವರ ಜೀವನವನ್ನು ಇತರರಿಗೆ ಪ್ರೇರಣೆಯನ್ನಾಗಿಸಿದೆ.
ಕನ್ನಡವೇ ನಾಡಿನ ಕಣ್ಣೆದುರು ಹೊಳೆಯುವ ಕಣ್ಮಣಿ, ಅದನ್ನು ಕಾಪಾಡಿ ಬೆಳೆಸುವುದು ಪ್ರತಿಯೊಬ್ಬರ ಹೊಣೆ – ಎಂಬ ನಂಬಿಕೆಯಿಂದ ಸಮಾಜಸೇವೆ, ಕನ್ನಡಸೇವೆ ಹಾಗೂ ಮಾನವಸೇವೆ ಒಂದೇ ದಾರಿಯೆಂದು ತೋರಿದ ಪ್ರಖ್ಯಾತ್ ಪೈ ಪುತ್ತೂರು ರವರಿಗಿಂದು ಹಾರೈಸುವುದೇ -ಅವರ ಜೀವನ ದಾರಿ ಅನೇಕ ಮಂದಿಗೆ ದೀಪವಾಗಲಿ, ಅವರ ಹಾದಿ ಇಂದಿನ ಪೀಳಿಗೆಗೆ ಪ್ರೇರಣೆಯಾಗಲಿ.
ಬದುಕು ತನ್ನದಾಗಿರಲಿ, ಆದರೆ ಅದರ ಮೌಲ್ಯ ಸಮಾಜಕ್ಕಾಗಿ ಹೊಳೆಯಲಿ. ಕನ್ನಡವೆಂಬ ಕಣ್ಮಣಿಯನ್ನು ಕಾಪಾಡಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ, ಅದೇ ನಿಜವಾದ ಮಾನವೀಯತೆ. ಇದೇ ನಂಬಿಕೆಯಿಂದ ಸಾಗುತ್ತಿರುವ ಪ್ರಖ್ಯಾತ್ ಪೈ ಪುತ್ತೂರು ಅವರ ಹಾದಿ ಸಾವಿರಾರು ಜನರಿಗೆ ದಾರಿ ತೋರುವ ದೀಪ. ಅವರ ಬದುಕು ಹೇಳುವುದು ಒಂದೇ -ನಿನ್ನ ಹೆಜ್ಜೆ ನಿನ್ನದಾಗಿರಲಿ, ಆದರೆ ಅದರ ಗುರುತು ನಾಡು-ನುಡಿ-ಸಮಾಜದ ಹೃದಯದಲ್ಲಿ ಉಳಿಯಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















