ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ #Cough Syrup ಸೇವಿನೆಯಿಂದಾಗಿ ಮಕ್ಕಳ ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಮಹತ್ವದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಹೌದು.. ಮುಂಜಾಗ್ರತಾ ಕ್ರಮವಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ #Health Department ಮಹತ್ವದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ನಾಗರಿಕರು ಅನುಸರಿಸುವಂತೆ ಕೋರಿದೆ.
ಏನಿದೆ ಮಾರ್ಗಸೂಚಿಯಲ್ಲಿ?
ಕೆಮ್ಮಿನ ಸಿರಪ್’ಗಳ ದುರುಪಯೋಗದಿಂದಾಗಿ ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ಸಾವುಗಳ ವರದಿಗಳು ಸರ್ಕಾರದ ಗಮನಕ್ಕೆ ಬಂದಿದೆ. ಎಲ್ಲಾ ಮಕ್ಕಳ ಸುರಕ್ಷತೆಯನ್ನು ಕಾಪಾಡಲು, ಪೋಷಕರು, ಆರೈಕೆದಾರರು ಮತ್ತು ಸಾರ್ವಜನಿಕರು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗದರ್ಶನಗಳನ್ನು ಅನುಸರಿಸುವಂತೆ ಸಾರ್ವಜನಿಕರಿಗೆ ಸೂಚಿಸಿದೆ.
ಚಿಕ್ಕ ಮಕ್ಕಳ ಜಾಗ್ರತೆ ವಿಚಾರದಲ್ಲಿ
ಮಕ್ಕಳಿಗೆ ಕೆಮ್ಮಿನ ಸಿರಪ್’ಗಳನ್ನು ನೀಡಬೇಡಿ. 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಅಥವಾ ಶೀತದ ಸಿರಪ್’ಗಳನ್ನು ಯಾವುದೇ ಕಾರಣಕ್ಕೂ ನೀಡಬಾರದು. 2 ರಿಂದ 5 ವರ್ಷಗಳ ವಯಸ್ಸಿನ ಮಕ್ಕಳಿಗೆ ಸರಿಯಾದ ತಜ್ಞ ವೈದ್ಯರಲ್ಲಿ ಪರೀಕ್ಷೆ ಮಾಡಿಸಿದ ನಂತರವಷ್ಟೆ ಅವರ ನಿಗದಿತ ಸಲಹೆ ಮೇರೆಗೆ ಮಾತ್ರ ಈ ಔಷಧಿಗಳನ್ನು ನೀಡುಬೇಕು.
ಹಿರಿಯ ಮಕ್ಕಳ ವಿಚಾರದಲ್ಲಿ
ಸ್ವಲ್ಪ ಹಿರಿಯ ವಯಸ್ಸಿನ ಮಕ್ಕಳಿಗೆ ಕೆಮ್ಮಿನ ಸಿರಪ್’ಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ನೀಡಬೇಕು. ಸಾಧ್ಯವಾದಷ್ಟು ಕಡಿಮೆ ಅವಧಿಗೆ ಕನಿಷ್ಠ ಅಗತ್ಯವಿರುವ ಡೋಸ್ ಅನ್ನು ಬಳಸಿ. ಬಹು ಔಷಧಿಗಳ ಸಂಯೋಜನ ಇರುವ ಸಿರಪ್’ಗಳನ್ನು ಉಪಯೋಗಿಸಬಾರದು.
ಸುರಕ್ಷಿತ ಮನೆಮದ್ದುಗಳು ಉತ್ತಮ
ಚಿಕ್ಕಮಕ್ಕಳಲ್ಲಿ ಕೆಮ್ಮ ಹಾಗೂ ಶೀತದ ಪ್ರಭಾವ ಸೌಮ್ಯವಾಗಿರುತ್ತದೆ. ಇದು ಮನೆಮದ್ದುಗಳಿಂದಲೇ ಗುಣವಾಗುವ ಸಾಧ್ಯತೆಯಿರುತ್ತದೆ.ಸುರಕ್ಷಿತವಾದ ಕ್ರಮಗಳಿಂದ ನಿಧಾನವಾಗಿ ಉತ್ತಮಗೊಳ್ಳುತ್ತದೆ.
ಪೋಷಕರು ಮಕ್ಕಳಿಗೆ
ಸಾಕಷ್ಟು ದ್ರವಪದಾರ್ಥಗಳನ್ನು ನೀಡುವುದು, ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಮಾಡಲು ಅವಕಾಶ ನೀಡುವುದು. ಪೌಷ್ಟಿಕ ಆಹಾರವನ್ನು ನೀಡುವುದು.
ಸ್ವಯಂ ಔಷದೋಪಚಾರ ಮಾಡಬೇಡಿ
ವೈದ್ಯರ ಸಲಹೆ ಇಲ್ಲದೆ ಕೆಮ್ಮಿನ ಸಿರಪ್’ಗಳನ್ನು ಎಂದಿಗೂ ಖರೀದಿಸಬೇಡಿ ಅಥವಾ ಬಳಸಬೇಡಿ. ಈ ಹಿಂದೆ ಬಳಸಿ ಉಳಿದ ಔಷಧಗಳನ್ನು ಅಥವಾ ಇತರರು ಶಿಫಾರಸು ಮಾಡಿದ ಔಷಧಗಳನ್ನು ಬಳಸುವುದನ್ನು ನಿಲ್ಲಿಸಿ. ಮಕ್ಕಳಲ್ಲಿ ಯಾವುದೇ ಅಸಹಜ ಪ್ರತಿಕ್ರಿಯೆ, ನಿದ್ರಾವಸ್ಥೆ, ವಾಂತಿ ಅಥವಾ ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ಹತ್ತಿರದ ತಜ್ಞ ವೈದ್ಯರಿಗೆ ತೋರಿಸಿ. ಔಷಧದ ಅವಧಿ ಮುಗಿಯುವ ದಿನಾಂಕ ಪರಿಶೀಲಿಸಿ ಮತ್ತು ಲೇಬಲ್’ಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















