ಕಲ್ಪ ಮೀಡಿಯಾ ಹೌಸ್ | ಮೈಸೂರು |
ರಾಷ್ಟ್ರ ರಾಜಧಾನಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್ ಸ್ಫೋಟ #Bomb Blast in Delhi ಅತ್ಯಂತ ಹೇಯ ಕೃತ್ಯ ಹಾಗು ಅದರ ಹಿಂದೆ ಕೆಲವು ನಾಡದ್ರೋಹಿ ವೈದ್ಯರ ಪಾತ್ರ ಇಡೀ ವೈದ್ಯ ಸಮುದಾಯಕ್ಕೆ ಕಳಂಕ ಎಂದು ಹಿರಿಯ ಬಿಜೆಪಿ ನೇತಾರ, ಖ್ಯಾತ ನರ ರೋಗ ತಜ್ಞ ಡಾ. ಸುಶ್ರುತ ಗೌಡ ಬಣ್ಣಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ವೈದ್ಯರು ಇರುವುದು ಮನು ಕುಲದ ಜೀವ ರಕ್ಷಣೆಗೆ. ಅದಕ್ಕಾಗಿಯೇ ಸಮಾಜದಲ್ಲಿ ಅವರಿಗೆ ಉನ್ನತ ಸ್ಥಾನಮಾನವಿದೆ. ಇದನ್ನು ಅರಿಯದೆ, ಕೆಲವು ನಾಡ ದ್ರೋಹಿ ವೈದ್ಯರು, ದೇಶ ಸೇವೆ ಬದಲು, ಉಗ್ರರ ಜೊತೆಗೆ ಕೈ ಸೇರಿಸಿರುವುದು ಆಘಾತಕಾರಿ ಸಂಗತಿ ಎಂದು ಅವರು ತಿಳಿಸಿದ್ದಾರೆ.
“ಈ ಎಲ್ಲಾ ಸಂಚುಕೋರರು ತಜ್ಞ ವೈದ್ಯರಾಗಲು ಕೇಂದ್ರ-ರಾಜ್ಯ ಸರಕಾರಗಳು ಬಹಳಷ್ಟು ಸಂಪನ್ಮೂಲ ವ್ಯಯ ಮಾಡಿವೆ. ತಮ್ಮ ಜ್ಞಾನವನ್ನು ಅವರು ಬಡವರ ಜೀವ ಉಳಿಸಲು ಬಳಸಬೇಕಿತ್ತು. ಆದರೆ, ಅವರು ಧಾರ್ಮಿಕ ಮೂಲಭೂತವಾದಿಗಳಾಗಿ ಬದಲಾಗಿರುವುದು ಆತಂಕದ ಸಂಗತಿ,” ಎಂದು ಅವರು ತಿಳಿಸಿದ್ದಾರೆ.
“ಧಾರ್ಮಿಕ ಮೂಲಭೂತವಾದಿತನ ದೇಶಕ್ಕೆ ಅಪಾಯ. ತಕ್ಷಣ ಇದರ ವಿರುದ್ಧ ಕೇಂದ್ರ ಹಾಗು ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ತನ್ನ ತುಷ್ಟಿಕರಣ ನೀತಿ ನಿಲ್ಲಿಸಬೇಕು,” ಎಂದು ಅವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ
ಈ ಘಟನೆಗೆ ಕೇಂದ್ರ ಸರಕಾರವನ್ನು ದೂಷಿಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಡಾ. ಸುಶ್ರುತ ಗೌಡ ಕಿಡಿ ಕಾರಿದ್ದಾರೆ. ಪೊಲೀಸ್ ತನಿಖೆ ಪ್ರಕಾರ ಉಗ್ರರ ಸಂಚನ್ನು ವಿಫಲಗೊಳಿಸಿ ಸಾವಿರಾರು ಜನರ ಬದುಕನ್ನು ರಕ್ಷಿಸುವಲ್ಲಿ ಕೇಂದ್ರದ ನಾನಾ ಏಜನ್ಸಿಗಳು ಯಶಸ್ವಿಯಾಗಿವೆ. ಆದರೆ ತನಿಖೆ ಸಂದರ್ಭದಲ್ಲಿ ಭೀತಿಯಿಂದ ಈ ಧಾಳಿ ನಡೆದಿದೆ. “ಕೇಂದ್ರ ಸರಕಾರವನ್ನು ಪ್ರಶಂಸಿಸಿ, ಗೌರವಿಸುವ ಬದಲು ಇಲ್ಲಿ ಕೂಡಾ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿರುವುದು ದುರಂತ,” ಎಂದು ಅವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















