ಕಲ್ಪ ಮೀಡಿಯಾ ಹೌಸ್ | ಮೈಸೂರು |
ನೈರುತ್ಯ ರೈಲ್ವೆ ಮೈಸೂರು ವಿಭಾಗವು #Southwestern Railway Mysore Division ಇಂದು ರಾಷ್ಟ್ರಮಟ್ಟದ ಡಿಜಿಟಲ್ ಲೈಫ್ ಸರ್ಟಿಫಿಕೆಟ್ ಅಭಿಯಾನ 4.0 ರ ಅಂಗವಾಗಿ ಮೇಗಾ ಡಿಜಿಟಲ್ ಲೈಫ್ ಸರ್ಟಿಫಿಕೆಟ್ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಕಾರ್ಯಕ್ರಮವನ್ನು ಕಾರ್ಮಿಕ ಮತ್ತು ಹಣಕಾಸು ವಿಭಾಗಗಳ ಸಂಯೋಜನೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ತಮ್ಮ ವಾರ್ಷಿಕ ಡಿಜಿಟಲ್ ಲೈಫ್ ಸರ್ಟಿಫಿಕೆಟ್ಗಳನ್ನು ಅತ್ಯಾಧುನಿಕ ಮುಖ ಗುರುತಿನ ತಂತ್ರಜ್ಞಾನದ ಮೂಲಕ ಸಲ್ಲಿಸಲು ನೆರವು ನೀಡುವುದು ಹಾಗೂ ಜೀವನ್ ಪ್ರಮಾಣ ಡಿಜಿಟಲ್ ವೇದಿಕೆಯ ಬಗ್ಗೆ ಜಾಗೃತಿ ಮೂಡಿಸುವುದೇ ಇದರ ಉದ್ದೇಶವಾಗಿದೆ.
ಈ ಅಭಿಯಾನವು ಪಿಂಚಣಿದಾರರಿಗೆ ಹೆಚ್ಚಿನ ಸೌಲಭ್ಯ, ಸುಲಭ ಮತ್ತು ಸರಳ ಜೀವನ ಅನುಭವ ಒದಗಿಸುವ ಗುರಿಯಾಗಿಸಿಕೊಂಡಿತ್ತು. ವಿವಿಧ ಬ್ಯಾಂಕುಗಳ ಅಧಿಕಾರಿಗಳು ಪಾಲ್ಗೊಂಡಿದ್ದರಿಂದ ಶಿಬಿರಕ್ಕೆ ಅಪಾರ ಪ್ರತಿಕ್ರಿಯೆ ದೊರೆಯಿತು. ಸುಮಾರು 350 ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಈ ಶಿಬಿರದ ಸೇವೆಯನ್ನು ಪಡೆದರು.
ಕಾರ್ಯಕ್ರಮಕ್ಕೆ ಮುದಿತ್ ಮಿತ್ತಲ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಮೈಸೂರು ವಿಭಾಗ (ಮುಖ್ಯ ಅತಿಥಿ); ಶಮ್ಮಾಸ್ ಹಮೀದ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಗೌರವ ಅತಿಥಿ); ವಿಷ್ಣು ಗೌಡ, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ, ಪಾರ್ಥಸಾರಥಿ, ಅಧ್ಯಕ್ಷರು, ರೈಲ್ವೆ ಪಿಂಚಣಿದಾರರ ಕಲ್ಯಾಣ ಸಂಘ, ಮೈಸೂರು, ಜಿ. ಸ್ವಾಮಿನಾಥನ್, ಕಾರ್ಯದರ್ಶಿ, ಪಿಂಚಣಿದಾರರ ಸಂಘ, ಮೈಸೂರು ಇವರು ಉಪಸ್ಥಿತರಿದ್ದರು.
ಹಿರಿಯ ರೈಲ್ವೆ ಅಧಿಕಾರಿಗಳು ಹಾಗೂ ವಿವಿಧ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಕೂಡ ಹಾಜರಿದ್ದು, ಪಿಂಚಣಿದಾರರಿಗೆ ಡಿಜಿಟಲ್ ಸರ್ಟಿಫಿಕೇಷನ್ ಪ್ರಕ್ರಿಯೆಯಲ್ಲಿ ಅಗತ್ಯ ಮಾರ್ಗದರ್ಶನ ಮತ್ತು ಸಹಕಾರ ನೀಡಿದರು.
ಕಾರ್ಯಕ್ರಮದ ಭಾಗವಾಗಿ, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು 80 ವರ್ಷಕ್ಕಿಂತ ಮೇಲ್ಪಟ್ಟ ಪಿಂಚಣಿದಾರರನ್ನು ಸನ್ಮಾನಿಸಿ, ಅವರ ಹಾಜರಾತಿ ಮತ್ತು ಭಾರತೀಯ ರೈಲ್ವೆಯ ಮೇಲಿನ ದೀರ್ಘಕಾಲದ ಕೊಡುಗೆಯನ್ನು ಗೌರವಿಸಿದರು.
ಈ ಶಿಬಿರವು 350 ಕ್ಕೂ ಹೆಚ್ಚು ಪಿಂಚಣಿದಾರರು ತಮ್ಮ DLC ಸಲ್ಲಿಕೆಯನ್ನು ಸುಗಮವಾಗಿ ಪೂರ್ಣಗೊಳಿಸಲು ನೆರವಾಗಿದ್ದು, ಜೊತೆಗೆ ವಿಶಿಷ್ಟ ವೈದ್ಯಕೀಯ ಗುರುತಿಸುವಿಕೆ ನೋಂದಣಿ ಹಾಗೂ ಅಹವಾಲು ಪರಿಹಾರ ಸೇವೆಗಳನ್ನೂ ಒದಗಿಸುವ ಮೂಲಕ ಪಿಂಚಣಿದಾರರ ಕಲ್ಯಾಣಕ್ಕಾಗಿ ಸಹಕಾರಿಯಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















