ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೋಟರಿ ಸಂಸ್ಥೆ ನೀಡುವ ‘ರೋಟರಿ ಪೋಲಿಯೊ ಜೀವಮಾನ ಸಾಧನೆ ಪ್ರಶಸ್ತಿ’ ಪ್ರಕಟಿಸಿದ್ದು, ನಗರದ ಖ್ಯಾತ ವೈದ್ಯ, ಹಿರಿಯ ರೊಟೇರಿಯನ್ ಡಾ.ಪಿ.ನಾರಾಯಣ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಶನಿವಾರ ದೆಹಲಿಯಲ್ಲಿ ನಡೆದ ಭಾರತ, ಪಾಕಿಸ್ತಾನ, ಶ್ರೀಲಂಕ, ಬಾಂಗ್ಲಾದೇಶ, ನೇಪಾಳ, ಭೂತಾನದ ಅಂತರಾಷ್ಟ್ರೀಯ ರೋಟರಿ ಸಮಾವೇಶದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಭಾರತದಲ್ಲಿ ಪೋಲಿಯೊ ನಿರ್ಮೂಲನಾ ಮಿಷನ್ ಗಾಗಿ ಅತ್ಯಂತ ಮಹತ್ತರ ಕೊಡುಗೆಗಳನ್ನು ನೀಡಿರುವ ಕೀರ್ತಿ ಡಾ.ಪಿ.ನಾರಾಯಣ್ ಅವರಿಗೆ ಸಲ್ಲುತ್ತದೆ. 1998 ರಿಂದ 2014 ರವರೆಗೆ ಪೋಲಿಯೊ ವಿರುದ್ಧ ಹೋರಾಟದಲ್ಲಿ ಸಕ್ರಿಯರಾದ ಅವರು ಭಾರತದ ನೂರಾರು ಹಳ್ಳಿಗಳಿಗೆ ತಲುಪಿ, ಪೋಲಿಯೊ ವಿರುದ್ಧ ಜಾಗೃತಿ ಹಾಗೂ ಲಸಿಕೆಯನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಪೋಲಿಯೊ ಪ್ಲಸ್ ರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತ, ‘ಪೋಲಿಯೊ ನಾರಾಯಣ’ ಎಂದೇ ಖ್ಯಾತರಾಗಿದ್ದಾರೆ.
ಪೋಲಿಯೊ ವಿರುದ್ಧ ಕಾರ್ಯಕ್ರಮದ ಅನುಷ್ಟಾನಕ್ಕಾಗಿ, ಡಬ್ಲು.ಹೆಚ್.ಓ, ಯುನಿಸೆಫ್, ಸಿಡಿಸಿ, ಬಿಲ್ಗೇಟ್ಸ್ ಫೌಂಡೇಷನ್ ನಂತಹ ಸಂಸ್ಥೆಗಳನ್ನು ಒಂದೆಡೆ ಕ್ರೋಡಿಕರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಟ್ರಬಲ್ ಶೂಟರ್ ನಂತೆ ಕಾರ್ಯನಿರ್ವಹಿಸಿದ್ದ ನಾರಾಯಣ್ ಅವರು ರೋಟರಿ ಸಮೂಹದ ಪ್ರೇರಣೆ, ಪಲ್ಸ್ ಪೋಲಿಯೊ ಬಗ್ಗೆ ಜನಜಾಗೃತಿ ಹಾಗೂ ಲಸಿಕೆ ಬಗ್ಗೆಯಿದ್ದ ಪ್ರತಿರೋಧಗಳನ್ನು ಸಾರ್ವಜನಿಕರಿಗೆ ಮನ ಒಲಿಸುವಂತಹದ್ದು ಇವರ ಕಾರ್ಯಸೂಚಿಯಾಗಿತ್ತು.
ಪೋಲಿಯೊ ಮುಕ್ತ ಭಾರತ ನಿರ್ಮಾಣ ಕಾರ್ಯದಲ್ಲಿ ಅವಿರತ ಶ್ರಮಿಸಿದ ನಾರಾಯಣ್ ಅವರ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















