ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ #G S Shivarudrappa ಅವರ ಜನ್ಮಶತಮಾನೋತ್ಸವ ಮತ್ತು ಅವರ ನೆನಪಿನಲ್ಲಿ ಶಿವಮೊಗ್ಗದಲ್ಲಿ ಪ್ರಾರಂಭವಾದ ಜಿಎಸ್ಎಸ್ ಪ್ರತಿಷ್ಠಾನದ ದಶಮಾನೋತ್ಸವ ವರ್ಷವಾದ-2026ನ್ನು ವಿಶೇಷವಾಗಿ ಆಚರಿಸಲು ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ ಶಿವಮೊಗ್ಗ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ನಿವೃತ್ತ ಪ್ರೋ.ಕಿರಣ್ ದೇಸಾಯಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನವರಿ 2026ರಿಂದ ಫೆ.27ರವರೆಗೆ ಒಂದು ವರ್ಷಗಳ ಕಾಲ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಂಡು ಸಮನ್ವಯ ಕವಿ ಎಂದೇ ಹೆಸರಾದ ಜಿ.ಎಸ್.ಎಸ್. ಅವರ ಬದುಕು, ಬರಹ, ಚಿಂತನೆಯನ್ನು ಹೊಸತಲೆಮಾರಿಗೆ ತಲುಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿ.ಎಸ್.ಎಸ್. ಅವರ ಕವಿತೆಗಳ ಗೀತಗಾಯನ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಅಲ್ಲದೆ ಜಿ.ಎಸ್.ಎಸ್. ಕುರಿತ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಜಿ.ಎಸ್.ಎಸ್. ಕವನಗಳಿಗೆ ರಾಗ ಸಂಯೋಜನೆ ಮತ್ತು ಜಿ.ಎಸ್.ಎಸ್. ಸಾಹಿತ್ಯ ಕುರಿತ ಕಾರ್ಯಾಗಾರ, ಜಿ.ಎಸ್.ಎಸ್. ಬದುಕು-ಬರಹ ಕುರಿತ ರಂಗರೂಪಕ, ಕಾವ್ಯರಂಗ, ಕುವೆಂಪು ವಿವಿ ಸಹಕಾರದಲ್ಲಿ ಜಿಎಸ್ಎಸ್ ಕುರಿತು ವಿಚಾರ ಸಂಕಿರಣ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಶಿವಮೊಗ್ಗ ಮತ್ತು ರಾಜ್ಯದ ಹಲವೆಡೆ ವಿಶ್ವವಿದ್ಯಾಲಯಗಳು ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಆಯೋಜನೆ ಮಾಡಲು ಪ್ರತಿಷ್ಠಾನ ಯೋಜನೆ ರೂಪಿಸಿದೆ ಎಂದರು.
ಮೊದಲ ಕಾರ್ಯಕ್ರಮವಾಗಿ ಜಿ.ಎಸ್.ಎಸ್. ಗೀತಗಾಯನ ಸ್ಪರ್ಧೆಯನ್ನು ಏರ್ಪಡಿಸಿದ್ದು, ವಿಜೇತರಿಗೆ ಪ್ರತಿಷ್ಠಾನದಿಂದ ಪ್ರಥಮ 10,000, ದ್ವಿತೀಯ 7500, ತೃತೀಯ 5000 ಮತ್ತು ಸಮಾಧಾನಕರ 2000 ರೂ. ನಗದು ಬಹುಮಾನ ಮತ್ತು ಪ್ರಶಸ್ತಿಪತ್ರ ನೀಡಲಾಗುತ್ತದೆ ಎಂದರು.
ಈ ಸ್ಪರ್ಧೆಯಲ್ಲಿ 18ರಿಂದ 55 ವರ್ಷದವರೆಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಜಿಎಸ್ಎಸ್ ಅವರ ಈಗಾಗಲೇ ಪ್ರಚಲಿತದಲ್ಲಿರುವ ಗೀತೆಗಳನ್ನು ಹೊರತುಪಡಿಸಿ, ನೂತನ ರಾಗ ಸಂಯೋಜನೆ ಇರುವ ಜಿಎಸ್ಎಸ್ ಕವನಗಳಿಗೆ ಆದ್ಯತೆ ನೀಡಲಾಗುತ್ತದೆ. ತೀರ್ಪುಗಾರರ ನಿರ್ಣಯವೇ ಅಂತಿಮವಾಗಿದ್ದು, ಸ್ಪರ್ಧೆಯಲ್ಲಿ ಶ್ರುತಿಯನ್ನು ಮಾತ್ರ ಬಳಸಲು ಅವಕಾಶವಿರುತ್ತದೆ. ಸ್ಪರ್ಧಿಗಳು ಜಿ.ಎಸ್.ಎಸ್. ಗೀತೆಯ ಗಾಯನಮಾಡಿ (ಎಂಪಿ3 ಫಾರ್ಮೆಟ್ನಲ್ಲಿ ಆಡಿಯೋ+ವೀಡಿಯೋ)ಈ ಮೇಲ್ ಮೂಲಕ gsshivಚಿಡಿuಜಡಿಚಿಠಿಠಿಚಿ100@gmಚಿiಟ.ಛಿom ಈ ವಿಳಾಸಕ್ಕೆ ಕಳುಹಿಸಬೇಕು. ಅತ್ಯುತ್ತಮವಾಗಿ ಹಾಡಿದ 20 ಸ್ಫರ್ಧಿಗಳನ್ನು ಗುರುತಿಸಿ ಆಯ್ಕೆಮಾಡಿ, ಶಿವಮೊಗ್ಗದಲ್ಲಿ ನಡೆಯಲಿರುವ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು ಅದರಲ್ಲಿ ಪ್ರಶಸ್ತಿ ವಿಜೇತರನ್ನು ಆಯ್ಕೆಮಾಡಲಾಗುವುದು ಎಂದರು.
ಆಸಕ್ತರು ವೀಡಿಯೋ ಕಳುಹಿಸಲು 10-01-2026 ಅಂತಿಮ ದಿನವಾಗಿದ್ದು, ಶಿವಮೊಗ್ಗದಲ್ಲಿ ಜಿಎಸ್ಎಸ್ ಪ್ರತಿಷ್ಠಾನದ ವಿಶೇಷ ಕಾರ್ಯಕ್ರಮ ಕಾವ್ಯಸೌರಭದಲ್ಲಿ ವಿಜೇತರಿಗೆ ಗಾಯನಮಾಡಲು ಅವಕಾಶ ನೀಡಲಾಗುತ್ತದೆ ಎಂದರು.
ಹೆಚ್ಚಿನ ಮಾಹಿತಿಗೆ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಈಶ್ವರಪ್ಪ, ಮೊ.6391969164ರಲ್ಲಿ ಸಂಪರ್ಕಿಸಲು ಕೋರಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಪ್ರಮುಖರಾದ ಹಾಲಸ್ವಾಮಿ, ಕೆ.ಎಸ್. ಈಶ್ವರಪ್ಪ, ನಾಗಮಣಿ, ವಿನಯ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















