ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಬದುಕು ಎಂಬುದು ಅನಿಶ್ಚಿತತೆಯ ಪಯಣ. ಎಷ್ಟೋ ವೇಳೆ ಈ ಪಯಣದಲ್ಲಿ ಎದುರಾಗುವ ಸವಾಲು, ಸಂಕಷ್ಟ, ನೋವು, ನಲಿವು, ಯಾತನೆ ಯಾರೂ ಊಹಿಸಲಾಗದು. ಅದರಲ್ಲೂ ಅನಿರೀಕ್ಷಿತವಾಗಿ ಅನೂಹ್ಯವಾಗಿ ಆರೋಗ್ಯ ಸಮಸ್ಯೆಗಳು ಬಂದರಂತೂ ಯಾರಿಗೇ ಆಗಲಿ ಆಕಾಶವೇ ತಲೆಯಮೇಲೆ ಬಿದ್ದಂತಹ ಅನುಭವವಾಗುವುದು ಸರ್ವವೇದ್ಯ. ಸ್ವಾಸ್ಥ್ಯ ಎಂಬುದು ಶ್ರೀಮಂತ-ಬಡವ ಎಂದು ನೋಡಿಕೊಂಡು ಬರುವುದಿಲ್ಲ. ಆದರೆ ಬಂದೆರಗುವ ಸ್ವಾಸ್ಥ್ಯ ಸಂಬಂಧಿ ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ಆರ್ಥಿಕವಾಗಿ ಸದೃಢರಾಗಿರುವವರಿಗೆ ಸಾಧ್ಯವಾಗಬಹುದೇನೋ! ಆದರೆ ಆರ್ಥಿಕವಾಗಿ ಶಕ್ತರಲ್ಲದವರಿಗೆ ಬರಸಿಡಿಲಿನಂತೆ ಎರಗುವ ಮಾರಣಾಂತಿಕ ಕಾಯಿಲೆಗಳು ಅವರ ಬದುಕಿಗೊಂದು ತಡೆಯಾಗಿ ಕಾಡಬಹುದು.
ಕಾನ್ಸರ್ನಂತಹ ಕಾಯಿಲೆಗಳನ್ನು ಎದುರಿಸುವಾಗ ಆರ್ಥಿಕ ಸಂಕಷ್ಟದಲ್ಲಿರುವವರ ಕುಟುಂಬಗಳ ಗೋಳು, ನರಳಾಟ ಹೇಳತೀರದು. ಒಂದೆಡೆ ಆಳ-ಅಳತೆಗೆ ಸಿಗದ ವೈದ್ಯಕೀಯ ಖರ್ಚು; ಇನ್ನೊಂದೆಡೆ ಶತಾಯಗತಾಯ ಹೇಗಾದರೂ ಮಾಡಿ ರೋಗಪೀಡಿತ ಜೀವವನ್ನು ಉಳಿಸಿಕೊಳ್ಳುವ ಧಾವಂತ. ಕಾನ್ಸರ್ನಂತಹ ಮಾರಣಾಂತಿಕ ಕಾಯಿಲೆಗಳು ಆರಂಭಿಕ ಹಂತದಲ್ಲಿಯೇ ಗಮನಕ್ಕೆ ಬಂದು, ಆ ಹಂತದಲ್ಲೇ ಸಕಾಲಿಕ ವೈದ್ಯಕೀಯ ನೆರವಿನಿಂದ ಉಪಶಮನವಾದರೆ ಬಹಳ ಒಳ್ಳೆಯದು. ಆದರೆ, ಅಂತಿಮ ಹಂತ ತಲುಪಿ, ಕಾಯಿಲೆ ಉಲ್ಬಣಿಸಿ, ಇನ್ನು ನೋಡಿಕೊಳ್ಳಲಾಗದು; ಕಾಯಿಲೆ ನಿವಾರಣೆಯಾಗದು ಎನ್ನುವಂತಹ ಅತಂತ್ರ ಸ್ಥಿತಿಯಲ್ಲಿ ಆರೈಕೆ ಮಾಡಲಾಗದೆ ಖರ್ಚು-ವೆಚ್ಚ ಭರಿಸಲಾಗದೆ ಎಷ್ಟೋ ಕುಟುಂಬಗಳು ಪರಿತಪಿಸುವುದನ್ನು ನಾವು ನಿತ್ಯ ನೋಡುತ್ತೇವೆ. ಇಂತಹ ಕೈಬಿಟ್ಟ ತ್ರಿಶಂಕು ಪರಿಸ್ಥಿತಿಯಲ್ಲಿ ಅಂತಹ ರೋಗಸಂತ್ರಸ್ತರ ಆರೈಕೆಯನ್ನು ಮಾಡಲೇಬೇಕಾಗುತ್ತದೆ. ಇದಕ್ಕೆ ಸಮರ್ಪಕವಾದ ಆರ್ಥಿಕ ಸದೃಢತೆ ಹೊಂದಿರದ ಕುಟುಂಬಗಳು ತನ್ನ ಸದಸ್ಯರನ್ನು ಅಸಹಾಯಕವಾಗಿ ಅಕಾಲಿಕವಾಗಿ ಕಣ್ಣೆದುರೇ ಕಳೆದುಕೊಳ್ಳಬೇಕಾದ ವಿಷಮಸ್ಥಿತಿ ಎದುರಿಸಬೇಕಾಗುತ್ತದೆ. ಇಂತಹ ದಾರುಣ ಸ್ಥಿತಿಯನ್ನು ಮನಗಂಡ ಸುಕೃತಿ ಚಾರಿಟಬಲ್ ಟ್ರಸ್ಟ್ ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು; ಬಾಧಿತರಿಗೆ ಉಚಿತವಾಗಿ ವೈದ್ಯಕೀಯ ನೆರವು-ಶುಶ್ರೂಷೆ-ಆರೈಕೆ ದೊರಕಬೇಕು; ಅವರಿಗೆ ಉತ್ತಮ ಜೀವನ, ವಾತಾವರಣ ನೀಡಬೇಕು ಎಂಬ ದೀಕ್ಷೆ ತೊಟ್ಟು ಹೊರಟ ಹಾದಿಯೇ `ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರ (ಪಾಲಿಯೇಟೀವ್ ಕೇರ್ ಸೆಂಟರ್).
ನೆಮ್ಮದಿ ಉಪಶಾಮಕ ಕೇಂದ್ರ-ಇದು ಸುಕೃತಿ ಚಾರಿಟಬಲ್ ಟ್ರಸ್ಟ್ನ ಸಂಸ್ಥಾಪಕ ರೊಟೇರಿಯನ್ ಬಿ.ಎಸ್. ನಾಗರಾಜನ್ ಅವರ ಪರಿಕಲ್ಪನೆ; ಕಲ್ಪನೆಯ ಕೂಸು. ಈ ಬೃಹತ್ ಆಲೋಚನೆಗೆ ನಾಗರಾಜ್ ಅವರ ಪತ್ನಿ ಕವಿತಾ ಹಾಗೂ ಅವರ ಮಕ್ಕಳು ಹೃತ್ಪೂರ್ವಕವಾಗಿ, ಸರಿಸಾಟಿಯಾಗಿ ಭೇಷರತ್ ಬೆಂಬಲ-ಸಹಕಾರ ನೀಡುತ್ತಿದ್ದಾರೆ. ಕೇವಲ ೫ ವರ್ಷಗಳ ಅಲ್ಪಾವಧಿಯಲ್ಲಿಯೇ ಸುಕೃತಿ ಚಾರಿಟಬಲ್ ಟ್ರಸ್ಟ್ ಇಂತಹದೊಂದು ಬೃಹದಾಕಾರದ ಯೋಜನೆಯನ್ನು ಸಾಕಾರಗೊಳಿಸುತ್ತಿರುವುದು ನಿಜಕ್ಕೂ ಅಚ್ಚರಿಯೇ ಸರಿ.
ಒಟ್ಟಾರೆ ನಾಗರಾಜ್ ಅವರ ಇಡೀ ಕುಟುಂಬವೇ ಈ ಸೇವಾಕೈಂಕರ್ಯದಲ್ಲಿ ನಿಸ್ಪೃಹರಾಗಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕಾರ್ಯತತ್ಪರರಾಗಿರುವುದು ನಿಜಕ್ಕೂ ಪ್ರಶಂಸಾರ್ಹ. ಇದರೊಂದಿಗೆ ನಾಗರಾಜನ್ ಅವರ ಸುದೀರ್ಘ 37 ವರ್ಷಗಳ ಸ್ನೇಹದ ಹಿನ್ನೆಲೆಯ ಸಹಪಾಠಿಗಳ ಬಳಗದ ಅಪಾರ-ಅಗಣಿತ ಸಹಕಾರವೇ ಈ ಸುಕೃತಿಯ ಸಮಾಜಸೇವೆಯ ಶಕ್ತಿಕೇಂದ್ರವಾಗಿದೆ.
ಇಂತಹ ಬಾಧಿತ ಸಂತ್ರಸ್ತರು ರೋಗವಿಮುಕ್ತರಾಗಲು ಸಾಧ್ಯವಿಲ್ಲ ಅನ್ನುವ ಹಂತದಲ್ಲಿ ಕನಿಷ್ಟಪಕ್ಷ ಅವರ ವೈದ್ಯಕೀಯ ಆರೈಕೆಯಾದರೂ ಉಚಿತವಾಗಿ ಮುಂದುವರೆದು ಅವಶ್ಯಕತೆ ಇರುವ ತನಕ ನಿರಂತರವಾಗಿ ದೊರಕಬೇಕೆಂಬ ಮಹತ್ವಾಕಾಂಕ್ಷೆಯ ಫಲಶೃತಿಯಾಗಿ ನೆಮ್ಮದಿ ಆರೈಕೆ ಕೇಂದ್ರ ಅಸ್ತಿತ್ವ ಪಡೆದಿರುವುದು ಸುಕೃತಿಯೇ ಸರಿ.
ಪ್ರತಿ ವರ್ಷ ದೇಶದಲ್ಲಿ 60 ಲಕ್ಷದಿಂದ 80 ಲಕ್ಷ ಸಂತ್ರಸ್ತರು ಕ್ಯಾನ್ಸರ್ನಂತಹ ಮಾರಕ ರೋಗಕ್ಕೆ ತುತ್ತಾಗಿ ಆರ್ಥಿಕ ಕೊರತೆ, ಆರೈಕೆಯ ಕೊರತೆಯಿಂದ ನರಳುತ್ತಿದ್ದಾರೆ. ಅಂದರೆ, ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 6-8 ಮಿಲಿಯನ್ ಸಂತ್ರಸ್ತರಿಗೆ ಉಪಶಾಮಕ ಆರೈಕೆಯ ಅಗತ್ಯವಿದೆ. ಶೇ.2ರಷ್ಟು ಸಂತಸ್ತರು ಮಾತ್ರ ಉಪಶಾಮಕ ಆರೈಕೆ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಅಂತರ ಕಡಿಮೆ ಮಾಡುವುದು ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರದ ಪ್ರಯತ್ನ ಎಂಬುದು ಟ್ರಸ್ಟಿ ರೊಟೇರಿಯನ್ ಬಿ.ಎಸ್. ನಾಗರಾಜನ್ ಅವರ ಧ್ಯೇಯೋದ್ದೇಶ.
ಕಳೆದೆರಡು ವರ್ಷಗಳಿಂದ ನಾಗರಾಜನ್ ಅವರನ್ನು ಕೊರೆಯುತ್ತಿದ್ದ ಈ ಸವಾಲು ಅನುಷ್ಠಾನಗೊಳ್ಳುವ ಹಂತಕ್ಕೆ ತಲುಪಿದ ಕಾರಣವೇ ಯೋಜನೆಯೊಳಗೆ ಇ. ಕೃಷ್ಣಪ್ಪ ಅವರ ಪ್ರವೇಶದಿಂದ. ಯೋಜನೆಯ ಮೂಲಾಧಾರ ಮಾಜಿ ಎಂಎಲ್ಸಿ ಇ.ಕೃಷ್ಣಪ್ಪ. ನೆಮ್ಮದಿ ಕೇಂದ್ರದ ಮಹೋನ್ನತ ಉದ್ದೇಶವನ್ನು ಅರಿತ ಚಲನಚಿತ್ರ ನಿರ್ಮಾಪಕ, ಉದ್ಯಮಿ ಇ. ಕೃಷ್ಣಪ್ಪ ತಡಮಾಡಲಿಲ್ಲ. ಈ ಮಹತ್ವದ ಸಮಾಜಮುಖಿ ಯೋಜನೆಗೆ ನೆಲಮಂಗಲ ಸಮೀಪದ ರಾವುತನಹಳ್ಳಿ ರಸ್ತೆಯ ಶಿವನಪುರದ ಇ.ಕೆ. ಎಸ್ಟೇಟ್ನಲ್ಲಿ 1 ಎಕರೆ ಭೂಮಿಯನ್ನು ಉದಾರವಾಗಿ ದಾನವಾಗಿ ನೀಡಿದರು. ಅವರ ಉದಾತ್ತ ಕೊಡುಗೆಯಿಂದ ನೆಮ್ಮದಿ ಕೇಂದ್ರದ ಸ್ಥಾಪನೆಯ ಕನಸು ನನಸಾಯಿತು. ಯೋಜನೆಯ ಬಹುಮುಖ್ಯ ತಿರುವು ಇದು. ಜೊತೆಗೆ ಇ.ಕೆ. ಅವರು ಇಷ್ಟಕ್ಕೇ ಸುಮ್ಮನಾಗಿಲ್ಲ. `ವೃದ್ಧಾಶ್ರಮ, ಅನಾಥಾಶ್ರಮ, ಅಬಲಾಶ್ರಮಗಳನ್ನು ಸ್ಥಾಪಿಸಿ ಫಲಾನುಭವಿಗಳಿಗೆ ಸಹಾಯ ಮಾಡುವುದಾದರೆ ಎಷ್ಟು ಬೇಕಾದರೂ ಭೂಮಿಯನ್ನು ಈ ಉದ್ದೇಶಕ್ಕೆ ನಾನು ನೀಡುವೆ” ಎಂದು ಘೋಷಿಸಿರುವುದು ಇ. ಕೃಷ್ಣಪ್ಪ ಅವರ ಸಾಮಾಜಿಕ ಕಳಕಳಿಯ ಬದ್ಧತೆಗೆ ದ್ಯೋತಕವಾಗಿದೆ.
ಮುಂದೆ ನಾಗರಾಜ್ ಅವರಿಗೆ ರೋಟರಿ ಬೆಂಗಳೂರು ಮಿಡ್ಟೌನ್ ಸಮಗ್ರವಾಗಿ ನೆರವು ನೀಡಲು ಸ್ವಯಂಪ್ರೇರಿತವಾಗಿ ಮುಂದೆ ಬಂದಿತು. ಸ್ವತಃ ರೊಟೇರಿಯನ್ ಆಗಿದ್ದುದರಿಂದ ನಾಗರಾಜನ್ ಅವರಿಗೆ ಇದು ಸಾಧ್ಯವಾಯಿತು. ರೊಟೇರಿಯನ್ ಫ್ಲೈಟ್ ಲೆಫ್ಟಿನೆಂಟ್ ನಾಗೇಶ್, ಮಿಡ್ಟೌನ್ ಅಧ್ಯಕ್ಷ ರಾಜೇಶ್ ಶಾ ಹಾಗೂ ಅವರ ಇಡೀ ತಂಡ ನೆಮ್ಮದಿ ಆರೈಕೆ ಕೇಂದ್ರದ ಬುನಾದಿಗೆ ಕೈಜೋಡಿಸಿದರು.
ಯೋಜನೆಯ ಅನುಷ್ಠಾನಕ್ಕೆ ಟೊಂಕಕಟ್ಟಿನಿಂತರು. ಪ್ರೆಸ್ಟೀಜ್ ಫೌಂಡೇಷನ್, ಸನ್ಸೆರಾ ಫೌಂಡೇಷನ್, ಫೆದರ್ಲೈಟ್ ಸಮೂಹ, ವೆಸ್ಮಾರ್ಕ್ ಡೋರ್ಸ್, ಮಲ್ಲೇಶ್ವರಂನ ಶ್ರೀ ಸಾಯಿ ಮಂಡಳಿ ಟ್ರಸ್ಟ್, ಕುಮಾರ್ ಎಲೆಕ್ಟ್ರಿಕಲ್ಸ್ ಹಾಗೂ ಅನೇಕ ಸಂಘ-ಸಂಸ್ಥೆಗಳ, ಸೇವಾಕಾಂಕ್ಷಿಗಳ, ಮಹಾದಾನಿಗಳ ಉದಾರ ನೆರವು ಒದಗಿಬಂದಿರುವುದು ಉಲ್ಲೇಖನೀಯ.
ಇವೆಲ್ಲದರ ಪರಿಣಾಮವೇ 55 ಹಾಸಿಗೆ ಸಾಮರ್ಥ್ಯದ ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರದ ಅನಾವರಣ. ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಪರಿಕರ, ಸೌಲಭ್ಯಗಳೊಂದಿಗೆ ಕ್ಯಾನ್ಸರ್ಪೀಡಿತರಿಗೆ ಆಶಾಕಿರಣವಾಗಿ ನೆಮ್ಮದಿಯ ನೆಲೆಯಾಗಿ ಆರೈಕೆ ನೀಡಲು ಕೇಂದ್ರ ಸಜ್ಜಾಗಿದೆ.
ಜಾಗತಿಕ ಮಾನವೀಯ ಮಿಷನ್ ಸಂಸ್ಥಾಪಕರಾದ ಮುದ್ದೇನಹಳ್ಳಿಯ ಶ್ರೀ ಶ್ರೀ ಮಧುಸೂಧನ ಸಾಯಿ ಅವರ ಅಮೃತಹಸ್ತದಿಂದ ನೆಮ್ಮದಿ ಪಾಲಿಯೇಟೀವ್ ಕೇರ್ ಸೆಂಟರ್ (ಡಿ.21, 2025) ವಿಧ್ಯುಕ್ತವಾಗಿ ಲೋಕಾರ್ಪಣೆಗೊಂಡಿತು. ಜೊತೆಗೆ ಮಾನವೀಯತೆಯ ಪ್ರತಿರೂಪವಾದ ಮಧುಸೂಧನ್ ಸಾಯಿ ಸಾರಥ್ಯದ ವೈದ್ಯಕೀಯ ಕಾಲೇಜು, ವೈದ್ಯಕೀಯ ತರಬೇತಿ ಸಂಸ್ಥೆಗಳ ಮೂಲಕ ಅಗತ್ಯವಿರುವ ವೈದ್ಯರು, ನುರಿತ ಶುಶ್ರೂಶಕರು ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರದಲ್ಲಿ ಕಾರ್ಯೋನ್ಮುಖರಾಗುತ್ತಿರುವುದು ನಿಜಕ್ಕೂ ಸತ್ಕಾರ್ಯ. ಜಯದೇವ ಹೃದ್ರೋಗ ಸಂಸ್ಥೆಯ ನಿಕಟಪೂರ್ವ ನಿರ್ದೇಶಕ ಹಾಗೂ ಹಾಲಿ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಅವರು ಸ್ವಭಾವಜನ್ಯ ಸರಳತೆಯನ್ನು ಮೈಗೂಡಿಸಿಕೊಂಡು, ನೆಮ್ಮದಿ ಕೇಂದ್ರದ ಮುಖ್ಯ ಸಲಹೆಗಾರರಾಗಿ ಬೆಂಬಲವಾಗಿ, ಯುದ್ಧೋಪಾದಿಯಲ್ಲಿ ಈ ಉಪಕ್ರಮದಲ್ಲಿ ತೊಡಗಿಕೊಂಡಿರುವುದು ಸ್ತುತ್ಯಾರ್ಹ. ಬೆಂಗಳೂರು ರೋಟರಿ ಮಿಡ್ಟೌನ್ ಈ ಯೋಜನೆಯ ಪ್ರೇರಕ ಶಕ್ತಿಯಾಗಿದ್ದು, ನಿರ್ಣಾಯಕ ಹಂತದಲ್ಲಿ ಈ ಉಪಕ್ರಮವನ್ನು ದಿಟ್ಟತನದಿಂದ ಸ್ವೀಕರಿಸಿದೆ. ನಿಧಿಸಂಗ್ರಹಣೆ, ಆಡಳಿತ ನಿರ್ವಹಣೆ ಹಾಗೂ ಯೋಜನೆ ಅನುಷ್ಠಾನದಲ್ಲಿ ಪ್ರಮುಖ ಹಾಗೂ ಮಹತ್ವದ ಪಾತ್ರ ವಹಿಸಿದೆ. ಹಲವಾರು ರೋಟರಿ ಬೆಂಗಳೂರು ಮಿಡ್ಟೌನ್ ಸದಸ್ಯರು ಆರ್ಥಿಕ ನೆರವು ನೀಡಿರುವುದೇ ಅಲ್ಲದೆ, ನಿರ್ವಹಣಾ ಪರಿಣತಿ ಮತ್ತು ಪ್ರಾಯೋಗಿಕವಾಗಿ ಒಳಗೊಳ್ಳುವಿಕೆಯನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಸುಕೃತಿ ಚಾರಿಟಬಲ್ ಟ್ರಸ್ಟ್ನ ಈ ಯೋಜನೆಯಲ್ಲಿ ಸಂಪೂರ್ಣ ತೊಡಗಿಕೊಂಡು, ಸ್ಪಂದಿಸಿ ಊಹೆಗೂ ಮೀರಿ ಸಹಾಯಹಸ್ತವನ್ನು ಚಾಚಿರುವ ರೋಟರಿ ಬೆಂಗಳೂರು ಮಿಡ್ಟೌನ್ ಕೈಂಕರ್ಯ ಶ್ಲಾಘನೀಯ.
“ನೆಮ್ಮದಿ-ಕೇವಲ ಒಂದು ಕಟ್ಟಡವಲ್ಲ; ಇದು ನಿಸ್ವಾರ್ಥವಾಗಿ ಸೇವೆ ಮಾಡುವ ರೋಟರಿಯ ಬದ್ಧತೆಯ ಪ್ರತೀಕ. ನಮ್ಮ ಸದಸ್ಯರು ಸುಕೃತಿ ಚಾರಿಟಬಲ್ ಟ್ರಸ್ಟ್ನೊಂದಿಗೆ ಹೆಗಲಿಗೆ ಹೆಗಲುಕೊಟ್ಟು ನಿಂತಿದ್ದಾರೆ. ವಿಶಾಲ ದೃಷ್ಟಿಕೋನ ರೂಪಿಸುವಲ್ಲಿ, ಸಂಪನ್ಮೂಲ ಕ್ರೋಢೀಕರಣದಲ್ಲಿ ಬೆನ್ನೆಲುಬಾಗಿದೆ” ಎಂದಿರುವ ರೋಟರಿ ಬೆಂಗಳೂರು ಮಿಡ್ಟೌನ್ ಅಧ್ಯಕ್ಷರಾದ ರೊಟೇರಿಯನ್ ರಾಜೇಶ್ ಶಾ ಅವರು ನುಡಿದಂತೆ ನಡೆದಿದ್ದಾರೆ.
ಮಹತ್ವಪೂರ್ಣ ಉಪಕ್ರಮವಾಗಿರುವ ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರದಲ್ಲಿ ಎಲ್ಲಾ ಸೇವೆಗಳನ್ನೂ ಆಮೂಲಾಗ್ರವಾಗಿ ಉಚಿತವಾಗಿ ಒದಗಿಸಲಾಗುತ್ತಿದೆ. ಯಾವುದೇ ಬಿಲ್ಲಿಂಗ್ ಕೌಂಟರ್ ಇಲ್ಲದೆ ಸಂಪೂರ್ಣ ಸೇವಾಧಾರಿತ ಮೌಲ್ಯಗಳ ಮೇಲೆ ಸಮಗ್ರ ವೈದ್ಯಕೀಯ, ಭಾವನಾತ್ಮಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೈಕೆ ಸುಲಭಲಭ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಸಮಾಲೋಚನೆ ಮತ್ತು ಆರೈಕೆಯ ಮೂಲಕ ನೆಮ್ಮದಿ ಕೇಂದ್ರವು ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಸಾಮೂಹಿಕ ಭರವಸೆಯಾಗಿ ನಿಂತಿದೆ. `ನೀವು ಏಕಾಂಗಿಯಲ್ಲ; ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಅಭಯವನ್ನು ಆ ಕುಟುಂಬಗಳಿಗೆ ನೀಡಿದೆ.
ಸುಕೃತಿ ಚಾರಿಟಬಲ್ ಟ್ರಸ್ಟ್ ಮತ್ತು ರೋಟರಿ ಬೆಂಗಳೂರು ಮಿಡ್ಟೌನ್ ಸಹಯೋಗದ ಆ ಶಕ್ತಿಗೆ-ಆಸಕ್ತಿಗೆ `ನೆಮ್ಮದಿ’ ಜ್ವಲಂತ ನಿದರ್ಶನ. ಇದು ಸಮಾಜದ ಅತ್ಯಂತ ದುರ್ಬಲರಿಗೆ ಸಮಗ್ರ, ಮಾನವೀಯ ಆರೋಗ್ಯ ಸಂರಕ್ಷಣೆಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
ಲೇಖನ: ಅಚ್ಯುತ ಸಂಕೇತಿ, 9448086811
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















