ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
-
ಮಧ್ಯ ಕರ್ನಾಟಕ ದಾವಣಗೆರೆಯ ನಾಗರಿಕರೊಬ್ಬರಿಗೆ ಮೊದಲ ಬಾರಿಗೆ ಪದ್ಮಶ್ರೀ ಪ್ರಶಸ್ತಿ -
ಕಾಯಿಲೆಗೆ ಬಲಿಯಾದ ಮಾವನಿಗೆ ಕೊಟ್ಟ ಮಾತಿನಂತೆ ವೈದ್ಯರಾದ ಡಾ. ಸುರೇಶ್ ಹನಗವಾಡಿ -
ಮಾವನ ಸಾವಿನಿಂದ ಪ್ರೇರಿತರಾಗಿ ಸುರೇಶ್ ಅವರು ಹಿಮೋಫೀಲಿಯಾ ಸೊಸೈಟಿ ಕಟ್ಟಿದ ಕತೆ ಇದು
ಕಾಯಿಲೆಗೆ ಬಲಿಯಾದ ಮಾವನಿಗೆ ಕೊಟ್ಟ ಮಾತಿನಂತೆ ವೈದ್ಯರಾದ ಸುರೇಶ್ ಹನಗವಾಡಿ ಎಂಬ ಸಾಧಕರೊಬ್ಬರ ಪ್ರೇರಣಾದಾಯಕ ಕತೆ ಇದು.
ಹೌದು… ಅವರು ಡಾ.ಸುರೇಶ್ ಹನಗವಾಡಿ. ಮಧ್ಯ ಕರ್ನಾಟಕ ದಾವಣಗೆರೆಯ ಖ್ಯಾತ ವೈದ್ಯ. ಕೊಟ್ಟ ಒಂದು ಮಾತಿಗಾಗಿ ವೈದ್ಯರಾಗಿದ್ದು ಮಾತ್ರವಲ್ಲ ಹಿಮೋಫೀಲಿಯಾ ಸೊಸೈಟಿ ಸ್ಥಾಪಿಸಿ, ಆ ರೋಗಿಗಳಿಗೆ ನೀಡಿ ಇವರ ಸೇವೆಯನ್ನು ಗುರುತಿಸಿರುವ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ #PadmaShriAward ಘೋಷಿಸಿದೆ. ವಿಶೇಷ ಎಂದರೆ ಜಿಲ್ಲೆಗೆ ಲಭಿಸಿದ ಮೊದಲ ಪದ್ಮಶ್ರೀ ಪ್ರಶಸ್ತಿಯ ಗೌರವ ಇದಾಗಿದೆ.
ಕಾಯಿಲೆಗೆ ಬಲಿಯಾದ ತಮ್ಮ ಮಾವನ ಸಾವಿನಿಂದ ಪ್ರೇರಿತರಾಗಿ ಸುರೇಶ್ ಅವರು ವೈದ್ಯರಾಗಿ ಕರ್ನಾಟಕ ಹಿಮೋಫೀಲಿಯಾ ಸೊಸೈಟಿಯನ್ನು #KarnatakaHemophiliaSociety ಸ್ಥಾಪಿಸಿ ಸಾವಿರಾರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ.
ಹಿಮೋಫೀಲಿಯಾ ಎಂಬ ರೋಗದ ಬಗ್ಗೆ ಅರಿವಿರಲಿ, ಅದರ ಪರಿಚಯವೇ ಇಲ್ಲದ ಸಮಯ. ಒಂದು ಮಗ್ಗುಲಲ್ಲಿ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದವರು ತಮಗೆ ಯಾವ ಸಮಸ್ಯೆ ಇದೆ ಎಂಬ ಅರಿವಿಲ್ಲದೆಯೇ ಸಾವಿನ ಹಾದಿ ತುಳಿಯುತ್ತಿದ್ದರು. ಇಂಥ ಪರಿಸ್ಥಿತಿಯಲ್ಲಿ ರೋಗಿಗಳ ಆರೈಕೆಗಾಗಿ ದಾವಣಗೆರೆ ನಗರದಲ್ಲಿ 1990 ರಲ್ಲಿ ಜನ್ಮ ತಳೆದದ್ದೇ ಕರ್ನಾಟಕ ಹಿಮೋಫೀಲಿಯಾ ಸೊಸೈಟಿ.
ಇಂತಹ ಸಂಸ್ಥೆಯು ಮೂರು ದಶಕಗಳಿಂದ ಹಿಮೋಫೀಲಿಯಾ ರೋಗಿಗಳ ಸೇವೆಯಲ್ಲಿ ತೊಡಗಿ ಕೊಂಡಿದೆ. ನಿಸ್ವಾರ್ಥ ಸೇವೆ ಗುರುತಿಸಿ ರಾಜ್ಯ, ಅಂತಾರಾಜ್ಯ, ವಿದೇಶಗಳ ಹಲವು ಪ್ರಶಸ್ತಿಗೆ ಈ ಸಂಸ್ಥೆ ಭಾಜನವಾಗಿದೆ.
ವಿಶೇಷ ಎಂದರೆ ಈ ಸಂಸ್ಥೆಯು ನಗರ ಮಾತ್ರವಲ್ಲದೆ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿರುವ #NorthKarnataka ಹಿಮೋಫೀಲಿಯಾ ರೋಗಿಗಳನ್ನು ಗುರುತಿಸಿ, ಅವರಿಗೆ ಉಚಿತ ಚಿಕಿತ್ಸೆ ನೀಡುತ್ತಿದೆ. ಪ್ರಮುಖವಾಗಿ ಆರ್ಥಿಕವಾಗಿ ಹಿಂದುಳಿದಿರುವ ರೋಗಿಗಳಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸುತ್ತಿದೆ.
ನಗರದ ರಿಂಗ್ ರಸ್ತೆಯಲ್ಲಿನ ನಿಜಲಿಂಗಪ್ಪ ಬಡಾವಣೆಯಲ್ಲಿ ಸುಸಜ್ಜಿತ ಕಟ್ಟಡವನ್ನು ಹೊಂದಿರುವ ಸಂಸ್ಥೆ ಇದುವರೆಗೆ ಸಾವಿರಾರು ರೋಗಿಗಳಿಗೆ ನಾನಾ ಹಂತಗಳಲ್ಲಿ ಉಚಿತ ಚಿಕಿತ್ಸೆಸೌಲಭ್ಯ ಕಲ್ಪಿಸಿದೆ.
ಮಾವನ ಸಾವು ಕಾಡಿತ್ತು!
ಹಿಮೋಫೀಲಿಯಾ #Hemophilia ಒಂದು ವಂಶವಾಹಿ ಅನಾರೋಗ್ಯ ಸಮಸ್ಯೆ. ಡಾ.ಸುರೇಶ್ ಹನಗವಾಡಿ ಅವರ ಸೋದರ ಮಾವ ಈ ಸಮಸ್ಯೆಯಿಂದ ಬಳಲುತ್ತಿದ್ದರು. ಸುರೇಶ್ ಅವರು ಬಾಲ್ಯದಲ್ಲೇ ಹಿಮೋಫೀಲಿಯಾಗೆ ತುತ್ತಾಗಿದ್ದರು. ವಿಪರ್ಯಾಸವೆಂದರೆ, ಡಾ.ಸುರೇಶ್ ಅವರ ಸೋದರ ಮಾವ ಚಿಕಿತ್ಸೆ ಸಿಗದೆ ಅವರ ಕಣ್ಣೆದುರೇ ಕಣ್ಣು ಮುಚ್ಚಿದ್ದರು.
ಸುರೇಶ ನೀನು ಡಾಕ್ಟರ್ ಆಗಬೇಕು
ಸಾವಿಗೂ ಮುನ್ನ ಮಾವ ‘ಸುರೇಶ ನೀನು ಡಾಕ್ಟರ್ ಆಗಬೇಕು’ ಎನ್ನುತ್ತಲೇ ಕೊನೆಯುಸಿರೆಳೆದಿದ್ದರು. ಕಣ್ಣೆದುರೇ ಮಾವನ ಸಾವು ಕಂಡ ಡಾ.ಸುರೇಶ್ ಹನಗವಾಡಿ ಅವರು, ವೈದ್ಯನಾಗಲೇಬೇಕು ಎಂದು ಹಟತೊಟ್ಟು ಕಷ್ಟಪಟ್ಟು ಓದಿ, ಹುಬ್ಬಳ್ಳಿಯ ಕೆಎಂಸಿ ವೈದ್ಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದರು.
ಪದವಿ ಬಳಿಕ ಮೆಥಾಲಜಿ #Methodology ವಿಷಯದಲ್ಲಿ ಎಂಡಿ ಪೂರ್ಣಗೊಳಿಸಿ, ನಗರದ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿ ಆರಂಭಿಸಿದರು. ಆ ಬಳಿಕ ಮಾಡಿದ ಮೊದಲ ಕೆಲಸ ಕರ್ನಾಟಕ ಹಿಮೋಫೀಲಿಯಾ ಸೊಸೈಟಿ ಹುಟ್ಟು ಹಾಕಿದರು. ಅಲ್ಲಿಂದ ಇವರ ಸೇವಾ ಕಾರ್ಯಗಳು ಹಲವು ಮೈಲಿಗಲ್ಲುಗಳನ್ನೇ ಸೃಷ್ಠಿಸಿವೆ.
ಈ ಕುರಿತಂತೆ ಸ್ವತಃ ಮಾತನಾಡಿದ ಡಾ.ಸುರೇಶ್ ಹನಗವಾಡಿ ಅವರು,ಮೂರೂವರೆ ದಶಕಗಳ ನಮ್ಮ ಪರಿಶ್ರಮ ಗುರುತಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಹಿಮೋಫೀಲಿಯಾ ಮಾತ್ರವಲ್ಲದೆ, ಎಲ್ಲಾ ರಕ್ತ ಸಂಬಂಧಿ ರೋಗಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ಒದಗಿಸುವ ಸಂಶೋಧನಾ ಸಂಸ್ಥೆಯಾಗಿ ಕರ್ನಾಟಕ ಹಿಮೋಫೀಲಿಯಾ ಸೊಸೈಟಿ ಬೆಳೆಸುವ ಉದ್ದೇಶ ಹೊಂದಿದ್ದೇವೆ ಎನ್ನುತ್ತಾರೆ.
ಶಕ್ತಿ ತುಂಬಿದ ಎಸ್’ಪಿ ಬಾಲಸುಬ್ರಹ್ಮಣ್ಯಂ
`ರೋಗಿಗಳ ಚಿಕಿತ್ಸೆಗೆ ಹಣ ಹೊಂದಿಸಲು ಕಷ್ಟ ಎದುರಿಸುವಾಗ ನಮ್ಮ ಪಾಲಿಗೆ ನೆರವಿನ ದೊಡ್ಡ ಶಕ್ತಿಯಾಗಿ ಬಂದವರು ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ. #SPBalasubrahmanya
1999ರಲ್ಲಿ ನಗರದ ಎವಿಕೆ ಕಾಲೇಜು ಮೈದಾನದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಂಗ್ರಹವಾದ ಅಷ್ಟೂ ಹಣವನ್ನು ಎಸ್’ಪಿಬಿ ಅವರು ಸಂಸ್ಥೆಗೆ ನೀಡಿ, ರೋಗಿಗಳ ಚಿಕಿತ್ಸೆಗೆ ನೆರವಾದರು. ಎರಡು ದಶಕಗಳ ಕಾಲ ಬಾಲಸುಬ್ರಹ್ಮಣ್ಯಂ ಅವರು ನಿರಂತರವಾಗಿ ನಿಧಿ ಸಂಗ್ರಹಿಸಿ ಸಂಸ್ಥೆಗೆ ಬೆನ್ನೆಲುಬಾಗಿ ನಿಂತರು ಎನ್ನುತ್ತಾರೆ ವೈದ್ಯರು.
ಶರಣರ ನುಡಿಯಾದ ಕಾಯಕವೇ ಕೈಲಾಸ ಎಂಬ ನುಡಿಯಂತೆ ಸೇವೆ ಮಾಡುವುದರ ಮೂಲಕ ಸಮಾಜ ಸೇವೆಗೈದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಡಾ.ಸುರೇಶ್ ಹನಗವಾಡಿಯವರಿಗೆ ಹೃದಯ ಪೂರ್ವಕ ಶುಭಾಶಯಗಳನ್ನು ಕೋರೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















