ಕಲ್ಪ ಮೀಡಿಯಾ ಹೌಸ್ | ಸಾಗರ |
ಶಿವಮೊಗ್ಗ #Shivamogga ಜಿಲ್ಲೆಯ ಸಾಗರ ತಾಲೂಕಿನ ಬ್ಯಾಕೋಡು ಸುತ್ತಮುತ್ತಲ ಪ್ರದೇಶದಲ್ಲಿ ಹುಲಿ ಕಾಟ ಆರಂಭವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ ಗುಡ್ಡಗಳಿಗೆ ಮೇಯಲು ಹೋಗುವ ಹಸುಗಳನ್ನು ಹುಲಿ #Tiger ಕೊಂದು ತಿಂದಿತ್ತು. ಈಗ ಮತ್ತೆ ಅಂತಹುದ್ದೇ ಘಟನೆ ನಡೆದಿದೆ.
ಕಳೆದ ವಾರ ಸ್ಥಳೀಯ ಅಂಬ್ಲಸರದ ರೈತ ಪಾರ್ಶ್ವನಾಥ ಜೈನ್ ಎನ್ನುವವರ ಕೊಟ್ಟಿಗೆ ಸಮೀಪ ಬಂದು ಒಂದು ಹಸುವನ್ನು ಕೊಂದು, ಅಲ್ಪ ಪ್ರಮಾಣದಲ್ಲಿ ತಿಂದು ಹಾಕಿ ಹೋಗಿದೆ.
ಕಳೆದ ಒಂದು ವರ್ಷದಲ್ಲಿ ಪಾರ್ಶ್ವನಾಥ ಜೈನ್ ಅವರಿಗೆ ಸೇರಿದ ಎರಡು ಹಸುಗಳನ್ನು ಹುಲಿ ತಿಂದು ಹಾಕಿತ್ತು. ಈಗ ಮನೆಯ ಬಳಿಗೆ ಬಂದು ಮತ್ತೊಂದು ಹಸುವನ್ನು ಕೊಂದು ಹಾಕಿರುವುದು ಭಯ ಉಂಟು ಮಾಡಿದೆ.
ಅಲ್ಲದೇ ಸಿಗ್ಲು ಸಮೀಪ ಬೈಕ್ ಸವಾರರ ಮೇಲೆ ಹುಲಿ ಆಕ್ರಮಣ ಮಾಡಿದ್ದು, ಅದರೊಂದಿಗೆ ಎರಡು ಮರಿಗಳು ಕಂಡು ಬಂದಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಹುಲಿಯೊಂದಿಗೆ ಮರಿಗಳನ್ನೂ ಸಹ ಸ್ಥಳೀಯರು ಕಂಡಿರುವುದಾಗಿ ಹೇಳಿದ್ದಾರೆ. ಹಾಗಾಗಿ ಹಿನ್ನೀರಿನ ಈ ಭಾಗದಲ್ಲಿ ಹಲವಾರು ಹುಲಿಗಳು ಸೇರಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಅಂಬ್ಲಸರ, ಹೆರಾಟೆ, ಹೊನಗಲು, ಮುಚ್ಚಳ್ಳಿ ಹಾಗೂ ಸಿಗ್ಲು ಸಮೀಪ ಇತ್ತೀಚೆಗೆ ಪದೇ ಪದೇ ಹುಲಿ ಕಾಟದಿಂದ ಹಲವಾರು ರೈತರು ಹಸುಗಳನ್ನು ಕಳೆದುಕೊಂಡಿದ್ದಾರೆ.
ಅಲ್ಲದೇ ಕಾಡಿಗೆ ಹೊಂದಿಕೊಂಡು ಇರುವ ಈ ಹಳ್ಳಿಗಳಲ್ಲಿ ಹುಲಿಗಳು ಸುಲಭವಾಗಿ ಸ್ಥಳೀಯರ ಮೇಲೆ ದಾಳಿ ಮಾಡುವ ಭಯ ಉಂಟು ಮಾಡಿದೆ. ಈ ಕುರಿತು ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದ್ದು, ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















