ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಶಿಶಿರ ಋತುವಿನ ತಂಪು ನಿಧಾನವಾಗಿ ಕಡಿಮೆಯಾಗಿ ಪ್ರಕೃತಿಯಲ್ಲಿ ಹೊಸ ಚೈತನ್ಯ ಮೂಡಿಸುವ ಕಾಲವೇ ವಸಂತ. ಹಸಿರಿನ ಮೆತ್ತನೆಯ ಹೊದಿಕೆಯಲ್ಲಿ ಕಂಗೊಳಿಸುವ ಹೊಲಗಳು, ಹೂವುಗಳಿಂದ ಮೆರೆಯುವ ಮರಗಳು—ಇವೆಲ್ಲವೂ ವಸಂತನ ಆಗಮನವನ್ನು ಸಾರುತ್ತವೆ. ಒಣಗಿದ್ದ ಕೊಂಬೆಗಳು ಮತ್ತೆ ಮೊಗ್ಗು ಬಿಡುತ್ತವೆ. ಕೋಗಿಲೆಯ ಮಧುರ ಕೂಗು ಗಾಳಿಯಲ್ಲಿ ಹರಡುತ್ತದೆ. ಮಲ್ಲಿಗೆ, ಚಂಪಕ, ಕನಕಾಂಬರಿಯ ಸುಗಂಧದಿಂದ ಪ್ರಕೃತಿ ಪರಿಮಳಗೊಳ್ಳುತ್ತದೆ. ವಸಂತ ಬಂದಾಗ ಪ್ರಕೃತಿ ಹೊಸ ರೂಪವನ್ನು ತಾಳುತ್ತದೆ. ಎಲ್ಲೆಡೆ ಹಸಿರು, ಎಲ್ಲೆಡೆ ಸಂತೋಷ, ಎಲ್ಲೆಡೆ ಜೀವಂತಿಕೆ. ಗಾಳಿ ಕೂಡ ಮೃದುವಾಗಿ ಬೀಸುತ್ತಾ ಮನಸ್ಸಿಗೆ ಹರ್ಷವನ್ನು ನೀಡುತ್ತದೆ. ಮನುಷ್ಯನ ಮನದಲ್ಲಿಯೂ ಹೊಸ ಕನಸುಗಳು ಮೊಳೆಯುತ್ತವೆ. ವಸಂತವು ಕೇವಲ ಒಂದು ಋತುವಲ್ಲ; ಅದು ಪ್ರಕೃತಿಯ ನಗು, ಜೀವಜಗತ್ತಿನ ಪುನರ್ಜನ್ಮದ ಸಂಕೇತ.
ವಸಂತದ ಆಗಮನದಲ್ಲಿಯೇ ಯುಗಾದಿ ಹಾಗೆಯೇ ಶ್ರೀರಾಮನವಮಿಯನ್ನು ಆಚರಿಸುವುದು. ಹಾಗಾಗಿ ವಸಂತದಂತೆ ಮನಸ್ಸಿಗೆ ಆನಂದ ಮತ್ತು ಶಾಂತಿಯನ್ನು ನೀಡುವ ಮಹಾನ್ ವ್ಯಕ್ತಿತ್ವವೇ ರಾಮ. ಧರ್ಮದ ಮಾರ್ಗವನ್ನು ಅನುಸರಿಸಿದ ಆದರ್ಶಪುರುಷನಾಗಿ ರಾಮನು ಎಲ್ಲರ ಹೃದಯದಲ್ಲಿ ನೆಲೆಸಿದ್ದಾನೆ. ಅವನು ಬರುತ್ತಾನೆಂದರೆ ಜನರ ಮನದಲ್ಲಿ ಭಕ್ತಿ, ಪ್ರೀತಿ ಮತ್ತು ಭರವಸೆ ತುಂಬುತ್ತದೆ. ರಾಮನ ಆಗಮನದ ಸಂತೋಷವು ವಸಂತ ಬಂದಾಗ ಪ್ರಕೃತಿಯಲ್ಲಿ ಮೂಡುವ ಹರ್ಷದಂತೆಯೇ ಇತ್ತು.
ಹೀಗಾಗಿ ವಸಂತಾಗಮನ ಪ್ರಕೃತಿಯನ್ನು ಸುಂದರಗೊಳಿಸಿದರೆ, ರಾಮನ ಆಗಮನ ಮಾನವ ಹೃದಯಗಳನ್ನು ಸುಂದರಗೊಳಿಸುತ್ತದೆ. ಎರಡೂ ಜೀವನಕ್ಕೆ ಹೊಸ ಬೆಳಕು, ಹೊಸ ಆಶೆ ಮತ್ತು ಹೊಸ ಸಂತೋಷವನ್ನು ತರುತ್ತವೆ. ಈ ಎಲ್ಲವನ್ನೂ ಒಳಗೊಂಡಿರುವ ನಾಮ ಸಂಕೀರ್ತನೆಯ ಕಾರ್ಯಕ್ರಮವೇ ಭಕ್ತಿ ಭಾವ ಕುಸುಮಾಂಜಲಿ.
ಏಕೆಂದರೆ ನಾಹಂ ವಸಾಮಿ ವೈಕುಂಠೇ ಎಂಬ ಶ್ಲೋಕವೊಂದರಲ್ಲಿ ಮದ್ಭಕ್ತಾ ಯತ್ರ ಗಾಯಂತಿ ತತ್ರ ತಿಷ್ಠಾಮಿ ನಾರದ ಎಂದು ಭಗವಂತ ನನ್ನ ಭಕ್ತರು ಭಕ್ತಿಯಿಂದ ಹಾಡುವ ಸ್ಥಳದಲ್ಲೇ ವಾಸಿಸುತ್ತೇನೆ ಎಂದು ಹೇಳಿದ್ದಾನೆ. ಅಲ್ಲದೆ ಕಲೌ ದೋಷನಿಧೇ ರಾಜನ್ ಅಸ್ತಿ ಏಕೋ ಮಹಾನ್ ಗುಣಃ l ಕೀರ್ತನಾದೇವ ಕೃಷ್ಣಸ್ಯ ಮುಕ್ತ ಸಂಗಃ ಪರಂ ವ್ರಜೇತ್ ಅಂದರೆ ಈ ಕಲಿಯುಗ ಅನೇಕ ದೋಷಗಳಿಂದ ತುಂಬಿದ್ದರು ಸಹ ಇಲ್ಲೊಂದು ಮಹತ್ತರ ಗುಣವನ್ನು ಅದೇನೆಂದರೆ ಭಗವಂತನ ನಾಮ ಸಂಕೀರ್ತನೆ ಮಾಡುವುದರಿಂದಲೇ ಮನುಷ್ಯ ಭಾವ ಬಂಧನಗಳಿಂದ ಮುಕ್ತಿ ಪಡೆದು ಬರಮ ಪದವನ್ನು ಹೊಡೆಯುತ್ತಾನೆ ಎಂದು ಭಾಗವತ ಪುರಾಣದಲ್ಲಿರುವ ಶ್ಲೋಕವಾಗಿದೆ.
ಇಂದಿನ ಯಾಂತ್ರಿಕ ಜೀವನದಲ್ಲಿ ಮನಸ್ಸಿಗೆ ನೆಮ್ಮದಿ ನೀಡುವ ಕ್ಷಣಗಳು ವಿರಳವಾಗುತ್ತಿವೆ. ದಿನನಿತ್ಯದ ಕೆಲಸದ ಒತ್ತಡ, ಜೀವನದ ಓಟ—ಇವೆಲ್ಲದರ ನಡುವೆ ಮನಸಿಗೆ ಮುದ ನೀಡುವ ಸಂಗೀತವೇ ನಮ್ಮನ್ನು ಮತ್ತೆ ಜೀವನದ ಸೌಂದರ್ಯಕ್ಕೆ ಕರೆದೊಯ್ಯುತ್ತದೆ. ಅಂತಹ ಭಾವಪೂರ್ಣ ಅನುಭವವನ್ನು ನೀಡುವ ಅಪರೂಪದ ಸಂಗೀತ ಕಾರ್ಯಕ್ರಮವಾಗಿ “ಭಕ್ತಿ ಭಾವ ಕುಸುಮಾಂಜಲಿ ಎಂಬ ಸಂಗೀತ ವೈಭವ” ಕಾರ್ಯಕ್ರಮ ಆಯೋಜನೆಯಾಗಿರುವುದು ನಗರದ ಸಂಗೀತಾಸಕ್ತರಿಗೆ ಸಂತಸದ ವಿಷಯವೇ ಸರಿ. ಕಲಿಯುಗದಲ್ಲಿ ನಾಮ ಸಂಕೀರ್ತನೆಯೇ ಪರಮಪದಕ್ಕೆ ಸೋಪಾನವೆಂಬಂತೆ ರಾಮ, ಕೃಷ್ಣ, ಶಿವ, ದುರ್ಗೆಯೇ ಮೊದಲಾದವರ ನಾಮ ಸಂಕೀರ್ತನೆ ಸನಾತನ ಧರ್ಮದಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದೆ. ಇದನ್ನೇ ಗಮನದಲ್ಲಿರಿಸಿದ ವಿಶೇಷ ಕಾರ್ಯಕ್ರಮ ಇದು.
ಭಕ್ತಿ ಮತ್ತು ಸಂಗೀತ ಎಂಬ ಎರಡು ಪವಿತ್ರ ಪ್ರವಾಹಗಳು ಒಂದಾಗುವಾಗ ಮನಸ್ಸಿನಲ್ಲಿ ಮೂಡುವ ಆನಂದವನ್ನು ವರ್ಣಿಸಲು ಪದಗಳು ಸಾಲುವುದಿಲ್ಲ. ನಮ್ಮ ಪರಂಪರೆಯ ಭಕ್ತಿಗೀತೆಗಳು ಕೇವಲ ಕಿವಿಗೆ ಸಿಹಿಯಾಗುವ ಸಂಗೀತವಷ್ಟೇ ಅಲ್ಲ; ಅವು ಆತ್ಮವನ್ನು ತಲುಪುವ ಭಾವದ ಸಂದೇಶಗಳಾಗಿವೆ. ದೇವರ ನಾಮವನ್ನು ಸ್ಮರಿಸುವ ಪ್ರತಿಯೊಂದು ರಾಗವೂ ಮನಸ್ಸಿನ ನೋವುಗಳನ್ನು ಶಮನಗೊಳಿಸಿ ಆತ್ಮೀಯತೆಯ ಬೆಳಕನ್ನು ಹರಡುತ್ತದೆ.
ಪಂಡಿತ್ ಶಿವಕುಮಾರ್ ಜಿ. ಮಹಾಂತ ಅವರು ಭಕ್ತಿಯ ಗಾನಸುಧೆ ಹರಿಸಿದರೆ, ನಗರದಲ್ಲಿ ತಮ್ಮ ಚಿಂತನ, ಬರಹ, ಮಾತುಗಳಿಂದ ಮನೆಮಾತಾಗಿರುವ ಶ್ರೀ ವಿನಯ್ ಶಿವಮೊಗ್ಗ ಪ್ರೇಕ್ಷಕರನ್ನು ಭಾವಲೋಕಕ್ಕೆ ಕರೆದೊಯ್ಯಲಿದ್ದಾರೆ. ಸಂಗೀತದ ಪ್ರತಿಯೊಂದು ಸ್ವರವೂ ಭಕ್ತಿಯ ಸುವಾಸನೆಯಾಗಿ ಹರಡಿ, ಕಾರ್ಯಕ್ರಮವನ್ನು ಒಂದು ಆಧ್ಯಾತ್ಮಿಕ ಅನುಭವವಾಗಿಸಲಿದೆ.
ಇಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಮೌಲ್ಯಗಳನ್ನು ಉಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಭಕ್ತಿಯ ಸಂದೇಶವನ್ನು ಮುಂದಿನ ಪೀಳಿಗೆಗೂ ತಲುಪಿಸುವ ಸೇತುವೆಯಾಗುವ ಈ ಕಾರ್ಯಕ್ರಮಕ್ಕೆ ನಗರದ ಜನತೆ ಕುಟುಂಬ ಸಮೇತರಾಗಿ ಬಂದು ಸಂಗೀತದ ಸವಿಯನ್ನು ಅನುಭವಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯವೂ ಹೌದು.
ಸಂಗೀತ ಎಂದರೆ ಕೇವಲ ಮನರಂಜನೆ ಮಾತ್ರವಲ್ಲ; ಅದು ಮನಸ್ಸನ್ನು ಶುದ್ಧಗೊಳಿಸುವ ಒಂದು ದೈವಿಕ ಸಾಧನೆ. ಆ ದೈವಿಕ ಅನುಭವವನ್ನು ನೀಡಲಿರುವ “ಭಕ್ತಿ ಭಾವ ಕುಸುಮಾಂಜಲಿ” ಕಾರ್ಯಕ್ರಮವು ನಿಜಕ್ಕೂ ಒಂದು ಸಾಂಸ್ಕೃತಿಕ ಹಬ್ಬವಾಗಲಿದೆ.
ದಿ. ಮಣೂರ್ ಗೋವಿಂದರಾಯ ಪ್ರಭು ಚಾರಿಟೇಬಲ್ ಟ್ರಸ್ಟ್ ಅರ್ಪಿಸುವ ಈ ಕಾರ್ಯಕ್ರಮ ಇದೇ 14 ರ ಶನಿವಾರ ಸಂಜೆ 5:30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜನೆಯಾಗಿದೆ. ಮನಸ್ಸಿಗೆ ಮುದ ನೀಡಿ ಭಕ್ತಿ ರಸದಲ್ಲಿ ಮಿಂದೇಳುವ ಅಪರೂಪದ ಸಂಗೀತ ಸಂಜೆಯಾಗಿದೆ. ಆದ್ದರಿಂದ ಸಂಗೀತಾಸಕ್ತರು, ಸಾಹಿತ್ಯಪ್ರಿಯರು ಹಾಗೂ ಸಾರ್ವಜನಿಕರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಕಲಾವಿದರಿಗೆ ಹೊಸ ಉತ್ಸಾಹವನ್ನು ತುಂಬುವುದು ಎಲ್ಲ ಆಸಕ್ತರ ಉಪಸ್ಥಿತಿ.
ಭಕ್ತಿಯ ಮಧುರ ರಾಗಗಳು ಮನಸ್ಸನ್ನು ಮುಟ್ಟುವ ಆ ಅಮೂಲ್ಯ ಕ್ಷಣಗಳನ್ನು ತಪ್ಪಿಸಿಕೊಳ್ಳಬೇಡಿ.
ಬನ್ನಿ… ಸಂಗೀತದ ಭಕ್ತಿ ರಸದಲ್ಲಿ ತೇಲೋಣ. ಈ ಬೇಸಿಗೆಯ ಬಿಸಿಲ ಝಳಕ್ಕೆ ಐಸ್ ಕ್ರೀಮ್ ತಂಪು ನೀಡುವಂತೆ ಮನಸಿಗೆ ತಂಪು ನೀಡುವ ಕಾರ್ಯಕ್ರಮ ಇದಾಗಿರುತ್ತದೆ ಎನ್ನುವುದರಲ್ಲಿ ಸಂಶಯ ಇಲ್ಲ. ಬನ್ನಿ ಆನಂದಿಸಿ…
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















