ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಸಾಂಸ್ಕೃತಿಕ ರಾಜಧಾನಿಯಾಗಿರುವ ಮೈಸೂರು ಸನಾತನ ಯತಿ ಪರಂಪರೆಗೂ ಅನನ್ಯ ಕೊಡುಗೆ ನೀಡಿದೆ. ದ್ವೈತ, ಅದ್ವೈತ ಸಂಸ್ಥಾನ, ಮಠ- ಮಾನ್ಯಗಳಿಗೆ ಮಹಿಷಪುರಿ ಅದ್ವಿತೀಯ ಕಾಣಿಗೆ ಸಮರ್ಪಣೆ ಮಾಡಿದ್ದೂ ಇತಿಹಾಸದಲ್ಲಿ ದಾಖಲಾಗಿದೆ. ಈ ದಿಸೆಯಲ್ಲಿ ಶ್ರೀಮನ್ ಮಧ್ವಾಚಾರ್ಯ ಮೂಲಮಹಾ ಸಂಸ್ಥಾನ ಉತ್ತರಾದಿ ಮಠದ ಸನ್ಯಾಸಿಗಳ ಅಗ್ರ ಪಂಕ್ತಿಯಲ್ಲಿ ಎರಡು ಪುರಾತನ ವೃಂದಾವನ ಸನ್ನಿಧಿ ನಗರದಲ್ಲಿದೆ. ಅರಮನೆ ಸಮೀಪವೇ ಗುರುಮನೆಯೂ ಇದೆ ಎಂಬುದು ಮಹತ್ವದ ಸಂಗತಿ.
ಇದುವೇ ರೋಗಮೋಚನ ಶ್ರೀ ಧನ್ವಂತರಿ ಕ್ಷೇತ್ರ. ವಿಶ್ವದಲ್ಲೇ ಅತಿ ಎತ್ತರದ, ಶ್ರೀ ಶ್ರೀ ಸತ್ಯಾತ್ಮತೀರ್ಥ ಪ್ರತಿಷ್ಠಿತ ಧನ್ವಂತರಿ ಮೂರ್ತಿ ಸನ್ನಿಧಾನ ಇರುವ ಕ್ಷೇತ್ರದಲ್ಲಿ ಇರುವ 2 ವೃಂದಾವನ ದರ್ಶನ ಮಾಡುವುದು, ಅಲ್ಲಿ ಸೇವೆ ಮಾಡುವುದು ಒಂದು ಅಹೋಭಾಗ್ಯ. ಇದು ದ್ವೈತ ಸಿದ್ಧಾಂತ ಪ್ರತಿಪಾದನಾ ಕೇಂದ್ರವಾಗಿ ಶತಮಾನಗಳಿಂದ ಖ್ಯಾತಿ ಪಡೆದಿದೆ. ಇಲ್ಲಿದೆ ಶ್ರೀ ಸತ್ಯಸಂಕಲ್ಪ ತೀರ್ಥರು ಮತ್ತು ಶ್ರೀ ಸತ್ಯಸಂತುಷ್ಟತೀರ್ಥರ ಮೂಲ ವೃಂದಾವನ ಸನ್ನಿಧಿ.
ಹಂಸನಾಮಕ ಪರಮಾತ್ಮನ ಪೀಠದ ಮಹಾ ಪರಂಪರೆಯಲ್ಲಿ 30ನೇ ಯತಿಗಳಾಗಿ ವಿರಾಜಮಾನರಾಗಿದ್ದ ಶ್ರೀ ಸತ್ಯಸಂತುಷ್ಟ ತೀರ್ಥರು ಅನನ್ಯ ಪಾಂಡಿತ್ಯ, ಅಪಾರ ಜ್ಞಾನ ಮತ್ತು ಗರಿಷ್ಠ ಭಕ್ತಿಯ ಪ್ರತೀಕವಾಗಿದ್ದವರು. ವಿದ್ವತ್ತಿನಲ್ಲಿ ಅವರು ಎಂದೆಂದೂ ಬೆಳಗುವ ಚಂದ್ರಮ. ಹಾಗಾಗಿಯೇ ಅವರ ಚರಮ ಶ್ಲೋಕದಲ್ಲಿ
ಸತ್ಯಸಂಕಲ್ಪ ವಾರ್ಧ್ಯೂತ್ಥ:
ಸತ್ಯಸಂತುಷ್ಟ ಚಂದ್ರಮಾ
ಪ್ರಾರ್ಥಿತಾ ಶೇಷದಾತಾ ಚ
ಭಕ್ತವೃಂದಸ್ಯ ನಿತ್ಯದಾ ….
ಎಂದು ಸ್ತುತಿಸಲಾಗಿದೆ. ಅವರ ಆರಾಧನಾ ಉತ್ಸವ ಫಾಲ್ಗುಣ ಬಹುಳ ಅಮಾವಾಸ್ಯೆ. ಈ ಸಂದರ್ಭ ಅವರ ಸ್ಮರಣೆ ಮಾಡುವುದು ವಿಹಿತ. ವಿಚಾರಶೀಲ ಮತ್ತು ಪುಣ್ಯಕಾರಕವಾಗಿದೆ.
ಪೂರ್ವಾಶ್ರಮ ಚರಿತೆ:
ಶ್ರೀ ಸತ್ಯಸಂತುಷ್ಟತೀರ್ಥರ ಪೂರ್ವಾಶ್ರಮದ ನಾಮಧೇಯ ಬಾಳಾಚಾರ್ಯ. ವಿದ್ವತ್ತಿಗೇ ಹೆಸರಾದ ಭಾರದ್ವಾಜ ಗೋತ್ರದಲ್ಲಿ ಜನನ. ಇವರು ಹಾವೇರಿ ಪ್ರಾಂತ್ಯದ ಗುರ್ಲ ಹೊಸೂರಿನವರು ಎಂದು ಕೆಲವರು ಹೇಳುತ್ತಾರೆ. ಮೈಸೂರು ಪ್ರಾಂತ್ಯದಲ್ಲೇ ಜನಿಸಿದವರು ಎಂದೂ ಹೇಳಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ ಎನ್ನುತ್ತಾರೆ ಸಂಶೋಧಕ ಮತ್ತು ವಿದ್ವಾಂಸರಾದ ಕೊರ್ಲಹಳ್ಳಿ ಶ್ರೀನಿವಾಸಾಚಾರ್ಯ. ಅಷ್ಟಪುತ್ರ ವೇದವ್ಯಾಸಾಚಾರ್ಯರ ಬಳಿ ಸಮಗ್ರ ಶಾಸ್ತ್ರಾಧ್ಯಯನ ಮಾಡಿ ಷಟ್ಶಾಸ್ತ್ರ ಪಂಡಿತರಾದರು. ಸೋಸಲೆ ಮಠದ ಶ್ರೀ ಶೇಷಚಂದ್ರಿಕಾಚಾರ್ಯರು ಇವರ ಪೂರ್ವಜರಿಗೆ ಕೊಟ್ಟಿದ್ದ ಅಮೃತ ಶಿಲೆಯ ಪ್ರಾಣದೇವರು, ವಂಶದಿಂದ ಬಂದ ಶ್ರೀಭೂ ಸಹಿತ ಶ್ರೀನಿವಾಸದೇವರನ್ನು ಬಾಲ್ಯದಿಂದಲೂ ಉಪಾಸನೆ ಮಾಡಿಕೊಂಡು ಬಂದ ಬಾಳಾಚಾರ್ಯರು ಗುರುಗಳ ಗರಡಿಯಲ್ಲಿ ಪಳಗಿ ಸಾಣೆಹಿಡಿದ ರತ್ನವೇ ಆದರು. ಅಲಂಕಾರ, ವ್ಯಾಕರಣ, ವೇದಾಂತ, ದ್ವೈತ ಸಿದ್ಧಾಂತ ಮತ್ತು ತತ್ವ ಶಾಸ್ತ್ರಗಳ ಪ್ರತಿಪಾದಕರಾದರು. ಹಾಗಿತ್ತು ಅವರ ಸ್ವಯಂ ಪ್ರಭೆ. 1800ರ ಕಾಲಘಟ್ಟದಲ್ಲೇ ಅವರಿಗೆ ಮೈಸೂರು ಸಂಸ್ಥಾನದ ಆಸ್ಥಾನ ಪಂಡಿತರು ಎಂಬ ಪಟ್ಟ ಅರಸಿ ಬಂದಿತ್ತು.
‘ಶಾಸ್ತ್ರ ಗೂಳಿ’ ಎಂಬ ಬಿರುದು:
ದೇಶಾದ್ಯಂತ ಇದ್ದ ವಿವಿಧ ರಂಗದ ಪ್ರಸಿದ್ಧ ಪಂಡಿತರನ್ನು ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್
ಆಹ್ವಾನಿಸಿ, ಸಕಲ ಗೌರವಾದರದಿಂದ ಪೋಷಿಸುತ್ತಿದ್ದರು. ಜ್ಞಾನದ ಹರಿವು ಎಂದರೆ ಅದು ನಿರಂತರವಾಗಿ ಚರ್ಚೆಗೆ ಒಳಗಾಗುತ್ತಲೇ ಇರಬೇಕು ಎಂಬ ಮಹತ್ವದ ಧ್ಯೇಯ ಹೊಂದಿದ್ದರು. ಆಗಾಗ್ಗೆ ಪಂಡಿತರ ವಿದ್ವತ್ ಸಭೆಗಳು ನಡೆಯುತ್ತಿದ್ದವು. ಅದರಲ್ಲಿ ಬಾಳಾಚಾರ್ಯರೇ ಅಗ್ರ ಪಂಕ್ತಿಯ ವಿದ್ವನ್ಮಣಿ. ಹಲವು ವಿದ್ವಾಂಸರ ಸವಾಲನ್ನು ಸ್ವೀಕರಿಸಿ, ತರ್ಕ, ಅಲಂಕಾರ, ಮೀಮಾಂಸೆ ಮತ್ತು ಖಂಡನೆಗಳನ್ನು ಸಮರ್ಥವಾಗಿ ಪ್ರತಿಪಾದಿಸಿ ವಿಜಯಶಾಲಿ ಆಗುತ್ತಿದ್ದರು. ಯಾವುದೇ ಭಯ, ಅಂಜಿಕೆ ಇಲ್ಲದೇ ವಾಕ್ಯಾರ್ಥಗಳನ್ನು ಮಾಡಿ, ಹಲವು ವಿದ್ವಾಂಸರನ್ನು ಸೋಲಿಸುತ್ತಿದ್ದ ಕಾರಣ ಅವರಿಗೆ ‘ಶಾಸ್ತ್ರ ಗೂಳಿ’ ಎಂಬ ಬಿರುದನ್ನು ಮಹಾರಾಜರೇ ಪ್ರದಾನ ಮಾಡಿದ್ದರು.
ವೀರಾವೇಶದಿಂದ ಬಂದ ಗೂಳಿಯೊಂದನ್ನು ತಮ್ಮ ತೋಳ್ಬಲದಿಂದ ಮಣಿಸಿದ್ದ ಕಾರಣ ಇವರಿಗೆ ಆ ಹೆಸರು ಅನ್ವರ್ಥವಾಗಿತ್ತು ಎಂದೂ ಕೆಲವರು ಹೇಳುತ್ತಾರೆ. ಒಟ್ಟಾರೆ ವಿದ್ವತ್ತು, ಜ್ಞಾನಬಲದಿಂದ ಅವರು ಅತ್ಯಂತ ಬಲಶಾಲಿ, ಜ್ಞಾನಶಾಲಿ ಆಗಿದ್ದರು ಎಂಬುದಕ್ಕೆ ಹಲವು ಆಧಾರಗಳೇ ಇವೆ.
ಸನ್ಯಾಸಾಶ್ರಮ ಸ್ವೀಕಾರ:
ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠಾಧೀಶರಾಗಿದ್ದ ಶ್ರೀ ಸತ್ಯ ಸಂಕಲ್ಪ ತೀರ್ಥರು ಮೈಸೂರಿಗೆ ಆಗಮಿಸಿದ್ದಾಗ ರಾಜನಿಗೆ ಧರ್ಮಬೋಧೆ ಮಾಡಿದರು. ಮಠದ ಶಿಷ್ಯರ ಅಪೇಕ್ಷೆಯಂತೆ ಪಂಡಿತ ಗೂಳಿ ಬಾಳಾಚಾರ್ಯರು ಢಾಳಾಗಿ ಕಂಡರು. ಇವರೇ ಉತ್ತರಾಧಿಕಾರಿ ಎಂದು ಸಂಕಲ್ಪ ಮಾಡಿದರು. ಮಹಾರಾಜರ ಸಮ್ಮುಖವೇ 3 ಜುಲೈ 1841ರಂದು ಸನ್ಯಾಸ ನೀಡಿದರು. ಶ್ರೀ ಸತ್ಯಸಂತುಷ್ಟ ತೀರ್ಥರೆಂದು ನಾಮಕರಣ ಮಾಡಿದರು. ಅಂದಿನಿಂದ ಇವರು ಶ್ರೀ ಮೂಲರಾಮನ ಅನನ್ಯ ಆರಾಧಕರಾದರು. ಮಾಧವತೀರ್ಥರಿಗೆ ಪ್ರಸನ್ನರಾದ ವಂಶ ರಾಮದೇವರಿಗೆ ರತ್ನಖಚಿತ ಬಂಗಾರದ ಪೀಠ ಮಾಡಿಸಿದರು. ಇಂದಿಗೂ ಅದು ಶ್ರೀಮಠದಲ್ಲಿದೆ.
ಶ್ರೀಗಳು ಅಖಂಡ ಭಾರತದಾದ್ಯಂತ ಇದ್ದ ಅನೇಕ ವಿದ್ವಾಂಸರನ್ನು ಆಹ್ವಾನಿಸಿ, ವಿದ್ವತ್ಪೂರ್ಣ ಗೋಷ್ಠಿಗಳನ್ನು ಆಯೋಜನೆ ಮಾಡುತ್ತಿದ್ದರು. ಇವರ ದೇಶ ಸಂಚಾರವು ತುಂಬಾ ಕಡಿಮೆ ಇತ್ತಾದರೂ ಕೋಶ ಅಧ್ಯಯನ ಮೇರು ಸ್ತರದಲ್ಲಿತ್ತು. ದೇಶದ ಉತ್ತಮೋತ್ತಮ ಪಂಡಿತರೇ ಇವರು ಇದ್ದಲ್ಲಿಗೆ ಬಂದು ನಮಿಸುತ್ತಿದ್ದರು. ವಿದ್ವಾಂಸರ ದಂಡು ನೋಡಿದಾಗ ಜ್ಞಾನ ಗಂಗೆಯೇ ಇವರಿದ್ದಲ್ಲಿಗೆ ಹರಿದು ಬರುವಂತೆ ಭಾಸವಾಗುತ್ತಿತ್ತು. ತಮ್ಮ ಪಾಂಡಿತ್ಯದ ಬಲದಿಂದಲೇ ಮಠದ ಗೌರವ, ಪರಂಪರೆ ಮೆರೆಸಿದ ಕೀರ್ತಿ ಶ್ರೀ ಸತ್ಯಸಂತುಷ್ಟ ತೀರ್ಥರಿಗೆ ಸಲ್ಲುತ್ತದೆ. ಇವರ ಸಮಕಾಲೀನರಾಗಿ ಮಂತ್ರಾಲಯ ಮಠದಲ್ಲಿ ಸುಜ್ಞಾನೇಂದ್ರತೀರ್ಥರು, ಸೋಸಲೆ ವ್ಯಾಸರಾಜಮಠದಲ್ಲಿ ವಿದ್ಯಾಪೂರ್ಣ ತೀರ್ಥರು, ಸಮಕಾಲೀನ ಪಂಡಿತರಾಗಿ ಕಾಶೀ ತಿಮ್ಮಣ್ಣಾಚಾರ್ಯ, ಹುಲಗಿ ಶ್ರಿಯಪತ್ಯಾಚಾರ್ಯ, ತಿರುಪತಿ ಶ್ರೀನಿವಾಸಾಚಾರ್ಯ, ಬ್ರಹ್ಮಾಂಡಂ ವಿಷ್ಣುಪಾದಾಚಾರ್ಯ ಇದ್ದರು. ಅವರೆಲ್ಲರೂ ವಾಕ್ಯಾರ್ಥ ಸಭೆಗಳಲ್ಲಿ, ವೈಭವೋಪೇತ ಸಂಸ್ಥಾನ ಪೂಜೆಗಳಲ್ಲಿ ಶ್ರೀಗಳ ಪೀಠಾಧಿಪತ್ಯ ನೋಡಿ ಸಂತುಷ್ಟರಾಗಿದ್ದರು.
ಶ್ರೀಗಳು ಹಾವೇರಿ ಗುರುರಾಜಾಚಾರ್ಯ ಎಂಬ ವಿದ್ವಾಂಸರಿಗೆ ಸನ್ಯಾಸ ನೀಡಿ ಶ್ರೀ ಸತ್ಯಪರಾಯಣ ತೀರ್ಥರೆಂದು ನಾಮಕರಣ ಮಾಡಿದರು. ಪ್ಲವ ಸಂವತ್ಸರ ಫಾಲ್ಗುಣ ಅಮಾವಾಸ್ಯೆ ಮೈಸೂರಿನಲ್ಲೇ ವೃಂದಾವನಸ್ಥರಾದರು. ( 10/04/1842). ಭಕ್ತರ ಪ್ರಾರ್ಥನೆಗೆ ಅತಿಶೀಘ್ರದಲ್ಲೇ ವರ ಕರುಣಿಸುವ ಸತ್ಯಸಂತುಷ್ಟರು ಮಹಾ ಮಹಿಮರು. ಅವರು ವೃಂದಾವನ ಪ್ರವೇಶ ಮಾಡಿ 183 ವರ್ಷ ಗತಿಸಿದರೂ ಅವರ ಮಹಿಮೆ , ಅನುಗ್ರಹ ಅನಂತ. ಅವರ ಮಹೋನ್ನತ ಜೀವನ ಸಾಧನೆ ಅರಿಯುವುದು ಹೊಸ ಸಂವತ್ಸರದ ಹೊಸ್ತಿಲಿನಲ್ಲಿ ನವ ಭಾಷ್ಯ ಬರೆಯಲಿ.
ಅಪಾರ ಶಿಷ್ಯವೃಂದ:
ಹೇಳಿಕೇಳಿ ಬಾಳಾಚಾರ್ಯರು ಪ್ರಕಾಂಡ ಪಂಡಿತರು. ಸಹಜವಾಗಿಯೇ ಇವರಿಗೆ ನೂರಾರು ಶಿಷ್ಯರಿದ್ದರು. ಮಾಧ್ವ, ಮಾಧ್ವೇತರ ವಿದ್ಯಾರ್ಥಿಗಳಿಗೂ ಪಾಠ ಮಾಡಿ ಅವರನ್ನು ಮಹಾ ಪಂಡಿತರನ್ನಾಗಿ ರೂಪಿಸಿದ್ದು ಇವರ ಶಿಷ್ಯ ವಾತ್ಸಲ್ಯಕ್ಕೆ ದ್ಯೋತಕವಾಗಿದೆ.
ಸನ್ಯಾಸದ ನಂತರವೂ ಇವರ ಶಿಷ್ಯ ರತ್ನರಲ್ಲಿ ಅನಂತ ಆಳ್ವಾರ್, ಪಾಂಡುರಂಗೀ ಕೃಷ್ಣಾಚಾರ್ಯ, ದಾದಾಶಾಸ್ತ್ರಿ ಮತ್ತು ಬಾಳಾಶಾಸ್ತ್ರೀ ವಿಖ್ಯಾತರು. ಅನಂತ ಆಳ್ವಾರರು ತಮ್ಮ ಗುರು ಗೂಳಿ ಬಾಳಾಚಾರ್ಯರು ಸನ್ಯಾಸ ಸ್ವೀಕಾರ ಮಾಡಿದಾಗ ಶ್ಲೋಕವನ್ನೇ ರಚಿಸಿ ಗೌರವಾರ್ಪಣೆ ಮಾಡಿದ್ದು ಇತಿಹಾಸ. ನಂತರ ಇವರು ನ್ಯಾಯಭಾಸ್ಕರ (ಗೌಡಬ್ರಹ್ಮ್ಮಾನಂದಿ ಸಹಿತ ಅದ್ವೈತ ಸಿದ್ಧಿಗಳಿಗೆ ಖಂಡನಾ ರೂಪವಾಗಿ) ಸೇರಿದಂತೆ 35ಕ್ಕೂ ಹೆಚ್ಚು ಗ್ರಂಥ ರಚನೆ ಮಾಡುತ್ತಾರೆ. ಶ್ರವಣಬೆಳಗೊಳದ ಯತಿಗಳಿಗೆ ಪಾಠ ಮಾಡುತ್ತಾರೆ. ಮೇಲುಕೋಟೆ ಶ್ರೀವೈಷ್ಣವರು ಇವರನ್ನು ರಾಮಾನುಜರ ಅವತಾರವೆಂದೇ ಗೌರವಿಸುತ್ತಾರೆ. ಷಡ್ದರ್ಶನಗಳಲ್ಲಿ ಮೇರುವಾಗಿದ್ದ ಆಳ್ವಾರರು ತಮ್ಮ ಪ್ರತಿಯೊಂದು ಗ್ರಂಥಗಳಲ್ಲಿ ಗುರು ಸತ್ಯಸಂತುಷ್ಟರನ್ನು ಸ್ಮರಿಸಿದ್ದಾರೆ ಎನ್ನ್ನುತ್ತಾರೆ ಸಂಶೋಧಕ ಕೊರ್ಲಹಳ್ಳಿ ಶ್ರೀನಿವಾಸಾಚಾರ್ಯರು.
ದ್ವೈತವಲ್ಲದೇ ಅದ್ವೈತ ಮತ್ತು ವಿಶಿಷ್ಠಾದ್ವೈತ ಮತದ ಶಿಷ್ಯರನ್ನೂ ಹೊಂದುವುದು, ಅವರೆಲ್ಲರೂ ತಲೆಮಾರುಗಳ ವರೆಗೆ ಪಂಡಿತರೇ ಆಗುವುದು, ನಿರಂತರವಾಗಿ ಅವರು ಗುರು ಸ್ಮರಣೆ ಮಾಡುವುದು, ಶಾಸ್ತ್ರ ಪರಂಪರೆಗೆ ಪ್ರವರ್ತಕರಾಗಿರುವುದು – ಇದು ಮಾಧ್ವ ಪರಂಪರೆಯಲ್ಲಿ ಅಪರೂಪ. ಅದಕ್ಕೆ ಪ್ರತಿರೂಪರಾಗಿದ್ದರು ಶ್ರೀ ಸತ್ಯಸಂತುಷ್ಟರು.
ಜ್ಞಾನ ಪಡೆದುಕೊಳ್ಳುವುದು ಬೇರೆ, ಪ್ರಸಂಗ ಬಂದಾಗ ಆ ಜ್ಞಾನಕ್ಕೆ ತಕ್ಕಂತೆ ವಾಕ್ಯಾರ್ಥ ಮಾಡಿ ಸಿದ್ಧಾಂತ ಪ್ರತಿಪಾದನೆ ಮಾಡುವ ಕೌಶಲ ಬೇರೆ. ಪಾಠ- ಪ್ರವಚನ ಮಾಡಿ ನೂರಾರು ಶಿಷ್ಯರನ್ನು ಸಿದ್ಧ ಪಡಿಸುವುದು ಬೇರೆ. ಈ ಮೂರೂ ಶ್ರೀ ಸತ್ಯಸಂತುಷ್ಟ ತೀರ್ಥರಲ್ಲಿ ಮೇಳೈಸಿತ್ತು. ಇದಕ್ಕೆ ದೇವರ, ಗುರುಗಳ ಅನುಗ್ರಹ ಮತ್ತು ರಾಜ ಮನ್ನಣೆಯೂ ಅವರಿಗೆ ದೊರಕಿತ್ತು. ಹಾಗಿದ್ದರೂ ಅವರು ಮಹಾ ವಿರಕ್ತ ಶಿಖಾಮಣಿಯಾಗಿದ್ದರು ಎಂಬುದು ಬಹಳ ವಿಶೇಷ.
– ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ಉತ್ತರಾದಿ ಮಠದ ಪೀಠಾಧಿಪತಿಗಳು.
ಮೂರು ದಿನ ವಿಶೇಷ ಉತ್ಸವ
ಶ್ರೀ ಸತ್ಯಸಂತುಷ್ಟ ತೀರ್ಥರ 184 ನೇ ವೈಭವಪೂರ್ಣ ಆರಾಧನಾ ಉತ್ಸವವು ಫಾಲ್ಗುಣ ಬಹುಳ ಅಮಾವಾಸ್ಯೆ ಮೈಸೂರಿನ ಅಗ್ರಹಾರದಲ್ಲಿರುವ ಮೂಲ ವೃಂದಾವನ ಸನ್ನಿಧಿಯಲ್ಲಿ ಆಯೋಜನೆಗೊಂಡಿದೆ. ಇದರ ಅಂಗವಾಗಿ ಮಾ. 18, 19 ಮತ್ತು 20 ರಂದು ವೃಂದಾವನಕ್ಕೆ ವಿಶೇಷ ಅಭಿಷೇಕ, ಅಲಂಕಾರ, ಪಾರಾಯಣ, ಪಲ್ಲಕ್ಕಿ ಉತ್ಸವಾದಿಗಳು ಸಮರ್ಪಣೆಗೊಳ್ಳಲಿದೆ.
ಪಂಡಿತ ಮತ್ತು ವ್ಯವಸ್ಥಾಪಕ ಅನಿರುದ್ಧಾಚಾರ್ಯ ಪಾಂಡುರಂಗಿ ನೇತೃತ್ವದಲ್ಲಿ 3 ದಿನಗಳ ಕಾಲ ವಿಜೃಂಭಣೆಯ ಆರಾಧನೆ ಸಂಪನ್ನಗೊಳ್ಳಲಿದೆ. ಈ ಸಂದರ್ಭದಲ್ಲಿ ತಪಸ್ವಿ ವರೇಣ್ಯರಾದ ಶ್ರೀ ಶ್ರೀ ಸತ್ಯಸಂತುಷ್ಟ ತೀರ್ಥರ ಮಹೋನ್ನತ ಜೀವನಾದರ್ಶಗಳನ್ನು ಸ್ಮರಣೆಗೆ ತಂದುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಬರಹ. ’
ಲೇಖನ: ಎ.ಆರ್. ರಘುರಾಮ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















